Advertisement

ಕಸ್ತೂರಿ ರಂಗನ್‌ ವರದಿ ಜಾರಿ, ಮುಂದೂಡಿಕೆ ನಿರ್ಧಾರ ಉತ್ತಮ

01:26 AM Jul 27, 2022 | Team Udayavani |

ಕಸ್ತೂರಿ ರಂಗನ್‌ ವರದಿ ಜಾರಿ ಸಂಬಂಧ ಕೇಂದ್ರ ಸರಕಾರದ ಕಡೆಯಿಂದ ಒಂದು ವರ್ಷಗಳವರೆಗೆ ಕಾಲಾವಕಾಶ ಪಡೆದುಕೊಂಡು ಬಂದಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ಇತ್ತೀಚಿನ ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ವರದಿ ಜಾರಿಯಾದರೆ ಏನು ಮಾಡುವುದು ಎಂಬ ಆತಂಕ ಪಶ್ಚಿಮ ಘಟ್ಟವನ್ನು ಹಂಚಿಕೊಂಡಿರುವ ಮಲೆನಾಡು, ಕರಾವಳಿ ಭಾಗದ ರೈತರು ಮತ್ತು ಜನಪ್ರತಿನಿಧಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ರಾಜ್ಯ ಸರಕಾರ ಈ ಭಾಗದವರ ಕಳವಳವನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ಒಂದು ವರ್ಷ ಕಾಲ ಅಧ್ಯಯನಕ್ಕಾಗಿ ಸಮಿತಿಯೊಂದನ್ನು ರಚಿಸಿದೆ. ಸದ್ಯ ಪಶ್ಚಿಮ ಘಟ್ಟ ಪ್ರದೇಶಗಳು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಆಗಿದೆ ಎಂಬುದು ಸುಳ್ಳಲ್ಲ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌, ಪ್ರಕರಣವೊಂದರಲ್ಲಿ ಒಂದು ಕಿ.ಮೀ. ಸೂಕ್ಷ್ಮ ಪರಿಸರವಲಯದ ಬಫ‌ರ್‌ಝೋನ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ ಎಂದು ತೀರ್ಪು ನೀಡಿತ್ತು.

Advertisement

ಕೇರಳಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದು ಪಶ್ಚಿಮ ಘಟ್ಟ ಹಾದು ಹೋಗಿರುವ ಕೇರಳ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಿಗೆ ತೀವ್ರ ಆತಂಕವನ್ನು ಸೃಷ್ಟಿಸಿತ್ತು. ಅಲ್ಲದೆ ಈ ತೀರ್ಪನ್ನು ದೇಶಾದ್ಯಂತ ಅಳವಡಿಸುವ ಕುರಿತಂತೆಯೂ ಸೂಚಿಸಿತ್ತು. ಒಂದು ವೇಳೆ ಈ ಆದೇಶವನ್ನು ಯಥಾ ಪ್ರಕಾರ ಪಾಲನೆ ಮಾಡಿದರೆ ಲಕ್ಷಾಂತರ ಮಂದಿ ಮನೆ ಕಳೆದುಕೊಳ್ಳುವ ಆತಂಕವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಜನರಲ್ಲೂ ಕಳವಳ ಎದುರಾಗಿತ್ತು. ಏನಾದರೂ ಸರಿ, ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್‌ ವರದಿ ಜಾರಿ ಮಾಡುವುದು ಬೇಡ ಎಂಬುದು ಈ ಭಾಗದ ಜನಪ್ರತಿನಿಧಿಗಳ ವಾದವೂ ಆಗಿದೆ. ಇದರಿಂದಾಗಿಯೇ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದ ಸಂಸದರು ಮತ್ತು ಶಾಸಕರ ನಿಯೋಗ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ಅರಿವು ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಸರಕಾರ ದ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಲೇಬೇಕು. ಇನ್ನು ಕೇಂದ್ರ ಸರಕಾರವೇ ನಿವೃತ್ತ ಐಎಫ್ಎಸ್‌ ಅಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದಲ್ಲಿ ಒಂದು ಸಮಿತಿಯೊಂದನ್ನು ರಚಿಸಿದೆ. ಇದು ಪಶ್ಚಿಮ ಘಟ್ಟದಲ್ಲಿನ ವಸ್ತುಸ್ಥಿತಿ ಕುರಿತಂತೆ ಒಂದು ವರ್ಷ ಕಾಲ ಅಧ್ಯಯನ ನಡೆಸಲಿದೆ. ಅಂದರೆ, ನೈಸರ್ಗಿಕ ಭೂ ಪ್ರದೇಶ, ಈ ಭಾಗದಲ್ಲಿ ಬೆಳೆಯುವ ಬೆಳೆಯ ಬಗ್ಗೆಯೂ ಸ್ಥಳೀಯರೊಂದಿಗೆ ಈ ಸಮಿತಿ ಮಾಹಿತಿ ಪಡೆಯ ಲಿದೆ. ಈ ಬಳಿಕವಷ್ಟೇ ಕೇಂದ್ರ ಸರಕಾರಕ್ಕೆ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಲಿದೆ. ಈಗ ರಾಜ್ಯ ಸರಕಾರ ಮತ್ತು ಕರಾವಳಿ, ಮಲೆನಾಡು ಭಾಗದ ಜನತೆ ಮತ್ತು ಜನಪ್ರತಿನಿಧಿಗಳು ಮಾಡಬೇಕಾಗಿರುವ ಕೆಲಸ ಅತ್ಯಂತ ಮಹತ್ವದ್ದು. ಕೇಂದ್ರ ಸರಕಾರದ ಈ ನಿಯೋಗ ಭೇಟಿ ಮಾಡುವ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತಂತೆ ಅವರಿಗೆ ಮನದಟ್ಟಾಗುವ ರೀತಿಯಲ್ಲಿ ವಿವರಿಸಬೇಕು. ಅರಣ್ಯದೊಳಗೇ ಜೀವನ ಕಟ್ಟಿಕೊಂಡಿದ್ದೇವೆ, ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಮುಂದೇನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ತಮ್ಮ ಕಷ್ಟಗಳನ್ನು ಹೇಳಬೇಕು. ಏಕೆಂದರೆ ವಸ್ತುಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ವಿವರಿಸದಿದ್ದರೆ ಹೊಸ ಸಮಿತಿಯ ಕೆಲಸವೂ ಅಪೂರ್ಣವಾದಂತೆ ಆಗುತ್ತದೆ. ಜತೆಗೆ ಅನಿವಾರ್ಯವಾಗಿ ಕಸ್ತೂರಿ ರಂಗನ್‌ ವರದಿಯನ್ನೂ ಒಪ್ಪಿಕೊಳ್ಳುವ ಸಂದರ್ಭವೂ ಎದುರಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next