Advertisement

ಕಾರ್ಕಳ, ಹೆಬ್ರಿ: ಸಮಾಜ ಕಲ್ಯಾಣಕ್ಕೆ ಇರುವುದೊಬ್ಬರೇ ಅಧಿಕಾರಿ!

06:49 PM Jan 05, 2022 | Team Udayavani |

ಕಾರ್ಕಳ: ಇಲ್ಲಿನ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎರಡು ತಾಲೂಕು ಕೇಂದ್ರ ವ್ಯಾಪ್ತಿಗೊಳಪಟ್ಟು ಕಾರ್ಕಳದ ಬಂಡಿಮಠದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ತಾ| ಕಚೇರಿಯಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಸಹಾಯಕ ನಿರ್ದೇಶಕ ಗ್ರೇಡ್‌-2 ಒಂದು ಹುದ್ದೆ ಮಾತ್ರವೇ ಭರ್ತಿ ಯಾಗಿದ್ದು, ಕೆಲವೊಮ್ಮೆ ಅಧಿಕಾರಿಯೇ ಇಲ್ಲಿ ಬಾಗಿಲು ತೆರೆಯುವ, ಬೀಗ ಹಾಕಿ ಹೋಗುವ ಸ್ಥಿತಿಯಿದೆ.

Advertisement

ಕಾರ್ಕಳ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಮಂಜೂರಾತಿ ಹುದ್ದೆ 6 ಆಗಿದ್ದು, ಭರ್ತಿ ಯಾಗಿರುವುದು ಕೇವಲ 1 ಹುದ್ದೆ ಮಾತ್ರ. ಅದು ಸಹಾಯಕ ನಿರ್ದೇಶಕ ಗ್ರೇಡ್‌-2 ಹುದ್ದೆ. ಮ್ಯಾನೇಜರ್‌-1, ದ್ವಿ.ದರ್ಜೆ ಸಹಾಯಕ-1, ದ್ವಿತಿಯ ದರ್ಜೆ ಸಹಾಯಕ-2, ಡಿ. ಗ್ರೂಪ್‌ ನೌಕರ-1 ಹುದ್ದೆ ಸೇರಿ 5 ಹುದ್ದೆಗಳು ಖಾಲಿ ಬಿದ್ದಿವೆ. ಹೊರಗುತ್ತಿಗೆಯಲ್ಲಿ ಒಬ್ಬರು ಬೆರಳಚ್ಚುಗಾರ್ತಿ, ಇನ್ನೋರ್ವ ಜವಾನ ಮಾತ್ರವೇ ಇದ್ದು. ಖಾಯಂ ನೆಲೆಯ 1 ಹುದ್ದೆ ಹೊರತುಪಡಿಸಿ ಉಳಿದೆಲ್ಲ ಹುದ್ದೆಗಳು ಖಾಲಿ ಬಿದ್ದಿವೆ.

ಕಾರ್ಕಳ ತಾ| ಬಂಡಿಮಠ, ಪೊಲೀಸ್‌ ಠಾಣೆ ಬಳಿ ಕಾಲೇಜು ಹಾಸ್ಟೆಲ್‌, ಪೊಲೀಸ್‌ ಠಾಣೆ ಬಳಿ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌, ಅಜೆಕಾರು, ಬಜಗೋಳಿ, ನಿಟ್ಟೆ ಕಾಲೇಜು ಹಾಸ್ಟೆಲ್‌ ಸೇರಿ 6 ವಸತಿ ನಿಲಯಗಳಿವೆ, ಹೆಬ್ರಿ ತಾ|ನಲ್ಲಿ ಮೆಟ್ರಿಕ್‌ ಪೂರ್ವ-1 ಹಾಗೂ ಆಶ್ರಮ ಶಾಲೆ ಸೇರಿ ಒಟ್ಟು ಉಭಯ ತಾಲೂಕಿನಲ್ಲಿ ಎಂಟು ವಸತಿ ಶಾಲೆಗಳಿವೆ.
ಅಧಿಕಾರಿ ಒಬ್ಬರೇ ಇರುವುದರಿಂದ ಅವರು ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡುವುದು, ವಸತಿ ನಿಲಯಗಳ ಸಮಸ್ಯೆ ಆಲಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಕಚೇರಿಗೆ ಅಧಿಕಾರಿ ಇರುವ ಸಮಯ ಕೇಳಿಕೊಂಡು ಬರಬೇಕಾದ ಪರಿಸ್ಥಿತಿ ಇದೆ.

