Advertisement

ಕರ್ನಾಟಕ: 1 ಸೀಟಿನ ಕಥೆ

09:49 AM May 24, 2019 | sudhir |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನ್ನು ಧೂಳೀಪಟ ಮಾಡಿದ್ದು, 28 ಕ್ಷೇತ್ರಗಳಲ್ಲಿ 25 ಕ್ಷೇತ್ರ ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ನಡುಕ ಸೃಷ್ಟಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ಎರಡೂ ಪಕ್ಷಗಳಿಗೆ ತೀವ್ರ ಮುಖಭಂಗ ಉಂಟಾಗಿ ಸಮ್ಮಿಶ್ರ ಸರಕಾರಕ್ಕೂ ಹಿನ್ನಡೆಯಾಗಿದೆ. ಈ ಪಕ್ಷಗಳು ಜತೆ ಸೇರಿ ಸರಕಾರ ರಚಿಸಿದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಮನಸ್ಸುಗಳು ಒಂದಾಗಿಲ್ಲ ಎಂಬಂತಾಗಿದೆ. ಲೋಕಸಭೆ ಚುನಾವಣೆ ಫ‌ಲಿತಾಂಶದಿಂದ ಕಾಂಗ್ರೆಸ್‌- ಜೆಡಿಎಸ್‌ ಶಾಸಕರು ಬಿಜೆಪಿಯತ್ತ ಹೋಗುವುದನ್ನು ತಡೆಯುವುದೇ ಮೈತ್ರಿಕೂಟಕ್ಕೆ ಸವಾಲಾಗಿದೆ. ಎಚ್‌.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಲಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಸೇರಿ ಘಟಾನುಘಟಿಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇಡೀ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಿ.ಕೆ.ಸುರೇಶ್‌ ಕಾಂಗ್ರೆಸ್‌ನ ಮಾನ ಉಳಿಸಿದ್ದಾರೆ.

Advertisement

ತೀವ್ರ ಜಿದ್ದಾಜಿದ್ದಿಯಾಗಿದ್ದ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ಸರಕಾರವನ್ನು ಎದುರು ಹಾಕಿಕೊಂಡಿದ್ದ ಸುಮಲತಾ ಗೆಲ್ಲುವ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ ಹಾಗೂ ಚಾಮರಾಜನಗರದಲ್ಲಿ ಧ್ರುವನಾರಾಯಣ್‌ ಸೋಲು ಕಾಣುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಖಭಂಗವಾಗಿದೆ. ಚಾಮರಾಜನಗರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಕಾಂಗ್ರೆಸ್‌ ಗೆಲುವಿಗೆ ತಡೆಯೊಡ್ಡಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಕೃಷ್ಣಬೈರೇ ಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸೋಲು ಅನುಭವಿಸಿದ್ದರೆ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್‌ ಖಂಡ್ರೆ ಬೀದರ್‌ನಿಂದ ಸೋಲುಂಡಿದ್ದಾರೆ.

ಸತತ ಏಳು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ನ ಕೆ.ಎಚ್‌. ಮುನಿಯಪ್ಪ ಅವರು ಕೋಲಾರದಲ್ಲಿ ಬಿಜೆಪಿಯ ಕಾರ್ಪೋರೆಟರ್‌ ಮುನಿಸ್ವಾಮಿ ವಿರುದ್ಧ ಭಾರೀ ಅಂತರದ ಸೋಲು ಅನುಭವಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಲಿ ಅವರು ಬಿಜೆಪಿಯ ಬಚ್ಚೇಗೌಡ ವಿರುದ್ಧ ಸೋಲುಂಡಿದ್ದಾರೆ.

ಕಾಂಗ್ರೆಸ್‌ನ ಹಾಲಿ ಸಂಸದರಲ್ಲಿ ಏಳು ಮಂದಿ ಸೋಲು ಕಂಡಿದ್ದು, ಚಿಕ್ಕೋಡಿಯಲ್ಲಿ ಪ್ರಕಾಶ್‌ ಹುಕ್ಕೇರಿ, ರಾಯಚೂರಿನಲ್ಲಿ ಬಿ.ವಿ.ನಾಯಕ್‌, ಚಿತ್ರದುರ್ಗದಲ್ಲಿ ಚಂದ್ರಪ್ಪ, ಕೋಲಾರದಲ್ಲಿ ಕೆ.ಎಚ್‌.ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಲಿ, ಬಳ್ಳಾರಿಯಲ್ಲಿ ವಿ.ಎಸ್‌. ಉಗ್ರಪ್ಪ, ಚಾಮರಾಜನಗರದಲ್ಲಿ ಧ್ರುವನಾರಾಯಣ್‌ ಸೋಲು ಕಂಡಿದ್ದಾರೆ.

