Advertisement

ಕಾರ್ಕಳ, ಹೆಬ್ರಿ: 10 ತಿಂಗಳಿನಿಂದ ಬಾರದ ಮಾಸಾಶನ

01:45 AM Dec 06, 2019 | mahesh |

ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ.

Advertisement

ವೃದ್ಧಾಪ್ಯ, ವಿಧವಾ ವೇತನ, ಅಂಗವಿಕರಿಗೆ ಸಿಗುವ ವೇತನ ಸೇರಿದಂತೆ ಹಲವು ಮಾಸಾಶನಗಳು ಬಾರದೆ ಫಲಾನುಭವಿಗಳು ಅಂಚೆಕಚೇರಿ, ಗ್ರಾಮ ಪಂಚಾಯತ್‌, ತಾಲೂಕು ಕಚೇರಿಗಳಿಗೆ ಸುತ್ತುವಂತಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಅಂಗವಿಕಲರು ಸರಕಾರದಿಂದ ಬರುವ ತಿಂಗಳ ಮಾಸಾಶನದ ಮೇಲೆ ಅವಲಂಬಿತರಾಗಿದ್ದು, ಕಳೆದ 8 ತಿಂಗಳಿನಿಂದ ಬಾರದೇ ಅವರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.

ಕಾರ್ಕಳ, ಹೆಬ್ರಿ ತಾಲೂಕಿನ ಎಲ್ಲ ಗ್ರಾ.ಪಂ. ಮಟ್ಟದಲ್ಲಿ ಈ ಸಮಸ್ಯೆ ಇದೆ. ಈ ಬಗ್ಗೆ ಫಲಾನುಭವಿಗಳು ಸ್ಥಳೀಯ ಪಂಚಾಯತ್‌ ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದ್ದು ಅವರಿಂದ ಅರ್ಜಿ ಪಡೆದು ಸಂಬಂಧಪಟ್ಟವರಿಗೆ ಕಳುಹಿಸಿದ್ದಾರೆ.

ಬ್ಯಾಂಕ್‌ ಖಾತೆ ನಂಬರ್‌ ವ್ಯತ್ಯಯ
ಫಲಾನುಭವಿಗಳು ಹಣ ವರ್ಗಾವಣೆ ಮಾಡಲು ನೀಡಿದ ಬ್ಯಾಂಕ್‌ ಖಾತೆ ಸಂಖ್ಯೆಯಲ್ಲಿ ವ್ಯತ್ಯಯಗೊಂಡು ಕೆಲವೊಂದು ಜನರಿಗೆ ಹಣ ವರ್ಗಾವಣೆಯಾಗಿಲ್ಲ. ಅಲ್ಲದೆ ಕೆಲವೊಂದು ಹೆಸರು ಒಂದೇ ರೀತಿ ಇರುವುದರಿಂದ ಒಂದೇ ಖಾತೆಗೆ ಇನ್ನೊಬ್ಬರ ಮಾಸಾಶನ ವರ್ಗಾವಣೆಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಯಿಂದಲೇ ಆದ ತೊಂದರೆ : ದೂರು
ನಾವು ಸರಿಯಾಗಿ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿದ್ದೇವೆ. ಆದರೆ ಇಲಾಖೆಯಲ್ಲಿ ಎಂಟ್ರಿ ಮಾಡುವಾಗ ಖಾತೆಯನ್ನು ತಪ್ಪಾಗಿ ನಮೂದು ಮಾಡಿದ ಪರಿಣಾಮ ಸಮಸ್ಯೆಯಾಗಿದೆ. ಇದು ಇಲಾಖೆಯಿಂದ ಆದ ತೊಂದರೆ ಎಂದು ಫಲಾನುಭವಿಗಳು ದೂರಿದ್ದಾರೆ.

Advertisement

ಔಷಧಕ್ಕೂ ಹಣವಿಲ್ಲ
ಅನಾರೋಗ್ಯದಿಂದ ಬಳಲುತ್ತಿರುವ ಮುದ್ರಾಡಿ ನಿವಾಸಿ ಸುಂದರಿ ಪ್ರತಿ ತಿಂಗಳು ಮಾಸಾಶನಕ್ಕೆ ಕಾದು ಅದರಿಂದ ತನಗೆ ಬೇಕಾದ ಔಷಧ ಪಡೆಯುತ್ತಿದ್ದರು. ಇದೀಗ 10 ತಿಂಗಳಿಂದ ಮಾಸಾಶನ ಬಾರದೆ ಇರುವುದರಿಂದ ಕಾರ್ಕಳ ತಹಶೀಲ್ದಾರ್‌ ಅವರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಇದುವರೆಗೂ ಬಂದಿಲ್ಲ. ಬಡತನದಿಂದ ಜೀವನ ಸಾಗಿಸುವ ನಾನು ಇನ್ನೊಬ್ಬರಲ್ಲಿ ಸಾಲ ಮಾಡಿ ಔಷಧ ಪಡೆಯುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಪ್ಪು ಅಕೌಂಟ್‌ ನಂಬರ್‌ನ ಸಮಸ್ಯೆ
ಈಗ ನಮ್ಮಲ್ಲಿ ಬ್ರಹ್ಮಾವರ -15, ಬೈಂದೂರು-39, ಕಾರ್ಕಳ-64,  ಕುಂದಾಪುರ-22, ಉಡುಪಿ-28 ಸೇರಿದಂತೆ ಒಟ್ಟು 168 ಫಲಾನುಭವಿಗಳ ಸಮಸ್ಯೆಗಳು ಇತ್ಯರ್ಥವಾಗಲು ಬಾಕಿ ಇವೆ. ಈ ಫೈಲ್‌ಗ‌ಳನ್ನು ಬೆಂಗಳೂರಿನ ಸಾಮಾಜಿಕ ಭದ್ರತಾ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದೆ. ಈ ತಿಂಗಳ
ಅಂತ್ಯದೊಳಗೆ ಬಾಕಿ ಇರುವ ಎಲ್ಲರಿಗೂ ಮಾಸಾಶನ ಬಂದು ಸಮಸ್ಯೆ ಬಗೆಹರಿಯಲಿದೆ.
-ರವಿಶಂಕರ್‌, ಉಡುಪಿ ಜಿಲ್ಲಾ ಕಚೇರಿಯ ಮಾಸಾಶನ ವಿಭಾಗದ ಮುಖ್ಯಸ್ಥರು

ಇಲಾಖಾಧಿಕಾರಿಗಳು ಸ್ಪಂದಿಸಿಲ್ಲ
8 ತಿಂಗಳ ಹಿಂದೆ ಮಾಸಾಶನದ ಹಣ ಕೈಗೆ ಸಿಗುತ್ತಿದ್ದು , ಅಂಚೆಕಚೇರಿಯ ಪಾಸ್‌ಬುಕ್‌ ನೀಡಿದ ಅನಂತರ ಖಾತೆಗೆ ಹಣ ಜಮೆಯಾಗುತ್ತಿಲ್ಲ . ಪಂಚಾಯತ್‌ನಿಂದ ಎಲ್ಲ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ .
-ಕಮಲ ನಾಯ್ಕ,, ಮುದ್ರಾಡಿ

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next