ವಸತಿ ನಿಲಯಗಳ ಸಮಸ್ಯೆ ಆಲಿಸುವುದು, ಎಸ್ಸಿ ಕಾಲನಿಗಳಿಗೆ ಬಿಡುಗಡೆಯಾಗುವ ಅನುದಾನ ಕಾಮಗಾರಿ ಸೇರಿದಂತೆ ನಾನಾ ಕೆಲಸ ಕಾರ್ಯಗಳ ಜವಾಬ್ದಾರಿ ಎಲ್ಲವನ್ನು ಇಲಾಖೆಯ ಒಬ್ಬ ಅಧಿಕಾರಿಯೇ ನಿರ್ವಹಿಸಬೇಕಿದೆ. ಜತೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳಿಗೆ ಆಗಿಂದಾಗೆ ಮಾಹಿತಿ ಒದಗಿಸುವುದು. ಕಡತಗಳನ್ನು ಪರಿಶೀಲಿಸಿ ವರದಿ ನೀಡುವುದು, ಜಿಲ್ಲಾ, ತಾ| ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವುದು ಇದೆಲ್ಲದಕ್ಕೂ ಕಷ್ಟಪಡಬೇಕಿದೆ. ನಾನಾ ಸಮಸ್ಯೆ ಇಟ್ಟುಕೊಂಡು ಕಚೇರಿಗೆ ಬರುವ ಸಾರ್ವಜನಿಕರು, ನಿಲಯ ಪಾಲಕರು, ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮೇಜಿನ ಮೇಲಿದೆ ಕಡತ ರಾಶಿ
ಕಚೇರಿಯಲ್ಲಿ ಸಿಬಂದಿ ಇಲ್ಲದೆ ಕಡತಗಳು ಮೇಜಿನ ಮೇಲೆ ರಾಶಿ ಬಿದ್ದಿದೆ. ಅವುಗಳನ್ನು ಕಪಾಟಿನೊಳಕ್ಕೆ ಇಟ್ಟಲ್ಲಿ ಹುಡುಕಾಟಕ್ಕೆ ವಿಳಂಬ ವಾಗುತ್ತದೆ. ಕಡತ ಸಿಗುವುದಿಲ್ಲ ಎಂದು ಮೇಜು ಮೇಲೆಯೇ ಇರಿಸಲಾಗಿದೆ.

