Advertisement

ಕಾರ್ಕಳ: ದೀಪ ಪ್ರಜ್ವಲನ ಬದಲು ಶಂಖ ಸಂಪ್ರದಾಯಕ್ಕೆ ಮಣೆ; ಬಲಮುರಿ, ಎಡಮುರಿ ಶಂಖ

03:14 PM Jan 24, 2023 | Team Udayavani |

ಕಾರ್ಕಳ: ಬೈಲೂರಿನ ತುಳುನಾಡ ಸೃಷ್ಟಿಕರ್ತ ಪರಶುರಾಮನ ಮೂರ್ತಿ ಲೋಕಾರ್ಪಣೆ ವೇಳೆ ಅಲೌಕಿಕವಲ್ಲದೆ ಲೌಕಿಕವಾಗಿಯೂ ಪ್ರಾಮುಖ್ಯತೆ ಹೊಂದಿರುವ ಶಂಖಕ್ಕೆ ಪ್ರಾಶಸ್ತ್ಯ ನೀಡಲಾಗಿದೆ.

Advertisement

ಸಹಸ್ರ ಕಂಠಗಳ ಶಂಖನಾದದ ಮೂಲಕ ಭಿನ್ನ, ವೈಶಿಷ್ಟ್ಯಪೂರ್ಣ ವೈದಿಕ ಸಂಪ್ರದಾಯದಂತೆ ನಡೆಯಲಿದೆ. ತಾನು ಸುಟ್ಟು ಇತರರಿಗೆ ಬೆಳಕನ್ನು ನೀಡುವ ದೀಪ ಪ್ರಜ್ವಲನ, ಸಸಿ ನೆಡುವುದು ಇತ್ಯಾದಿಗಳಿಂದ ಶುಭ ಕಾರ್ಯಗಳಿಗೆ ಚಾಲನೆ ನೀಡುವುದು ಸಾಮಾನ್ಯ ರೂಢಿಯಾಗಿದೆ. ಜ.27ರ ಪರಶು ರಾಮನ ಪ್ರತಿಮೆ ಲೋಕಾರ್ಪಣೆ ವೇಳೆ ಇದಕ್ಕೆ ಇತಿಶ್ರೀ ಹಾಡಲಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಉತ್ಸವ, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಶಂಖನಾದವನ್ನು ಶುಭಾರಂಭಕ್ಕೆ ಮೊಳಗಿಸುವುದಿದೆ. ಶಂಖವನ್ನು ಊದುವುದರಿಂದ ಹೊರಬರುವ ನಾದದಲ್ಲಿ ವೈಶಿಷ್ಟ್ಯವಿದೆ. ವಿಶ್ವದ ಅನೇಕ ಸಂಸ್ಕೃತಿಗಳಲ್ಲಿ ಶಂಖನಾದವನ್ನು ವಿವಿಧ ಕಾರಣಗಳಿಗಾಗಿ ಉಪಯೋಗಿಸುತ್ತಾರೆ.

ಹಿಂದೂ ಸಂಪ್ರದಾಯದಲ್ಲಿ ಪುರಾಣದಿಂದ ಇಂದಿನವರೆಗೂ ಶಂಖನಾದಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ಹಿಂದೆ ಮಹಾತ್ಮರು, ರಾಜರು, ದೇವತೆಗಳ ಜನನವನ್ನು ಶಂಖನಾದದ ಮೂಲಕವೇ ಘೋಷಿಸುತ್ತಿದ್ದರು. ಸಮುದ್ರ ಮಥನದ ಸಮಯದಲ್ಲಿ ಉತ್ಪನ್ನವಾದ ಶಂಖವನ್ನು ಭಗವಾನ್‌ ಶ್ರೀವಿಷ್ಣುವು ಆಯುಧ ರೂಪದಲ್ಲಿ ಧಾರಣೆ ಮಾಡಿದನೆಂಬ ನಂಬಿಕೆಯಿದೆ. ವಿಷ್ಣುವಿನ ಆಜ್ಞೆಯಂತೆ ಶಂಖದ ಮೊದಲ ಭಾಗದಲ್ಲಿ ಚಂದ್ರ, ಸೂರ್ಯ ಮತ್ತು ವರುಣನೂ ಪೃಷ್ಣ ಭಾಗದಲ್ಲಿ ಪ್ರಜಾಪತಿ ಹಾಗೂ ಅಗ್ರಭಾಗದಲ್ಲಿ ಗಂಗಾ, ಸರಸ್ವತಿ ಮುಂತಾದ ಸರ್ವ ತೀರ್ಥಗಳು ವಾಸ್ತವಿದೆ ಎನ್ನುವ ಪ್ರತೀತಿಯಿದೆ. ಮಹಾವಿಷ್ಣುವಿನ ಎಡ ಹಸ್ತದಲ್ಲಿ ಶಂಖ ಸದಾ
ಶೋಭಿಸುತ್ತಲಿರುತ್ತದೆ.

