Advertisement

ಟಿಕ್‌ ಟಿಕ್‌ ಕಾಲ; ಕಾಯುವವರೇ ಎಲ್ಲ: ಚುನಾವಣೆ ಸಂಕ್ರಮಣ ಪಕ್ಷಾಂತರ ಪರ್ವ ಆರಂಭ

01:09 AM Jan 15, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಮೂರೂ ಪ್ರಮುಖ ಪಕ್ಷಗಳು ಕಾಯುತ್ತಿದ್ದ “ಸಂಕ್ರಮಣ’ ಬಂದಿದ್ದು ಒಂದೆಡೆ ಯಾತ್ರೆಯ ಭರಾಟೆ ಮಧ್ಯೆ ಪಕ್ಷಾಂತರ ಪರ್ವ ಆರಂಭವಾಗಿದೆ.

Advertisement

ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಮೇಲೆ ಅಧಿಕಾರಕ್ಕೆ ಬರಲು ಯಾತ್ರೆಗಳು ನಡೆಯುತ್ತಿವೆ. ಈ ಮಧ್ಯೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಪಕ್ಷಾಂತರಕ್ಕೂ ಬಾಗಿಲು ತೆರೆದು ನಿಂತಿವೆ. ಮುಂದಿನ ಮೂರು ವಾರಗಳಲ್ಲಿ ಮಹತ್ವದ ಬದಲಾವಣೆಯ ಸಾಧ್ಯತೆಗಳಿವೆ. ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್‌, ಜೆಡಿಎಸ್‌ನ 6-10 ಶಾಸಕರಿಗೆ ಗಾಳ ಹಾಕಿದೆ. ಸಂಕ್ರಾಂತಿ ಅನಂತರ ಪಕ್ಷ ಸೇರ್ಪಡೆಯ ಚಿಂತನೆಯಲ್ಲಿರುವವರು ಟಿಕೆಟ್‌ ಖಾತರಿಗೆ ಕಾಯುತ್ತಿದ್ದಾರೆ.

ಸಂಕ್ರಾಂತಿಗೆ 125 ಕ್ಷೇತ್ರಗಳ ಮೊದಲ ಪಟ್ಟಿ ಬಿಡು ಗಡೆಗೆ ಮುಂದಾಗಿದ್ದ ಕಾಂಗ್ರೆಸ್‌, ಟಿಕೆಟ್‌ ಸಿಗದವರು ಪಕ್ಷಾಂತರ ಮಾಡಿಯಾರು ಎಂಬ ಆತಂಕದಿಂದ ಫೆಬ್ರ ವರಿ ಮೊದಲ ವಾರಕ್ಕೆ ಮುಂದೂಡಿದೆ. ಕಾಂಗ್ರೆಸ್‌ಗೂ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿರುವ ನಾಯಕರ ಸುಳಿವು ದೊರೆತಿದ್ದು, ಮನವೊಲಿಸುವ ಕಾರ್ಯ ಚಾಲ್ತಿಯಲ್ಲಿಟ್ಟಿದೆ. ಮತ್ತೂಂದೆಡೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವು ಮಾಜಿ ಶಾಸಕರನ್ನು ಸೆಳೆ ಯಲೂ ಕಾರ್ಯ ನಿರತವಾಗಿದೆ.

ಈ ನಡುವೆ, ಜೆಡಿಎಸ್‌ನಿಂದ ಹೊರಗೆ ಕಾಲಿಡಲು ಮುಂದಾದವರು ಪಂಚರತ್ನ ಯಾತ್ರೆ ಬಳಿಕ ಕಾದು ನೋಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ ಸಿಗದವರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್‌ಗೆ ವಲಸೆ ಹೋಗುವ ಸಾಧ್ಯತೆ ಇದೆ. ಈಗಾಗಲೇ ಕುಮಾರಸ್ವಾಮಿ ಹಾಗೂ ಸಿ.ಎಂ.ಇಬ್ರಾಹಿಂ ಜತೆ ಕೆಲವರು ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ ಎನ್ನಲಾಗಿದೆ.

ಯಾತ್ರೆ ಗಳ ಸುಗ್ಗಿ
ಕಾಂಗ್ರೆಸ್‌ನ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನೇತೃತ್ವದ ಪ್ರಜಾಧ್ವನಿ ಬಸ್‌ ಯಾತ್ರೆಗೆ ಪೈಪೋಟಿಯಾಗಿ ಬಿಜೆಪಿ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಸ್‌ ಯಾತ್ರೆಗೆ ಸಿದ್ಧತೆ ನಡೆಸಿದೆ. ಎಲ್ಲ ಜಿಲ್ಲೆಗಳಲ್ಲೂ ಈ ಯಾತ್ರೆ ಸಂಚರಿಸಲಿದೆ ಎನ್ನಲಾಗಿದೆ.