Advertisement

ಹೆಬ್ರಿಯಲ್ಲಿ ವಾರ್ಡನ್‌ ಕಂ ಮ್ಯಾನೇಜರ್‌
ಸಿಬಂದಿ ಕೊರತೆಯಿಂದಾಗಿ ಆಡಳಿತ ನಿರ್ವಹಣೆಗೆ ಸಮಸ್ಯೆಯಾಗಿದ್ದು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅನಾಥವಾದಂತಾಗಿದೆ. ಹೆಬ್ರಿ ತಾಲೂಕಿನಲ್ಲಿ ವಾರ್ಡನ್‌ ಒಬ್ಬರು ಅಲ್ಲಿ ಮ್ಯಾನೇಜರ್‌ ಕಾರ್ಯವನ್ನು ಅವರು ನಿರ್ವಹಿಸುತ್ತ ಸಾರ್ವಜನಿಕರಿಗೆ ಸ್ಪಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಅಧಿಕಾರಿಯೇ ಬೀಗ
ತೆಗೆದು, ಹಾಕಬೇಕು
ಸಮಾಜ ಕಲ್ಯಾಣ ಅಧಿ ಕಾರಿ ಕಾರ್ಕಳ ಜತೆಗೆ ಹೆಬ್ರಿ ತಾಲೂಕಿನಲ್ಲೂ ಕಾರ್ಯ ನಿರ್ವಹಿಸಬೇಕು. ವಾರದಲ್ಲಿ ಬಹುತೇಕ ಫೀಲ್ಡ್‌ನಲ್ಲಿರುತ್ತಾರೆ. ಮೀಟಿಂಗ್‌, ತರಬೇತಿಗಳಿಗೆ ಹೋಗುವುದರಲ್ಲಿ ದಿನ ಕ‌ಳೆಯುತ್ತಿವೆ. ತಾ.ಪಂ. ಸಾಮಾನ್ಯ ಸಭೆ, ಕೆಡಿಪಿ ಸಭೆಗಳಿಗೆ ಹಾಜರಾಗಬೇಕು. ಬಾಕಿ ಸಮಯದಲ್ಲಿ ಕಚೇರಿ ಇತ್ಯಾದಿ ಕೆಲಸಗಳನ್ನು ಮಾಡಬೇಕಿದೆ. ಒಂದೊಮ್ಮೆ ಕರ್ತವ್ಯಕ್ಕೆಂದು ಹೊರಗೆ ಹೋಗಿ ತಡವಾಗಿ ರಾತ್ರಿ ಕಚೇರಿಗೆ ಬಂದಲ್ಲಿ , ಬೆಳಗ್ಗೆ ಬೇಗ ಹೋಗಬೇಕಾದಲ್ಲಿ ಸ್ವತಃ ಅಧಿಕಾರಿಯೇ ಬೀಗ ತೆಗೆದು, ಹಾಕುವುದು ಮಾಡುತ್ತಾರೆ. ಸಿಬಂದಿ ಕೊರತೆಯಿಂದ ಕೇಂದ್ರ ಮತ್ತು ರಾಜ್ಯಸರಕಾರದಿಂದ ಜಾರಿಯಾಗುವ ಯೋಜನೆಗಳು ನನೆಗುದಿಗೆ ಬೀಳುತ್ತಿವೆ.

ಸಾಧ್ಯವಾದಷ್ಟು ನಿರ್ವಹಣೆ
ಕಚೇರಿಯಲ್ಲಿ ಸಿಬಂದಿಯಿಲ್ಲದೆ ಕಷ್ಟವಾಗುತ್ತಿದೆ ನಿಜ. ಎರಡು ತಾ|ಗಳ ನಿರ್ವಹಣೆ ಮಾಡು ವುದು ಕಷ್ಟವಾದರೂ ನಿಭಾಯಿಸುವ ಪ್ರಯತ್ನ ನಡೆಸುತ್ತಿದ್ದೇನೆ. ಸಮಯವನ್ನು ಹೊಂದಿಸಿಕೊಂಡು ಸಾಧ್ಯವಾದಷ್ಟು ನಿರ್ವಹಣೆ ಮಾಡಲಾಗುತ್ತಿದೆ.
ವಿಜಯ ಕುಮಾರ್‌, ಸಹಾಯಕ ನಿರ್ದೇಶಕ
ಸಮಾಜ ಕಲ್ಯಾಣ ಇಲಾಖೆ ಕಾರ್ಕಳ

ಸಚಿವರಿಗೆ ಮನವಿ
ಇಲಾಖೆಯಲ್ಲಿ ಖಾಯಂ ಹುದ್ದೆಗಳು ಇಲ್ಲದೆ ದಲಿತ ಸಮುದಾಯದ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ನಿತ್ಯವೂ ಕಚೇರಿಗೆ ಅಲೆದಾಡಬೇಕಿದೆ. ಇರುವ ಅಧಿಕಾರಿಗೆ ಒತ್ತಡ ಹೆಚ್ಚಿದೆ. ಕಚೇರಿಗೆ ಪೂರ್ಣ ಕಾಲಿಕ ಸಿಬಂದಿ ಭರ್ತಿ ಮಾಡುವ ಬಗ್ಗೆ ಈಗಾಗಲೇ ಕ್ಷೇತ್ರದ ಶಾಸಕರು, ಸಚಿವ ವಿ.ಸುನಿಲ್‌ಕುಮಾರ್‌ಗೆ ಮನವಿ ಸಲ್ಲಿಸಿದ್ದೇವೆ.
-ಅಣ್ಣಪ್ಪ ನಕ್ರೆ, ದಲಿತ ಮುಖಂಡ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next