Advertisement

ಮಹಿಳಾ ಟಿಟಿ ತಂಡದ ಆಯ್ಕೆ ಪಟ್ಟಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

10:29 PM Jun 17, 2022 | Team Udayavani |

ಬೆಂಗಳೂರು: ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಮಹಿಳಾ ಟೇಬಲ್‌ ಟೆನಿಸ್‌ ತಂಡದ ಅಂತಿಮ ಪಟ್ಟಿಯನ್ನು ಜೂ.22ರವರೆಗೆ ರವಾನಿಸಬೇಡಿ… ಹೀಗೆಂದು ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟಕ್ಕೆ (ಟಿಟಿಎಫ್ಐ) ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

Advertisement

ಟೇಬಲ್‌ ಟೆನಿಸ್‌ ಮಹಿಳಾ ತಂಡದಿಂದ ತಮ್ಮನ್ನು ಕೈಬಿಟ್ಟಿರುವ ಟಿಟಿಎಫ್ಐ ಕ್ರಮ ಪ್ರಶ್ನಿಸಿ ಬೆಂಗಳೂರಿನ ಟೆನಿಸ್‌ ಆಟಗಾರ್ತಿ ಅರ್ಚನಾ ಕಾಮತ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೇ ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟ, ಭಾರತೀಯ ಕ್ರೀಡಾ ಪ್ರಾಧಿಕಾರ, ಮಹಿಳಾ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೀಜಾ ಕುಲಾ, ರೀತ್‌ ರಿಷ್ಯಾ ಟೆನಿಸನ್‌, ಮಣಿಕಾ ಬಾತ್ರಾ, ದಿವ್ಯಾ ಚಿತಲೆ, ಸ್ವಸ್ತಿಕ್‌ ಘೋಷ್‌ ಅವರಿಗೆ ಇ-ಮೇಲ್‌ ಮೂಲಕ ತುರ್ತು ನೋಟಿಸ್‌ ಜಾರಿ ಮಾಡಲು ನ್ಯಾಯಾಲಯ ಆದೇಶಿಸಿತು.

ಅರ್ಚನಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ್‌ ಹೊಳ್ಳ, ಅರ್ಜಿದಾರರು ಟೇಬಲ್‌ ಟೆನಿಸ್‌ನ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ವಿಶ್ವದಲ್ಲಿ ನಾಲ್ಕನೇ ರ್‍ಯಾಂಕ್‌ ಹೊಂದಿದ್ದಾರೆ. ಆದರೂ ಅವರನ್ನು ಭಾರತ ಮಹಿಳಾ ತಂಡದಿಂದ ಕೈಬಿಡಲಾಗಿದೆ. ಮೊದಲು ಸಂಭಾವ್ಯ ಆಟಗಾರರ ಪಟ್ಟಿಯಲ್ಲದೇ ತಾತ್ಕಾಲಿಕ ಪಟ್ಟಿಯಲ್ಲೂ ಅರ್ಚನಾ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರ ತಾಂತ್ರಿಕ ಅಂಶ ಉಲ್ಲೇಖೀಸಿ ಹೆಸರನ್ನು ತೆಗೆದು ಹಾಕಲಾಗಿದೆ. ಅರ್ಚನಾ ಬದಲಿಗೆ ದಿವ್ಯಾ ಚಿತಲೆ ಹೆಸರನ್ನು ಸೇರ್ಪಡೆ ಮಾಡಿದೆ ಎಂದು ತಿಳಿಸಿದರು.

ದಿವ್ಯಾ ಚಿತಲೆಗಿಂತಲೂ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅರ್ಚನಾ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೂ ಅವರ ಹೆಸರನ್ನು ಕೈಬಿಡಲಾಗಿದೆ. ಆಯ್ಕೆಸಮಿತಿಯ ಕ್ರಮ ನಿರುಕುಂಶ ನೀತಿಯಿಂದ ಕೂಡಿದೆ. ಹಾಗಾಗಿ, ಭಾರತೀಯ ಮಹಿಳಾ ತಂಡದ ಪಟ್ಟಿಯಿಂದ ದಿವ್ಯಾ ಚಿತಲೆ ಹಾಗೂ ಸ್ವಸ್ತಿಕ್‌ ಘೋಷ್‌ ಹೆಸರು ತೆಗೆದುಹಾಕಿ, ಅರ್ಚನಾ ಹೆಸರನ್ನು ಸೇರಿಸಲು ಟಿಟಿಎಫ್ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next