Advertisement

Karkala: ಬಂಡಿಮಠ ಜಂಕ್ಷನ್‌ನಲ್ಲಿ ಅಪಘಾತಗಳ ಕಾಟ

02:42 PM Oct 21, 2024 | Team Udayavani |

ಕಾರ್ಕಳ: ಕಾರ್ಕಳ-ಉಡುಪಿ ಹೆದ್ದಾರಿಯ ಬಂಡಿಮಠ ತಾಲೂಕು ಕಚೇರಿ ರಸ್ತೆಯ ಮುಂಭಾಗದ ಜಂಕ್ಷನ್‌ ಅಪಾಯದ ಕೇಂದ್ರ ಬಿಂದುವಾಗಿ ಬದಲಾಗಿದೆ. ಪ್ರತಿದಿನವೂ ಇಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ಕಾರ್ಕಳದಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸುವ ಹೆದ್ದಾರಿ ಮಧ್ಯೆ ಪೆರ್ವಾಜೆ ಹಾಗೂ ತಾಲೂಕು ಕಚೇರಿ ಮುಂಭಾಗದಿಂದ ಸಂಧಿಸುವ ಈ ಜಂಕ್ಷನ್‌ ಅಪಾಯಕಾರಿಯಾಗಿದೆ. ನಗರದಿಂದ ತೆರಳುವ ವಾಹನಗಳು, ತಾಲೂಕು ಕಚೇರಿಯಿಂದ ಬರುವ ವಾಹನಗಳು, ಪೆರ್ವಾಜೆ ಕಡೆಯಿಂದ ಬರುವ ವಾಹನಗಳ ಸವಾರರೆಲ್ಲರಿಗೂ ಇಲ್ಲಿ ಉಂಟಾಗುವ ಗೊಂದಲವೇ ಈ ಜಂಕ್ಷನ್‌ ಅಪಘಾತದ ಕೂಪವಾಗಲು ಕಾರಣ.

Advertisement

ಗೊಂದಲದ ಗೂಡು ವೃತ್ತ
ಉಡುಪಿ-ಕಾರ್ಕಳ ಮಾರ್ಗವಾಗಿ ಹಲವಾರು ಸರಕಾರಿ, ಖಾಸಗಿ ಬಸ್‌ಗಳು ಓಡಾಡುತ್ತವೆ. ಇನ್ನು ಮುಖ್ಯಪೇಟೆ ಇಕ್ಕಟ್ಟಾಗಿರುವ ಕಾರಣದಿಂದ ಕಾರ್ಕಳದಿಂದ ಹೊರಡುವ ಬಸ್‌ಗಳು ಮಾರುಕಟ್ಟೆ ರಸ್ತೆ ಮೂಲಕ ಪೆರ್ವಾಜೆ ಮಾರ್ಗವಾಗಿ ಸಂಚಾರ ಬೆಳೆಸುತ್ತವೆ. ಇವು ಬಂಡಿಮಠ ಜಂಕ್ಷನ್‌ ಮೂಲಕ ಉಡುಪಿ ಕಡೆಗೆ ತೆರಳುತ್ತವೆ. ಬೈಪಾಸ್‌ ಕಡೆಯಿಂದ ತಾಲೂಕು ಕಚೇರಿ ಮೂಲಕವೂ ನೂರಾರು ವಾಹನ ಸಂಚಾರ ಬೆಳೆಸುತ್ತಿರುತ್ತವೆ. ಈ ಮೂರು ಕಡೆಯಿಂದ ವಾಹನಗಳು ಬಂದು ಸೇರುವ ಈ ಜಂಕ್ಷನ್‌ನಲ್ಲಿ ಗೊಂದಲಗಳೇ ಹೆಚ್ಚಿರುತ್ತದೆ. ಮೂರು ಕಡೆಯಿಂದ ವಾಹನಗಳು ವೇಗವಾಗಿ ಬಂದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತದೆ. ದ್ವಿಚಕ್ರ ವಾಹನಗಳ ಅಪಘಾತವಂತೂ ಇಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ.