Advertisement

ತುಮಕೂರಿನಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತಾದರೂ ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ತುಮಕೂರು ಜೆಡಿಎಸ್‌ಗೆ
ಬಿಟ್ಟುಕೊಡಲಾಗಿತ್ತು. ಅಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಸೋಲು ಅನುಭವಿಸಿದ್ದಾರೆ.

ಇನ್ನು ಜೆಡಿಎಸ್‌ ಕಳೆದ ಬಾರಿ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲುವು ಸಾಧಿಸಿದ್ದು ಮಂಡ್ಯದಲ್ಲಿ ನಿಖೀಲ್‌ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಒಂದು ಸ್ಥಾನ ಜೆಡಿಎಸ್‌ ಕಳೆದುಕೊಂಡಿದೆ.

ಬಿಜೆಪಿಯು ರಾಜ್ಯದಲ್ಲಿ 24 ಕ್ಷೇತ್ರಗಳನ್ನು ಗೆದ್ದಿದ್ದು, ಹೊಸ ಮುಖಗಳಾದ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಕೋಲಾರದಲ್ಲಿ ಮುನಿಸ್ವಾಮಿ, ಬಳ್ಳಾರಿಯಲ್ಲಿ ದೇವೇಂದ್ರಪ್ಪ, ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್‌ ಜೊಲ್ಲೆ, ಚಿತ್ರದುರ್ಗದಲ್ಲಿ ಎ.ನಾರಾಯಣಸ್ವಾಮಿ ಅವರೂ ಜಯಗಳಿಸಿದ್ದಾರೆ.
ಜತೆಗೆ ಹಾಲಿ ಸಂಸದರಾದ ಅನಂತಕುಮಾರ್‌ ಹೆಗಡೆ, ಡಿ.ವಿ. ಸದಾನಂದ ಗೌಡ, ರಮೇಶ್‌ ಜಿಗಜಿಣಗಿ, ಶಿವಕುಮಾರ್‌ ಉದಾಸಿ, ಗದ್ದಿಗೌಡರ್‌, ಪ್ರತಾಪ ಸಿಂಹ, ನಳಿನ್‌ ಕುಮಾರ್‌, ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್‌, ಪ್ರಹ್ಲಾದ್‌ ಜೋಶಿ, ಬಿ.ವೈ. ರಾಘವೇಂದ್ರ, ಕರಡಿ ಸಂಗಣ್ಣ ಗೆಲುವು ಸಾಧಿಸಿದ್ದಾರೆ. ಹಿರಿಯರಾದ ಬಚ್ಚೇಗೌಡ, ಶ್ರೀನಿವಾಸ ಪ್ರಸಾದ್‌ ಸಹ ಸಂಸತ್‌ ಪ್ರವೇಶಿಸಿದ್ದಾರೆ.

ಉಪ ಚುನಾವಣೆ: ಕೈಗೆ ಒಂದು ಗೆದ್ದ ಸಮಾಧಾನ
2 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ತಲಾ 1 ಸ್ಥಾನ ಗೆದ್ದುಕೊಂಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್‌ ಉಸ್ತುವಾರಿ ವಹಿಸಿಕೊಂಡಿದ್ದ ಕುಂದಗೋಳದಲ್ಲಿ ಕಾಂಗ್ರೆಸ್‌ನ ಕುಸುಮಾ ಶಿವಳ್ಳಿ ಗೆದ್ದಿದ್ದು, ಬಿಜೆಪಿಯ ಚಿಕ್ಕನಗೌಡ ಸೋತಿದ್ದಾರೆ. ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಉಸ್ತುವಾರಿ ವಹಿಸಿಕೊಂಡಿದ್ದ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುಭಾಷ್‌ ರಾಥೋಡ್‌ ಸೋಲು ಅನುಭವಿಸಿ ಬಿಜೆಪಿಯ ಅವಿನಾಶ್‌ ಯಾದವ್‌ ಜಯಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next