ರಾಮಾಯಣ, ಮಹಾಭಾರತದಲ್ಲಿಯೂ ಶಂಖದ ಪಾತ್ರ ಬಹಳ ಪ್ರಾಮುಖ್ಯವಾದದು. ಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ, ಧರ್ಮರಾಯನದು ಅನಂತವಿಜಯ, ಭೀಮನದು ಪೌಂಡ್ರ, ನಕುಲನದು ಸುಘೋಷ, ಸಹದೇವನದು ಮಣಿಪುಷ್ಪಕ ಎಂಬ ವಿಚಾರವಿದೆ.

Advertisement

ರೋಗಾಣುಗಳು ನಾಶ
ಶಂಖನಾದದಿಂದ ವಾತಾವರಣದಲ್ಲಿರುವ ರೋಗಾಣುಗಳೊಂದಿಗೆ ನಕಾರಾತ್ಮಕ ಅಂಶಗಳು ನಾಶವಾಗುತ್ತೆ. ಶಂಖನಾದಕ್ಕೆ ಚಿಕಿತ್ಸಾ ಶಾಸ್ತ್ರದಲ್ಲಿ ಹಾಗೂ ಆಯುರ್ವೇದದಲ್ಲಿ ವಿಶೇಷ ಮಹತ್ವವಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆ ದೂರವಾಗಿ ಶ್ವಾಶಕೋಶ ಗಟ್ಟಿಯಾಗುತ್ತೆ ಎನ್ನುವ ಅಂಶವಿದೆ.

ಬಲಮುರಿ, ಎಡಮುರಿ ಶಂಖ
ಶಂಖವನ್ನು ಊದುವ ರೀತಿಯಲ್ಲಿ ಇಟ್ಟುಕೊಂಡಿದ್ದಾಗ ಶಂಖದ ಕಿವಿಯು ಬಲಗಡೆ ಇದ್ದರೆ ಅದು ಬಲಮುರಿ ಶಂಖ. ಶಂಖದ ಕಿವಿಯು ಎಡಬದಿಗೆ ಇದ್ದರೆ ಅದು ಎಡಮುರಿ ಶಂಖ, ಸಾಮಾನ್ಯವಾಗಿ ಬಲಮುರಿ ಶಂಖವನ್ನು ದೇವರ ಪೂಜೆಯಲ್ಲಿ ಅಭಿಷೇಕ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಎಡಮುರಿ ಶಂಖವನ್ನು ಪೂಜೆಯ ಆರಂಭ, ಅಭಿಷೇಕ ಹಾಗೂ ಮಂಗಳಾರತಿಯ ಸಮಯಗಳಲ್ಲಿ ಊದಲು ಬಳಸುತ್ತಾರೆ.

2 ಸಾವಿರ ಮಂದಿಗೆ ಅವಕಾಶ; ಸಿಎಂ ಶಂಖನಾದದಲ್ಲಿ ಭಾಗಿ
ಬೆಟ್ಟದ ಮೂರ್ತಿಯ ಪಾದದಡಿಯಲ್ಲಿ 2 ಸಾವಿರ ಮಂದಿ ಶಂಖನಾದಗೈಯ್ಯುವವರಿಗೆ ಅವಕಾಶವಿದೆ. ಈಗಾಗಲೇ 1 ಸಾವಿರ ಮಂದಿ  ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸ್ಥಳೀಯರೇ ಹೆಚ್ಚಿದ್ದಾರೆ. ಹಿರಿಯ ನಾಗರಿಕರೂ ಸೇರಿ ಭಜನತಂಡದ ಸದಸ್ಯರು ಇದರಲ್ಲಿ ಸೇರಿದ್ದಾರೆ. ಹೊರಭಾಗದಿಂದಲೂ ಮತ್ತಷ್ಟೂ ಮಂದಿ ಹೆಸರು ನೋಂದಾಯಿಸಿಕೊಳ್ಳಲು ಸಂಪರ್ಕ ಮಾಡುತ್ತಿದ್ದಾರೆ. ಶಂಖನಾದದಲ್ಲಿ ಸಿಎಂ ಕೂಡ ಭಾಗಿಯಾಗಲಿದ್ದಾರೆ.

