Advertisement

29ರಿಂದ ಕರ್ನಾಟಕ ಸಾಂಸ್ಕೃತಿಕ ಉತ್ಸವ

09:50 AM Oct 23, 2021 | Team Udayavani |

ಕಲಬುರಗಿ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ “ಕನ್ನಡಕ್ಕಾಗಿ ನಾವು’ ಎನ್ನುವ ಧ್ಯೇಯವಾಕ್ಯದೊಂದಿಗೆ ಆಚರಿಸುವ ನಿಟ್ಟಿನಲ್ಲಿ ಅ.29ರಿಂದ ನ.31ರ ವರೆಗೆ ಕಲಬುರಗಿ ರಂಗಾಯಣದ ಆವರಣದಲ್ಲಿ “ಕರ್ನಾಟಕ ಸಾಂಸ್ಕೃತಿಕ ಉತ್ಸವ’ ಆಚರಣೆಗೆ ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಜಿಲ್ಲೆಯಲ್ಲಿರುವ ವಿವಿಧ ಅಕಾಡೆಮಿ, ಪ್ರಾಧಿಕಾರದ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಕಲಬುರಗಿ ರಂಗಾಯಣ ಸಂಯುಕ್ತಾಶ್ರಯದಲ್ಲಿ ಜರುಗುವ ಕಲಬುರಗಿ ವಿಭಾಗ ಮಟ್ಟದ ಈ ಉತ್ಸವಕ್ಕೆ ಅ. 29ರಂದು ಬೆಳಗ್ಗೆ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ನೆರವೇರಿಸಲು ಮತ್ತು ಶಿಷ್ಟಚಾರದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಸಭೆ ಒಪ್ಪಿಗೆ ಸೂಚಿಸಿತು.

ವಿಭಾಗ ಮಟ್ಟದ ಕಾರ್ಯಕ್ರಮ ಇದಾಗಿದ್ದರಿಂದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲು ಕವಿಗೋಷ್ಠಿ ಆಯೋಜನೆ ಮತ್ತು ಕವಿಗಳ ಆಯ್ಕೆ, ಪುಸ್ತಕ ಪ್ರದರ್ಶನ ಮಳಿಗೆ, ವಾಣಿಜ್ಯ ಮಳಿಗೆಗೆಳ ಸ್ಥಾಪನೆ ನಿಟ್ಟಿನಲ್ಲಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾಕರ ಜೋಶಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲಕುಮಾರ ನಿರ್ದೇಶನ ಅನ್ವಯ ಕಲಬುರಗಿ ವಿಭಾಗ ಮಟ್ಟದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಯಶಸ್ಸಿಗೆ ಎಲ್ಲ ಅಕಾಡೆಮಿಗಳ ಸದಸ್ಯರು ಸಹಕರಿಸಬೇಕು ಎಂದರು.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟಕ್ಕೆ ಚಾಲನೆ

Advertisement

ಮೂರು ದಿನಗಳ ಕಾಲ ಗೋಷ್ಠಿ, ಕವಿಗೋಷ್ಠಿ, ರಂಗ ಗೀತೆ, ನೃತ್ಯ, ಚಿತ್ರಕಲಾ ಮತ್ತು ಶಿಲ್ಪಕಲೆಗಳ ಪ್ರದರ್ಶನ, ಸಾಯಂಕಾಲ ನಾಟಕದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರೊಂದಿಗೆ ಪುಸ್ತಕ, ಆಹಾರ, ದೇಶಿ ಉಡುಪುಗಳು ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳು ಉತ್ಸವಕ್ಕೆ ಕಳೆ ತರಲಿವೆ ಎಂದು ಪ್ರಭಾಕರ ಜೋಷಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ಚೆನ್ನೂರ ಮಾತನಾಡಿ, ಈ ಬಾರಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಅ.24ರಿಂದ 30ರ ವರೆಗೆ ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಕನ್ನಡದ ಶ್ರೇಷ್ಠತೆ ಸಾರುವ ಡಾ| ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ’ ಡಾ| ಕೆ.ಎಸ್ .ನಿಸಾರ್‌ ಅಹ್ಮದ್‌ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳು ರಾಜ್ಯದಾದ್ಯಂತ ಅ.28ರಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಹಾಡಲಾಗುತ್ತಿದೆ ಎಂದರು.

