Advertisement

ಕರ್ನಾಟಕ ಚುನಾವಣಾ ಫಲಿತಾಂಶ: ಸೋತವರು ಯಾರು, ಗೆದ್ದವರು ಯಾರು.. ಇಲ್ಲಿದೆ ಪ್ರಬಲ ನಾಯಕರ ಪಟ್ಟಿ

07:36 PM May 13, 2023 | Team Udayavani |

ಬೆಂಗಳೂರು: ಬಾರಿ ಕುತೂಹಲ ಮೂಡಿಸಿದ ಕರ್ನಾಟಕ ವಿಧಾನ ಸಭಾ ಚುನಾವಣಾ ಫಲಿತಾಂಶ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 130 ಕ್ಕೂ ಹೆಚ್ಚು ಹೆಚ್ಚಿನ ಸ್ಥಾನಗಳನ್ನು ಪಡೆದು ಆಡಳಿತ ಚುಕ್ಕಾಣಿ ಹಿಡಿಯುವ ಹಂತಕ್ಕೆ ತಲುಪಿದೆ ಅಲ್ಲದೆ ರಾಜ್ಯದಲ್ಲಿ ಈ ಬಾರಿ ಬಿಜೆಪಿ 65 ಸ್ಥಾನಗಳನ್ನು ಪಡೆದುಕೊಂಡಿದೆ. ಅಲ್ಲದೆ ನಿರೀಕ್ಷೆಗೂ ಮೀರಿದ ಫಲಿತಾಂಶ ಈ ಬಾರಿಯ ಚುನಾವಣೆಯಲ್ಲಿ ಬಂದಿದ್ದು ಕೆಲ ಪ್ರಮುಖ ನಾಯಕರು ಚುನಾವಣೆಯಲ್ಲಿ ಗೆದ್ದರೆ ಇನ್ನು ಕೆಲವು ನಾಯಕರು ಸೋಲು ಅನುಭವಿಸಿದ್ದಾರೆ.

Advertisement

ಹಾಗಾದರೆ ರಾಜ್ಯದ ಯಾವ ಯಾವ ಕ್ಷೇತ್ರದ ಪ್ರಮುಖ ನಾಯಕರು ಗೆದ್ದಿದ್ದಾರೆ ಮತ್ತು ಯಾವ ಕ್ಷೇತ್ರದ ಪ್ರಮುಖ ನಾಯಕರು ಸೋಲನ್ನು ಅನುಭವಿಸಿದ್ದಾರೆ ಎಂಬುದರ ವಿವರವನ್ನು ನೋಡೋಣ…

ಸೋತ ನಾಯಕರು:
1. ಜಗದೀಶ ಶೆಟ್ಟರ್, (ಹುಬ್ಬಳ್ಳಿ ಧಾರವಾಡ ಕೇಂದ್ರ)
ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ದಿಸಿದ್ದ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ ಟೆಂಗಿನಕಾಯಿ ವಿರುದ್ಧ 32 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಂಡ್ಡಿದ್ದಾರೆ. ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು ಅದರಂತೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸದ್ದರು.

2. ಡಾ ಕೆ ಸುಧಾಕರ್, (ಚಿಕ್ಕಬಳ್ಳಾಪುರ)
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಕೆ.ಸುಧಾಕರ್ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅಯ್ಯರ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಹಾಲಿ ಆರೋಗ್ಯ ಸಚಿವರಾಗಿದ್ದ ಡಾ.ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರು.

3. ವಿ ಸೋಮಣ್ಣ (ವರುಣಾ ಮತ್ತು ಚಾಮರಾಜನಗರ)
ಬಿಜೆಪಿ ಸಚಿವ ಮತ್ತು ಹಿರಿಯ ನಾಯಕ ವಿ ಸೋಮಣ್ಣ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳೆರಡರಲ್ಲೂ ಸೋಲು ಕಂಡಿದ್ದಾರೆ. ವರುಣಾದಲ್ಲಿ ಕಾಂಗ್ರೆಸ್‌ನ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ದಿಸಿದರೆ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಸ್ಪರ್ದಿಸಿ ಸೋಲು ಅನುಭವಿಸಿದ್ದಾರೆ.

