Advertisement

ಮಹಿಳೆಯರಿರುವ ಸಂಸ್ಥೆಯಲ್ಲಿ ಹೆಚ್ಚು ಸಂಸ್ಕಾರ, ಸಂಸ್ಕೃತಿ ಇರುತ್ತದೆ: ಚಂದ್ರಹಾಸ್‌ ಶೆಟ್ಟಿ

11:27 AM Nov 26, 2022 | Team Udayavani |

ಮುಂಬಯಿ: ಶಿಸ್ತಿನ ಸಿಪಾಯಿಗಳಂತೆ ಇರುವ ಕನ್ನಡ ಸಾಂಸ್ಕೃತಿಕ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರು ನಿಜವಾಗಿಯೂ ಅಭಿನಂದನಾರ್ಹರು. ಪ್ರಬಲವಾದ ಮಹಿಳಾ ಶಕ್ತಿ ಇಲ್ಲಿ ಎದ್ದು ಕಾಣುತ್ತಿದೆ. ಯಾವ ಸಂಘಟನೆಯಲ್ಲಿ ಮಹಿಳೆಯರು ಹೆಚ್ಚಾಗಿ ಇರುವರೋ ಆ ಸಂಸ್ಥೆಯಲ್ಲಿ ಸಂಸ್ಕಾರ, ಸಂಸ್ಕೃತಿ ಇದ್ದೇ ಇರುತ್ತದೆ. ಇಲ್ಲಿನ ಕನ್ನಡ ಮನಸ್ಸುಗಳಿಗೆ ನನ್ನ ನಮನಗಳು ಎಂದು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್‌. ಕೆ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ನ. 20ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಸಂಸ್ಥೆಯ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 20ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ಬೆಳೆಸಬೇಕು, ಉಳಿಸಬೇಕು ಎಂದು ಹೇಳುತ್ತೇವೆ. ಆದರೆ ಅದರ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆ ಹೊರನಾಡಿನಲ್ಲಿರುವ ನಾವು ಮಾಡಬೇಕಾಗಿದೆ. ಹೆತ್ತವರು ಇಂತಹ ಕನ್ನಡ ಪರ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕು. ಮಕ್ಕಳು ಕನ್ನಡ ಸಂಸ್ಕೃತಿ, ಕಲೆ ಸಾಹಿತ್ಯದತ್ತ ಒಲವು ತೋರುವಂತೆ ನಾವೆಲ್ಲರೂ ಪ್ರಯತ್ನ ಪಡಬೇಕಾಗಿದೆ. ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ಅವರು ಹಾಕಿಕೊಂಡಿರುವ ಯೋಜನೆಯಾಗಿರುವ ಸಂಸ್ಥೆಯ ಸ್ವಂತ ಕಚೇರಿಗೆ ನನ್ನಿಂದಾಗುವ ಸಹಾಯ ಮಾಡು ತ್ತೇನೆ ಎಂದು ಆಶ್ವಾಸನೆ ನೀಡಿ ಸಂಸ್ಥೆ ಇನ್ನಷ್ಟು ಬೆಳೆದು ನಿಲ್ಲಲಿ ಎಂದು ಶುಭ ಹಾರೈಸಿದರು.

ಗೌರವ ಅತಿಥಿಯಾಗಿ ಆಗಮಿಸಿದ್ದ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಅವರು ಮಾತನಾಡಿ, ಕನ್ನಡ ಸಾಂಸ್ಕೃತಿಕ ಕೇಂದ್ರ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಧೆಗಳನ್ನು ಆಯೋಜಿಸಿ ಈ ಪರಿಸರದ ಎಲ್ಲ ತುಳು, ಕನ್ನಡಿಗರನ್ನು ಪ್ರೋತ್ಸಾಹಿಸುತ್ತಿದೆ ಎಂದರು.

ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಜತೆ ಕಾರ್ಯದರ್ಶಿ ಮನೋರಮಾ ಎನ್‌. ಬಿ. ಶೆಟ್ಟಿ ಅವರು ಮಾತನಾಡಿ, ಇಲ್ಲಿಗೆ ಬಂದಾಗ ನಾನು ಕರ್ನಾಟಕದಲ್ಲಿದ್ದೀನೋ ಎಂಬ ಖುಷಿಯಾ ಯಿತು. ಸಂಸ್ಕೃತಿಯೇ ಪ್ರೀತಿ, ಸಂಸ್ಕೃತಿಯೇ ನೀತಿ ಆಗಿರಬೇಕು. ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತಹ ಸಮಾಜಪರ ಕಾರ್ಯ ಬಹಳ ಅಭಿನಂದನೀಯ. ಸಂಸ್ಥೆಗೆ ತನ್ನ ಸ್ವಂತ ಪುಟ್ಟ ಕಚೇರಿಯನ್ನಷ್ಟೇ ಏಕೆ ದೊಡ್ಡ ಕನ್ನಡ ಭವನವನ್ನೇ ನಿರ್ಮಿಸುವ ಸಾಮರ್ಥ್ಯ, ಉತ್ಸಾಹ ಇದೆ ಎಂದರು.

