Advertisement

ಬಿಎಸ್‌ವೈಗೆ ರಾಜ್ಯಾಧಿಕಾರ

01:29 AM Jul 27, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಬಿ.ಎಸ್‌.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ಸ್ವೀಕರಿಸಿದರು.

Advertisement

ಈ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಬದಲಿ ಸರ್ಕಾರ ರಚನೆ ಕುರಿತ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಜೆಪಿಯ ಈ ದಿಢೀರ್‌ ನಡೆ ನಿರೀಕ್ಷಿಸದ ಮೈತ್ರಿ ಪಕ್ಷದ ನಾಯಕರು ಕಂಗಾಲಾಗಿದ್ದಾರೆ.

ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯ್‌ ವಾಲಾ ಅವರಿಂದ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಯಡಿಯೂರಪ್ಪ ಅವರು
ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುವುದಾಗಿ ಘೋಷಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಮೊದಲ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದು, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌
ಯೋಜನೆಯಡಿ ರಾಜ್ಯ ಸರ್ಕಾರದಿಂದಲೂ ಎರಡು ಕಂತುಗಳಲ್ಲಿ ಎರಡು ಸಾವಿರ ರೂ. ನೀಡುವುದಾಗಿ ಘೋಷಿಸಿದ್ದಾರೆ.ಜತೆಗೆ ನೇಕಾರರ ಸಾಲ ಮನ್ನಾ ಮಾಡುವುದಾಗಿಯೂ
ಪ್ರಕಟಿಸಿದ್ದಾರೆ. ಇದರೊಂದಿಗೆ ರೈತರು ಹಾಗೂ ಬಡವರ ಪರ ತಮ್ಮ ಕಾಳಜಿ ಪ್ರದರ್ಶಿಸಿದ್ದಾರೆ.

ರೈತ ಫ‌ಲಾನುಭವಿಗಳಿಗೆ ವರ್ಷಕ್ಕೆ 6,000 ರೂ ನೀಡುವ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು.

Advertisement

ಈ ಯೋಜನೆಗೆ ಹೆಚ್ಚುವರಿಯಾಗಿ ನಾಲ್ಕು ಸಾವಿರ ರೂಗಳನ್ನು ರಾಜ್ಯ ಸರ್ಕಾರ ಸೇರಿಸಿದೆ. ಇದರೊಂದಿಗೆ ರೈತರಿಗೆ ವರ್ಷಕ್ಕೆ 10,000 ರೂ ಕೊಡುಗೆ ಸಿಗಲಿದೆ. ಈ ಯೋಜನೆಯಿಂದ ರಾಜ್ಯ ಬೊಕ್ಕಸಕ್ಕೆ ನಾಲ್ಕು ಸಾವಿರ ಕೋಟಿ ರೂ. ಹಾಗೂ ನೇಕಾರರ ಸಾಲ ಮನ್ನಾಗೆ 100 ಕೋಟಿ ರೂ. ಹೊರೆಯಾಗಲಿದೆ.

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದು ಆರೋಪಿಸಿರುವ ಅವರು, ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಹೊಸ ಸರ್ಕಾರದ ಕಾರ್ಯವೈಖರಿ ಜನತೆಗೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ಕ್ರಮ ಟೀಕಿಸಿರುವ ಮೈತ್ರಿ ಪಕ್ಷದ ನಾಯಕರು, ರಾಜ್ಯ ವಿಧಾನಸಭೆಯ ಸಂಖ್ಯಾಬಲ 221 ಇದ್ದು, ಸರ್ಕಾರ ರಚಿಸಲು
112 ಸಂಖ್ಯಾಬಲ ಬೇಕು. ಆದರೆ, ರಾಜ್ಯಪಾಲರು 106 ಸಂಖ್ಯಾಬಲ ಇರುವ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏನಾಯ್ತು?: ಗುರುವಾರ ರಾತ್ರಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೂವರು ಶಾಸಕರನ್ನು ಅನರ್ಹಗೊಳಿಸುತ್ತಿದ್ದಂತೆ ಬಿಜೆಪಿ ವಲಯದಲ್ಲಿ ಆತಂಕ ಮೂಡಿತ್ತು. ಇನ್ನೇನು ವಿಧಾನಸಭೆ ಅಮಾನತ್ತಿನಲ್ಲಿಟ್ಟು
ರಾಷ್ಟ್ರಪತಿ ಆಳ್ವಿಕೆ ಹೇರಬಹುದು ಎಂಬ ಮಾತುಗಳು ಕೇಳಿ ಬಂದಿದ್ದವಾದರೂ ಶುಕ್ರವಾರ ಬೆಳಗ್ಗೆ ದಿಢೀರ್‌ ಬೆಳವಣಿಗೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ರಾಜ್ಯಪಾಲರ ಬಳಿ ಹೋಗಿ ಸರ್ಕಾರ ರಚನೆ ಹಕ್ಕು ಮಂಡಿಸಲು
ಸೂಚಿಸಿದರು. ಅಲ್ಲಿಂದ ರಾಜ್ಯ ರಾಜಕೀಯದ ಚಹರೆ ಬದಲಾಗಿ ಬಿಜೆಪಿ ವಲಯದಲ್ಲಿ ಸಂಭ್ರಮ ಮನೆ ಮಾಡಿದರೆ, ಕಾಂಗ್ರೆಸ್‌-ಜೆಡಿಎಸ್‌ ವಲಯದಲ್ಲಿ ಮಂಕು ಕವಿಯಿತು.
ಬಿಜೆಪಿ ವರಿಷ್ಠರು ಹಸಿರು ನಿಶಾನೆ ತೋರುತ್ತಿದ್ದಂತೆ ಶುಕ್ರವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೋರಿದರು.