220 ಭಜನ ತಂಡ ನೋಂದಣಿ
ಜ.28ರಂದು ಭಜನೆ ಕೀರ್ತನೆ ಮೆರವಣಿಗೆಯೂ ಇರಲಿದೆ. 250ಕ್ಕೂ ಅಧಿಕ ಸ್ಥಳೀಯ ಹಾಗೂ ಜಿಲ್ಲೆ, ಹೊರಜಿಲ್ಲೆಗಳ ಭಜನ ತಂಡಗಳು ಭಾಗವಹಿಸುತ್ತಿವೆ. 220 ತಂಡಗಳು ಹೆಸರು ನೋಂದಾಯಿಸಿ ಕೊಂಡಿವೆ.

ಶಂಖದಿಂದ ಏಕಾಗ್ರತೆ
ಶಂಖದಿಂದ ಬರುವ ನಾದವು ಸ್ವಾರಸ್ಯಕರ. ಹೇಗೆಂದರೆ ಕಂಪಿತಗೊಂಡ ಊದಿದ ಉಸಿರು ಶಂಖದ ಒಳಗಿನ ಮತ್ತು ಬಳಸಿದ ಪಥದಲ್ಲಿ ಚಲಿಸಿ ಏಕಕಂಪನದಿಂದ ಮಾಧುರ್ಯತೆ ತುಂಬಿ ಹೊರಬರುತ್ತದೆ. ಮನಸ್ಸಿನ ಏಕಾಗ್ರತೆ ಅದು ಕಾರಣವಾಗುತ್ತದೆ. ಸಂಗೀತ ಪ್ರಪಂಚದಲ್ಲಿಯೂ ಶಂಖವನ್ನು ಒಂದು ವಾಯುವಾದ್ಯವೆಂದು ಪರಿಗಣಿಸಲಾಗಿದೆ. ಶಂಖನಾದ ಊದುವ ಅಭ್ಯಾಸದಿಂದ ಉಸಿರಿನ ಮೇಲೆ ಹತೋಟಿ ಸಾಧ್ಯ.

ಬಾರಕೂರಿನ ಯುವಕನ ಶಂಖನಾದ
ಪರಶುರಾಮ ಲೋಕಾರ್ಪಣೆಯ ಶಂಖನಾದ ಕಾರ್ಯಕ್ರಮದಲ್ಲಿ ನಿರಂತರ 10ರಿಂದ 15 ನಿಮಿಷ ಕಾಲ ಶಂಖ ಊದುವ ಬಾರಕೂರಿನ ಮಂಜುನಾಥ ಆಚಾರ್ಯ ಎಂಬ ಯುವಕ ಭಾಗವಹಿಸುತ್ತಿದ್ದಾರೆ.

ಶಂಖ ನಾದದಿಂದ ಧೈರ್ಯ, ಆತ್ಮವಿಶ್ವಾಸ ಮುಂತಾದ ಸಕಾರಾತ್ಮಕ ಗುಣಗಳು ಮೈಗೂಡುತ್ತವೆ ಎನ್ನುವುದು ವೈಜ್ಞಾನಿಕ ಸಂಶೋಧನೆಗಳಿಂದ ಸತ್ಯವಾಗಿದೆ. ಹಲವಾರು ವೈಶಿಷ್ಟ್ಯತೆಗಳನ್ನು ಶಂಖನಾದ ಹೊಂದಿದೆ ಈ ಕಾರಣಕ್ಕೆ ಜೋಡಿಸಿಕೊಂಡಿದ್ದೇವೆ.
-ವಿ.ಸುನಿಲ್‌ಕುಮಾರ್‌, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next