Advertisement

ಕಾರ್ಕಳ: ಪಾಳು ಬಿದ್ದಿದೆ ಕೈಗಾರಿಕೆ ವಲಯ!

04:23 PM Sep 05, 2022 | Team Udayavani |

ಕಾರ್ಕಳ: ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸ ಲಾಗಿದೆ. ಆದರೆ “ವಾಸ್ತು ಸರಿಯಿಲ್ಲ’ ಇತ್ಯಾದಿ ಕಾರಣಗಳನ್ನು ಮುಂದಿರಿಸಿ ಉದ್ದಿಮೆದಾರರು ಸಣ್ಣ ಕೈಗಾರಿಕೆ ಸ್ಥಾಪಿಸಲು ಹಿಂಜರಿಯುತ್ತಿದ್ದು, ಕೈಗಾರಿಕಾ ಪ್ರದೇಶ ಪಾಳು ಬಿದ್ದಿದೆ.

Advertisement

ಸ್ವರಾಜ್‌ ಮೈದಾನದ ಬಳಿ 43 ವರ್ಷಗಳ ಹಿಂದೆಯೇ (1978-79) ರಾಜ್ಯ ಸರಕಾರ ಸಣ್ಣ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿತ್ತು. ನಗರದಿಂದ 2 ಕಿ.ಮೀ. ದೂರದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ತಾಲೂಕು ಕ್ರೀಡಾಂಗಣ ಬಳಿ 10 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ವಲಯವಿದೆ. ಮೊದಲ ಹಂತದಲ್ಲಿ 10 ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಪ್ರಸ್ತುತ 1 ಶೆಡ್‌ನ‌ಲ್ಲಿ ಮಾತ್ರ ಸಣ್ಣ ಕೈಗಾರಿಕೆ ಕಾರ್ಯಾಚರಿಸುತ್ತಿದೆ. ಉಳಿದ 9 ಕೇಂದ್ರಗಳೂ ಸ್ಥಗಿತಗೊಂಡಿದ್ದು, ಪರಿಸರ ಪಾಳು ಕೊಂಪೆಯಂತಾಗಿದೆ.

ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಶಿವಮೊಗ್ಗ ವಲಯ ಅಧೀನದಲ್ಲಿದ್ದ ಕಾರ್ಕಳ ಕೇಂದ್ರದಲ್ಲಿ ಮೂಲಸೌಕರ್ಯಗಳಿಲ್ಲ. ಆರಂಭದಲ್ಲಿ ಹಂತಹಂತವಾಗಿ ಒಂದಷ್ಟು ಅಭಿವೃದ್ಧಿ ಪಡಿಸಲಾಗಿತ್ತು. ಮುಂದಕ್ಕೆ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮಂಗಳೂರಿನ ಶಾಖೆಯ ಸುಪರ್ದಿಗೆ ಬಂದಿತು. 2021ರ ಸೆಪ್ಟಂಬರ್‌ನಲ್ಲಿ ಮತ್ತೆ ಶಿವಮೊಗ್ಗ ವಲಯ ಕಚೇರಿಯೇ ಅಭಿವೃದ್ಧಿಯ ಉಸ್ತುವಾರಿ ವಹಿಸಿಕೊಂಡಿದೆ.

ಪಾಳು ಬೀಳಲು ಹಲವು ಕಾರಣ
ಕಾರ್ಕಳದಲ್ಲಿ ಕೈಗಾರಿಕೆ ವಲಯ ಸ್ಥಾಪನೆಯಾದಾಗ ಊರು ಅಷ್ಟೊಂದು ಬೆಳೆದಿರಲಿಲ್ಲ. ಕೆಲವು ಮಂದಿ ಮಾತ್ರ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಿದ್ದು, ವುಡ್‌ವರ್ಕ್ಸ್ ಇತ್ಯಾದಿಗಳನ್ನು ತೆರೆದಿದ್ದರು. ಶೆಡ್‌ ಮಂಜೂರಾದ ಕೆಲವರು ನಾನಾ ಕಾರಣ, ತೊಂದರೆಗಳಿಂದ ಮುಚ್ಚಿದ್ದಾರೆ. ವಾಸ್ತು ಸರಿ ಇಲ್ಲ ಎಂಬುದೇ ಮುಖ್ಯ ಕಾರಣ.

ಕೈಗಾರಿಕ ವಲಯದಲ್ಲಿ ಖಾಲಿ ಇರುವ ಜಾಗವನ್ನು ಕಳೆದೆರಡು ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ನಿವೇಶನವನ್ನಾಗಿ ಪರಿವರ್ತಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿಯುಳ್ಳವರಿಗೆ ನೀಡಲು ಯೋಜಿಸಿ 3 ಬಾರಿ ಅರ್ಜಿ ಕೂಡ ಆಹ್ವಾನಿಸಲಾಗಿತ್ತು. 3 ಅರ್ಜಿ ಬಂದಿದ್ದು ಮೂವರಿಗೂ ಜಾಗ ಮಂಜೂರಾಗಿದೆ. ಪ್ರಸ್ತುತ 400×30 ಚದರಡಿಯ 30 ನಿವೇಶನಗಳನ್ನು ರೂಪಿಸಿದ್ದು ಅದರಲ್ಲಿ 15 ನಿವೇಶನಗಳು ಅಲಾಟ್‌ಮೆಂಟ್‌ ಆಗಿವೆ; ಉಳಿದವು ಖಾಲಿಯಿವೆ.

