Advertisement

ಮಕ್ಕಳು ಸಂಸ್ಕೃತಿ-ಸಂಸ್ಕಾರ ಗೌರವಿಸುವ ಗುಣ ಬೆಳೆಸಿಕೊಳ್ಳಲಿ: ಎಲ್‌. ವಿ. ಅಮೀನ್‌

11:59 AM Nov 23, 2022 | Team Udayavani |

ಕಲ್ಯಾಣ್‌: ಕಲ್ಯಾಣ್‌ ಕರ್ನಾಟಕ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಸಂಭ್ರಮವು ನ. 13ರಂದು ಸಂಜೆ ಕಲ್ಯಾಣ್‌ ಪರಿಸರದ ಕೆ. ಸಿ. ಗಾಂಧಿ ಶಾಲಾ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ, ಸಮಾಜ ಸೇವಕ ಎಲ್‌. ವಿ. ಅಮೀನ್‌ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ತಾಯ್ನಾಡ ಆಚಾರ-ವಿಚಾರಗಳನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಉದ್ಯೋಗ ನಿಮಿತ್ತ ತಾಯ್ನಾಡಿನಿಂದ ಮುಂಬಯಿಗೆ ಬಂದು ಇಲ್ಲಿ ಅವಿರತವಾಗಿ ಶ್ರಮಿಸಿ, ನಮ್ಮದೇ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸಮಾಜಪರ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡವರು. ತಾಯ್ನಾಡಿನ ಜತೆಗೆ ಕರ್ಮಭೂಮಿಯಾದ ಮಹಾರಾಷ್ಟ್ರದ ನೆಲವನ್ನೂ ಆದರದಿಂದ, ಗೌರವದಿಂದ ನೋಡುವವರು.  ನಮ್ಮ ಮುಂದಿನ ಜನಾಂಗವಾದ ಇಂದಿನ ಯುವ ಪೀಳಿಗೆಗೆ ನಮ್ಮ ನಾಡನ್ನು, ದೇಶವನ್ನು, ಸಂಸ್ಕೃತಿಯನ್ನು ಗೌರವಿಸುವ ಉತ್ತಮ ಸಂಸ್ಕಾರವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗೌರವ ಅತಿಥಿಯಾಗಿದ್ದ ನ್ಯಾಯವಾದಿ, ಪ್ರಾಧ್ಯಾಪಕ ಸತೀಶ್‌ ಕಬ್ಬೂರ ಅವರು ಕಲ್ಯಾಣ್‌ ಕರ್ನಾಟಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಅತಿಥಿಗಳನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛ ಹಾಗೂ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕಾರ್ಯಕ್ರಮದಲ್ಲಿ ತಮ್ಮ ಉದ್ಯಮದಲ್ಲಿ ಉತ್ಕೃಷ್ಟ ಸಾಧನೆಗೈದ, ಸಮಾಜ ಸೇವೆಯಲ್ಲಿ ಸದಾ ನಿರತರಾಗಿರುವ ಅಂಬರ್‌ನಾಥ್‌ ಪರಿಸರದ ಪ್ರಸಿದ್ಧ ಹೊಟೇಲ್‌ ಉದ್ಯಮಿ, ಸಮಾಜ ಸೇವಕ ಸುರೇಂದ್ರ ಪಿ. ರೈ ಅವರನ್ನು ಕಲ್ಯಾಣ ಕನ್ನಡಿಗ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.

