Advertisement

ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಏನಿದೆ?

12:27 AM May 27, 2022 | Team Udayavani |

ಕುಂದಾಪುರ: ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ ರಾವ್‌ (ಕಟ್ಟೆ ಭೋಜಣ್ಣ) (79) ಅವರು ಹಂಗಳೂರು ಗ್ರಾಮದ ಅಂಕದಕಟ್ಟೆಯಲ್ಲಿರುವ ಉದ್ಯಮಿ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 6.20ರ ಸುಮಾರಿಗೆ ಸಂಭವಿಸಿದೆ.

Advertisement

ಗೋಲ್ಡ್‌ ಸ್ಕೀಂ ಮುಳುವಾಯಿತೇ?:

ಕುಂದಾಪುರದಲ್ಲಿ ಆರಂಭವಾದ ಗೋಲ್ಡ್‌ ಜುವೆಲ್ಲರಿಯಲ್ಲಿ ಗಣೇಶ್‌ ಶೆಟ್ಟಿ ತಟಸ್ಥ ಪಾಲುದಾರ (ಸ್ಲಿàಪಿಂಗ್‌ ಪಾರ್ಟನರ್‌) ರಾಗಿದ್ದು, ಈ ಗೋಲ್ಡ್‌ ಜುವೆಲ್ಲರಿಯ ಪಾಲುದಾರರು ಆಫ್ರಿಕಾದ ಚಿನ್ನದ ಗಣಿಯಲ್ಲಿ ಹಣ ವಿನಿಯೋಗಿಸಿದ್ದರು. ಆರಂಭದಲ್ಲಿ ಇದು ಉತ್ತಮ ಲಾಭ ತಂದಿದ್ದು, ಚಿನ್ನದ ಆಸೆಗೆ ಬಿದ್ದ ಇದರ ಪಾಲುದಾರರು ಇಲ್ಲಿನ ಅಷ್ಟು ಹಣವನ್ನು ಅಲ್ಲಿಗೆ ಸುರಿದಿದ್ದರು. ಆದರೆ ಬರು-ಬರುತ್ತಾ ಆ ಬಳಿಕ ನಷ್ಟದ ಹಾದಿಯಲ್ಲಿ ಸಾಗಿದೆ. ಅದರ ನಷ್ಟವನ್ನು ಭರಿಸುವ ಉದ್ದೇಶದಿಂದ ಗೋಲ್ಡ್‌ ಸ್ಕಿಂ ಹೆಸರಲ್ಲಿ ಗ್ರಾಹಕರಿಂದ, ಸಾರ್ವಜನಿಕರಿಂದ ನಗದು, ಒಡವೆಗಳನ್ನು ಆಕರ್ಷಕ ಸ್ಕೀಂ ಹೆಸರಲ್ಲಿ ಸಂಗ್ರಹಿಸಿ, ಆ ಮೂಲಕ ಕೋಟ್ಯಾಂತರ ರೂ. ವಂಚಿಸಿದ್ದರು. ಇದರಲ್ಲಿ ಗೋಪಾಲಕೃಷ್ಣ ಶೆಟ್ಟಿ ಅವರು ಸಹ ಕೋಟ್ಯಾಂತರ ರೂ. ಹಣ ಹಾಗೂ ಚಿನ್ನವನ್ನು ವಿನಿಯೋಗಿಸಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ನಡುವೆ ಗಣೇಶ್‌ ಶೆಟ್ಟಿ ಅವರಿಗೆ ಸೇರಿದ ಬೆಲೆಬಾಳುವ ಸ್ಥಿರಾಸ್ತಿಯಿದ್ದು, ಕೆಲವರ ಮಧ್ಯಸ್ಥಿಕೆಯಿಂದ ಗೋಪಾಲಕೃಷ್ಣ ಅವರಿಗೆ ಪರಭಾರೆ ಮಾಡಿಕೊಳ್ಳುವ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಕೊಂಚ ನೆಮ್ಮದಿಯಿಂದ ಇದ್ದು, ಈ ನಡುವೆ  ಸ್ತಿರಾಸ್ತಿ ಏಲಂ ಆಗುವುದೆಂಬ ಮಾಹಿತಿ ಸಿಕ್ಕಿದ ಕ್ಷಣದಿಂದ ಗೋಪಾಲಕೃಷ್ಣ ಅವರು ನೆಮ್ಮದಿ ಕೆಡಿಸಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಅನೇಕ ಬಾರಿ ಗಣೇಶ್‌ ಶೆಟ್ಟರನ್ನು ಸಂಪರ್ಕಿಸಲು ಯತ್ನಿಸಿದ್ದರೂ, ನಿರ್ಲಕ್ಷé ಮಾಡಿದ್ದು ಇವರನ್ನು ಮತ್ತಷ್ಟು ಚಿಂತೆಗೀಡು ಮಾಡುವಂತೆ ಮಾಡಿತು ಎನ್ನಲಾಗಿದ್ದು, ಈ ಬಗ್ಗೆ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಡೆತ್‌ನೋಟ್‌ನಲ್ಲಿ ಏನಿದೆ? :

ಗೋಪಾಲಕೃಷ್ಣ ಅವರು ತನ್ನ ಕಚೇರಿಗೆ ಸಂಬಂಧಿಸಿದ ಲೆಟರ್‌ ಹೆಡ್‌ನ‌ಲ್ಲಿ ಡೆತ್‌ ನೋಟ್‌ ಬರೆದಿಟ್ಟಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅದರಲ್ಲಿ ಉಲ್ಲೇಖೀಸಿದ್ದಾರೆ. ಡೆತ್‌ನೋಟ್‌ನಲ್ಲಿ ಮೊಳಹಳ್ಳಿ ಗಣೇಶ್‌ ಶೆಟ್ಟಿ, ಇಸ್ಮಾಯಿಲ್‌ ಹಂಗಳೂರು ಹೆಸರು ಪ್ರಸ್ತಾವ ಮಾಡಿದ್ದು, ಇವರಿಬ್ಬರು ಗೋಲ್ಡ್‌ ಜುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 2012 ಮಾ. 31ರಂದು 3.34 ಕೋ.ರೂ., 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಸು ಮರಳಿಸಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮಧ್ಯಸ್ಥಿಕೆ ನಡೆದು, ವಾಯಿದೆ ಪಡೆದಿದ್ದರು. ಈವರೆಗೆ 9 ಕೋ.ರೂ. ಹಣ, ಚಿನ್ನ ವಾಪಸ್‌ ನೀಡದೆ ಮೋಸ ಮಾಡಿದ್ದು, ಗಣೇಶ್‌ ಶೆಟ್ಟಿ ಮೊಳಹಳ್ಳಿ ಮನೆಗೆ ತಿರುಗಿ- ತಿರುಗಿ ಸಾಕಾಯ್ತು. ಅವರ ಮನೆಯಲ್ಲಿಯೇ ನನ್ನ ಪಿಸ್ತೂಲ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಗಣೇಶ್‌ ಶೆಟ್ಟಿ ಮೊಳಹಳ್ಳಿ, ಇಸ್ಮಾಯಿಲ್‌ ಅವರಿಂದ ಹಣ ವಸೂಲಿ ಮಾಡಿ, ಮನೆಯವರಿಗೆ ಕೊಡಿಸಿ ಎನ್ನುವುದಾಗಿ ಕಟ್ಟೆ ಗೋಪಾಲಕೃಷ್ಣ ಅವರು ಡೆತ್‌ ನೋಟ್‌ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next