ರಂಗಾಯಣ ಆವರಣದಲ್ಲಿ ಜರುಗುವ ಮೂರು ದಿನಗಳ ಉತ್ಸವದಲ್ಲಿ ಚಿತ್ರಕಲಾ ಮತ್ತು ಶಿಲ್ಪಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿತ್ರಕಲಾ ಕಲಾವಿದರು ಗರಿಷ್ಠ 2*2 ಅಳತೆಯ ಚಿತ್ರಕಲೆ, ಶಿಲ್ಪಕಲಾ ಕಲಾವಿದರು ತಮ್ಮ ಶಿಲ್ಪಕಲೆ ಪ್ರದರ್ಶನಕ್ಕೆ ಅಕ್ಟೋಬರ್‌ 26ರ ಸಂಜೆ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಕಲಬುರಗಿ ಅವರನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿ ಚಿತ್ರಕಲೆ, ಶಿಲ್ಪಕಲೆಯನ್ನು ಸಲ್ಲಿಸಬಹುದು.

ಮೂರು ದಿನಗಳ ಉತ್ಸವದಲ್ಲಿ ಪುಸ್ತಕ ಮಾರಾಟ, ಆಹಾರ ಪದಾರ್ಥಗಳ ಮಾರಾಟ, ದೇಶಿ ಉಡುಪು ಸೇರಿದಂತೆ ಇನ್ನಿತರ ವಾಣಿಜ್ಯ ವಹಿವಾಟಿಗೆ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. 10*10 ಅಳತೆಯ ಈ ಮಳಿಗೆಗೆ ಪ್ರತಿ ದಿನಕ್ಕೆ 500ರೂ. ದರ ನಿಗದಿ ಮಾಡಲಾಗಿದೆ. ಮಳಿಗೆಗೆ ಅ.26ರ ಸಂಜೆ 5 ಗಂಟೆ ಒಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಬುರಗಿ ಇವರಲ್ಲಿ ಹೆಸರು ನೋಂದಾಯಿಸಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ| ರಾಜೇಂದ್ರ ಯರನಾಳೆ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಹಾಗೂ ಹಿರಿಯ ರಂಗಕರ್ಮಿ ಡಾ| ಸಂದೀಪ, ಆರ್ಟ್‌ ಇಂಟಿಗ್ರೇಷನ್‌ ಸೊಸೈಟಿಯ ಎಂ.ಎಚ್‌.ಬೆಳಮಗಿ ಉತ್ಸವದ ಯಶಸ್ಸಿಗೆ ಸಲಹೆ ನೀಡಿದರು.

ಕಲಬುರಗಿ ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಸಾಹಿತಿ ಜಗನ್ನಾಥ ತರನಳ್ಳಿ, ದಿ. ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ಪ್ರತಿ ಮನೆಯಲ್ಲೂ ಕನ್ನಡ ಹಬ್ಬದ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಹಲವು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ನಾವು ಆಡುವ ಮಾತು ಕನ್ನಡದಲ್ಲಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಕೆ, ದೈನಂದಿನ ಕಚೇರಿ ಕೆಲಸದಲ್ಲಿ ಕನ್ನಡ ಬಳಕೆ ಹಾಗೂ ನಿರರ್ಗಳವಾಗಿ ಅನ್ಯ ಭಾಷೆ ಬಳಸದೇ ಕೇವಲ ಕನ್ನಡ ಪದದಲ್ಲಿಯೆ ಮಾತನಾಡುವ ಕುರಿತು ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ. -ಪ್ರಭಾಕರ ಜೋಶಿ, ರಂಗಾಯಣದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next