Advertisement

ಜಾತ್ಯತೀತ ನಿಲುವಿಗೆ ಕಾರವಾರ ಸಾಕ್ಷಿ: ಹೊರಟ್ಟಿ

11:41 AM Aug 25, 2019 | Suhan S |

ಕಾರವಾರ: ಸರಕಾರ ಮಾಡುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ. ಇಂದು ನಮ್ಮ ನಡುವೆ ಸ್ವಾರ್ಥ ಸ್ವಾಮಿಜಿಗಳೇ ಹೆಚ್ಚು. ವಿಧಾನ ಸಭೆಯಲ್ಲಿರುವುದಕ್ಕಿಂತ ಹೆಚ್ಚಿನ ರಾಜಕಾರಣ ಸ್ವಾಮಿಗಳಲ್ಲಿದೆ. ಕಾರವಾರ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮೊದಲು ಕಡಿಮೆ ಇತ್ತು. ಜಾತ್ಯತೀತ ನಿಲುವಿಗೆ ಕಾರವಾರ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಅವರು ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪುನಶ್ಚೇತನ ಕಾರ್ಯಕ್ರಮಗಳು ಇರುವಂತೆ ‘ಮತ್ತೆ ಕಲ್ಯಾಣ’ ಅಭಿಯಾನ ಜನಮಾನಸದಲ್ಲಿ ನೆಲೆಯೂರಿದ್ದ ಅನುಭವ ಮಂಟಪವನ್ನು ಮತ್ತೆ ನೆನಪಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ನಡೆದ ಅನುಭವ ಮಂಟಪದಲ್ಲಿ ನಡೆದ ವಿಚಾರ ಕ್ರಾಂತಿ ಜಗತ್ತಿಗೇ ಮಾದರಿಯಾದುದು. ಅನುಭವ ಮಂಟಪದ ಮುಖ್ಯ ಉದ್ದೇಶ ಸಮಸಮಾಜ ನಿರ್ಮಾಣ. ಜಗತ್ತಿಗೇ ಮೊಟ್ಟಮೊದಲು ಪ್ರಜಾಪ್ರಭುತ್ವವನ್ನು ಕೊಟ್ಟದ್ದು ಅನುಭವ ಮಂಟಪ. ಈಗ ಕೇಳಿದಂತೆ ಒಮ್ಮೆ ಮಕ್ಕಳು ನನ್ನನ್ನೂ ಪ್ರಶ್ನಿಸಿದ್ದರು. ಮೀಸಲಾತಿಯಲ್ಲಿರುವ ಜನರಿಗೆ ಸಹಾಯ ದೊರೆಯುತ್ತದೆ. ಆದರೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಯಾರು ಸಹಾಯ ಮಾಡುವರು? ನಾವು ಮುಂದುವರಿದ ಜಾತಿಯಲ್ಲಿ ಹುಟ್ಟಿದ್ದೇ ತಪ್ಪೇನು? ನಮ್ಮ ಜಾತಿಯನ್ನು ಬಿಟ್ಟು ನಾವು ಮುಸ್ಲಿಂ, ಕ್ರಿಶ್ಚಿಯನ್‌ ಆಗಬೇಕೇನು? ನಾವು ಶೇ.94 ರಷ್ಟು ಅಂಕ ಪಡೆದರೂ ನಮಗೆ ಸೀಟುಗಳು ಸಿಗುವುದಿಲ್ಲ.