Advertisement

ಮೂಲಸೌಕರ್ಯವಿದೆ
ಕೈಗಾರಿಕೆ ಪ್ರದೇಶದ ನಿರ್ವಹಣೆ ಯನ್ನು 15 ವರ್ಷಗಳ ಹಿಂದೆಯೇ ಸ್ಥಳಿಯಾಡಳಿತಕ್ಕೆ ನೀಡಲಾಗಿದೆ. ರಸ್ತೆ, ವಿದ್ಯುತ್‌ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಬ್ಬಿಣದಿಂದ ನಿರ್ಮಿಸಿದ 21 ಬೀದಿ ದೀಪಗಳ ಕಂಬಗಳಿವೆ. ವಿದ್ಯುತ್‌ ಕೇಬಲ್‌ / ದೀಪ ಅಳವಡಿಕೆ ಇತ್ಯಾದಿಗಳಿಗೆ 8 ಲಕ್ಷ ರೂ. ವ್ಯಯಿಸಲಾಗಿತ್ತು. ಆದರೀಗ ದೀಪಗಳು ಉರಿಯದೆ ಕೈಗಾರಿಕಾ ಪ್ರದೇಶ ಕತ್ತಲಲ್ಲಿದೆ. ಪ್ರದೇಶದ ಅಭಿವೃದ್ಧಿಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಈಗ ಮುಂದಾಗಿದ್ದು, ಸಮಗ್ರ ವಿದ್ಯುತ್‌ ಸಂಪರ್ಕ ಕಲ್ಪಿಸಲು 12 ಲಕ್ಷ ರೂ.ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮರ್‌, 40 ವಿದ್ಯುತ್‌ ಕಂಬ ಅಳವಡಿಸಿದೆ. ಕೈಗಾರಿಕಾ ವಲಯಕ್ಕೆಂದೇ ಪ್ರತ್ಯೇಕ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ 1.65 ಕೋ.ರೂ. ವ್ಯಯಿಸಿ 1,400 ಮೀ. ಉದ್ದದ ರಸ್ತೆ ಹಾಗೂ ಚರಂಡಿಯನ್ನೂ ನಿರ್ಮಿಸಲಾಗಿತ್ತು.

ಫ‌ರ್ನಿಚರ್‌ ಹಬ್‌ ಬಂದರೆ ಅನುಕೂಲ
ಶಿಲ್ಪಕಲೆಗೆ ಹೆಸರಾದ ಕಾರ್ಕಳ ಕೆತ್ತನೆ ಕೆಲಸಕ್ಕೆ ಪ್ರಸಿದ್ಧ. ಇದೇ ಕಾರಣಕ್ಕೆ ಶಿಲ್ಪ ಕಲೆ ಹಬ್‌ ಹಾಗೂ ಫ‌ರ್ನಿಚರ್‌ ಹಬ್‌ ಅನ್ನು ಕಾರ್ಕಳಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಜಾಗದ ಹುಡುಕಾಟ ನಡೆಸಲಾಗುತ್ತಿದೆ. ಎಲ್ಲಿಯೋ ಜಾಗ ಹುಡುಕುವ ಬದಲು ಇದೇ ಕೈಗಾರಿಕೆ ಪ್ರದೇಶಕ್ಕೆ ಅವುಗಳನ್ನು ತಂದಲ್ಲಿ ಮೂಲಸೌಕರ್ಯ ಒದಗಿಸಿ, ಒಂದೇ ಕಡೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಅನುಕೂಲವಾಗಲಿದೆ. ಫ‌ರ್ನಿಚರ್‌ ಕ್ಲಸ್ಟರ್‌ ಅನ್ನು ಇದೇ ಕೈಗಾರಿಕೆ ಪ್ರದೇಶಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ತಿಂಗಳ ಹಿಂದೆ ಈ ಬಗ್ಗೆ ಸಭೆ ಕೂಡ ನಡೆದಿದೆ. ಈಗಿನ ಕೈಗಾರಿಕ ಪ್ರದೇಶದಲ್ಲಿ 1 ಎಕರೆ ಹೆಚ್ಚುವರಿ ಜಾಗವಿದ್ದು ವಿಸ್ತರಣೆಗೆ ಅನುಕೂಲವಾಗಲಿದೆ.

