Advertisement

ಸಾರಿಗೆ ಸಂಸ್ಥೆ ಬಸ್‌ಗಳೆಲ್ಲಾ ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತನೆ: ಸಚಿವ ಶ್ರೀರಾಮುಲು

10:02 PM Sep 14, 2022 | Team Udayavani |

ವಿಧಾನಸಭೆ: ರಾಜ್ಯದಲ್ಲಿ 2030 ರ ವೇಳೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ 35 ಸಾವಿರ ಬಸ್‌ಗಳು ಎಲೆಕ್ಟ್ರಿಕ್‌ ಬಸ್‌ಗಳಾಗಿ ಪರಿವರ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ತನ್ವೀರ್ ಸೇಠ್, ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿರುವ ಎಲೆಕ್ಟ್ರಿಕ್‌ ಬಸ್‌ ಸೇವೆ ರಾಜ್ಯಾದ್ಯಂತ ವಿಸ್ತರಿಸುವ ಯೋಚನೆ ಇದೆಯೇ ಎಂದು ಕೇಳಿದಾಗ, 2030 ರ ವೇಳೆಗೆ ರಾಜ್ಯಾದ್ಯಂತ ಸಾರಿಗೆ ಸಂಸ್ಥೆಯ ಬಸ್‌ಗಳು ಎಲೆಕ್ಟ್ರಿಕ್‌ ಬಸ್‌ಗಳಾಗಿರಬೇಕು ಎಂಬುದು ಸರ್ಕಾರದ ಗುರಿ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈಗಾಗಲೇ ಬೆಂಗಳೂರು ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ 90 ಬಸ್‌, ಫೇಮ್‌ -2 ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌ ಗುತ್ತಿಗೆ ಪದ್ಧತಿಯಡಿ ಕಾರ್ಯಾಚರಣೆ ಮಾಡುತ್ತಿದೆ. ಸಿಇಎಸ್‌ಎಲ್‌ ಮೂಲಕ ಕೇಂದ್ರ ಸರ್ಕಾರ ಫೇಮ್‌-2 ಅಡಿ 921 ಎಲೆಕ್ಟ್ರಿಕಲ್‌ ಬಸ್‌ ಕಾರ್ಯಾಚರಣೆಗೆ ಆದೇಶ ನೀಡಿದೆ. ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಇದು ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

2 ತಿಂಗಳಲ್ಲಿ 50 ಸಾವಿರ ತಾಂಡಾ, ಹಾಡಿ, ಹಟ್ಟಿ ನಿವಾಸಿಗಳಿಗೆ ಹಕ್ಕುಪತ್ರ
ವಿಧಾನಪರಿಷತ್ತು: ಲಂಬಾಣಿ ತಾಂಡಾ, ಹಾಡಿ, ಗೊಲ್ಲರಹಟ್ಟಿ ಸೇರಿದಂತೆ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸವಾಗಿದ್ದವರ ಪೈಕಿ ಕನಿಷ್ಠ 50 ಸಾವಿರ ಮಂದಿಗೆ ಎರಡು ತಿಂಗಳಲ್ಲಿ ಹಕ್ಕುಪತ್ರ ನೀಡಲು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಶಶೀಲ್‌ ಜಿ. ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂಡಾ, ಹಾಡಿ, ಹಟ್ಟಿಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿರುತ್ತಾರೆ. ಆದರೆ, ಅವರ ಬಳಿಕ ಯಾವುದೇ ದಾಖಲೆ ಇರುವುದಿಲ್ಲ. ಹೀಗಾಗಿ ಅವರು ಸರ್ಕಾರದ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಆದ್ದರಿಂದ ಕನಿಷ್ಠ 50 ಸಾವಿರ ಮಂದಿಗೆ 2 ತಿಂಗಳಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು. ಇದಕ್ಕಾಗಿ ಅಭಿಯಾನ ನಡೆಸಲು ಯೋಜನೆ ಹಾಕಿಕೊಂಡಿದ್ದೇನೆ ಎಂದರು.

