ಕಾರವಾರ: ಹೊನ್ನಾವರದ ಪರೇಶ್ ಮೇಸ್ತ ಸಾವಿನ ಮರಣೋತ್ತರ ಪರೀಕ್ಷಾ ವರದಿ ಇದೀಗ ಪೊಲೀಸರಿಗೆ ಲಭ್ಯವಾಗಿದ್ದು, ಆತನದು ಕೊಲೆಯಲ್ಲ ಎಂಬ ಅಂಶ ಹೊರಬಿದ್ದಿದೆ. ಪರೇಶ್ ದೇಹದ ಮೇಲೆ ಯಾವುದೇ ಆಯುಧಗಳಿಂದ ಹಲ್ಲೆ ಮಾಡಿದ ಗುರುತುಗಳಿಲ್ಲ
ಎಂದು ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯ ಮಣಿಪಾಲ ವಿಧಿ ವಿಜ್ಞಾನ ವಿಭಾಗದ ಡಾ| ಶಂಕರ್ ಎಂ. ಬಕ್ಕಣ್ಣನವರ್ ತಿಳಿಸಿದ್ದಾರೆ.
ಪೊಲೀಸರು ಕೇಳಿರುವ 18 ಪ್ರಶ್ನೆಗಳಿಗೆ ಉತ್ತರಿಸಿರುವ ಅವರು ಪರೇಶ್ ಸಾವು ಆಕಸ್ಮಿಕವಾಗಿದೆ. ದೇಹದ ಮೇಲೆ ಸುಟ್ಟ ಗಾಯಗಳಿಲ್ಲ. ಕಿವಿಯಲ್ಲಿ ಸಹ ಯಾವುದೇ ಗಾಯಗಳಿಲ್ಲ. ತಲೆಗೆ ಯಾವುದೇ ತರಹದ ಪೆಟ್ಟು ಬಿದ್ದಿಲ್ಲ. ಕೈ ಮೇಲಿನ ಹಚ್ಚೆ ಗುರುತಿಗೂ ಹಾನಿಯಾಗಿಲ್ಲ. ದೇಹ ಕಪ್ಪಾಗಿರುವುದು ಸಹಜ ಪ್ರಕ್ರಿಯೆ ಎಂದು
ಅವರು ವಿವರಿಸಿದ್ದಾರೆ.
ಬೆರಳುಗಳ ಮೇಲಿನ ಉಗುರು ಸಹಜವಾಗಿವೆ. ದೇಹದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್ ಎರಚಲಾಗಿಲ್ಲ. ಕರಳು ಮತ್ತು ಜಠರವನ್ನು ರಾಸಾಯನಿಕ ಪ್ರಕ್ರಿಯೆ ಪರೀಕ್ಷೆಗಾಗಿ ಕಾಯ್ದಿರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಪೊಲೀಸರಿಗೆ ನೀಡಿದ ವರದಿಯಲ್ಲಿ ವಿವರಿಸಿದ್ದಾರೆ. ಈ ವರದಿಯಿಂದಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದು, ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿದೆ ಎಂಬ ಅಪಪ್ರಚಾರದ ಸಾಮಾಜಿಕ ಜಾಲತಾಣದ ಸುದ್ದಿಗೆ ಹಿನ್ನಡೆಯಾಗುವಂತಾಗಿದೆ.