Advertisement

ಕರಾವಳಿ ಬೈಪಾಸ್‌- ಮಲ್ಪೆ ರಾ.ಹೆ.: ಅಲ್ಲಲ್ಲಿ ರಸ್ತೆ ಗುಂಡಿ

03:29 PM Jun 15, 2022 | Team Udayavani |

ಮಲ್ಪೆ: ಕರಾವಳಿ ಬೈಪಾಸ್‌ ನಿಂದ ಮಲ್ಪೆವರೆಗೆ ರಸ್ತೆಯಲ್ಲಿ ಮಧ್ಯೆ ಅಲ್ಲಲ್ಲಿ ಗುಂಡಿಗಳಾಗಿ ನಿತ್ಯ ಈ ರಸ್ತೆಯ ಮೂಲಕ ಓಡಾಡುವ ಜನರು, ವಾಹನ ಸವಾರರು ರೋಸಿ ಹೋಗಿದ್ದಾರೆ.

Advertisement

ಕರಾವಳಿ ಬೈಪಾಸ್‌ನಿಂದ ಆದಿವುಡುಪಿ, ಪಂದುಬೆಟ್ಟು ಕಲ್ಮಾಡಿ, ಮಲ್ಪೆವರೆಗಿನ ರಸ್ತೆ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾಗಿ ಡಾಮರು ಕಂಡಿಲ್ಲ. ಕೆಲವೊಮ್ಮೆ ಅಲ್ಲಲ್ಲಿ ತೇಪೆ ಕಾಮಗಾರಿ ಮಾಡಿದ್ದರೂ ತಿಂಗಳಿಗಿಂತ ಹೆಚ್ಚು ಬಾಳಿಕೆ ಬಂದಿಲ್ಲ. ಜನರು ಅನಿವಾರ್ಯ ವಾಗಿ ಈ ರಸ್ತೆಯ ಅವಲಂಬನೆಯ ಪರಿಸ್ಥಿತಿಗೆ ಸಿಲುಕಿ ನಿತ್ಯ ಯಮಯಾತನೆ ಅನುಭವಿಸುವಂತಾಗಿದೆ.

ನಿತ್ಯ ಸಾವಿರಾರು ವಾಹನಗಳು: ಈ ರಸ್ತೆಯಲ್ಲಿ ಬಸ್‌, ಲಘು ವಾಹನಗಳು, ಬೈಕ್‌ಗಳು ನಿರಂತರ ಓಡಾಡುತ್ತವೆ. ಮೀನುಗಾರಿಕೆ ಬಂದರು, ಪ್ರವಾಸೋದ್ಯಮ ಕೇಂದ್ರ ಬೀಚ್‌, ಸೈಂಟ್‌ ಮೇರೀಸ್‌ ಐಲ್ಯಾಂಡ್‌ ಗೆ ಪ್ರವಾಸಿಗರು, ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡಬೇಕು. ಮಳೆಗಾಲ ಪ್ರಾರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತು ದುರಸ್ತಿ ನಡೆಸಿದರೆ ರಸ್ತೆಗೆ ಈ ದುಃ ಸ್ಥಿತಿ ಬರುತ್ತಿರಲಿಲ್ಲ. ಸುಮಾರು 3 ಕಿ.ಮೀ. ರಸ್ತೆ ಕ್ರಮಿಸುವುದೆಂದರೆ ಸಾಹಸ ಪಡಬೇಕು. ಹಲವು ಬಾರಿ ಬೈಕ್‌ ಸವಾರರು ಹೊಂಡ ತಪ್ಪಿಸುವ ಧಾವಂತದಲ್ಲಿ ಪರಸ್ಪರ ವಿರುದ್ಧ ದಿಕ್ಕಿಗೆ ಚಾಲನೆ ಮಾಡಿ ಅವಘಡಗಳಿಗೆ ಕಾರಣವಾಗಿದೆ. ಇಲ್ಲಿನ ರಸ್ತೆಗೆ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿಯಾಗಿದ್ದು ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ ಡಾಮರುಗಳು ಕಿತ್ತು ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಆಶೋಕ್‌ ಆದಿವುಡುಪಿ.

ಪ್ರಮುಖ ರಸ್ತೆಗಳೇ ನಿರ್ಲಕ್ಷ್ಯ: ಸರಕಾರ ಗಲ್ಲಿ, ಗಲ್ಲಿಗಳಲ್ಲಿ, ಓಣಿಗಳಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಿದೆ. ಆದರೆ ಪ್ರಮುಖ ರಸ್ತೆಗಳನ್ನು ನಿರ್ಲಕ್ಷಿಸಿರುವದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.

Advertisement

ವಾಟರ್‌ ಫಿಲ್ಲಿಂಗ್‌

ಇಲ್ಲಿನ ರಸ್ತೆ ವಿಸ್ತರಿಸುವ ಯೋಜನೆ ಇರುವುದರಿಂದ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ. ವಿಸ್ತರಣೆ ಯೋಜನೆ ಬೇರೆ ಬೇರೆ ಕಾರಣದಿಂದ ಸ್ವಲ್ಪ ವಿಳಂಬವಾಯಿತು. ಅತೀ ಬೇಗದಲ್ಲಿ ಹೊಸ ಟೆಂಡರ್‌ ಕರೆಯಲಾಗುವುದು. ಸದ್ಯ ಮಳೆಗಾಲ ಆರಂಭವಾಗಿದ್ದರಿಂದ ಈ ರಸ್ತೆಗೆ ವಾಟರ್‌ ಫಿಲ್‌ ಮಾಡಿ ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗುವುದು ಎಂದು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗೆ ಇನ್ನೂ ಸಮಸ್ಯೆ ಜಾಸ್ತಿ

ಒಂದು ಕಡೆ ರಸ್ತೆ ವಿಸ್ತರಣೆಯಾಗುತ್ತದೆ ಎಂದರೆ, ಇನ್ನೊಂದಡೆ ವಿಸ್ತರಣೆಯ ಟೆಂಡರ್‌ ವಿಳಂಬವಾಗಿದೆ ಎಂಬ ಮಾತು ಕೇಳಿ ಬರುತ್ತದೆ.ಇನ್ನೇನು ಇಂದೋ ನಾಳೆಯೋ ಆರಂಭವಾಗಲಿದ್ದು, ಅದಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮಳೆಯ ಅಬ್ಬರಕ್ಕೆ ರಸ್ತೆ ಗತಿ ಅಧೋಗತಿ. ಒಟ್ಟಾರೆ ಈ ಮಾರ್ಗ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿದದರೂ, ರಾ. ಹೆದ್ದಾರಿಯಾದ್ದರಿಂದ ನಗರಸಭೆ ಈ ರಸ್ತೆ ಅಭಿವೃದ್ಧಿಯಲ್ಲಿ ತಲೆ ಹಾಕುತ್ತಿಲ್ಲ.

ರಸ್ತೆ ಸಂಚಾರವೇ ಹಿಂಸೆ: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವುದೇ ಹಿಂಸೆಯೆನಿಸುತ್ತದೆ. ಮಳೆ ಬರುವ ಮೊದಲು ಇರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಸಾರ್ವಜನಿಕರು ಸಂಯಮ ಕಳೆದುಕೊಂಡು ಪ್ರತಿಭಟನೆಯ ಹಾದಿ ಹಿಡಿಯುವ ಮುನ್ನ ಸಂಬಂಧಪಟ್ಟ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. -ಭುವನೇಂದ್ರ ಮೈಂದನ್‌, ಬಂಕೇರಕಟ್ಟ -ನಟರಾಜ್‌ ಮಲ್ಪೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next