Advertisement

ಸಭ್ಯ ರಾಜಕಾರಣಿಗೆ ಕಾರ್ಕಳದ ಕಣ್ಣೀರ ವಿದಾಯ

10:42 PM Jul 05, 2019 | Sriram |

ಕಾರ್ಕಳ: ಶುಕ್ರವಾರ ಬೆಳಗ್ಗೆ ಗಂಟೆ 11ರ ವೇಳೆ ಮಾಜಿ ಶಾಸಕ, ಸರಳ ಸಜ್ಜನಿಕೆಯ ಸಭ್ಯ ರಾಜಕಾರಣಿ ಗೋಪಾಲ ಭಂಡಾರಿಯವರ ಪಾರ್ಥಿವ ಶರೀರ ಕಾರ್ಕಳದ ರಾಜೀವ್‌ ಗಾಂಧಿ ಸಭಾಭವನ ತಲುಪಿತು. ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಜನ ಜಮಾಯಿಸಿದ್ದರು. ಮಾಜಿ ಶಾಸಕರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಪಕ್ಷಭೇದವಿಲ್ಲದೇ ಸಾಲುಗಟ್ಟಿ ನಿಂತು ಭಂಡಾರಿಯವರಿಗೆ ಕಾರ್ಕಳದ ಜನತೆ ಅಂತಿಮ ನಮನ ಸಲ್ಲಿಸಿದರು.

Advertisement

ಗಣ್ಯರ ಭೇಟಿ
ಮಾಜಿ ಕೇಂದ್ರ ಸಚಿವ, ಗೋಪಾಲ ಭಂಡಾರಿಯವರ ರಾಜಕೀಯ ಗುರು ವೀರಪ್ಪ ಮೊಲಿ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಶಾಸಕ ವಿ. ಸುನಿಲ್‌ ಕುಮಾರ್‌, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಅಭಯಚಂದ್ರ ಜೈನ್‌, ಯು.ಆರ್‌. ಸಭಾಪತಿ, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ
ರೆ| ಫಾ| ಜೆರಾಲ್ಡ್‌ ಐಸಾಕ್‌ ಲೋಬೋ, ಅತ್ತೂರು ಸೈಂಟ್‌ ಲಾರೆನ್ಸ್‌ ಬಸಿಲಿಕಾದ ಫಾ| ಜಾರ್ಜ್‌ ಡಿ’ಸೋಜಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ಫಾ| ಜೋಸ್ವಿ ಫೆರ್ನಾಂಡಿಸ್‌, ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಪಿ. ಕೃಷ್ಣಕಾಂತ್‌, ಸಿಇಒ ಸಿಂಧೂ ಬಿ. ರೂಪೇಶ್‌, ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ, ತಾ.ಪಂ. ಇಒ ಮೇ| ಹರ್ಷ, ಜಿ.ಪಂ., ತಾ.ಪಂ. ಸದಸ್ಯರು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಜರಂಗದಳ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್‌. ಸೇರಿದಂತೆ ಸಮಾಜದ ವಿವಿಧ ಕ್ಷೇತ್ರದ ಗಣ್ಯರು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಭಂಡಾರಿಯವರ ಅಂತಿಮ ದರ್ಶನ ಪಡೆದರು.

ಕಚೇರಿ ಕಾರ್ಯ
ಚುನಾವಣೆಯಲ್ಲಿ ಸೋತರೂ ಭಂಡಾರಿ ಯವರು ಚಾರದಿಂದ ಕಾರ್ಕಳದಲ್ಲಿರುವ ಕಚೇರಿಗೆ ನಿತ್ಯ ಆಗಮಿಸುತ್ತಿದ್ದರು. ಸಹಾಯ ಯಾಚಿಸಿ ಬಂದವರಿಗೆ ನೆರವಾಗುತ್ತಿದ್ದರು. ಬಡವರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಕಾರ ನೀಡುತ್ತಿದ್ದರು. ಕಾರ್ಯನಿಮಿತ್ತ ಬೆಂಗಳೂರು ತೆರಳಬೇಕಾದರೂ ಬಸ್‌ನಲ್ಲೇ ತೆರಳುತ್ತಿದ್ದರು. ಶಾಸಕರಾಗಿದ್ದ ವೇಳೆ ಮನೆಯಿಂದಲೇ ಬುತ್ತಿ ತಂದು ಊಟ ಮಾಡುತ್ತಿದ್ದರು.