ಮೈತ್ರಿ ಸರ್ಕಾರ ಮಂಗಳವಾರ ಪತನಗೊಂಡರೂ ಸರ್ಕಾರ ರಚನೆ ಸಂಬಂಧ ಬುಧವಾರ ರಾತ್ರಿವರೆಗೆ ವರಿಷ್ಠರಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾ ಗಿದ್ದ ರಾಜ್ಯ ಬಿಜೆಪಿ ನಾಯಕರು ನವದೆಹಲಿಗೆ ತೆರಳಿದ್ದರು.
ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದ ನಿಯೋಗ ಗುರುವಾರ ಬೆಳಗ್ಗೆ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶವಿರುವ ಸಾಧ್ಯಾಸಾಧ್ಯತೆ ಹಾಗೂ ಪೂರಕ ವಾತಾವರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೂ ಅನುಮತಿ ಸಿಕ್ಕಿರಲಿಲ್ಲ.

ಗುರುವಾರ ರಾತ್ರಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದ ಅಮಿತ್‌ ಶಾ, ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗದೊಂದಿಗೆ ಮಾತುಕತೆ ನಡೆಸಿ ಸರ್ಕಾರ ರಚಿಸುವಂತೆ ಸೂಚನೆ ನೀಡಿದರು. ಜತೆಗೆ ಯಡಿಯೂರಪ್ಪ ಅವರೊಂದಿಗೆ
ದೂರವಾಣಿಯಲ್ಲಿ ಮಾತುಕತೆ ನಡೆಸಿದ ಅಮಿತ್‌ ಶಾ ಅವರು ಸರ್ಕಾರ ರಚನೆ ಮಾಡುವಂತೆ ಸೂಚಿಸಿದರು.

ಆ ಬಳಿಕವಷ್ಟೇ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಬೆಳಗ್ಗೆ 10 ಗಂಟೆಗೆ ಭೇಟಿಯಾದರು. ರಾಜ್ಯಪಾಲರು ಅನುಮತಿ ಪತ್ರ ನೀಡುತ್ತಿದ್ದಂತೆಯೇ ಸಂಜೆ 6 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಪ್ರಕಟಿಸಿದರು.

B.S.YEDDYURAPPAಅಲ್ಲ
B.S. YEDIYURAPPA
ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಹೆಸರಿನ ಅಕ್ಷರಗಳಲ್ಲಿ ಸಂಖ್ಯಾಶಾಸOಉದಂತೆ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಜತೆಗೆ ವಿಧಾನಸೌಧದ ಮೂರನೇ
ಮಹಡಿಯ ತಮ್ಮ ಕಚೇರಿಯ ಆಸನದ ದಿಕ್ಕು ಕೂಡಾ ಬದಲಿಸಿಕೊಂಡಿದ್ದಾರೆ.

