Advertisement

ಈ ಎಲ್ಲ ಸಿದ್ಧತೆ ಮಾಡಿಕೊಂಡು ಮತ ಹಾಕಿ

12:20 AM May 10, 2023 | Team Udayavani |

ಮತದಾನದ ದಿನ ಬಂದೇ ಬಿಟ್ಟಿತು. ನಿಮ್ಮ ನಿಮ್ಮ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ನಿಮ್ಮದೇ ಸರಕಾರವನ್ನು ಆಯ್ಕೆ ಮಾಡುವ ಬಹುಮುಖ್ಯವಾದ ದಿನವಿದು. ಈಗಾಗಲೇ ಚುನಾವಣ ಆಯೋಗ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಹಾಗಾದರೆ ನೀವು ಮತಗಟ್ಟೆಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಸೇರಿದಂತೆ ಇನ್ನಿತರ ಮಾಹಿತಿಗಳು ಇಲ್ಲಿವೆ.

Advertisement

ಎಲ್ಲಿದೆ ಮತಗಟ್ಟೆ?

ನಿಮ್ಮ ಓಟರ್‌ ಐಡಿ ಕಾರ್ಡ್‌ನಲ್ಲಿರುವ ನಂಬರ್‌ ಅನ್ನು ಆಯೋಗದ ಚುನಾವಣ ಆ್ಯಪ್‌ ಅಥವಾ ಆಯೋಗದ ವೆಬ್‌ಸೈಟ್‌ಗೆ ಹೋಗಿ ನೋಡಿದರೆ ನಿಮ್ಮ ಮತಗಟ್ಟೆಯ ಮಾಹಿತಿ ತಿಳಿಯುತ್ತದೆ. ಮತಗಟ್ಟೆಯಲ್ಲಿ ಕ್ಯೂ ಇದೆಯೇ ಅಥವಾ ಇಲ್ಲವೇ ಎಂಬುದನ್ನೂ ನೀವು ಚುನಾವಣ ಆ್ಯಪ್‌ ಮೂಲಕವೇ ನೋಡಿಕೊಳ್ಳಬಹುದು. ಇದು ಪ್ರತೀ 15 ನಿಮಿಷಗಳಿಗೊಮ್ಮೆ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ.

ಮತಗಟ್ಟೆ ಬಳಿ…

  1. ಮತಗಟ್ಟೆ ಬಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲಿ. ಪ್ರಮುಖವಾಗಿ ಬೇಕಾದ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಹೋಗಿ.
  2. ಮತಗಟ್ಟೆಯೊಳಗೆ ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು; ಅಂದರೆ ಮೊಬೈಲ್‌, ಕೆಮರಾಗಳನ್ನು ಬಳಕೆ ಮಾಡುವಂತಿಲ್ಲ.
  3. ಮತ ಹಾಕಿದ ತತ್‌ಕ್ಷಣ, ಅಲ್ಲೇ ಸೆಲ್ಫಿ ತೆಗೆದುಕೊಳ್ಳಲು ಹೋಗಬೇಡಿ. ಇದು ನಿಷಿದ್ಧ.
  4. ಮತಗಟ್ಟೆಯೊಳಗೆ ಪ್ರವೇಶ ಮಾಡಿದ ತತ್‌ಕ್ಷಣ, ಚುನಾವಣ ಅಧಿಕಾರಿಗಳು ಮೊದಲಿಗೆ ನಿಮ್ಮ ಗುರುತಿನ ಚೀಟಿ ಪರೀಕ್ಷಿಸುತ್ತಾರೆ. ಬಳಿಕ ನಿಮ್ಮ ಎಡಗೈ ಬೆರಳಿಗೆ ಇಂಕ್‌ ಹಾಕುತ್ತಾರೆ. ಅಲ್ಲೇ ಇರುವ ಲಾಗ್‌ ಬುಕ್‌ನಲ್ಲಿ ನಿಮ್ಮ ಸಹಿ ಪಡೆದು, ನಿಮಗೆ ಒಂದು ಸ್ಲಿಪ್‌ ನೀಡುತ್ತಾರೆ.
  5. ಮತ್ತೂಬ್ಬ ಅಧಿಕಾರಿ ನಿಮಗೆ ನೀಡಲಾಗಿರುವ ಸ್ಲಿಪ್‌ ಅನ್ನು ಪರಿಶೀಲಿಸಿ, ಮತ ಹಾಕಲು ಕಳುಹಿಸುತ್ತಾರೆ.
  6. ಒಮ್ಮೆ ನಿಮಗೆ ಚುನಾವಣ ಅಧಿಕಾರಿಯು ಮತ ಹಾಕಿ ಎಂದು ಹೇಳಿದ ಮೇಲೆ, ನಿಮಗಿಷ್ಟದ ಅಭ್ಯರ್ಥಿ, ಪಕ್ಷಕ್ಕೆ ಇವಿಎಂನಲ್ಲಿ ಮತ ಹಾಕಿ.
  7. ಮತ ಹಾಕಿದ ಮೇಲೆ ಒಂದು ಬೀಪ್‌ ಸೌಂಡ್‌ ಬರುತ್ತದೆ. ಜತೆಗೆ ವಿವಿಪ್ಯಾಟ್‌ನಲ್ಲಿ ಮತಹಾಕಿದ ಪಕ್ಷದ ವಿವರವೂ ಕಾಣಿಸುತ್ತದೆ. ಇದನ್ನು ದೃಢೀಕರಿಸಿಕೊಂಡು ವಾಪಸ್‌ ಬನ್ನಿ.

