ಕಾರ್ಕಳ: ಮೂರು ದಿನಗಳಿಂದ ಇಲ್ಲಿನ ಬೈಲೂರಿನಲ್ಲಿ ನಡೆದ ಪರಶುರಾಮನ ಥೀಂ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮ ಯಾವುದೇ ಗೊಂದಲ ಗದ್ದಲಗಳಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆದಿದೆ.
ಮೂರು ದಿನಗಳಲ್ಲಿ ಲಕ್ಷಾಂತರ ಮಂದಿ ಪರಶುರಾಮನ ಪ್ರತಿಮೆ ವೀಕ್ಷಣೆ ನಡೆಸಿದ್ದರು. ಜನ ಈಗಲೂ ಪರಶುರಾಮನ ಪ್ರತಿಮೆ ಸ್ಥಳಕ್ಕೆ ಆಗಮಿಸುತ್ತಲೇ ಇದ್ದಾರೆ. ಬೈಲೂರು ಪರಿಸರದಲ್ಲಿ ಜನಜಂಗುಳಿ ಲೋಕಾರ್ಪಣೆ ಬಳಿಕವೂ ಕಂಡುಬರುತ್ತಿದೆ.
ಪ್ರಾಚೀನ ಭಾರತೀಯ ಕರಕುಶಲ ವಸ್ತುಪ್ರದರ್ಶನ ಮಳಿಗೆ, ಸಂಜೀವಿನಿ ಒಕ್ಕೂಟಕ ಉತ್ಪನ್ನಗಳ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ನಿರೀಕ್ಷೆಗೂ ಮೀರಿ ನಡೆದಿದೆ. ಜಿಲ್ಲೆಯ ವಿವಿಧ ಜಿಲ್ಲೆಗಳಿಂದ ಬಂದ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳಲ್ಲಿ ಕೊಂಡು ಕೊಳ್ಳುವಿಕೆ ಭರ್ಜರಿಯಾಗಿಯೇ ನಡೆದಿದೆ. ಆಹಾರ ಮೇಳದಲ್ಲಿ ಬಗೆಬಗೆಯ ರುಚಿಕರ ಖಾದ್ಯ ಸವಿಯಲು ಅವಕಾಶ ಸಿಕ್ಕಿದೆ. ಎಲ್ಲ ಮಳಿಗೆಗಳಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ನಡೆದಿದೆ.
ಅದಕ್ಕೂ ಮೀರಿ ಪರಸ್ಪರ ಸಂಸ್ಕೃತಿ, ಉತ್ಪನ್ನಗಳ ಪರಿಚಯವಾಗಿದೆ. ಇನ್ನು ಪ್ರದಾನ ವೇದಿಕೆ, ಉಪ ವೇದಿಕೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ಜನ ಸ್ಪಂದನೆಯಿಂದ ಯಶಸ್ವಿಗೆ ಶ್ರಮಿಸಿದ ಆಯೋಜಕ 28 ಸಮಿತಿಯವರು ಸಂತಸಗೊಂಡಿದ್ದಾರೆ.
Related Articles
ರೂವಾರಿಗಳಲ್ಲಿ ಸಂತೃಪ್ತ ಭಾವ
ಮೂರು ದಿನವೂ ಭಾರಿ ಜನಸ್ತೋಮ ಹರಿದು ಬಂದಿದ್ದರಿಂದ ಪರಶುರಾಮನ ಥೀಂ ಪಾರ್ಕ್ ಕಲ್ಪನೆಯ ರೂವಾರಿ ಸಚಿವ ವಿ.ಸುನಿಲ್ಕುಮಾರ್ ಸಹಿತ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಖುಷಿ ಪಟ್ಟಿದ್ದಾರೆ. ಯಶಸ್ವಿನ ಹಿಂದೆ ಎಲ್ಲ ಇಲಾಖೆಗಳ ಅಧಿಕಾರಿಗಳು ಅವಿರತತವಾಗಿ ಶ್ರಮಿಸಿದ್ದು ಒಂದು ರೀತಿ ಸವಾಲಾಗಿ ಸ್ವೀಕರಿಸಿದ್ದೇ ಯಶಸ್ವಿಗೆ ಪ್ರಮುಖ ಕಾರಣವಾಗಿದೆ.
ನಿರ್ಮಾಣ ಹಿಂದಿನ ಶ್ರಮ ಅದ್ಭುತ!
ಬೆಟ್ಟದ ಮೇಲೆ ಇಷ್ಟೊಂದು ಆಕರ್ಷಣೀಯ ಪ್ರತಿಮೆ, ಪಾರ್ಕ್ ನಿರ್ಮಿಸುವುದು ಆರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಎಲ್ಲರೂ ಹಿಂದೇಟು ಹಾಕುತ್ತಿದ್ದರು. ಆಗ ಮುಂದೆ ಬಂದವರು ಉಡುಪಿ ನಿರ್ಮಿತಿ ಕೇಂದ್ರದವರು. ಪಾರ್ಕ್ನ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡು ಕಳೆದ ಎರಡು ವರ್ಷದಿಂದ ಅವಿರತವಾಗಿ ತೊಡಗಿಸಿಕೊಂಡಿದ್ದರು. ಭಾರದ ವಸ್ತುಗಳು, ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಬೆಟ್ಟಕ್ಕೆ ಸಾಗಿಸುವಲ್ಲಿ ಸಾಕಷ್ಟು ಹರಸಾಹಸ ಪಡಬೇಕಾಯಿತು. ಆರ್ಕಿಟೆಕ್ ಸಂಪ್ರೀತ್ ಅವರ ವಿನ್ಯಾಸದಲ್ಲಿ ಪಾರ್ಕ್ ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದೆ.
ಕೆಲವು ದಿನಗಳ ಕಾಲ ವೀಕ್ಷಣೆಗೆ ಅವಕಾಶವಿಲ್ಲ
ಥೀಂ ಪಾರ್ಕ್ ಲೋಕಾರ್ಪಣೆ ಕೊನೆಯ ದಿನಗಳಲ್ಲಿ ತಯಾರಿಗಳು ಅವಸರವಸರವಾಗಿ ನಡೆದಿದೆ. ಪಾರ್ಕ್ನ ನಿರ್ಮಾಣ ಕಾರ್ಯ ನಡೆದರೂ ಪೂರ್ಣ ಪ್ರಮಾಣದಲ್ಲಿ ಅಂತಿಮ ಸ್ಪರ್ಶ ಆಗಿಲ್ಲ. ಇನ್ನು ಕೆಲವು ಕೆಲಸಗಳು ಬಾಕಿ ಉಳಿದಿವೆ. ಮುಂದಿನ ಕೆಲವು ದಿನಗಳ ಮಟ್ಟಿಗೆ ಸಾರ್ವಜನಿಕರಿಗೆ ಪಾರ್ಕ್ ವೀಕ್ಷಣೆಗೆ ಅವಕಾಶ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಇಲಾಖೆ ಪ್ರಕಟನೆ ಹೊರಡಿಸಲಿದೆ.