Advertisement

Karnataka Politics: ಜೋಡೆತ್ತು ಮುಂದಿವೆ ಸರಣಿ ಸವಾಲು

10:28 AM May 19, 2023 | Team Udayavani |

ಬೆಂಗಳೂರು: ಅಂತೂ ಇಂತೂ ಸಿದ್ದ ರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರೂ ಹೈಕಮಾಂಡ್‌ ರೂಪಿಸಿದ ಸಂಧಾನ ಸೂತ್ರಕ್ಕೆ ತಲೆಬಾಗುವುದರೊಂದಿಗೆ ಮುಖ್ಯ ಮಂತ್ರಿ- ಉಪಮುಖ್ಯಮಂತ್ರಿ ಹುದ್ದೆ ಬಿಕ್ಕಟ್ಟು ಕೊನೆಗೂ ನಡುರಾತ್ರಿಯಲ್ಲಿ ಬಗೆಹರಿದಿದೆ. ಇಬ್ಬರ ಪ್ರಮಾಣ ವಚನಕ್ಕೆ ಭೂಮಿಕೆ ಸಜ್ಜಾಗತೊಡಗಿದೆ. ಈ ಜೋಡೆತ್ತುಗಳು ಕಾಂಗ್ರೆಸ್‌ನಲ್ಲಿ ಅವಳಿ ಶಕ್ತಿ ಕೇಂದ್ರಗಳಾಗಿ ರೂಪ ಪಡೆದಿದ್ದು, ಸರಣಿ ಸವಾಲುಗಳು ಇವರ ಮುಂದಿವೆ.

Advertisement

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊರೆತ ಸ್ಪಷ್ಟ ಬಹುಮತ “ನನ್ನಿಂದಲೇ’, “ನನ್ನಿಂದಲೇ’ ಎಂದು ಭಾವಿಸಿದ ನಾಯಕರು, “ನಾನಾಗ ಬೇಕು’, “ನಾನಾಗಬೇಕು’ ಎಂದು ಅಧಿಕಾರದ ಹಿಂದೆ ಬಿದ್ದು ನಾಲ್ಕು ದಿನ ಗಳ ಕಾಲ ರಾಜ್ಯದ ಜನತೆ, ಕಾಂಗ್ರೆಸ್‌ ಕಾರ್ಯ ಕರ್ತರು, ಮುಖಂಡರಲ್ಲಿ ಗೊಂದಲಕ್ಕೆ ಕಾರಣವಾಗಿದ್ದರು.