ಅವಕಾಶಗಳು ಹಲವು
ತಾಲೂಕು ಕ್ರೀಡಾಂಗಣ, ಈಜುಕೊಳ, ಕೋಟಿ ಚೆನ್ನಯ ಥೀಂ ಪಾರ್ಕ್‌, ಉದ್ದೇಶಿತ ಯಕ್ಷರಂಗಾಯಣ ಕೇಂದ್ರ ಇವೆಲ್ಲವೂ ಕೈಗಾರಿಕಾ ವಲಯಕ್ಕೆ ಹತ್ತಿರದಲ್ಲೇ ಇವೆ. ನಗರಕ್ಕೂ ಹತ್ತಿರದಲ್ಲಿದೆ. ಬಸ್‌ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದೆ. ಮಿಯಾರು ಭಾಗದ ಕೂಡು ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಇಲ್ಲಿಗೆ ಬರಲು ಇನ್ನೂ ಅನುಕೂಲವಾಗಲಿದೆ.

ವಿನಾಯಿತಿಯಲ್ಲೂ ಪಡೆದುಕೊಳ್ಳಬಹುದು
ಕೈಗಾರಿಕೆ ವಲಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ನಿವೇಶನ ಮೌಲ್ಯದ ಮೇಲೆ ಶೇ. 75ರಷ್ಟು ವಿನಾಯಿತಿ ನೀಡಲಾಗುತ್ತದೆ. ಉಳಿದ ಶೇ. 25 ಮೊತ್ತವನ್ನು 8 ಕಂತುಗಳಲ್ಲಿ ಪಾವತಿಸಬಹುದು. ಅಲ್ಪಸಂಖ್ಯಾಕ ಪ್ರಭೇದ 1, 2ನೇ ವರ್ಗದವರಿಗೆ ನಿವೇಶನದ ಮೌಲ್ಯವನ್ನು ಆರು ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ. ಸಾಮಾನ್ಯ ವರ್ಗದವರಿಗೆ ನಿವೇಶನ ಮೌಲ್ಯವನ್ನು 60 ದಿನಗಳಲ್ಲಿ ಪಾವತಿಸುವುದಕ್ಕೆ ಅವಕಾಶವಿದೆ.

ಉದ್ಯೋಗ ಸೃಷ್ಟಿಗೆ ಅವಕಾಶ
ಕಾರ್ಕಳ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಯುವಕರು ಉದ್ಯೋಗದ ನಿರೀಕ್ಷೆಯಲ್ಲಿದ್ದು, ಉದ್ಯೋಗ ಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಕೈಗಾರಿಕೆ ಇಲಾಖೆ ಮುತು ವರ್ಜಿ ವಹಿಸಿ, ಕೈಗಾರಿಕೆ ಪುನಃಶ್ಚೇತನಕ್ಕೆ ಮುಂದಾದರೆ ಉದ್ಯೋಗ ಸೃಷ್ಟಿ ಜತೆಗೆ ಆರ್ಥಿಕ ಪ್ರಗತಿಯೂ ಆಗಲಿದೆ.

ಉದ್ದಿಮೆ ಕ್ಷೇತ್ರದಲ್ಲಿ ಬೆಳೆಯಲು ಮಂಗಳೂರು, ಉಡುಪಿ ಪೂರಕ ಸೌಲಭ್ಯಗಳನ್ನು ಹೊಂದಿವೆ. ವಾಯು, ಜಲ, ಭೂ ಮಾರ್ಗಗಳು ಅನುಕೂಲವಾಗಿದ್ದು, ಆಮದು ರಪು¤ ಎಲ್ಲದಕ್ಕೂ ಅವಕಾಶವಿದೆ. ದೇಶದ ಇತರ ನಗರಗಳಿಗೆ ಹೋಲಿಸಿದರೆ ಇಲ್ಲಿನ ನಗರಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಉದ್ಯೋಗ, ಆರ್ಥಿಕ ದೃಷ್ಟಿಯಿಂದ ಬೃಹತ್‌ ಉದ್ದಿಮೆಗಳು ಎರಡೂ ಜಿಲ್ಲೆಗಳನ್ನು ಕೇಂದ್ರೀಕರಿಸಿ ಬರಬೇಕಿದೆ.
– ಸಂತೋಷ್‌ ಡಿಸಿಲ್ವ ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ ಸಂಘ

ಉದ್ಯೋಗ ಸೃಷ್ಟಿ, ಯುವ ಜನತೆಯನ್ನು ಕೈಗಾರಿಕೆಯತ್ತ ಸೆಳೆಯುವ ದೃಷ್ಟಿಯಿಂದ ವಲಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ಥಳೀಯ ವಾಗಿ ಉದ್ದಿಮೆದಾರರ ಸಭೆಯನ್ನೂ ನಡೆಸಲಾಗಿದೆ.
– ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಶಿವಮೊಗ್ಗ

ಕೈಗಾರಿಕಾ ಪ್ರದೇಶ – 10 ಎಕರೆ
ಸ್ಥಾಪನೆ‌ – 1978   79
ಒಟ್ಟು ನಿವೇಶನ – 30
ಈಗಿರುವ ನಿವೇಶನ- 10

-  ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next