Advertisement

ಮೊದಲ ಗೆಲುವನ್ನು ಮರಳಿ ಪಡೆಯುವ ಬಿಜೆಪಿಗೆ ಕಾಂಗ್ರೆಸ್‌ ಕೊಂಚ ಅಡ್ಡಗಾಲು

08:29 PM May 05, 2023 | Team Udayavani |

ಮೂಡುಬಿದಿರೆ‌: ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಗೆದ್ದು ಬಾವುಟ ಹಾರಿಸಿತ್ತು. ಈ ಬಾರಿ ಅದನ್ನು ಉಳಿಸಿಕೊಳ್ಳುವ ಹೋರಾಟ ಬಿಜೆಪಿಯದ್ದು. ಆದರೆ ಕೈ ತಪ್ಪಿ ಹೋದ ಕ್ಷೇತ್ರವನ್ನು ಮರಳಿ ಪಡೆದೇ ತೀರಬೇಕೆಂಬುದು ಕಾಂಗ್ರೆಸ್‌ನ ಪ್ರಯತ್ನ. ಹಾಗಾಗಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ ಉಭಯ ಪಕ್ಷಗಳ ಮಧ್ಯೆ.

Advertisement

ಶಿಕ್ಷಣ ಕಾಶಿ, ಜೈನ ಕಾಶಿ ಎಂದೆಲ್ಲ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ 1999, 2004, 2008, 2013-ನಾಲ್ಕು ಬಾರಿ ಕೆ.ಅಭಯಚಂದ್ರ ಅವರು ಗೆದ್ದು ಬೀಗಿದ್ದರು. ಆದರೆ 2018ರಲ್ಲಿ ಬಿಜೆಪಿ ಅಲೆಯನ್ನೇರಿದ ಉಮಾನಾಥ ಕೋಟ್ಯಾನ್‌ ಬಿಜೆಪಿ ಅಧಿಪತ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ 1994ರಲ್ಲಿ ಜತನಾದಳದಿಂದ ಕೆ. ಅಮರನಾಥ ಶೆಟ್ಟಿ ಗೆದ್ದಿದ್ದರು. 1983 ಮತ್ತು 85ರಲ್ಲಿ ಇವರೇ ಜನತಾಪಕ್ಷದ ಪರವಾಗಿ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದರು.

ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರೇ ಅಭ್ಯರ್ಥಿ. ಇದು ಅವರ ಮೂರನೇ ಚುನಾವಣೆ. 2013ರಲ್ಲಿ ಸೋಲು ಕಂಡಿದ್ದ ಕೋಟ್ಯಾನ್‌, 2018ರಲ್ಲಿ ಗೆದ್ದಿದ್ದರು. ಇನ್ನೊಂದೆಡೆ ಕಾಂಗ್ರೆಸ್‌ ಮಾಜಿ ಶಾಸಕ ಅಭಯಚಂದ್ರ ಅವರು ಚುನಾವಣ ನಿವೃತ್ತಿ ಘೋಷಿಸಿ, ತಮ್ಮ ಶಿಷ್ಯ ಮಿಥುನ್‌ ರೈ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಅದರಂತೆ ಮಿಥುನ್‌ ರೈ ಇಲ್ಲಿ ಅಭ್ಯರ್ಥಿ. ಮಿಥುನ್‌ 2019ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.

2018ರ ವೇಳೆ ಕರಾವಳಿಯಲ್ಲಿ ಪ್ರಬಲವಾಗಿದ್ದ ಹಿಂದುತ್ವ ಮತ್ತು ಆಡಳಿತ ವಿರೋಧಿ ಅಲೆಯಲ್ಲಿ ಉಮಾನಾಥ ಕೋಟ್ಯಾನ್‌ ಅವರಿಗೆ ಅದೃಷ್ಣ ಕೈ ಹಿಡಿಯಿತು. ಅವರೀಗ ತಮ್ಮ ಅವಧಿಯಲ್ಲಿ ಆದ ಗ್ರಾಮೀಣ ರಸ್ತೆ, ಕಿಂಡಿ ಅಣೆಕಟ್ಟುಗಳು, ತಾಲೂಕು ಆಡಳಿತ ಸೌಧ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮತಯಾಚಿಸುತ್ತಿದ್ದಾರೆ.

ಮಿಥುನ್‌ ರೈ ಅವರು ನಾಲ್ಕೈದು ವರ್ಷಗಳಿಂದ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದರು. ಯುವ ಸಮುದಾಯವನ್ನು ತನ್ನತ್ತ ಸೆಳೆಯಲೂ ಪ್ರಯತ್ನಿಸಿದ್ದರು. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಐಟಿ ಪಾರ್ಕ್‌ ನಿರ್ಮಾಣ, ಹೈಟೆಕ್‌ ಸರಕಾರಿ ಆಸ್ಪತ್ರೆ, ಕ್ರಿಕೆಟ್‌ ತರಬೇತಿ ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಕನಸನ್ನು ಮತದಾರರಿಗೆ ವಿವರಿಸುತ್ತಾ ಬೆಂಬಲಿಸುವಂತೆ ಕೋರುತ್ತಿದ್ದಾರೆ.