ವಿಶೇಷ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಸುಬ್ಬಯ್ಯ ಎ. ಶೆಟ್ಟಿಯವರು, ನನ್ನ ಮನೆ ಮಂದಿಗಳು ನೀಡಿದ ಇಂದಿನ ಈ ಸಮ್ಮಾನ ಹೃದಯಕ್ಕೆ ತಟ್ಟಿದೆ. ಕನ್ನಡ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಅದರತ್ತ ನಾವೆಲ್ಲರೂ ಗಂಭೀರ ಗಮನ ಹರಿಸಬೇಕಾಗಿದೆ. ಸಂಘದ ಸ್ವಂತ ಕಚೇರಿಗೆ ನನ್ನಿಂದಾಗುವ ಧನ ಸಹಾಯವನ್ನು ಖಂಡಿತ ನೀಡುತ್ತೇನೆ. ಸಂಸ್ಥೆಯ ಅಧ್ಯಕ್ಷೆ ಸಹೋದರಿ ಜ್ಯೋತಿ ಪ್ರಕಾಶ್‌ ಕುಂಠಿನಿ ಮತ್ತು ಕಾರ್ಯದರ್ಶಿ ಪ್ರಕಾಶ್‌ ಕುಂಠಿನಿ ಅವರ ಕಾರ್ಯಾವಧಿಯಲ್ಲಿ ಈ ಸಂಸ್ಥೆ ಬಹಳಷ್ಟು ಪ್ರಗತಿ ಕಂಡಿದೆ ಎನ್ನುವುದಕ್ಕೆ ಅಭಿಮಾನ ಆಗುತ್ತಿದೆ ಎಂದರು.

Advertisement

ಸಮ್ಮಾನ ಸ್ವೀಕರಿಸಿದ ಮಾತನಾಡಿದ ಜಿ. ಎಸ್‌. ನಾಯಕ್‌ ಅವರು, ಕಲ್ಯಾಣ್‌ ಪರಿಸರದಲ್ಲಿ ಈ ಸಂಸ್ಥೆಯು ಕಳೆದ 20 ವರ್ಷಗಳಿಂದ ಕನ್ನಡಪರ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಕಳೆದ ಸೆಪ್ಟಂಬರ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಶಿಕ್ಷಕರನ್ನು ಗೌರವಿಸಿ ಇತಿಹಾಸ ಸೃಷ್ಟಿಸಿದೆ. ನಾನು ಈ ಸಂಸ್ಥೆಯ ಹಿರಿಯ ಸದಸ್ಯ ಎಂದು ಗುರುತಿಸಿ ನನ್ನನ್ನು ನನ್ನ ಸಹಧರ್ಮಿಣಿಯ ಜತೆಗೆ ಸಮ್ಮಾನಿಸಿದ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳಿಗೆ ಮತ್ತು ಅತಿಥಿ ಗಣ್ಯರಿಗೆ ಕೃತಜ್ಞತೆಗಳು. ಸಂಘಕ್ಕೆ ನನ್ನ ಸಹಾಯದ ಹಸ್ತ ಸದಾಯಿದೆ ಎಂದರು.

ಸಮಾರಂಭದಲ್ಲಿ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಸಂಸ್ಥೆಯ ವಾರ್ಷಿಕ ಕಲ್ಯಾಣ ಕಸ್ತೂರಿ-2022 ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಕನ್ನಡಪರ ಸಂಘ-ಸಂ ಸ್ಥೆಗಳಿಗೆ ಏರ್ಪಡಿಸಲಾಗಿದ್ದ ಸಮೂಹ ಭಾವಗೀತೆ ಗಾಯನ ಸ್ಪರ್ಧೆಯ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾ ರೈಸಿದರು. ಸಮಾರಂಭದಲ್ಲಿ ಸಂಸ್ಥೆಯ ಜತೆ ಕಾರ್ಯದರ್ಶಿ ಕುಮುದಾ ಡಿ. ಶೆಟ್ಟಿ ಅವರ ಚೊಚ್ಚಲ ಕವನ ಸಂಕಲನ ಮುಗುಳ್ನಗೆ ಮತ್ತು ಸಂಸ್ಥೆಯ ಕಲ್ಯಾಣ ಕಸ್ತೂರಿ- 2022 ವಾರ್ಷಿಕ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಆರ್ಥಿ ಕವಾಗಿ ಹಿಂದುಳಿದ ಅಂಬರನಾಥ್‌, ಕಲ್ಯಾಣ್‌ ಪರಿಸರದ 20 ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಮಹಾನೀಯರನ್ನು ಗೌರವಿಸ ಲಾಯಿತು. ಪ್ರಾರಂಭದಲ್ಲಿ ಸುಜಾತಾ ಸುಕುಮಾರ್‌ ಶೆಟ್ಟಿ ಅವರ ಪ್ರಾರ್ಥನೆಯ ಅನಂತರ ಮಹಿಳಾ ಸದಸ್ಯೆಯರು ನಾಡಗೀತೆಯನ್ನು ಪ್ರಸ್ತುತಪಡಿಸಿದರು.