Advertisement

ರಾಜ್ಯದಲ್ಲಿ 3,218 ದಾಖಲೆ ರಹಿತ ಜನ ವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 2,091 ಜನವಸತಿ ಪ್ರದೇಶಗಳನ್ನು ಗ್ರಾಮಗಳನ್ನಾಗಿ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 1,166 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 923 ಗ್ರಾಮಗಳ ಪ್ರಾಥಮಿಕ ಅಧಿಸೂಚನೆಗೆ ಪ್ರಸ್ತಾವನೆ ಬಂದಿದೆ. ದಾಖಲೆ ರಹಿತ ಜನವಸತಿ ಪ್ರದೇಶವನ್ನು ಗ್ರಾಮಗಳನ್ನಾಗಿ ಮಾಡಬೇಕಾದರೆ ಕನಿಷ್ಠ 50 ಕುಟುಂಬ, 250 ಜನಸಂಖ್ಯೆ ಹೊಂದಿರಬೇಕು. 100 ಎಕರೆ ವಿಸ್ತೀರ್ಣ ಇರಬೇಕು. ಜನವಸತಿ ಪ್ರದೇಶವು ಮೂಲ ಗ್ರಾಮದಿಂದ ಕನಿಷ್ಠ 1 ಕಿ.ಮೀ.ಅಂತರದಲ್ಲಿ ಇರಬೇಕು. ಈ ಮಾನದಂಡಗಳನ್ನು ಆಧರಿಸಿ ಗ್ರಾಮಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ತಾಂಡಾ, ಹಾಡಿ, ಹಟ್ಟಿ ಮತ್ತಿತರ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವವರಿಗೆ ದಾಖಲೆಗಳು ಯಾಕೆ ಇರಲ್ಲ ಅಂದರೆ, ಅದು ಕಂದಾಯ ಗ್ರಾಮ ಆಗಿರುವುದಿಲ್ಲ. ಆದ್ದರಿಂದ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಎಂದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಜನವಸತಿ ಪ್ರದೇಶಗಳ ನಿವಾಸಿಗಳು ಹೇಳಿದ ಹೆಸರನ್ನೇ ಗ್ರಾಮಕ್ಕೆ ನಾಮಕರಣ ಮಾಡಲಾಗುವುದು ಎಂದು ಸಚಿವ ಅಶೋಕ್‌ ಭರವಸೆ ನೀಡಿದರು.

ಅರೆನ್ಯಾಯಿಕ ಪ್ರಕರಣಗಳ ವಿಲೇವಾರಿ: ಕಂದಾಯ ಇಲಾಖೆಗೆ ಸಂಬಂಧಿಸಿದ ಅರೆ ನ್ಯಾಯಿಕ ಅಹವಾಲುಗಳನ್ನು ತ್ವರಿತವಾಗಿ ಆಲಿಸಿ, ಬಾಕಿ ಪ್ರಕರಣಗಳನ್ನು ಭಾರ ಇಳಿಸಲು ಜಿಲ್ಲಾಧಿಕಾರಿಗಳ ಜೊತೆಗೆ ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ಅಧಿಕಾರ ಕೊಟ್ಟು ಕಾಲಮಿತಿ ಸಹ ನಿಗದಿಪಡಿಸಲಾಗಿದೆ ಎಂದು ಜೆಡಿಎಸ್‌ ಸದಸ್ಯ ಸಿ.ಎನ್‌. ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದರು.

3 ಸಾವಿರ ಸರ್ವೆಯರ್‌ ನೇಮಕ: ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ದರಕಾಸ್ತು ಜಮೀನು ಪೋಡಿ ಮಾಡಲು ದಾಖಲಾತಿಗಳ ವ್ಯತ್ಯಾಸದಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಸರ್ವೆಯರ್‌ಗಳ ನೇಮಕ ಮಾಡಿ ವಿಳಂಬ ಸರಿಪಡಿಸಲಾಗುತ್ತದೆ. ಈಗಾಗಲೇ 3 ಸಾವಿರ ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಲಾಗಿದ್ದು, ನೇಮಕಾತಿ ಆದೇಶ ಸಹ ಹೊರಡಿಸಲಾಗಿದೆ ಎಂದು ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಸಚಿವ ಅಶೋಕ್‌ ಉತ್ತರಿಸಿದರು.

ಭವಿಷ್ಯದಲ್ಲಿ ಸರ್ಕಾರಿ ಜಾಗವೇ ಸಿಗಲ್ಲ
ಸಾರ್ವಜನಿಕ ಉದ್ದೇಶಗಳಿಗೆ ಇದ್ದ ಬಹುತೇಕ ಸರ್ಕಾರಿ ಜಮೀನು ಹಂಚಿಕೆ ಮಾಡಲಾಗಿದೆ. ಈಗಿನ ಬೇಡಿಕೆ ನೋಡಿದರೆ ಇನ್ನೂ 10-20 ವರ್ಷ ಹೋದರೆ ಸರ್ಕಾರಿ ಜಮೀನು ಸಿಗುವುದೇ ಇಲ್ಲ. ಸಾವಿರಾರು ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಕೊಡಲು ಸರ್ಕಾರಿ ಜಮೀನು ಸಿಗುತ್ತಿಲ್ಲ. ಹಾಗಾಗಿ, ಸರ್ಕಾರಿ ಜಮೀನು ಉಳಿಸಿಕೊಳ್ಳಬೇಕಾಗಿದೆ. ಗೋಮಾಳ ಜಮೀನು ಖಾಸಗಿ ಬಳಕೆಗೆ ಸಾಕಷ್ಟು ಒತ್ತಡ ಇದೆ. ಆದರೆ, ನಾನು ಅವಕಾಶ ಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆಗೆ ಸಚಿವ ಅಶೋಕ್‌ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next