Advertisement

ಇದೇ ವೇಳೆ, ಮತ್ತೆ ವಿಜಯ ಸಂಕಲ್ಪ ಯಾತ್ರೆ ಮುಂದುವರಿಸಲು ರಾಜ್ಯ ಬಿಜೆಪಿ ನಿರ್ಧರಿಸಿದ್ದು, ಜ.21ರಿಂದ 29ರ ವರೆಗೆ ನಡೆಯಲಿದೆ. 21ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಲಬುರಗಿಯಲ್ಲಿ ನಡೆಯುವ ಯಾತ್ರೆಯಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನೂ ಈ ಅಭಿಯಾನದಲ್ಲಿ ಜೋಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಜನವರಿ 29ರಂದು ಯೋಗಿ ಆದಿತ್ಯನಾಥ್‌ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ.

ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ರಾಜ್ಯದ 224 ಕ್ಷೇತ್ರಗಳಿಗೆ ಪ್ರತ್ಯೇಕ ಯಾತ್ರೆಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ. ಇದರ ನಡುವೆ “ನಾ ನಾಯಕಿ’ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಕರೆಸಿ ಮಹಿಳಾ ಸಮೂಹವನ್ನು ಸೆಳೆಯುವ ಕಾರ್ಯತಂತ್ರ ರೂಪಿಸಲಾಗಿದೆ. ಎರಡು ಹಂತದ ಪಂಚರತ್ನ ಯಾತ್ರೆ ಪೂರ್ಣಗೊಳಿಸಿರುವ ಎಚ್‌.ಡಿ.ಕುಮಾರ ಸ್ವಾಮಿಯವರು ಮಂಗಳವಾರದಿಂದ ಇಂಡಿಯಿಂದ ಇನ್ನೊಂದು ಹಂತದ ಯಾತ್ರೆ ಆರಂಭಿಸಲಿದ್ದಾರೆ.

ಘಟಾನುಘಟಿಗಳ ಕ್ಷೇತ್ರ ಪಕ್ಕಾ
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಖಚಿತವಾಗಿದೆ. ಅದೇ ರೀತಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಿಗ್ಗಾಂವ್‌ನಿಂದಲೇ ಕಣಕ್ಕಿಳಿ¿ಲಿದ್ದಾರೆ. ಬಾದಾಮಿಯಿಂದ ಗೆಲುವು ಸಾಧಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕೋಲಾರ ಕ್ಷೇತ್ರಕ್ಕೆ ಬಂದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣದಿಂದ ಕಣಕ್ಕಿ ಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್‌ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಮೂರೂ ಪಕ್ಷಗಳ ಘಟಾನುಘಟಿ ನಾಯಕರ ಕ್ಷೇತ್ರಗಳು ಪಕ್ಕಾ ಆಗಿವೆ. ಈ ಎಲ್ಲ ಕ್ಷೇತ್ರಗಳಲ್ಲೂ ಜಿದ್ದಾಜಿದ್ದಿ ಹೋರಾಟ ಖಚಿತ.

ಪಕ್ಷಾಂತರ ಪರ್ವ ಕೈಗೆ ಶುಭಾರಂಭ
ಸಂಕ್ರಾಂತಿ ಮುನ್ನಾದಿನ ಪಕ್ಷೇತರ ಶಾಸಕ ಎಚ್‌.ನಾಗೇಶ್‌, ಮಾಜಿ ಶಾಸಕ ಜೆಡಿಎಸ್‌ನ ವೈ.ಎಸ್‌.ವಿ.ದತ್ತಾ , ಮೈಸೂರಿನ ಮೂಡಾದ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್‌ ಕಾಂಗ್ರೆಸ್‌ ಸೇರಿದ್ದಾರೆ. ವಿಧಾನಪರಿಷತ್‌ ಸದಸ್ಯ ಎಚ್‌.ವಿ ಶ್ವ ನಾಥ್‌ ಕೂಡ ಕಾಂಗ್ರೆಸ್‌ಗೆ ಹೊರಟಿದ್ದಾರೆ.

ಫೆಬ್ರವರಿಯಲ್ಲಿ ಕಾಂಗ್ರೆಸ್‌ ಪಟ್ಟಿ ?
ಜೆಡಿಎಸ್‌ ಈಗಾಗಲೇ ಮೊದಲ ಹಂತದಲ್ಲಿ 93 ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಪ್ರಕಟಿಸಿದ್ದು , ಮುಂದಿನ ಹತ್ತು ದಿನಗಳಲ್ಲಿ ಇನ್ನೂ 50 ರಿಂದ 65 ಕ್ಷೇತ್ರಗಳ ಪಟ್ಟಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ 100 ಕ್ಷೇತ್ರಗಳ ಮೊದಲ ಪಟ್ಟಿ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಬಿಜೆಪಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದ ವೇಳೆಗೆ 224 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಆದರೆ, ಮೂರೂ ಪಕ್ಷಗಳಲ್ಲಿ ಟಿಕೆಟ್‌ ಖಾತರಿಯಾಗಿರುವವರು ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಿದ್ದಾರೆ. ಆಪ್‌ ಮತ್ತು ಎಸ್‌ಡಿಪಿಐ, ರೈತಸಂಘ, ಜೆಡಿಯು, ಜನತಾಪಕ್ಷದ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next