ಬಳಿಕದ ದಿನಗಳಲ್ಲಿ ಕಚೇರಿಯಲ್ಲೇ ಅನ್ನ ಬೇಯಿಸಿ, ಊಟ ಮಾಡುತ್ತಿದ್ದೆವು. ಅವರಷ್ಟು ಸರಳ ಜೀವನ ನಡೆಸಿದ, ರಾಜಕೀಯ ವ್ಯಕ್ತಿಯನ್ನು ಕಂಡಿಲ್ಲ ಎಂದು ಅವರ ನಿಕಟವರ್ತಿಗಳಾದ ಬಿಪಿನ್‌ ಚಂದ್ರಪಾಲ್‌ ಹಾಗೂ ಸುನಿಲ್‌ ಕುಮಾರ್‌ ದುಃಖೀಸುತ್ತಲೇ ಹೇಳಿದರು.

ಅಂಗಡಿ ಮುಚ್ಚಿ ಬಂದ್‌ ಆಚರಣೆ
ಮಾಜಿ ಶಾಸಕರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಕಾರ್ಕಳದ ಬಹುತೇಕ ಅಂಗಡಿ ಮಾಲಕರು ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಅನೇಕ ಖಾಸಗಿ ವಿದ್ಯಾಸಂಸ್ಥೆಗಳಿಗೂ ರಜೆ ನೀಡಲಾಗಿತ್ತು.

Advertisement

ಕಾರ್ಯಕರ್ತರಿಗೆ ಕೊನೆಯ ಸಂದೇಶ : ಕಾಕತಾಳೀಯ
ಜು. 5ರಂದು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಡಾ| ಎಂ. ವೀರಪ್ಪ ಮೊಲಿಯವರು ಮಧ್ಯಾಹ್ನ 12ರಿಂದ 2.30ರ ವರೆಗೆ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗೋಪಾಲ ಭಂಡಾರಿಯವರು ಪಕ್ಷದ ಕಾರ್ಯಕರ್ತರಿಗೆ ವಾಟ್ಸಾéಪ್‌ ಸಂದೇಶದ ಮೂಲಕ ವಿನಂತಿಸಿಕೊಂಡಿದ್ದರು. ಬಹುಶಃ ಗೋಪಾಲ ಭಂಡಾರಿಯವರ ಕೊನೆಯ ಸಂದೇಶ ಇದೇ ಆಗಿರಬೇಕು. ಕಾಕತಾಳೀಯವೆಂಬಂತೆ ಕಾರ್ಕಳಕ್ಕೆ ಅದೇ ವೇಳೆಗೆ ಕಾಂಗ್ರೆಸ್‌ನ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಜಿ ಶಾಸಕರ ಅಂತಿಮ ದರ್ಶನ ಪಡೆಯುವಂತಾಯಿತು.

ಹುಟ್ಟೂರು ಹೆಬ್ರಿಯಲ್ಲಿ ಅಂತಿಮ ದರ್ಶನ
ಹೆಬ್ರಿ: ಜು. 4ರಂದು ನಿಧನ ಹೊಂದಿದ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಎಚ್‌. ಗೋಪಾಲ್‌ ಭಂಡಾರಿ ಅವರ ಪಾರ್ಥಿವ ಶರೀರ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇಡಲಾಗಿದ್ದು ಈ ಸಂದರ್ಭ ಸಹಸ್ರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಶಾಲಾ ಕಾಲೇಜಿಗೆ ರಜೆ
ಗೋಪಾಲ ಭಂಡಾರಿ ಅವರ ನಿಧನ ಹಿನ್ನೆಲೆಯಲ್ಲಿ ಹೆಬ್ರಿ ಸುತ್ತಮುತ್ತಲಿನ ಖಾಸಗಿ ಹಾಗೂ ಕೆಲವೊಂದು ಸರಕಾರಿ ಶಾಲೆಗಳಿಗೆ ರಜೆ ನೀಡಲಾಗಿದ್ದು ಕೆಲವೊಂದು ಶಾಲೆಗಳಲ್ಲಿ ಸಂತಾಪ ಸಭೆಯನ್ನು ನಡೆಸಲಾಯಿತು .