ಅದೇ ಮೀಸಲಾತಿಯಲ್ಲಿ ಶೇ.70ರಷ್ಟು ಅಂಕಗಳು ಬಂದರೂ ಅವರಿಗೆ ಸೀಟು ಸಿಗುವುದು. ಇದು ಅನ್ಯಾಯವಲ್ಲವೇ? ಸಾಮಾನ್ಯರಿಗೂ ನ್ಯಾಯ ದೊರಕುವಂತಾಗಲು ನೀವು ಶಾಸಕರಾಗಿ ಏನು ಮಾಡುವಿರಿ? ಎಂದು. ನನಗೂ ಆ ಮಕ್ಕಳು ಕೇಳುವ ಪ್ರಶ್ನೆ ಸರಿಯಿದೆ ಎನ್ನಿಸಿತು. ಅಂಥ ಮಕ್ಕಳಿಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಯಿಂದ ಹೋರಾಟದ ಮುಂಚೂಣಿ ವಹಿಸಿದ್ದೆ. ಮಕ್ಕಳಿಗಾಗುವ ಇಂಥ ಅನ್ಯಾಯವನ್ನು ಸರಿಪಡಿಸಲಾಗದ ಸ್ಥಿತಿಗೆ ನಾವು ಇಂದು ಬಂದಿದ್ದೇವೆ. ಇಂಥ ಅನ್ಯಾಯಗಳನ್ನು ಬಹಳ ದಿನಗಳ ಕಾಲ ತೆಡೆಯಲು ಸಾಧ್ಯವಿಲ್ಲ. ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರ ಸದುದ್ದೇಶ ಇಂದು ತನ್ನ ಆಶಯವನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಹಳ್ಳಿಯಲ್ಲಿ ಹುಟ್ಟಿರುವವರಿಗೆ ಅಂಬೇಡ್ಕರ್‌ ಮೂಲ ತತ್ವದ ಆಶಯ ಈಡೇರುತ್ತಿಲ್ಲ. ಖ್ಯಾತ ಶಿಕ್ಷಣ ತಜ್ಞ ರಾಧಾಕೃಷ್ಣ 12ನೇ ಶತಮಾನದ ಅನುಭವ ಮಂಟಪವೆ ಮೊದಲ ಸಂಸತ್ತು ಎಂದರು. ಇದೇ ಮಾತನ್ನು ಇಂದು ಬ್ರಿಟೀಷ್‌ ಪಾರ್ಲಿಮೆಂಟ್ ಸ್ಪೀಕರ್‌ ಕೂಡ ಹೇಳಿದರು. ಈ ಕಾರಣಕ್ಕೇ ಇಂಗ್ಲೆಂಡಿನಲ್ಲಿ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸಲು ಅವರು ಒಪ್ಪಿರುವುದು. ಅನುಭವ ಮಂಟಪದಲ್ಲಿ ಶ್ರಮಜೀವಿಗಳ ಬಗ್ಗೆ ಗೌರವ, ಕಾಯಕ ಶ್ರದ್ಧೆ, ಸಮಾನತೆ ಇತ್ತು. ಅಲ್ಲಿ ಪ್ರಧಾನ ಮಂತ್ರಿ ಬಸವಣ್ಣನವರೂ ಇದ್ದರು. ನಾನೂ ಶಾಸಕನಾಗಿ, ಮಂತ್ರಿಯಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದೇನೆ. ಆದರೆ ಆ ಅನುಭವ ಮಂಟಪದ ಶಿಸ್ತು, ಸಂಯಮ, ಸೌಹಾರ್ದತೆ, ದೂರಾಲೋಚನೆ, ಸಕಲಜೀವಾತ್ಮರಿಗೂ ಲೇಸಾಗಬೇಕೆಂಬ ಹಂಬಲ, ಸಮಾಜದ ಹಿತದೃಷ್ಟಿಯಿಂದ ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿಲ್ಲ.

ಈಗ ನಮ್ಮ ರಾಜ್ಯದಲ್ಲಿ ಯಾವ ರೀತಿಯ ಚುನಾವಣೆಗಳು ನಡೆಯುತ್ತಿವೆ. ಯಾವ ರೀತಿ ಕಲಾಪಗಳು ನಡೆಯುತ್ತಿವೆ ಎನ್ನುವು ದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದಕ್ಕೆ ಮತದಾರರೂ ಕಾರಣ. ಮೂರೂ ಪಕ್ಷಗಳಿಂದ ಹಣ ತೆಗೆದುಕೊಂಡು ಒಬ್ಬರಿಗೆ ಮತ ಹಾಕಿ, ಇಬ್ಬರಿಗೆ ಟೋಪಿ ಹಾಕುವರು. ಹೀಗಾಗಿಯೇ ಜನಪ್ರತಿನಿಧಿಗಳೂ ಹೊಣೆಗೇಡಿಗಳಾಗಿ ವರ್ತಿಸುತ್ತಿದ್ದಾರೆ. ಜಾತಿಯನ್ನು ಬಿಟ್ಟು ಮಾತೇ ಇಲ್ಲ ಎನ್ನುವಂತಾಗಿದೆ. ಬಸವಣ್ಣ ಪ್ರತಿಯೊಬ್ಬರೂ ದುಡಿದು ತಿನ್ನಿಬೇಕೆಂಬ ಕಾಯಕ ಸಿದ್ಧಾಂತವನ್ನು ಜಾರಿಗೆ ತಂದರು. ಆದರೆ ಇಂದಿನ ಸರಕಾರಗಳು ಅನೇಕ ಭಾಗ್ಯಗಳನ್ನು ಕೊಡುವ ಮೂಲಕ ಸೋಮಾ ರಿಗಳನ್ನಾಗಿ ಮಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next