ಬಹುಶಃ ಇಂದಿರಾ ಗಾಂಧಿ, ರಾಹುಲ್‌ ಗಾಂಧಿ, ಪಿ.ವಿ. ನರಸಿಂಹರಾವ್‌ ಕಾಲದಲ್ಲಿ ಇಂಥ ಪರಿಸ್ಥಿತಿ ಉದ್ಭವವಾಗಿದ್ದಲ್ಲಿ ಲಕೋಟೆಯಲ್ಲಿ ಸಿಎಂ ಯಾರೆಂಬ ಹೆಸರು ಬರುತ್ತಿತ್ತು. ಏನೇ ಆದರೂ ಅಂತಿಮವಾಗಿ ಇಬ್ಬರೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯಾರೆಂಬು ದನ್ನು ತೀರ್ಮಾ ನಿಸಲಾಗಿದೆ. ಇದನ್ನು ಇಬ್ಬರೂ ಸ್ವಾಗತಿಸಿದ್ದಾರೆ. ದಿಲ್ಲಿಯಲ್ಲೇ ಇದ್ದರೂ ಮೂರು ದಿನಗಳ ಕಾಲ ಮುಖಾಮುಖೀ ಆಗದೆ ಕೊನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಪರಸ್ಪರ ಕೈಕುಲುಕಿ ಕೈ ಎತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಮರಳುವ ಮುನ್ನ ಇಬ್ಬರೂ ಒಗ್ಗಟ್ಟಾಗಿಯೇ ಇದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಸದ್ಯ ಸಿದ್ದರಾಮಯ್ಯ ಸಿಎಂ, ಡಿ.ಕೆ. ಶಿವಕುಮಾರ್‌ ಅವರಿಗೆ ಡಿಸಿಎಂ ಹುದ್ದೆಯ ಜತೆಗೆ ಪಕ್ಷದ ಅಧ್ಯಕ್ಷ ಸ್ಥಾನ ಲೋಕಸಭಾ ಚುನಾವಣೆಯವರೆಗೂ ಮುಂದುವರಿಕೆ, ಅಷ್ಟೇ ಅಲ್ಲ ಅವರು ಬಯಸಿದ ಖಾತೆಗಳು ಲಭ್ಯವಾಗಲಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಎಂಗಿಂತ ಪ್ರಬಲ ಸ್ಥಾನ ಪಕ್ಷದ ಅಧ್ಯಕ್ಷತೆ. ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನೂ ಆಗುವುದು ವಿಶಿಷ್ಟ. ಪಕ್ಷೀಯವಾದ ಎಲ್ಲ ತೀರ್ಮಾನಗಳಿಗೆ ಅಂಕಿತ ಅಧ್ಯಕ್ಷರದ್ದೇ ಆಗಿರುತ್ತದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್‌ನಲ್ಲಿ ಅವಳಿ ಶಕ್ತಿ ಕೇಂದ್ರಗಳು ಸ್ಪಷ್ಟವಾಗಿ ಬೇರೂರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಎರಡು ಶಕ್ತಿ ಕೇಂದ್ರಗಳ ಮುಂದೆ ಸರಣಿ ಸವಾಲುಗಳಿವೆ.

ಸಂಪುಟ ರಚನೆ ಕಸರತ್ತು
ಈ ಚುನಾವಣೆಯಲ್ಲಿ ಹಿರಿಯರು, ಅನುಭವಿಗಳು ಸೇರಿದಂತೆ ಘಟಾನುಘಟಿಗಳೇ ಗೆದ್ದಿರುವುದರಿಂದ ಸಚಿವ ಸಂಪುಟ ರಚನೆ ಅಷ್ಟು ಸುಲಭವಲ್ಲ. ಜಿಲ್ಲೆ, ಜಾತಿ, ಉಪ ಜಾತಿ, ಸಾಮಾಜಿಕ ನ್ಯಾಯ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಚಿವ ಸಂಪುಟ ರಚಿಸಬೇಕಾಗಿದೆ. ಸ್ಪೀಕರ್‌ ಆಯ್ಕೆ, ಅಡ್ವೊಕೇಟ್‌ ಜನರಲ್‌ ನೇಮಕ, ವಿವಿಧ ನಿಗಮ, ಮಂಡಳಿಗಳ ನೇಮಕಾತಿಯೂ ಆಗಬೇಕಾಗಿದೆ. ಇವೆಲ್ಲದರಲ್ಲೂ ಒಮ್ಮತದ ತೀರ್ಮಾನ ಆಗಬೇಕೇ ವಿನಾ ಭಿನ್ನದಾರಿ ತುಳಿದರೆ ಆಗ ಒಂದೇ ಪಕ್ಷದ ಸಮ್ಮಿಶ್ರ ಸರಕಾರದ ಅನುಭವ ಆಗುತ್ತದೆ.

Advertisement

ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆಗಳನ್ನು ಕೆಲವೇ ತಿಂಗಳುಗಳಲ್ಲಿ ನಡೆಸಬೇಕಾದ ಅನಿವಾರ್ಯ ಈ ಸರಕಾರದ ಮುಂದಿದೆ. ಈ ನಾಲ್ಕು ಚುನಾವಣೆಗಳನ್ನು ಗೆಲ್ಲುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವುದು ಅಷ್ಟೇ ದೊಡ್ಡ ಸವಾಲು.