Advertisement

ಮೋದಿ ಭೇಟಿ ಸಂಚಲನ-ಪ್ರಿಯಾಂಕಾ ನಿರೀಕ್ಷೆ
ಇಬ್ಬರೂ ಅಭ್ಯರ್ಥಿಗಳು ಹೆಚ್ಚು ನೆಚ್ಚಿಕೊಂಡಿರುವುದು ಮನೆ ಮನೆ ಭೇಟಿಯನ್ನೇ. ಪ್ರಧಾನಿ ನರೇಂದ್ರ ಮೋದಿ ಅವರು ಮೂಲ್ಕಿಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡದ್ದು ಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರೂ ಸದ್ಯವೇ ಮೂಲ್ಕಿಯಲ್ಲಿ ಪ್ರಚಾರ ನಡೆಸಲಿದ್ದು, ಇದು ಕೊನೇ ಗಳಿಗೆಯಲ್ಲಿ ಕಾಂಗ್ರೆಸ್‌ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಬಳ್ಕುಂಜೆಯಲ್ಲಿ ಕೈಗಾರಿಕೆ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನ ವಿಷಯ ಚುನಾವಣೆಯ ವಿಷಯವಾಗಿಸಿದೆ ಕಾಂಗ್ರೆಸ್‌. ಕಾಂಗ್ರೆಸ್‌ ಪ್ರಣಾಳಿಕೆಯ “ಬಜರಂಗದಳ ನಿಷೇಧ’ ವಿಷಯ ಕೊನೇ ಹೊತ್ತಿನಲ್ಲಿ ಬಿಜೆಪಿಗೆ ಆನಾಯಾಸವಾಗಿ ಸಿಕ್ಕಿರುವ ಅಸ್ತ್ರ. ಹಾಗಾಗಿ ಅಭಿವೃದ್ಧಿಯ ಜತೆ ಭಾವನಾತ್ಮಕ ಸಂಗತಿಗಳೂ ಫ‌ಲಿತಾಂಶ ನಿರ್ಣಯದಲ್ಲಿ ಪಾಲು ಪಡೆಯುವುದು ಖಚಿತ.
ಜೆಡಿಎಸ್‌ನ ಡಾ| ಅಮರಶ್ರೀ ಅಮರನಾಥ ಶೆಟ್ಟಿ ಅವರು ತಮ್ಮ ತಂದೆ ಮಾಜಿ ಶಾಸಕ ದಿ| ಕೆ. ಅಮರನಾಥ ಶೆಟ್ಟಿ ಅವರ ವರ್ಚಸ್ಸಿನಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಉಳಿದವರು ಫ‌ಲಿತಾಂಶ ನಿರ್ಣಯದಲ್ಲಿ ಪಾತ್ರ ವಹಿಸುವ ಸಾಧ್ಯತೆ ತೀರಾ ಕಡಿಮೆ.

ಕಣದಲ್ಲಿರುವ ಅಭ್ಯರ್ಥಿಗಳು 8
-  ಉಮಾನಾಥ ಕೋಟ್ಯಾನ್‌ (ಬಿಜೆಪಿ)
-  ಮಿಥುನ್‌ ರೈ (ಕಾಂಗ್ರೆಸ್‌)
-  ಡಾ| ಅಮರಶ್ರೀ ಅಮರನಾಥ ಶೆಟ್ಟಿ (ಜೆಡಿಎಸ್‌)
-  ವಿಜಯನಾಥ ವಿಠ್ಠಲ ಶೆಟ್ಟಿ (ಎಎಪಿ)
-  ಆಲೊ#àನ್ಸ್‌ ಫ್ರಾಂಕೋ (ಎಸ್‌ಡಿಪಿಐ)
-  ದಯಾನಂದ (ಕರ್ನಾಟಕ ರಾಷ್ಟ್ರ ಸಮಿತಿ )
-  ಈಶ್ವರ ಎಸ್‌. ಮೂಡುಶೆಡ್ಡೆ (ಪಕ್ಷೇತರ)
-  ದುರ್ಗಾ ಪ್ರಸಾದ್‌ (ಪಕ್ಷೇತರ)

ಲೆಕ್ಕಾಚಾರ ಏನು?
ಈ ಬಾರಿ ಎರಡೂ ಪಕ್ಷಗಳಿಗೂ ಜಿದ್ದಾ ಜಿದ್ದಿಯ ಪೈಪೋಟಿ ಇದೆ. ಬಿಜೆಪಿ ಮರಳಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ದ್ದರೂ ಹಿಂದಿನ ಬಾರಿಗಿಂತ ಕೊಂಚ ಹೆಚ್ಚಿನ ಶ್ರಮ ಹಾಕಬೇಕಾದ ಸ್ಥಿತಿ ಇದೆ. ಕಾಂಗ್ರೆಸ್‌ ಗೆ 2013 ರ ಗೆಲುವೇ ಸ್ಫೂರ್ತಿ. ಭವಿಷ್ಯದ ಕನಸುಗಳನ್ನು ಮನವರಿಕೆ ಮಾಡಿ ಮತಗಳನ್ನಾಗಿಸುವುದೇ ದೊಡ್ಡ ಸವಾಲು.

– ಭರತ್‌ ಶೆಟ್ಟಿಗಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next