ಸಹಾಯಕ ಆ್ಯಪ್‌ಗಳು

Advertisement

ಸಿ.ವಿಜಿಲ್‌

ಕೆವೈಸಿ(ನಿಮ್ಮ ಅಭ್ಯರ್ಥಿ ತಿಳಿದುಕೊಳ್ಳಿ)

ಸಕ್ಷಮ್‌(ಇಸಿಐ)

ಓಟರ್‌ ಹೆಲ್ಪ್ಲೈನ್‌

ಓಟರ್‌ ಟರ್ನ್ಔಟ್‌

ಮತಗಟ್ಟೆ ಬಳಿಯ ಸವಲತ್ತುಗಳು

– ನೀವು ಅಂಗವಿಕಲರಾಗಿದ್ದರೆ, 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ನಿಮಗೆ ಪಿಕಪ್‌ ಸೇವೆಯುಂಟು. ಇದಕ್ಕೆ ಮೊದಲೇ ಚುನಾವಣ ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

– ನಿಮಗೆ ಏನಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ, ಏನಾದರೂ ಎಮರ್ಜೆನ್ಸಿ ಬೇಕಾದರೆ, ಚುನಾವಣ ಆ್ಯಪ್‌ನಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಅವರು ಹತ್ತಿರದ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ನೀಡುತ್ತಾರೆ.

– ಚುನಾವಣ ಪ್ರಕ್ರಿಯೆ ಬಗ್ಗೆ ನಿಮಗೆ ಗೊಂದಲಗಳಿದ್ದಲ್ಲಿ, ಚುನಾವಣ ಆ್ಯಪ್‌ನಲ್ಲೇ ಚುನಾವಣ ಅಧಿಕಾರಿಗಳ ಒಂದು ಪಟ್ಟಿಯನ್ನೇ ನೀಡಿರುತ್ತಾರೆ. ಇದರಲ್ಲಿ ಮೊಬೈಲ್‌ ಸಂಖ್ಯೆಯೂ ಇರುತ್ತದೆ. ಅವರಿಗೆ ಕರೆ ಮಾಡಬಹುದು.

– ಮತಗಟ್ಟೆಯ 100 ಮೀ. ಒಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಚುನಾವಣ ಆ್ಯಪ್‌ನಲ್ಲಿ ಪಾರ್ಕಿಂಗ್‌ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು.

ಕಣದಲ್ಲಿ 2,6.15 ಅಭ್ಯರ್ಥಿಗಳು

ಬಿಜೆಪಿ ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ 223 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷ (ರೈತ ಸಂಘ)ದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯರಿಗೆ ಬೆಂಬಲ ಸೂಚಿಸಿದೆ. 209 ಕಡೆ ಅಭ್ಯರ್ಥಿಗಳನ್ನು ಹಾಕಿರುವ ಜೆಡಿಎಸ್‌ ಉಳಿದ ಕಡೆ ಎಡಪಕ್ಷ ಹಾಗೂ ಇತರ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದೆ. ಆಮ್‌ ಆದ್ಮಿ 209 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಿದೆ. ಒಟ್ಟು 2,615 ಅಭ್ಯರ್ಥಿಗಳಲ್ಲಿ ಪುರುಷರು 2,430, ಮಹಿಳೆಯರು 184, ಇತರರು ಒಬ್ಬರು ಇದ್ದಾರೆ. ಬಿಎಸ್‌ಪಿ 133, ಸಿಪಿಐ 4, ಕರ್ನಾಟಕ ರಾಷ್ಟ್ರ ಸಮಿತಿ 195, ಉತ್ತಮ ಪ್ರಜಾಕೀಯ ಪಕ್ಷ 110, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 46, ಸಮಾಜವಾದಿ ಪಕ್ಷ 14, ಮಾನ್ಯತೆ ಹೊಂದಿಲ್ಲದ ನೋಂದಾಯಿತ ಪಕ್ಷಗಳು 254 ಅಭ್ಯರ್ಥಿಗಳನ್ನು ಹಾಕಿದ್ದು, 918 ಪಕ್ಷೇತರರು ಸ್ಪರ್ಧಿಸಿದ್ದಾರೆ. ರಾಷ್ಟ್ರೀಯ, ಪ್ರಾದೇಶಿಕ, ನೋಂದಾಯಿತ ಪಕ್ಷಗಳ ಸಹಿತ 16ಕ್ಕೂ ಹೆಚ್ಚು ಪಕ್ಷಗಳು ಕಣದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next