ಕಾರ್ಕಳ: ಸರಕಾರಿ ಬಸ್ ಚಾಲಕ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಸಂಚಾರದ ಸಮಯದ ವಿಚಾರಕ್ಕೆ ಜಗಳ ನಡೆದು ಇಬ್ಬರೂ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಜ.30ರಂದು ನಡೆದಿದೆ. ಅಚ್ಚರಿಯೆಂದರೆ ಸಾರ್ವಜನಿಕರ ಮುಂದೆಯೇ ಇಬ್ಬರು ತುಂಬಾ ಹೊತ್ತು ಹೊಡೆದಾಡಿಕೊಂಡರೂ ಯಾರೂ ಕೂಡ ಜಗಳ ಬಿಡಿಸಲು ಮುಂದಾಗಲಿಲ್ಲ.
ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಹೊಡೆದಾಟ ನಡೆದಿರುವುದು. ಸಮಯದ ವಿಚಾರ ಮತ್ತು ಬಸ್ಗೆ ಸೈಡ್ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ಸರಕಾರಿ ಬಸ್ ಚಾಲಕನಿಗೆ ಖಾಸಗಿ ಬಸ್ ಕಂಡಕ್ಟರ್ ಅವಾಚ್ಯವಾಗಿ ನಿಂದಿಸಿದ್ದ ಎನ್ನಲಾಗಿದೆ.
ಕೋಪಗೊಂಡ ಚಾಲಕ ಸೈಯದ್, ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಇಬ್ಬರೂ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಇಬ್ಬರ ಜಗಳವನ್ನು ಬಸ್ ನಿಲ್ದಾಣದಲ್ಲಿದ್ದ ನೂರಾರು ಜನ ನೋಡುತ್ತಲೇ ನಿಂತಿದ್ದರು. ಸದ್ಯ ಇವರ ಗಲಾಟೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.