Advertisement

ಮಹಾ ವಿರುದ್ಧ ಕಿಡಿ; ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ

12:06 AM Nov 23, 2022 | Team Udayavani |

ಬೆಂಗಳೂರು: ಬೆಳಗಾವಿ ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರಕಾರ ಅನುಸರಿಸುತ್ತಿರುವ ನಡೆಯ ಬಗ್ಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಮಹಾರಾಷ್ಟ್ರ ಸರಕಾರ ಸಲ್ಲಿಕೆ ಮಾಡಿರುವ ಅರ್ಜಿ ಬುಧವಾರ ಸುಪ್ರೀಂ ಕೋರ್ಟ್‌ ಮುಂದೆ ಬರಲಿದೆ. ವಿಶೇಷವೆಂದರೆ ಈ ಅರ್ಜಿಯನ್ನು ಮಾನ್ಯ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಇನ್ನೂ ತೀರ್ಮಾನಿಸಿಲ್ಲ. ಒಂದು ವೇಳೆ ಬುಧವಾರವೇ ಸುಪ್ರೀಂ ಕೋರ್ಟ್‌ ಅರ್ಜಿ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದರೆ ಮಹಾರಾಷ್ಟ್ರದ ಕಾನೂನು ಸಮರ ಅಂತ್ಯಗೊಳ್ಳಲಿದೆ.

ಗಡಿ ವಿವಾದ ಮುಗಿದ ಅಧ್ಯಾಯವಾದರೂ ಮಹಾರಾಷ್ಟ್ರ ಮತ್ತೆ ಮತ್ತೆ ರಾಜಕೀಯ ಕಾರಣಗಳಿಗಾಗಿ ಆಗಾಗ್ಗೆ ಇದನ್ನು ಕೆದಕುತ್ತಲೇ ಇದೆ. ಈ ಸಂಬಂಧ ರಾಜ್ಯದಲ್ಲಿ ಪಕ್ಷಾ ತೀತ ವಿರೋಧ ವ್ಯಕ್ತವಾಗಿದೆ.

ಈ ವಿಚಾರದಲ್ಲಿ ಸರಕಾರ ಎಚ್ಚರದಿಂದ ಕಣ್ಣಲ್ಲಿ ಕಣ್ಣಿಟ್ಟು ನಡೆಯಬೇಕಾಗಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಆ ಅರ್ಜಿ ವಿಚಾರಣೆಗೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯ ಸರಕಾರವೂ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು, ಸಾಹಿತಿಗಳು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿಗಳು ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಾಡ ಬಾರದು ಎಂದು ಈ ಮಧ್ಯೆ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.

Advertisement

ಜತ್‌ ತಾಲೂಕು ಕರ್ನಾಟಕಕ್ಕೆ ಸೇರಲಿ
ಮಹಾರಾಷ್ಟ್ರದ ಜತ್‌ ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರಿನ ಸಮಸ್ಯೆ ಇತ್ತು. ನಾವು ನೀರು ಕೊಟ್ಟು ಸಹಾಯ ಮಾಡಬೇಕೆಂದು ಯೋಜನೆಗಳನ್ನು ರೂಪಿಸಿದ್ದೇವೆ. ಜತ್‌ ತಾಲೂಕು ಕರ್ನಾಟಕಕ್ಕೆ ಸೇರಬೇಕೆಂದು ಅಲ್ಲಿನ ಎಲ್ಲ ಗ್ರಾ.ಪಂ.ಗಳು ನಿರ್ಧರಿಸಿದ್ದವು. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಸಿಎಂ ಬೊಮ್ಮಾಯಿ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.

ಮಹಾ ಕನ್ನಡ ಹೋರಾಟಗಾರರಿಗೆ ಪಿಂಚಣಿ
ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರ ದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎನ್ನುವ ತೀರ್ಮಾನ ಮಾಡಿದೆ. ಸ್ವಾತಂತ್ರ್ಯ ಹೋರಾಟ, ಏಕೀಕರಣ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ದಾಖಲೆಗಳನ್ನು ತರಿಸಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ಕಾರ್ಯಗತ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ವರದಿ ನಿರಾಕರಣೆ ಸರಿಯಲ್ಲ
ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ಎತ್ತುತ್ತಲೇ ಇದೆ. ಮಹಾಜನ ಆಯೋಗದ
ರಚನೆಗೆ ಒತ್ತಾಯ ಮಾಡಿದ್ದೇ ಮಹಾರಾಷ್ಟ್ರ. ಮಹಾಜನ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ವರದಿ ನೀಡಿದೆ. ಆದರೆ ಮಹಾಜನ್‌ ಆಯೋಗದ ವರದಿ ತಮಗೆ ಪೂರಕ ವಾಗಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ವರದಿ ನಿರಾ ಕರಿಸು ತ್ತಿದೆ. ಈ ಬಗ್ಗೆಯೂ ಸುಪ್ರೀಂ ಕೋರ್ಟ್‌ ಗಮನ ಸೆಳೆಯಬೇಕಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒತ್ತಾಯಿಸಿದ್ದಾರೆ.