ಆಡಳಿತಕ್ಕೆ ಕಾಯಕಲ್ಪ
ಆಡಳಿತ ಸುಧಾರಣೆ, ಭ್ರಷ್ಟಾಚಾರ ನಿಯಂತ್ರಣ, ಜಾತಿ- ಅಧಿಕಾರಿ ವರ್ಗದಲ್ಲಿ ಉಂಟಾಗಿರುವ ಗುಂಪು ಗಾರಿಕೆ ನಿರ್ಮೂಲನ ಮಾಡಿ ಸರಕಾರಿ ನೌಕರರು ಒಂದೇ ಎಂಬ ಭಾವನೆ ರೂಪಿಸುವ ವಾತಾವರಣ ಸೃಷ್ಟಿಸಲು ಜಾತ್ಯತೀತ ಮನೋಭಾವದಿಂದ ಸರಕಾರ- ಸಚಿವರು ಕೆಲಸ ಮಾಡಬೇಕು. ಜಾತಿ ಹೆಸರಿನಲ್ಲಿ ಸಚಿವರಾಗುವವರು ಜಾತಿವಾದಿಗಳಾದರೆ ಸರಕಾರಕ್ಕೆ ಕೆಟ್ಟ ಹೆಸರು ತಪ್ಪಿದ್ದಲ್ಲ. ಈ ಎರಡು ಶಕ್ತಿ ಕೇಂದ್ರಗಳು ಒಂದೇ ನಾಣ್ಯದ ಎರಡು ಮುಖಗಳಾಗುತ್ತವೆಯೋ ಅಥವಾ ಬೇರೆ ಬೇರೆ ನಾಣ್ಯಗಳಾಗಿ ಚಲಾವಣೆಗಳಾ ಗುತ್ತವೆಯೋ ಕಾದುನೋಡಬೇಕು.

ಸವಾಲುಗಳೇನು?
ಕಾಂಗ್ರೆಸ್‌ ಪ್ರಣಾಳಿಕೆ, ಅದರಲ್ಲೂ ವಿಶೇಷವಾಗಿ 5 ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೆ ತರುವ ವಾಗ್ಧಾನ ನೀಡಲಾಗಿದೆ. ಈಗ ರಾಜ್ಯದ ಜನತೆ ಈ ಗ್ಯಾರಂಟಿಗಳು ಯಾವಾಗ ಜಾರಿಗೆ ಬರುತ್ತವೆ ಎಂದು ಕಾಯುತ್ತಿದ್ದಾರೆ. ಇದಕ್ಕೆ ಸಂಪನ್ಮೂಲ ಕ್ರೋ ಡೀಕರಣ ಹೇಗೆ ಎನ್ನುವುದು ಬಹುದೊಡ್ಡ ಪ್ರಶ್ನೆ. ಕೊಟ್ಟ ಭರವಸೆ ಈಡೇರಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುವ ಭೀತಿಯೂ ಇದೆ.

ಕೇವಲ ಗ್ಯಾರಂಟಿಗಳಷ್ಟೇ ಅಲ್ಲ, ಅಭಿವೃದ್ಧಿ ಕಾರ್ಯ ಕ್ರಮಗಳ ಬಗ್ಗೆಯೂ ಸರಕಾರದ ಮೇಲೆ ರಾಜ್ಯದ ಜನತೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅವುಗಳನ್ನು ಈಡೇರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಇದಕ್ಕಿಂತ ಉತ್ತಮ ಫ‌ಲಿತಾಂಶ ಪಡೆಯಬಹುದು. ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರ ಆಡಳಿತಾನುಭವ ಸಹಕಾರಿ ಆಗುವುದರಲ್ಲಿ ಅನುಮಾನವಿಲ್ಲ. ಇವರು ಅಧಿಕಾರಕ್ಕಾಗಿ ರೂಪಿಸಿಕೊಂಡ ಗುಂಪು ರಾಜ ಕಾರಣ ಮರೆತು ಒಮ್ಮನಸ್ಸಿನಿಂದ ದುಡಿಯುವ ಜೋಡೆತ್ತು ಗಳಾಗಬೇಕು ಎಂಬುದೇ ಕನ್ನಡಿಗರ ಅಭಿಲಾಷೆ.

– ಎಂ.ಎನ್‌. ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next