Advertisement

ಬಿಜೆಪಿ ಭಿನ್ನಮತಕ್ಕೆ ಕಟೀಲ್‌ ಲಗಾಮು

06:25 PM Dec 16, 2020 | Adarsha |

ಸಿಂಧನೂರು: ಕಳೆದ ಹಲವು ತಿಂಗಳಿಂದ ಪ್ರತ್ಯೇಕ ಎರಡು ಬಣಗಳಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಉಂಟಾಗಿದ್ದ ಬಿಜೆಪಿ ಭಿನ್ನಮತಕ್ಕೆ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರ ಮೂಲಕವೇ ಲಗಾಮು ಬಿದ್ದಿದೆ. ಲಿಂಗಸುಗೂರಿನಲ್ಲಿ ಇಬ್ಬಣಗಳ ಮುಖಂಡರು ಹಾಗೂ ಇತರ ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡು ಈಚೆಗೆ ನಡೆಸಿದ ಬೈಠಕ್‌ ಫಲ ನೀಡಿದೆ.

Advertisement

ಸರಣಿ ಪ್ರಕಾರ ಸಚಿವರು ಸಿಂಧನೂರಿಗೆ ಬಂದು ಹೋದಾಗಲೂ ಇತ್ಯರ್ಥವಾಗದ ಅಸಮಾಧಾನಗಳಿಗೆ ರಾಜ್ಯಾಧ್ಯಕ್ಷರ ಮೂಲಕವೇ ತೆರೆ ಬಿದ್ದಿದೆ. ಎಲ್ಲರನ್ನೂ ಒಗ್ಗೂಡಿಸಿ ಅವರಿಗೆ ಪಕ್ಷದ ಶಿಸ್ತಿನ ಪಾಠ ಹೇಳಿರುವ ರಾಜ್ಯಾಧ್ಯಕ್ಷರು, ಎಲ್ಲರೂ ಒಂದೇ ದೋಣಿಯಲ್ಲಿ ಸಾಗುವಂತೆ ತಿಳಿಸಿದ ಬೆನ್ನಲ್ಲೇ “ಹಸ್ತಲಾಘವ’ ಮಾಡಿಸಲಾಗಿದೆ. ಜತೆಗೆ, ಸಾಮೂಹಿಕ ಜವಾಬ್ದಾರಿಯ ಮಂತ್ರ ಪಠಿಸಿ ಗ್ರಾಪಂ ಚುನಾವಣೆಯ ಟಾಸ್ಕ್ ವಹಿಸಲಾಗಿದೆ.

ಗೊಂದಲ ಹಲವು?: ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರುಪಾಪುರ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್‌ ನಡುವಿನ ಭಿನ್ನಮತ ಪಕ್ಷದ ಮುಖಂಡರು ಬಂದಾಗಲೆಲ್ಲ ಬಹಿರಂಗವಾಗುತ್ತಿತ್ತು. ಅವರ ಮನೆಗೆ ಭೇಟಿ ನೀಡಿದವರು, ಇವರ ಮನೆಗೆ ಬರುತ್ತಿರಲಿಲ್ಲ. ಇತ್ತ ಬಂದವರು ಅತ್ತ ಹೋಗುತ್ತಿರಲಿಲ್ಲ. ಮಂತ್ರಿಗಳ ಪ್ರವಾಸ ಮತ್ತು ಭೇಟಿ ಕಾರ್ಯಕ್ರಮಗಳು ಏಕಮುಖವಾಗಿ ಸಾಗಿ, ಸಾರ್ವಜನಿಕವಾಗಿ ಗೊಂದಲ ಏರ್ಪಟ್ಟಿತ್ತು.

