Advertisement

ಸ್ಕೂಟಿ ಢಿಕ್ಕಿ; ಪಾದಚಾರಿಗೆ ಗಾಯ, ಸಹ ಸವಾರ ಸಾವು

12:25 AM Sep 10, 2022 | Team Udayavani |

ಕಾಪು: ಮಲ್ಪೆಯಿಂದ ಮೀನುಗಾರಿಕೆ ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಉಚ್ಚಿಲಕ್ಕೆ ಬರುತ್ತಿದ್ದ ಸ್ಕೂಟಿ ಪಾದಚಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟಿ ಸಹಸವಾರ ಮೃತಪಟ್ಟು, ಪಾದಚಾರಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

Advertisement

ಅಪಘಾತದಲ್ಲಿ ಸ್ಕೂಟಿ ಸಹ ಸವಾರ ಸುರೇಶ್‌ ಎಲ್‌. ಪುತ್ರನ್‌ (40) ಮೃತಪಟ್ಟಿದ್ದು, ಪಾದಚಾರಿ ಈರಣ್ಣ ಮತ್ತು ಸವಾರ ಹರೀಶ್‌ ಸಾಲಿಯಾನ್‌ ಗಾಯಗೊಂಡಿದ್ದಾರೆ.

ಹರೀಶ್‌ ಕೆ. ಸಾಲಿಯಾನ್‌ ಅವರ ಸ್ಕೂಟಿಯಲ್ಲಿ ಸುರೇಶ್‌ ಎಲ್‌. ಪುತ್ರನ್‌ ಅವರನ್ನು ಕುಳ್ಳಿರಿಸಿಕೊಂಡು ಮಲ್ಪೆ ಯಿಂದ ಉಚ್ಚಿಲಕ್ಕೆ ತೆರಳುತ್ತಿದ್ದಾಗ ಮೂಳೂರು ಬೊಬ್ಬರ್ಯ ದೈವಸ್ಥಾನದ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈರಣ್ಣ ಅವರಿಗೆ ಸ್ಕೂಟಿ ಢಿಕ್ಕಿ ಹೊಡೆದಿತ್ತು.

ಪಾದಚಾರಿ ಮೂಳೆ ಮುರಿತ
ಢಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಈರಣ್ಣನ ಎಡಗಾಲು ಮುರಿತವಾಗಿದ್ದು, ಸ್ಕೂಟಿ ಸಹಸವಾರ ಸುರೇಶ್‌ ಪುತ್ರನ್‌ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಗೆ ದಾಖಲು
ಸ್ಥಳೀಯರು ಕೂಡಲೇ ಮೂರೂ ಮಂದಿಯನ್ನೂ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ ಸುರೇಶ್‌ ಮೃತಪಟ್ಟಿದ್ದರು. ಈರಣ್ಣ ಮತ್ತು ಹರೀಶ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಕಾಪು ಪೊಲೀಸ್‌ ಠಾಣಾಧಿಕಾರಿ ಶ್ರೀಶೈಲ ಮುರಗೋಡ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮನೆಗೆ ಆಧಾರವಾಗಿದ್ದರು
ಮೃತ ಸುರೇಶ್‌ ಪುತ್ರನ್‌ ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಸುರೇಶ್‌ ಅವರು ಮನೆಗೆ ಸಂಪೂರ್ಣ ಆಧಾರವಾಗಿದ್ದು, ಅವರ ಸಹೋದರ ಕೆಲವು ವರ್ಷಗಳ ಹಿಂದೆ ಉಚ್ಚಿಲದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಮತ್ತೋರ್ವ ಸಹೋದರ 2-3 ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದಾಗಿ ಇದೀಗ ಅವರ ಕುಟುಂಬದವರ ಪರಿಸ್ಥಿತಿ ದಿಕ್ಕೆಟ್ಟಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next