Advertisement

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

07:31 PM Apr 23, 2024 | Team Udayavani |

ಅಡ್ಯನಡ್ಕ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಮೇಲಕ್ಕೆ ಹತ್ತುತ್ತಿದ್ದ ವ್ಯಕ್ತಿ ಬಿದ್ದು ಸಾವು

Advertisement

ಪೆರ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿ ಮೇಲಕ್ಕೆ ಹತ್ತುತ್ತಿದ್ದಾಗ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಅಡ್ಯನಡ್ಕ ಬಳಿಯ ಚವರ್ಕಾಡು ಪಾರದಲ್ಲಿ ನಡೆದಿದೆ.

ಕೊಲ್ಲಂ ಕಲ್ಲುವಾದುಕ್ಕಲ್‌ ನಿವಾಸಿಯಾದ ಸಂತೋಷ್‌ ಕುಮಾರ್‌ (53) ಮೃತಪಟ್ಟವರು.

ಚೆವರ್ಕಾಡು ಪಾರದ ಮೊದೀನ್‌ ಕುಂಞಿ ಅವರ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿ ಮೇಲೆರುತ್ತಿದ್ದಾಗ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು. ವಿಷಯ ತಿಳಿದು ಕಾಸರಗೋಡಿನಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಅವರನ್ನು ಮೇಲಕ್ಕೆತ್ತಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

———————————————–

Advertisement

ಲಿಫ್ಟ್‌ನ ಹೊಂಡಕ್ಕೆ ಬಿದ್ದು ಕಾರ್ಮಿಕನ ಸಾವು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರ ಕಟ್ಟಡದ ಲಿಫ್ಟ್‌ನ ಹೊಂಡಕ್ಕೆ ಬಿದ್ದು ನಿರ್ಮಾಣ ಕಾರ್ಮಿಕ ಒಡಿಸ್ಸಾ ಚಂಬಾಡಿಪುರ ನಿವಾಸಿ ದೇವೇಂದ್ರಶ್ರೀ (33) ಮೃತಪಟ್ಟರು.

ಚೆಂಗಳದ ಇಂದಿರಾನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯೊಂದರಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಅದರ ಲಿಫ್ಟ್‌ನ ಹೊಂಡಕ್ಕೆ ನಿಯಂತ್ರಣ ತಪ್ಪಿ ದೇವೇಂದ್ರಶ್ರೀ ಬಿದ್ದಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

———————————————————————————–

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕುಂಬಳೆ: ಬಸ್‌ ಕಂಡಕ್ಟರ್‌, ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ ರಾಮ ಭಂಡಾರಿ ಅವರ ಪುತ್ರ ದಿನೇಶ್‌ (54) ಅವರ ಮೃತ ದೇಹ ಪೆರ್ಣೆ ಬಳಿಯ ಹಿತ್ತಿಲಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಂಬಳೆ ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತಲುಪಿಸಿದ್ದಾರೆ.

———————————————————————————-

ಶಾಲಾ ಬಸ್‌ ಢಿಕ್ಕಿ: ಗಾಯಾಳು ಯುವಕನ ಸಾವು

ಕುಂಬಳೆ: ಶಾಲಾ ಬಸ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೂರಂಬೈಲು ನಿವಾಸಿ ಅನಿಲ್‌ ಕುಮಾರ್‌ ಅವರ ಪುತ್ರ ಅವಿನಾಶ್‌ (21) ಮೃತಪಟ್ಟರು.

ಎ. 19ರಂದು ಇವರು ಸಂಚರಿಸುತ್ತಿದ್ದ ಬೈಕ್‌ಗೆ ಉದಯಗಿರಿಯಲ್ಲಿ ಬಸ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು.

———————————————————————————–

ಮಂಗಲ್ಪಾಡಿ ಪಂ.ಕಚೇರಿಯಿಂದ ಕಳವು ಯತ್ನ : ತನಿಖೆ

ಕುಂಬಳೆ: ಮಂಗಲ್ಪಾಡಿ ಪಂಚಾಯತ್‌ ಕಚೇರಿಗೆ ನುಗ್ಗಿ ಕಳವು ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎ. 20ರಂದು ರಾತ್ರಿ ಕಳವು ಯತ್ನ ನಡೆದಿತ್ತು.

———————————————————————————–

ಎಂಡಿಎಂಎ ಸಹಿತ ಬಂಧನ

ಉಪ್ಪಳ, ಎ. 23: ಉಪ್ಪಳ ಗೇಟ್‌ ಪರಿಸರದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಪಳ್ಳಿಕೆರೆ ಬಿಲಾಲ್‌ ನಗರ ತಾಯಲ್‌ ಮವ್ವಲ್‌ ನಿವಾಸಿ ಮೊಹಮ್ಮದ್‌ ಸಹೂದ್‌ (28) ನನ್ನು ಬಂಧಿಸಿದ ಪೊಲೀಸರು ಈತನಿಂದ 34 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

———————————————————————————–

ಮನೆಯಿಂದ ಕಳವು : 4 ಬೆರಳ ಗುರುತು ಪತ್ತೆ

ಕುಂಬಳೆ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಕೊಲ್ಲಿ ಉದ್ಯೋಗಿ ಬದ್ರುಲ್‌ ಮುನೀರ್‌ ಅವರ ಮನೆಯಿಂದ 4 ಪವನ್‌ ಚಿನ್ನಾಭರಣ ಮತ್ತು 35 ಸಾವಿರ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಬೆರಳ ಗುರುತು ತಜ್ಞರು ನಾಲ್ಕು ಬೆರಳ ಗುರುತುಗಳನ್ನು ಪತ್ತೆಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next