Advertisement

ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಳ

01:02 AM Feb 28, 2023 | Team Udayavani |

ಮಂಗಳೂರು: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸೋಮವಾರವೂ ಬಿಸಿಲಿನ ಝಳ ಬಲವಾಗಿತ್ತು. ಮುಂಜಾನೆ ಗ್ರಾಮೀಣ ಭಾಗದ ಕೆಲವೆಡೆ ಮಂಜಿನಿಂದ ಕೂಡಿದ ವಾತಾವರಣವಿದ್ದರೂ ಹೊತ್ತೇರುತ್ತಿದ್ದಂತೆ ಬಿಸಿಲ ಬೇಗೆ, ಉರಿ ಸೆಕೆ ಹೆಚ್ಚುತ್ತಿದೆ. ಬಿಸಿಲು ಝಳ ಹೆಚ್ಚಾಗುತ್ತಿರುವುದರಿಂದ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿ ಸುವ ಅಗತ್ಯವಿದ್ದು, ಮಧ್ಯಾಹ್ನದ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಕಿವಿಮಾತು ಹೇಳಿದ್ದಾರೆ.

Advertisement

ಸೋಮವಾರ ಮಂಗಳೂರಿನಲ್ಲಿ ದಿನದ ಗರಿಷ್ಠ ಉಷ್ಣಾಂಶ 36.4 ಡಿಗ್ರಿ ಸೆ. ಮತ್ತು ಕನಿಷ್ಠ 22.3 ಡಿಗ್ರಿ ಸೆ. ದಾಖಲಾಗಿದೆ. ಗರಿಷ್ಠ ತಾಪ 37 ಡಿಗ್ರಿ ಸೆ. ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಸಿಲಿನಿಂದ ತಪ್ಪಿಸಿಕೊಳ್ಳಿ: ಡಿಎಚ್‌ಒ
ಬಿಸಿಲು ಝಳ ಹೆಚ್ಚಾಗುತ್ತಿರುವುದರಿಂದ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಮಧ್ಯಾಹ್ನದ ಬಿಸಿಲನ್ನು ತಪ್ಪಿಸಿಕೊಳ್ಳುವುದು ಉತ್ತಮ. ಅನಿವಾರ್ಯ ವಾದಲ್ಲಿ ಛತ್ರಿ ಬಳಕೆ ಮಾಡಬಹುದು. ಬಿಸಿಲಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ, ಸೂರ್ಯಾಘಾತ ಆಗುವ ಸಾಧ್ಯತೆ ಇದ್ದು, ಹೆಚ್ಚು ನೀರು ಸೇವನೆ ಅಗತ್ಯ. ಲಿಂಬೆ ಪಾನಕ ಸೇವನೆಯಿಂದ ನಿರ್ಜಲೀ ಕರಣ ತಡೆಯುವುದರ ಜತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹತ್ತಿ ಬಟ್ಟೆ ಹಾಕಿಕೊಳ್ಳುವುದು ಹೆಚ್ಚು ಉತ್ತಮ; ಇದರಿಂದ ಸನ್‌ಬರ್ನ್ ಉಂಟಾಗುವುದನ್ನೂ ತಡೆಯಬಹುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಕಾಸರಗೋಡು: ಬಿಸಿಲಿಗೆ ಮೈಯೊಡ್ಡದಂತೆ ಸೂಚನೆ
ಕಾಸರಗೋಡು: ಕೇರಳ ರಾಜ್ಯದಲ್ಲಿ ಬೇಸಗೆ ಕಾಲ ಆರಂಭಗೊಂಡಿದ್ದು, ಇದರ ಪರಿಣಾಮವಾಗಿ ಉಷ್ಣತೆಯ ಮಟ್ಟ ಹೆಚ್ಚಾಗತೊಡಗಿದೆ. ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಬಿಸಿಲಿಗೆ ಮೈಯೊಡ್ಡದಂತೆ ರಾಜ್ಯ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ.

ತೀವ್ರ ಹೆಚ್ಚುತ್ತಿರುವ ಬಿಸಿಲ ಝಳ ದೇಹವನ್ನು ಸುಡುವಂತೆ ಮಾಡಲಿದೆ. ಜತೆಗೆ ಸುಟ್ಟ ಗಾಯಗಳೂ ಉಂಟಾಗಲಿದೆ. ಇಂತಹ ಸೂರ್ಯಾಘಾತ ಸಾಂಕ್ರಾಮಿಕ ರೋಗ ಹರಡಲು ದಾರಿ ಮಾಡಕೊಡಲಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸದಿದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಇದೆ.

Advertisement

ಹಿರಿಯ ನಾಗರಿಕರು, ಮಕ್ಕಳು, ರೋಗಿಗಳು, ಗರ್ಭಿಣಿಯರು ಮತ್ತು ಬಿಸಿಲಲ್ಲಿ ದುಡಿಯುವವರು ಈ ವಿಷಯದಲ್ಲಿ ಅತೀ ಹೆಚ್ಚಿದ ಗಮನ ಹರಿಸಬೇಕೆಂದೂ ಆರೋಗ್ಯ ಇಲಾಖೆ ನೀಡಿದ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ. ಇಂತಹ ಸಮಯದಲ್ಲಿ ದಾಹ ಇಲ್ಲದಿದ್ದರೂ ಧಾರಾಳ ನೀರು ಕುಡಿಯಬೇಕು. ತಣ್ಣೀರನ್ನು ಕುಡಿಯುವವರು ಅದರ ಶುದ್ಧತೆಯ ಬಗ್ಗೆ ಗಮನ ಹರಿಸಬೇಕು. ಬಿಸಿಲಲ್ಲಿ ದುಡಿಯುವವರು ತಲೆಗೆ ಟೋಪಿ ಅಥವಾ ಕೊಡೆ ಉಪಯೋಗಿಸಬೇಕು. ಮಕ್ಕಳನ್ನು ಬಿಸಿಲಲ್ಲಿ ಆಟವಾಡಲು ಬಿಡಬಾರದು. ಬಿಸಿಲಲ್ಲಿ ನಿಲುಗಡೆಗೊಳಿಸುವ ವಾಹನಗಳಲ್ಲಿ ಮಕ್ಕಳನ್ನು ಕುಳಿತುಕೊಳ್ಳಿಸಬಾರದು. ಕಿಟಕಿ ಗಾಜುಗಳನ್ನು ಸದಾ ತೆಗೆದಿರಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next