ಇದನ್ನೂ ಓದಿ:ಮೊದಲ ಹಂತದ ಗ್ರಾಪಂ ಫೈಟ್‌ಗೆ ಅಖಾಡ ಸಿದ್ಧ

ರಾಜ್ಯ ಪದಾಧಿ ಕಾರಿಗಳ ಸಭೆಯ ಬಳಿಕ ಸಿಂಧನೂರಿನಲ್ಲಿ ಪಕ್ಷ ಬಲಪಡಿಸಲು ಹೇಳಿದಾಗಲೂ ಗ್ರಾಪಂ ಚುನಾವಣೆಯಲ್ಲಿ ಯಾವ ಗುಂಪಿನ ಬೆಂಬಲಿತರಾಗಿ ಕಣಕ್ಕಿಳಿಯಬೇಕೆನ್ನುವ ಗೊಂದಲ ಇತ್ಯರ್ಥವಾಗಿರಲಿಲ್ಲ. ಇದೀಗ ಎಲ್ಲದಕ್ಕೂ ಪಕ್ಷದ ತಾಲೂಕು ಘಟಕದ ಒಂದಾಗಿ ಕಾರ್ಯಚಟುವಟಿಕೆ ನಡೆಸಲು ಹೇಳಲಾಗಿದ್ದು, ಸಂಸದ ಸಂಗಣ್ಣ ಕರಡಿ ಕೂಡ ಇಬ್ಬರನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹೊಸ ಟಾಸ್ಕ್: ಗ್ರಾಮ ಸ್ವರಾಜ್‌ ಕಾರ್ಯಕ್ರಮದ ಮೂಲಕ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಬೇಕು ಎಂಬ ನಿರ್ಧಾರ ಈಗಾಗಲೇ ಬಿಜೆಪಿ ಪ್ರಕಟಿಸಿದೆ. ಅದಕ್ಕೆ ಪೂರಕವಾಗಿ ಶ್ರಮಿಸುವಂತೆ ಸಿಂಧನೂರಿನಲ್ಲೂ ಜವಾಬ್ದಾರಿ ಹಂಚಲಾಗಿದೆ. ತಾಲೂಕಿನ 30 ಗ್ರಾಪಂ ವ್ಯಾಪ್ತಿಯ 626 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಸ್ಥಳೀಯ ಮುಖಂಡರಿಗೆ ಟಾಸ್ಕ್ ನೀಡಲಾಗಿದೆ.

ಎರಡು ಗುಂಪಿನವರಿಗೆ 5 ರಿಂದ 10 ನಿಮಿಷದ ಕಾಲ ಅವರ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಿದ ರಾಜ್ಯಾಧ್ಯಕ್ಷರು, ಬಳಿಕ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸಾಗಬೇಕಿರುವ ಮಾರ್ಗ ಸೂಚಿಸಿದ್ದಾರೆ. ಅದಕ್ಕೆ ತಾಲೂಕಿನ ಎಲ್ಲ ಮುಖಂಡರು ಅಸ್ತು ಎಂದ ಹಿನ್ನೆಲೆಯಲ್ಲಿ ಅಪಸ್ವರಗಳಿಗೆ ತೆರೆಬಿದ್ದಿದೆ. ಮಂಡಲ ಅಧ್ಯಕ್ಷರ ನೇಮಕ, ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಸೇರಿದಂತೆ ಎಲ್ಲ ಹಂತದಲ್ಲಿ ಎರಡು ಗುಂಪಿನ ಪೈಪೋಟಿಯೇ ಕಂಡುಬಂದರೂ ಪರಿಸ್ಥಿತಿ ಸುಧಾರಿಸಿಲಿಲ್ಲ.

ಗ್ರಾಪಂ ಚುನಾವಣೆ ಮತ್ತು ಇತ್ತೀಚೆಗೆ ರಾಜ್ಯ ಪದಾಧಿ ಕಾರಿಗಳ ಸಭೆ ತಾಲೂಕಿನ ಬಿಜೆಪಿಗೆ ಮದ್ದು ಅರಿದಂತಾಗಿದ್ದು, ಪಕ್ಷದ ವಲಯದಲ್ಲೂ ಇದೀಗ ಹೊಸ ಉತ್ಸಾಹ ಕಾಣಿಸಿದೆ.  ಪಕ್ಷದ ಕಚೇರಿಯೇ ಮುಖ ಬಿಜೆಪಿ ತಾಲೂಕು ಕಚೇರಿಯ ಖರ್ಚು-ವೆಚ್ಚ ಒಂದೇ ಕಡೆಯವರು ನೋಡಿಕೊಳ್ಳುತ್ತಾರೆಂಬ ಹಿನ್ನೆಲೆಯಲ್ಲಿ ಹೇಳಿದಾಗ ಅದನ್ನು ಎಲ್ಲರೂ ಹಂಚಿಕೊಳ್ಳುವಂತೆಯೂ ತಿಳಿಸಲಾಗಿದೆ. ಪಕ್ಷದ ಕಚೇರಿಗೆ ಎಲ್ಲ ಮುಖಂಡರು ಭೇಟಿ ನೀಡಬೇಕು. ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಬೇಕು. ಪಕ್ಷದ ಕೆಲಸಗಳಿಗೆ ತಾಲೂಕು ಅಧ್ಯಕ್ಷರ ಲೆಟರ್‌ ಪ್ಯಾಡ್‌ಗಳನ್ನು ಅ ಧಿಕೃತವಾಗಿ ಬಳಸಬೇಕು. ಆ ಮೂಲಕವೇ ಸಂದೇಶಗಳು ರವಾನೆಯಾಗಬೇಕೆಂದು ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆಂದು ಗೊತ್ತಾಗಿದೆ. ರಾಜ್ಯಾಧ್ಯಕ್ಷರೊಂದಿಗೆ ಮಾತುಕತೆ ನಂತರ ಎಲ್ಲರೂ ಒಗ್ಗಟ್ಟಾಗಿ ತಾಲೂಕು ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿಂದಲೇ ಮುಂದಿನ ಚುನಾವಣೆ ಚಟುವಟಿಕೆಗಳಿಗೂ ಚಾಲನೆ ನೀಡಿದ್ದಾರೆ.

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next