Advertisement

ಬಸ್‌ ದರ ಹೆಚ್ಚಿಸಿ ತಡೆಹಿಡಿದ ಸಿಎಂ; ಗಂಟೆಯಲ್ಲೇ ಆದೇಶ ವಾಪಸ್‌

06:00 AM Sep 18, 2018 | Team Udayavani |

ಬೆಂಗಳೂರು: ಪೆಟ್ರೋಲ್‌-ಡೀಸೆಲ್‌ ಮೇಲಿನ ಸೆಸ್‌ ಹೊರೆ ತಗ್ಗಿಸುವುದಾಗಿ ಘೋಷಿಸಿದ ದಿನವೇ ಸರ್ಕಾರ ಬಸ್‌ ಪ್ರಯಾಣಿಕರಿಗೆ ದರ ಏರಿಕೆ ಬರೆ ಎಳೆಯಲು ನಿರ್ಧರಿಸಿತ್ತು. ಆದರೆ, ಈ ಸಂಬಂಧ ಆದೇಶ ಹೊರಡಿಸಿದ ಕೆಲವೇ ಹೊತ್ತಿನಲ್ಲಿ ಸ್ವತಃ ಮುಖ್ಯಮಂತ್ರಿ ಈ ಆದೇಶ ತಡೆಹಿಡಿಯಲು ಸೂಚಿಸಿದರು.

Advertisement

ನಿರಂತರವಾಗಿ ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಸರಾಸರಿ ಶೇ. 18ರಷ್ಟು ಹೆಚ್ಚಿಸಿ, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಲು ಸಾರಿಗೆ ನಿಗಮಗಳಿಗೆ ಅನುಮತಿ ನೀಡಿತ್ತು. ಆದರೆ, “ದರ ಏರಿಕೆ ಸದ್ಯಕ್ಕೆ ಬೇಡ. ಆದೇಶ ತಡೆಹಿಡಿಯಿರಿ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಯಥಾಸ್ಥಿತಿ ಮುಂದುವರಿಯಲಿದೆ.

ಕೆಎಸ್‌ಆರ್‌ಟಿಸಿಯು ಶೇ. 18ರಷ್ಟು ಬಸ್‌ ಪ್ರಯಾಣ ದರ ಏರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ನಾಲ್ಕೂ ನಿಗಮಗಳಿಗೆ ಅನ್ವಯ ಆಗುವಂತೆ ದರ ಹೆಚ್ಚಳಕ್ಕೆ ಅನುಮೋದನೆಯೂ ದೊರಕಿತ್ತು. ಅಧಿಕಾರಿಗಳು ಇದರ ಲೆಕ್ಕಾಚಾರದಲ್ಲಿ ತೊಡಗಿದ್ದರು. ಮುಖ್ಯಮಂತ್ರಿ ಆದೇಶದ ಮೇರೆಗೆ ಕೈಬಿಡಲಾಗಿದೆ.

2013ರಲ್ಲಿ ಪ್ರಯಾಣ ದರವನ್ನು ಶೇ. 10.50ರಷ್ಟು ಹೆಚ್ಚಳ ಮಾಡಲಾಗಿತ್ತು. 2014ರಲ್ಲಿ ಮತ್ತೆ ಸರಾಸರಿ ಶೇ. 7.96ರಷ್ಟು ದರ ಏರಿಕೆ ಶಾಕ್‌ ನೀಡಲಾಗಿತ್ತು. ಇದಾದ ನಂತರ ಅಂದರೆ ಕಳೆದ ನಾಲ್ಕು ವರ್ಷಗಳು ದರ ಏರಿಕೆ ಮಾಡಿರಲಿಲ್ಲ. ಈ ಮಧ್ಯೆ 2015ರಲ್ಲಿ ಪ್ರಯಾಣಿಕರಿಗೆ ಶೇ. 2ರಷ್ಟು ದರ ಇಳಿಕೆ ಮಾಡುವ ಮೂಲಕ ಕೊಂಚ “ರಿಲೀಫ್’ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next