Advertisement

4. ಸಿ.ಟಿ.ರವಿ (ಚಿಕ್ಕಮಗಳೂರು)
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ.ರವಿ ಚಿಕ್ಕಮಗಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ವಿರುದ್ಧ ಸೋಲನುಭವಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

5. ಆರ್ ಅಶೋಕ (ಕನಕಪುರ)
ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿಯ ಆರ್.ಅಶೋಕ್ ಹೀನಾಯ ಸೋಲು ಅನುಭವಿಸಿದ್ದಾರೆ. ಅಶೋಕ್ ಅವರು ಶಿವಕುಮಾರ್ ವಿರುದ್ಧ 1,20,000 ಮತಗಳ ಭಾರಿ ಅಂತರದಿಂದ ಸೋಲನುಭವಿಸಿದ್ದಾರೆ, ಆ ಮೂಲಕ ಸ್ಪರ್ಧೆಯಲ್ಲೂ ಠೇವಣಿ ಕಳೆದುಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ 1,42,156 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಬಿ ನಾಗರಾಜು 20,561 ಮತಗಳನ್ನು ಪಡೆದಿದ್ದಾರೆ. ಆರ್ ಅಶೋಕ್ ಕೇವಲ 19,602 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

6. ನಿಖಿಲ್ ಕುಮಾರಸ್ವಾಮಿ, (ರಾಮನಗರ)
ರಾಮನಗರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಮತ್ತು ಜನತಾದಳ (ಜೆಡಿಎಸ್) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್‌ಎ ಇಕ್ಬಾಲ್ ಹುಸೇನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಅವರ ಕುಟುಂಬವು ಅನಿರೀಕ್ಷಿತ ಘಟನೆಗಳನ್ನು ಅನುಭವಿಸಿದೆ. ಹುಸೇನ್ 72,898 ಮತಗಳನ್ನು ಪಡೆದರೆ, ನಿಖಿಲ್ ಕುಮಾರಸ್ವಾಮಿ 61,692 ಮತಗಳನ್ನು ಗಳಿಸಿದರು. ಏತನ್ಮಧ್ಯೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೌತಮ್ ಗೌಡ ಅವರು ಕೇವಲ 10,870 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ.

ಗೆದ್ದ ಪ್ರಬಲ ನಾಯಕರು

1. ಬಸವರಾಜ ಬೊಮ್ಮಾಯಿ, (ಶಿಗ್ಗಾಂ)
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂ ಕ್ಷೇತ್ರದಲ್ಲಿ ಸ್ಪರ್ದಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ವಿರುದ್ಧ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಿಂದ ಬೊಮ್ಮಾಯಿ ಸತತ ನಾಲ್ಕನೇ ಗೆಲುವು ದಾಖಲಿಸಿದ್ದಾರೆ.

2. ಸಿದ್ದರಾಮಯ್ಯ (ವರುಣಾ)
ವರುಣಾ ಕ್ಷೇತ್ರದಿಂದ ಬಿಜೆಪಿಯ ವಿ.ಸೋಮಣ್ಣ ಅವರನ್ನು ಸೋಲಿಸುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ 8,354 ಮತಗಳ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದಾರೆ.

3. ಡಿ.ಕೆ.ಶಿವಕುಮಾರ್ (ಕನಕಪುರ)
ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ 55,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಆರ್ ಅಶೋಕ್ ಮತ್ತು ಜೆಡಿಎಸ್‌ ನ ಬಿ.ನಾಗರಾಜು ವಿರುದ್ಧ ಸ್ಪರ್ಧಿಸಿದ್ದರು.

4. ಪ್ರಿಯಾಂಕ್ ಖರ್ಗೆ (ಚಿತ್ತಾಪುರ)
ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ 13,640 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ 81,323 ಮತಗಳನ್ನು ಪಡೆದರೆ. ಎದುರಾಳಿ ಬಿಜೆಪಿಯ ಮಣಿಕಂಠ ರಾಥೋಡ್ ಅವರು 67,683 ಮತಗಳನ್ನು ಪಡೆದಿದ್ದಾರೆ.

5. ಲಕ್ಷ್ಮಣ ಸವದಿ, ಅಥಣಿ
ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಿಂದ ಸ್ಪರ್ದಿಸಿ ಬಿಜೆಪಿಯ ಮಹೇಶ ಕುಮಠಳ್ಳಿ ಅವರನ್ನು ಸೋಲಿಸಿ ವಿಜಯಶಾಲಿಯಾಗಿದ್ದಾರೆ.

ಇದನ್ನೂ ಓದಿ: ಗೆದ್ದ ಬಳಿಕ ಕೇಂದ್ರ ಸಚಿವ ಖೂಬಾ ವಿರುದ್ಧ ಪ್ರಭು ಚೌಹಾಣ್ ಆಕ್ರೋಶ, ಕಣ್ಣೀರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next