ಎತ್ತಕಡೆಯಿಂದ ವಾಹನ ಬರುತ್ತದೆ ತಿಳಿಯುತ್ತಿಲ್ಲ
ಜಂಕ್ಷನ್‌ನಲ್ಲಿ ಸರಿಯಾದ ಮಾರ್ಗಸೂಚಿಯೂ ಇಲ್ಲ. ಇದರಿಂದ ಉಡುಪಿ, ಹೆಬ್ರಿ ಮಾರ್ಗವಾಗಿ ಬರುವವರು ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ಪಾದಚಾರಿಗಳಿಗೂ ಯಾವ ಕಡೆಯಿಂದ ವಾಹನಗಳು ಬರುತ್ತಿವೆ ಎನ್ನುವ ಲೆಕ್ಕಾಚಾರವೂ ಸಿಗದ ಕಾರಣ ಹೆಚ್ಚಿನ ಸಂಖ್ಯೆಯ ಪಾದಚಾರಿಗಳೂ ಈ ಸರ್ಕಲ್‌ನಲ್ಲಿ ನಡೆಯುವ ಅಪಘಾತಕ್ಕೆ ಒಳಗಾಗುವ ಸಂಭವಗಳಿವೆ.

ಸೂಕ್ತ ರಕ್ಷಣ ಕ್ರಮಗಳು ಅಗತ್ಯ

  • ಜಂಕ್ಷನ್‌ ಪಕ್ಕದಲ್ಲೆ ಬಂಡಿಮಠ ಸಾರ್ವಜನಿಕ ಬಸ್‌ ನಿಲ್ದಾಣವೂ ಇದ್ದು ಶಾಲಾ ಮಕ್ಕಳು, ವಿವಿಧೆಡೆ ಕೆಲಸಕ್ಕೆ ತೆರಳುವವರು, ತಾಲೂಕು ಕಚೇರಿಗೆ ಬರುವವರು ಬಸ್‌ ಹಿಡಿಯಲು ಅಡ್ಡ ದಾಟುತ್ತಿರುತ್ತಾರೆ. ಶಾಲಾ ಮಕ್ಕಳು ಇಲ್ಲಿ ಓಡಾಡುತ್ತಿರುತ್ತಾರೆ.
  • ಜಂಕ್ಷನ್‌ನಲ್ಲಿ ನಾಲ್ಕು ಕಡೆಯಿಂದ ಬರುವ ವಾಹನಗಳು ಯಾವ ಕಡೆಗೆ ತಿರುವು ತೆಗೆದುಕೊಳ್ಳುತ್ತಾರೆ ಎನ್ನುವ ಲೆಕ್ಕಾಚಾರವು ಸಿಗದ ಕಾರಣವೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ನಡೆಯುತ್ತಿವೆ.
  • ಜಂಕ್ಷನ್‌ನ ಪಕ್ಕದಲ್ಲೇ ಆಟೋ ಪಾರ್ಕಿಂಗ್‌ ಕೂಡ ಇದೆ. ಇಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಾರೆ. ಅವರಿಗೆ ಬೇರೆ ವ್ಯವಸ್ಥೆಯೂ ಇಲ್ಲ.

ಮಾರ್ಗಸೂಚಿ ಅಳವಡಿಸಲು ಕ್ರಮ
ವೃತ್ತದಲ್ಲಿ ಮಾರ್ಗಸೂಚಿ ಅಳವಡಿಕೆ ಸಂಬಂಧ ಎಂಜಿನಿಯರ್‌ ಜತೆ ಮಾತುಕತೆ ನಡೆಸಿ ಸೂಕ್ತ ಜಾಗ ಗುರುತಿಸಿ ಅಳವಡಿಸಲು ಕ್ರಮ ವಹಿಸಲಾಗುವುದು. ಅಪಘಾತ ತಡೆಗೆ ಪುರಸಭೆಯಿಂದ ಕೈಗೊಳ್ಳಬೇಕಿರುವ ಕ್ರಮಗಳನ್ನು ಅನುಸರಿಸಲಾಗುವುದು
-ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

Advertisement

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next