ಅತಿಥಿಗಳು ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷೆ ಕುಂಠಿನಿ ಜ್ಯೋತಿ ಪ್ರಕಾಶ್‌ ಹೆಗ್ಡೆ ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಕುಂಠಿನಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕುಂಠಿನಿ ಪ್ರಕಾಶ್‌ ಹೆಗ್ಡೆ ಅವರು ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಬಿ. ಶೆಟ್ಟಿ ತಮ್ಮ ವಾರ್ಷಿಕ ಚಟುವಟಿಕೆಗಳ ವರದಿ ನೀಡಿದರು. ಗಣ್ಯರನ್ನು ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ್‌ ರೈ ಮತ್ತು ಪದಾಧಿಕಾರಿಗಳು ಗೌರವಿಸಿದರು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಗೆ ಜಾಹೀರಾತು ಮುಖೇನ ಅತ್ಯಧಿಕ ಧನಸಂಗ್ರಹ ಮಾಡಿಕೊಟ್ಟ ಕುಂಠಿನಿ ಪ್ರಕಾಶ್‌ ಹೆಗ್ಡೆ, ಪ್ರಕಾಶ್‌ ನಾಯಕ್‌, ಚನ್ನವೀರ ಅಡಿಗಣ್ಣನವರ ಹಾಗೂ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಪದ್ಮನಾಭ ಸಸಿಹಿತ್ಲು ಮತ್ತು ಕಲಾ ಭಾಗ್ವತ್  ಅವರನ್ನು ಗೌರವಿಸಲಾಯಿತು.

ಸರೋಜಾ ಎಸ್‌. ಅಮಾತಿ ಶಾಲಿನಿ ಎಸ್‌. ಶೆಟ್ಟಿ ಅಜೆಕಾರು, ಮಲ್ಲಿಕಾರ್ಜುನ ಬಡಿಗೇರ ಅವರು ಕ್ರಮವಾಗಿ ಕೃತಿ ಪರಿಚಯಿಸಿ, ಅತಿಥಿಗಳನ್ನು ಪರಿಚಯಿಸಿ, ಸಮ್ಮಾನ ಪತ್ರ ವಾಚಿಸಿದರು. ದತ್ತು ಸ್ವೀಕರಿಸಲಾದ ಮಕ್ಕಳ ಯಾದಿಯನ್ನು ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ಎಸ್‌. ಹುಣಸಿಕಟ್ಟೆ ವಾಚಿಸಿದರು. ಸಮೂಹ ಭಾವಗೀತೆ ಸ್ಪರ್ಧೆಯ ವಿಜೇತ ತಂಡಗಳ ಹೆಸರುಗಳನ್ನು ಕೋಶಾಧಿಕಾರಿ ಪ್ರಕಾಶ್‌ ನಾಯಕ್‌ ಅವರು ಓದಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಸರೋಜಾ ಎಸ್‌. ಅಮಾತಿ, ಸಭಾ ಕಾರ್ಯಕ್ರಮವನ್ನು ಮಧ್ಯ ರೈಲ್ವೇಯ ಅಧಿಕಾರಿ ಶಾಲಿನಿ ಸಂತೋಷ್‌ ಶೆಟ್ಟಿ ಅಜೆಕಾರು ನಿರ್ವಹಿಸಿದರು.

ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಕುಮುದಾ. ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಚನ್ನವೀರಪ್ಪ ಅಡಿಗಣ್ಣನವರ, ಗೌರವ ಅಧ್ಯಕ್ಷ ಮಂಜುನಾಥ್‌ ರೈ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಕುಂಠಿನಿ ಪ್ರಕಾಶ್‌ ಹೆಗ್ಡೆ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಂದ್ರ ವೈ. ಶೆಟ್ಟಿ, ನಿತ್ಯಾನಂದ ಮಲ್ಲಿ ಗಿರಿಜಾ ವಿ. ಸೊಗಲದ, ವಿಜಯಲಕ್ಷ್ಮೀ ಎಸ್‌.ಹುಣಸಿಕಟ್ಟಿ, ವನಜಾಕ್ಷಿ ಜಿಗಳೂರು, ಸುಜಾತಾ ಜೆ. ಶೆಟ್ಟಿ, ಉಮಾ ಹುಣಸಿಮರ, ಸುಜಾತಾ ಸದಾಶಿವ ಶೆಟ್ಟಿ, ಸುಜಾತಾ ಸುಕುಮಾರ್‌ ಶೆಟ್ಟಿ, ಶೋಭಾ ಅರುಣ್‌ ಶೆಟ್ಟಿ, ಸುಲೋಚನಾ ಜೆ. ಶೆಟ್ಟಿ, ವಿಜಯ ಗೌಡ, ಸದಸ್ಯರಾದ ಕಡ್ತಲ ಕೃಷ್ಣ ನಾಯಕ್‌ ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಕಳೆದ ಎರಡು ದಶಕಗಳಿಂದ ಕಲ್ಯಾಣ್‌ನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ನಮ್ಮ ಈ ಸಂಸ್ಥೆ ಪ್ರತಿಷ್ಠಿತ ಹೊರನಾಡ ಕನ್ನಡ ಪರ ಸಂಘ ಸಂಸ್ಥೆಗಳಲ್ಲಿ ಒಂದಾಗಿದ್ದು, ಕನ್ನಡ ಭಾಷೆ, ನಾಡಿನ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯಕ್ಕೆ ಒಂದಷ್ಟು ಪ್ರೋತ್ಸಾಹ ನಿರಂತರವಾಗಿ ಈ ನಗರದಲ್ಲಿ ನೀಡುತ್ತಾ ಬಂದಿದ್ದೇವೆ ಎನ್ನಲು ಅಭಿಮಾನವಾಗುತ್ತಿದೆ. ಒಂದಿಷ್ಟು ಸಮಾಜ ಸೇವೆ ಮಾಡುವುದರ ಜತೆಗೆ ನಾವು ಹಾಕಿಕೊಂಡಿರುವ ಸ್ವಂತದ ಕಚೇರಿ ಯೋಜನೆಗೆ ಈ ಹಿಂದೆ ಕೂಡಿಟ್ಟ ಹಣಕ್ಕೆ ಮತ್ತಷ್ಟು ಜೋಡಿಸಿದ್ದೇನೆ ಎಂಬ ಆತ್ಮ ತೃಪ್ತಿ ನನಗಿದೆ. ಇನ್ನಿರುವ ನನ್ನ ಕಾರ್ಯಾವಧಿಯಲ್ಲಿ ಈ ಮೊತ್ತವನ್ನು 10 ಲಕ್ಷ ರೂ. ಗಳವರೆಗೆ ತಲುಪಿಸುವ ಯೋಚನೆ- ಯೋಜನೆಯಿದೆ. ಸಂಸ್ಥೆಯ ಎಲ್ಲ ಕಾರ್ಯ ಕಲಾಪಗಳಿಗೆ ಇದೆ ರೀತಿ ತಮ್ಮೆಲ್ಲರ ಸಹಕಾರ ಇರಲಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.ಕುಂಠಿನಿ ಜ್ಯೋತಿ ಪ್ರಕಾಶ್‌ ಹೆಗ್ಡೆ, ಅಧ್ಯಕ್ಷೆ, ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌

ಸಂಸ್ಥೆ ಇರುವುದು ಸಮಾಜ ಸುಧಾರಣೆಗಾಗಿ. ನಮ್ಮ ಬದುಕಿಗೆ ಕೊನೆ ಇರಬಹುದು ಆದರೆ ನಮ್ಮ ಧ್ಯೇಯಗಳಿಗೆ, ಸಾಧನೆಗಳಿಗೆ, ಗುರಿಗಳಿಗೆ ಕೊನೆ ಇರಬಾರದು. ಇದು ನಿರಂತರ ಹರಿವ ನೀರಿನಂತಿರಬೇಕು. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಈ ಸಂಸ್ಥೆಯನ್ನು ಕಟ್ಟಿ, ಉಳಿಸಿ ಬೆಳೆಸಿರುವುದು ಅಭಿನಂದನೀಯ. 20 ವರ್ಷಗಳಿಂದ ಈ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿರುವ ನಾನು ತಮ್ಮ ಪ್ರೀತಿಗೆ ತಲೆಬಾಗಿ ಇಲ್ಲಿ ಬಂದಿದ್ದೇನೆ. ನೀವು ತೋರಿದ ಈ ಗೌರವಕ್ಕೆ ಮತ್ತು ಆತ್ಮೀಯತೆಗೆ ನನ್ನ ಹೃದಯ ತುಂಬಿ ಬಂದಿದೆ.ಡಾ| ಸುನೀತಾ ಎಂ. ಶೆಟ್ಟಿ, ಕಲ್ಯಾಣ ಕಸ್ತೂರಿ- 2022 ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next