ಶುಕ್ರವಾರ ಸರ್ಕಾರ ರಚನೆಗೆ ಅವಕಾಶ ಕೋರಿ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಬಿ.ಎಸ್‌.ಯಡಿಯೂರಪ್ಪ (B.S. YEDIYURAPPA) ಎಂಬ ಹೆಸರಿದೆ. ಆದರೆ ಇದಕ್ಕೂ ಮೊದಲು ಯಡ್ಯೂರಪ್ಪ ಎಂದು(B.S.YEDDYURAPPA) ಎಂದು ಬಳಸುತ್ತಿದ್ದರು. ಆಸನದ ದಿಕ್ಕು ಬದಲಾವಣೆ: ಯಡಿಯೂರಪ್ಪ ಅವರು ಶುಕ್ರವಾರ ಸಂಜೆ 6.50ರ ಹೊತ್ತಿಗೆ ವಿಧಾನಸೌಧಕ್ಕೆ ಆಗಮಿಸಿದರು. ಮೂರನೇ ಮಹಡಿಯಲ್ಲಿರುವ ಕಚೇರಿಯಲ್ಲಿ
ವಿಶೇಷ ಪೂಜೆ ನೆರವೇರಿಸಿದ ಅವರು ಬಳಿಕ ಪೂರ್ವಾಭಿಮುಖವಾಗಿ ಆಸೀನರಾಗುವ ಮೂಲಕ ಅಧಿಕಾರವಹಿಸಿಕೊಂಡರು

ಹೈಕಮಾಂಡ್‌ ದಿಢೀರ್‌
ನಿಲುವಿಗೆ ಕಾರಣ?
ರಾಜ್ಯದಲ್ಲಿ ಸದ್ಯ ಉದ್ಭವಿಸಿರುವ ರಾಜಕೀಯ ಅತಂತ್ರ ಸ್ಥಿತಿಯನ್ನು ಸರ್ಕಾರ ರಚನೆ ಹೊರತುಪಡಿಸಿ ಉಳಿದ ಯಾವ ಮಾರ್ಗದಿಂದಲೂ ಸರಿಪಡಿಸಲಾಗದು ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೆಡೆ ಪಕ್ಷೇತರ ಆರ್‌.ಶಂಕರ್‌ ಹಾಗೂ ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಅವರನ್ನು ಸ್ಪೀಕರ್‌ ಅನರ್ಹಗೊಳಿಸುತ್ತಿದ್ದಂತೆ ಪುಣೆಯಲ್ಲಿ ವಾಸ್ತವ್ಯ
ಹೂಡಿರುವ ಅತೃಪ್ತ ಶಾಸಕರಲ್ಲಿ ತಳಮಳ ಸೃಷ್ಟಿಯಾಗಿತ್ತು. ಮೈತ್ರಿ ಸರ್ಕಾರ ಪತನವಾಗಿ ಎರಡು ದಿನ ಕಳೆದರೂ ಬಿಜೆಪಿ ಸರ್ಕಾರ ರಚನೆಗೆ ಮುಂದಾಗದ ಕಾರಣ ತಮ್ಮ ಭವಿಷ್ಯ ಏನಾಗಲಿದೆ ಎಂಬ ಆತಂಕ ಅತೃಪ್ತರಲ್ಲಿ ಶುರುವಾಗಿತ್ತು. ರಾಜ್ಯದಲ್ಲಿ ಸದ್ಯದ ರಾಜಕೀಯ ಅತಂತ್ರ ಸ್ಥಿತಿಯನ್ನು ಬಿಜೆಪಿ ಸರ್ಕಾರ ರಚನೆ ಮಾಡದ ಹೊರತು ನಿಭಾಯಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾದ ಬಳಿಕವಷ್ಟೇ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಪೀಕರ್‌ ಉಳಿದ ಅತೃಪ್ತ ಶಾಸಕರ ಪ್ರಕರಣ ಇತ್ಯರ್ಥ ಪಡಿಸುವವರೆಗೆ ಕಾದರೆ ಪರಿಸ್ಥಿತಿ ಕೈಮೀರಬಹುದು ಎಂಬ ವಿಚಾರವೂ ಚರ್ಚೆಯಾಯಿತು. ಅಧಿಕಾರ ಕಳೆದು ಕೊಂಡಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.  ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಮುಂದಿನ ನಡೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಚರ್ಚೆ ಬಳಿಕ ಸರ್ಕಾರ ರಚನೆಗೆ ವರಿಷ್ಠರು ಅನುಮತಿ ನೀಡಿದರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next