ಉದ್ಯಮಿ, ಸಮಾಜ ಸೇವಕ, ಆರ್‌ಎಸ್‌ಎಸ್‌ ಕಾರ್ಯಕರ್ತ ಅನಿಲ್‌ ಹೊಸಖಂಡೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ನಂದಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಕಲ್ಯಾಣ್‌ ಪರಿಸರದ ಹೊಟೇಲ್‌ ಉದ್ಯಮಿ, ಸಮಾಜ ಸೇವಕ, ಸಂಘದ ಮಾರ್ಗದರ್ಶಕ ನಡ್ಡೋಡಿಗುತ್ತು ಗುರುದೇವ್‌ ಭಾಸ್ಕರ್‌ ಶೆಟ್ಟಿಯವರನ್ನು ಅವರ ಅಪ್ರತಿಮ, ನಿಸ್ವಾರ್ಥ ಸಮಾಜ ಸೇವೆಗಾಗಿ ಸಂಘದ ವತಿಯಿಂದ ಸಮ್ಮಾನಿಸಿ ಅಭಿನಂದಿಸಲಾಯಿತು. ಸಮ್ಮಾನ ಪತ್ರವನ್ನು ಸಂಘದ ಮಾಜಿ ಅಧ್ಯಕ್ಷ ಟಿ. ಎಸ್‌. ಉಪಾಧ್ಯಾಯ ವಾಚಿಸಿದರು. ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿ ದರು.

ಗಣ್ಯರು ಸಂಘದ ಮುಖವಾಣಿ ಕಲ್ಯಾಣ ದರ್ಪಣದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಶಾ ನಾಯಕ್‌ ಸಂಗಡಿಗರು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಸಂಘದ ಅಧ್ಯಕ್ಷ ಕೆ. ಎನ್‌. ಸತೀಶ್‌ ಸ್ವಾಗತಿಸಿ, ಸವಿತಾ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಗಣೇಶ್‌ ಪೈ ವಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕಲ್ಯಾಣ್‌ ಕರ್ನಾಟಕ ಸಂಘತ ಮಾಜಿ ಅಧ್ಯಕ್ಷರಾದ ಟಿ. ಎಸ್‌. ಉಪಾಧ್ಯಾಯ, ಗೋಪಾಲ್‌ ಹೆಗ್ಡೆ ಹಾಗೂ ನಿಕಟಪೂರ್ವಾಧ್ಯಕ್ಷೆ ದರ್ಶನ ಸೋನ್ಕರ್‌, ಉಪಾಧ್ಯಕ್ಷೆ ಜಯಂತಿ ಹೆಗ್ಡೆ, ವೀಣಾ ನಾಯಕ್‌, ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕಾಮತ್‌ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು.

Advertisement

ಸಂಘವು ಕಳೆದ ಎರಡು ದಶಕಗಳಿಂದ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುತ್ತಾ, ಕಲ್ಯಾಣ್‌ ಪರಿಸರದ ಕನ್ನಡಿಗರನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸುವ ಕಾರ್ಯದಲ್ಲಿ ತೊಡಗಿದೆ. ಸಂಘದ ವಿವಿಧ ವಿಭಾಗಗಳು ಸಂಘದ ಬಲವರ್ಧನೆಗೆ ಅಹರ್ನಿಶಿಯಾಗಿ ಶ್ರಮಿಸುತ್ತಿವೆ. ಸಂಘವನ್ನು ಇನ್ನಷ್ಟು ಬಲಾಡ್ಯಗೊಳಿಸುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಂಘವನ್ನು ಮಾದರಿ ಸಂಸ್ಥೆಯನ್ನಾಗಿ ಬೆಳೆಸಿದ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರೆಲ್ಲರಿಗೂ ಅಭಿನಂದನೆಗಳು. ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸೋಣ. ಕೆ. ಎನ್‌. ಸತೀಶ್‌ ಅಧ್ಯಕ್ಷರು, ಕಲ್ಯಾಣ್‌ ಕರ್ನಾಟಕ ಸಂಘ

ನಮ್ಮ ಯಾವುದೇ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿ ಸಮಾಧಾನಕರ, ಸಮರ್ಪಕ ಪರಿಹಾರ ಕಂಡುಕೊಂಡು ಸದಾ ಇತರರಿಗೆ ಪ್ರೇರಣೆಯಾಗಿರಬೇಕು. ನಮಗೆ ನಾವೇ ಪ್ರೇರಕರಾಗಬೇಕು. ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಯಪಡಿಸಿ ಅವರನ್ನು ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ನ್ಯಾಯವಾದಿ ಸತೀಶ್‌ ಕಬ್ಬೂರ, ಪ್ರಾಧ್ಯಾಪಕರು

Advertisement

Udayavani is now on Telegram. Click here to join our channel and stay updated with the latest news.

Next