Advertisement

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

12:04 AM Sep 19, 2021 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿಯೊಂದಿಗೆ ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರಿಗೆ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್‌ ಜೋಡಿ ಬಲೆ ಬೀಸಿರುವುದು ಮೂಲ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗು ತ್ತಿರುವವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಭರವಸೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಸೇರ್ಪಡೆಯಾಗಲು ಮುಂದಾಗಿರುವ ಜೆಡಿಎಸ್‌ ಶಾಸಕರ ಕ್ಷೇತ್ರಗಳಲ್ಲಿ ಅವರ ವಿರುದ್ಧ ರಾಜಕೀಯ ಮಾಡಿದ ಸ್ಥಳೀಯ ಕಾಂಗ್ರೆಸ್‌ನಾಯಕರಿಗೆ ತಮ್ಮ ಭವಿಷ್ಯದ ಕಥೆ ಏನು ಎಂಬ ಚಿಂತೆ ಉಂಟುಮಾಡಿದೆ.

ಜೆಡಿಎಸ್‌, ಬಿಜೆಪಿಯಿಂದ ಕಾಂಗ್ರೆಸ್‌ ಸೇರಲು ಮುಂದಾಗಿರುವವರಿಗೆ ಟಿಕೆಟ್‌ ಭರವಸೆ ನೀಡ ಬಾರದು. ನಮ್ಮ ಅಭಿಪ್ರಾಯ ಪಡೆಯದೆ ಸೇರಿಸಿಕೊಳ್ಳಬಾರದು ಎಂದು ಹೈಕಮಾಂಡ್‌ ಮೊರೆ ಹೋಗಲು ಸ್ಥಳೀಯ ಮುಖಂಡರು ಮುಂದಾಗಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಲಾರದಲ್ಲಿ ಶಾಸಕ ಕೆ. ಶ್ರೀನಿವಾಸ ಗೌಡ, ಪರಿಷತ್‌ ಸದಸ್ಯ ವಿ. ಮನೋಹರ್‌ ಕಾಂಗ್ರೆಸ್‌ ಸೇರ್ಪಡೆ ಮಾತುಕತೆ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ, ಮಾಜಿ ಸಚಿವ ನಸೀರ್‌ ಅಹಮದ್‌ ಸಹಿತ ಜಿಲ್ಲಾ ಮುಖಂಡರು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಇದೇ ರೀತಿ ತುಮಕೂರು, ಮೈಸೂರು ಭಾಗದಲ್ಲೂ ಆಂತರಿಕವಾಗಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಕಾರ್ಯತಂತ್ರ :

ಹೊಸಕೋಟೆಯ ಶರತ್‌ ಬಚ್ಚೇಗೌಡ, ಜಿ.ಟಿ. ದೇವೇಗೌಡ, ಶ್ರೀನಿವಾಸ ಗೌಡ, ಗುಬ್ಬಿ ಶ್ರೀನಿವಾಸ್‌ ಹೀಗೆ ಪ್ರಭಾವಿಗಳನ್ನು ಸೇರಿಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಗಟ್ಟಿಗೊಳಿಸುವ ಕಾರ್ಯತಂತ್ರ ರೂಪಿಸಲಾಗಿದೆ. ಕಾಂಗ್ರೆಸ್‌ ಸೇರ್ಪಡೆಯ ಮುಂದಿನ ಸರದಿ ಗುಬ್ಬಿ ವಾಸು ಮತ್ತು ಪರಿಷತ್‌ ಸದಸ್ಯರಾದ ಬೆಮೆಲ್‌ ಕಾಂತರಾಜ್‌ ಮತ್ತು ವಿ. ಮನೋಹರ್‌ ಎಂದು ತಿಳಿದು ಬಂದಿದೆ. ಎರಡನೇ ಹಂತದ ಆಪರೇಷನ್‌ ಹಸ್ತ ಮುಂದಿನ ಎಪ್ರಿಲ್‌ ಅನಂತರ ಆರಂಭವಾಗಲಿದ್ದು, ಜೆಡಿಎಸ್‌ ಮತ್ತು ಬಿಜೆಪಿಯ ಹತ್ತು ಮಂದಿ ಶಾಸಕರು ಯಾದಿಯಲ್ಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next