ಅಂಗಡಿ ಮುಂಗಟ್ಟು ಬಂದ್‌
ಹೆಬ್ರಿ ತಾಲೂಕಾಗಿ ಮಾರ್ಪಾಡಾಗಲು ಪ್ರಮುಖ ರೂವಾರಿಯಾದ ಗೋಪಾಲ ಭಂಡಾರಿ ಅವರ ನಿಧನ ಸುದ್ದಿ ಕೇಳುತ್ತಿದ್ದಂತೆ ಹೆಬ್ರಿಯ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್‌ ಮಾಡಿ ಸಂತಾಪ ಸೂಚಿಸಿದರು .

ಅಂತಿಮ ದರ್ಶನ
ಉಡುಪಿ ಶಾಸಕರ ರಘುಪತಿ ಭಟ್‌ ಹಾಲಾಡಿ ಶ್ರೀನಿವಾಸ ಶೆಟ್ಟಿ , ಪ್ರತಾಪ್‌ ಚಂದ್ರ ಶೆಟ್ಟಿ, ಶ್ರೀನಿವಾಸ ಪೂಜಾರಿ ವಿನಯಕುಮಾರ್‌ ಸೊರಕೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಜನಾರ್ದನ್‌ ತೋನ್ಸೆ . ಹೆಬ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಎಚ್‌. ಕೆ. ಸುಧಾಕರ್‌, ಜಿಲ್ಲಾ ಪಂಚಾಯತ್‌ ಸದಸ್ಯೆ ಜ್ಯೋತಿ ಹರೀಶ್‌ . ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾನವ ಹಕ್ಕು ಆಯೋಗದ ಅಧ್ಯಕ್ಷ ರೋಹಿತ್‌ ಕುರ್ಮಾ ಕಟೀಲ್‌, ಭಾಸ್ಕರ ಕೆ., ಗೋಕುಲದಾಸ್‌ ನಾಯಕ್‌, ಮಧುಕೇಶ್‌, ಕೆಪಿಸಿಸಿ ಕಾರ್ಯದರ್ಶಿ ಮಹಮ್ಮದ್‌ ಗಫ‌ೂರ್‌, ಡಾ| ಸಂತೋಷ್‌ ಕುಮಾರ್‌ ಶೆಟ್ಟಿ , ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಹರೀಶ್‌ ಕಿಣಿ, ದಿವಾಕರ ಕುಂದರ್‌, ದಿನೇಶ್‌ ಪುತ್ರನ್‌, ರಮೇಶ್‌ ಕಾಂಚನ್‌ ಮೊದಲಾದವರು ಅಂತಿಮ ದರ್ಶನ ಪಡೆದರು.

ಗೋಪಾಲ ಭಂಡಾರಿ ನಿಧನಕ್ಕೆ ಗಣ್ಯರ ಕಂಬನಿ

ಗೋಪಾಲ ಭಂಡಾರಿಯವರು ಸಾರ್ವಜನಿಕ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು. ತನ್ನ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದವರು. ಅವರ ಸ್ಥಾನವನ್ನು ತುಂಬಲು ಮತ್ತೂಬ್ಬರಿಂದ ಸಾಧ್ಯವಾಗದು.
– ವೀರಪ್ಪ ಮೊಯ್ಲಿ, ಮಾಜಿ ಕೇಂದ್ರ ಸಚಿವರು

ಹೋರಾಟಗಾರ ಗೋಪಾಲ ಭಂಡಾರಿಯವರ ಅಕಾಲಿಕ ನಿಧನ ನಮಗೆಲ್ಲ ಅತೀವ ದುಃಖವನ್ನುಂಟು ಮಾಡಿದೆ. ಕುಟುಂಬ ವರ್ಗ ಬಂಧು ಮಿತ್ರರಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ.
– ಜಯಮಾಲಾ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು

ಕಾರ್ಕಳ ಭಾಗದ ಜನತೆಯ ಒಳಿತಿಗಾಗಿ ದುಡಿದವರು, ಸರ್ವರ-ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಗೋಪಾಲ ಭಂಡಾರಿಯವರ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
– ರೆ| ಫಾ| ಜೆರಾಲ್ಡ್‌ ಐಸಾಕ್‌ ಲೋಬೋ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು

ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿ ತಾ.ಪಂ. ಸದಸ್ಯನಿಂದ ಪ್ರಾರಂಭ ಗೊಂಡು ಹಂತ ಹಂತವಾಗಿ ಶಾಸಕ ಸ್ಥಾನಕ್ಕೆ ಏರಿದವರು. 3 ದಶಕಗಳಿಗೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಕಾರ್ಕಳದ ಜನತೆಗೆ ಸ್ಪಂದನೆ ನೀಡುತ್ತಿದ್ದ ಮೇರು ವ್ಯಕ್ತಿತ್ವದ ಗೋಪಾಲ ಭಂಡಾರಿಯವರು ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು. ಅವರ ನಿಧನ ದುಃಖಕರ.
– ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

ಸಜ್ಜನ ರಾಜಕಾರಣಿಯೋರ್ವರನ್ನು ಕಳೆದುಕೊಂಡಿದ್ದೇವೆ. ನಿಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ಗೋಪಾಲ ಭಂಡಾರಿಯವರ ಶೈಲಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
– ಕೆ.ಪಿ. ಶೆಣೈ, ಮಾಜಿ ಪುರಸಭಾ ಅಧ್ಯಕ್ಷರು
·ಗೋಪಾಲ ಭಂಡಾರಿ ಓರ್ವ ನಿಷ್ಠಾವಂತ ಜನಸೇವಕ.

ರಾಜಕೀಯ ಕ್ಷೇತ್ರದಲ್ಲಿ
ದ್ದರೂ ಯಾವೊಂದು ದೋಪವನ್ನು ನಾನು ಅವರಲ್ಲಿ ಕಂಡಿಲ್ಲ. ಪಕ್ಷ ವಿರೋಧಿಗಳಾಗಿ ದ್ದರೂ ನಮ್ಮ ನಡುವಿನ ಆತ್ಮೀಯತೆ, ಗೆಳೆತನಕ್ಕೆ ಎಂದೂ ತೊಂದರೆಯಾಗಿಲ್ಲ.
– ಬೋಳ ಪ್ರಭಾಕರ್‌ ಕಾಮತ್‌, ಬಿಜೆಪಿ ಮುಖಂಡರು

ಮಗುಮನಸ್ಸಿನ ಗೋಪಾಲ ಭಂಡಾರಿಯವರ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಬಾಲ್ಯದಿಂದಲೇ ಅವರ ಒಡನಾಟದೊಂದಿಗೆ ಬೆಳೆದವನು ನಾನು.
-ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್‌

ಕಾರ್ಕಳದ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಅವರ ನಿಧನಕ್ಕೆ ಕಾರ್ಕಳ ಭಾರತೀಯ ಜನತಾ ಪಾರ್ಟಿ ತೀವ್ರ ಸಂತಾಪ ವ್ಯಕ್ತ ಪಡಿಸಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಗೋಪಾಲ ಭಂಡಾರಿ ತನ್ನ ಸರಳತೆ ಮೂಲಕವೇ ಮನೆಮಾತಾಗಿದ್ದರು. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌, ಮಹಾವೀರ ಹೆಗ್ಡೆ , ಬಿಜೆಪಿ ವಕ್ತಾರ ಕೆ.ಎಸ್‌. ಹರೀಶ್‌ ಶೆಣೈ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗೋಪಾಲ ಭಂಡಾರಿ ಸಮಾಜದ ಅನಘÂì ರತ್ನವಾಗಿದ್ದರು. ಅಜಾತಶತ್ರುವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದ ಭಂಡಾರಿ ಅವರ ನಿಧನ ನೋವಿನ ವಿಚಾರ.
-ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಸಾಂದೀಪನಿ ಸಾಧನಾಶ್ರಮ

Advertisement

Udayavani is now on Telegram. Click here to join our channel and stay updated with the latest news.

Next