ಬೆಳಗಾವಿಯು ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಯವರು ಬೆಳಗಾವಿ ಗಡಿ ವಿವಾದವನ್ನು ಲಘುವಾಗಿ ಪರಿಗಣಿಸಬಾರದು. ಅಂತಿಮ ವಿಚಾರಣೆಯಲ್ಲಿ ಪೂರ್ವ ತಯಾರಿ ಇಲ್ಲದೆ ಹೋದರೆ ಮುಖಭಂಗ ಎದುರಿಸಬೇಕಾಗುತ್ತದೆ. ಹಾಗಾಗಿ ಸರಕಾರ ಈ ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಕಾನೂನು ತಜ್ಞರ ಜತೆ ಸಿಎಂ ಸಭೆ
ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ವಿಚಾರಣೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಮುಕುಲ್‌ ರೋಹrಗಿ, ಉದಯ್‌ ಹೊಳ್ಳ ಸೇರಿ ಹಿರಿಯ ವಕೀಲರ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚಿಸಿದರು. ಮುಂದಿನ ಕಾನೂನು ಸಮರ ಹೇಗಿರಬೇಕು ಎಂಬ ಬಗ್ಗೆ ಮಾತುಕತೆ ನಡೆಸಿದರು.

ಪೀಠವೇ ರಚನೆಯಾಗಿಲ್ಲ
ಮಹಾಜನ ಆಯೋಗದ ವರದಿ ಬಳಿಕ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಕಾನೂನು ಸಮರ ನಡೆಯುತ್ತಲೇ ಇದೆ. 2004ರಿಂದ ಈ ವಿವಾದ ಸುಪ್ರೀಂ ಕೋರ್ಟ್‌ ನಲ್ಲಿದೆ. ಕರ್ನಾಟಕದಲ್ಲಿರುವ 814 ಹಳ್ಳಿ ಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ಅಲ್ಲಿನವರ ಒತ್ತಾಯ. ಆದರೆ ಈ ವಿಚಾರ ದಲ್ಲಿ ಮಹಾಜನ ವರದಿಯೇ ಅಂತಿಮ. ನಮ್ಮ ಕಡೆಯಿಂದ ಯಾವುದೇ ಹಳ್ಳಿ ಗಳನ್ನು ಕೊಡುವುದಿಲ್ಲ ಎಂದು ಕರ್ನಾಟಕ ಪ್ರಬಲವಾಗಿ ವಾದ ಮಂಡಿಸಿದೆ. ಇದರ ನಡುವೆ ಕರ್ನಾಟಕ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಗಡಿ ವಿವಾದ ಇತ್ಯರ್ಥ ಮಾಡುವ ಅಧಿಕಾರ ಕೋರ್ಟ್‌ ಗಿಲ್ಲ. ಅದು ಇರುವುದು ಸಂಸತ್ತಿ ಗೆ ಮಾತ್ರ ಎಂದು ಪ್ರತಿಪಾದಿಸಿದೆ. ಹೀಗಾಗಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ವಾದಿಸುತ್ತಿದೆ. ಕರ್ನಾಟಕದ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮಹಾರಾಷ್ಟ್ರ ಒತ್ತಾಯಿಸಿದೆ.

ತಂದೆ ಶಿಫಾರಸಿಗೆ ಸಿಕ್ಕೀತೇ ಒಪ್ಪಿಗೆ?
ಬೆಳಗಾವಿ ವಿವಾದ ಕುರಿತ ಕಾನೂನು ಸಂಗ್ರಾಮದಲ್ಲೇ ಒಂದು ರೋಚಕತೆ ಇದೆ. ಗಡಿ ವಿವಾದ ಸಂಬಂಧ ರಾಜ್ಯಗಳ ಅರ್ಜಿಗಳನ್ನು ಒಪ್ಪಿಕೊಳ್ಳಲು ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್‌ 2004ಕ್ಕೂ ಮುನ್ನವೇ ನಿವೃತ್ತ ನ್ಯಾ| ವೈ.ವಿ. ಚಂದ್ರಚೂಡ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಸಂವಿಧಾನದ ಆರ್ಟಿಕಲ್‌ 131ರ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ವಿಷಯವನ್ನು ಬೇಕಾದರೂ ಪ್ರಶ್ನಿಸಬಹುದು ಎಂದು ವರದಿ ನೀಡಿತ್ತು. ಈ ಶಿಫಾರಸಿನಂತೆಯೇ ಮಹಾರಾಷ್ಟ್ರ 2004ರಲ್ಲಿ ಅರ್ಜಿ ಸಲ್ಲಿಸಿತ್ತು. ಈಗ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾ| ವೈ.ವಿ. ಚಂದ್ರಚೂಡ್‌ ಪುತ್ರ ನ್ಯಾ| ಡಿ.ವೈ. ಚಂದ್ರಚೂಡ್‌ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಅರ್ಜಿಯನ್ನು ಮಾನ್ಯ ಮಾಡುವುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next