Advertisement

ಆ. 5ರಂದು ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡಕ್ಕೆ ಮೊಟ್ಟ ಮೊದಲ ಚಾರಣ ಆರಂಭ

08:07 PM Aug 04, 2023 | Team Udayavani |

ಗದಗ: ‘ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು’ ಎಂಬ ಖ್ಯಾತಿ ಹೊಂದಿರುವ ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಗಳ ಕಣಜ ಜಿಲ್ಲೆಯ ಕಪ್ಪತ್ತಗುಡ್ಡದ ಹಸಿರು ಸೊಬಗನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯು ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಚಾರಣದ ಅವಕಾಶ ಕಲ್ಪಿಸಿದೆ.

Advertisement

ಅರಣ್ಯ ಇಲಾಖೆಯ ಗದಗ ಅರಣ್ಯ ವಿಭಾಗವು ಕಪ್ಪತಗುಡ್ಡ ಚಾರಣ(ಟ್ರೆಕ್ಕಿಂಗ್) ಬನ್ನಿ, ನಮ್ಮ ಉತ್ತರ ಕರ್ನಾಟಕದ ಸಹ್ಯಾದ್ರಿಯನ್ನು ಅನ್ವೇಷಿಸಿ ಎಂಬ ವಾಕ್ಯದೊಂದಿಗೆ ಆ. 5ರಂದು ಪ್ರಥಮ ಬಾರಿಗೆ ಟ್ರೆಕ್ಕಿಂಗ್ ಆರಂಭಿಸಿದೆ. ಆ. 5ರಂದು ಬೆಳಿಗ್ಗೆ 6ರಿಂದ ಟ್ರೆಕ್ಕಿಂಗ್ ಆರಂಭಿಸಿದ್ದು, ಈಗಾಗಲೇ ತುಮಕೂರು, ಧಾರವಾಡ, ಹಾವೇರಿ, ಕೊಪ್ಪಳ ಸೇರಿ ಹಲವು ಜಿಲ್ಲೆಗಳ ಚಾರಣಿಗರು ಸೇರಿ ಜಿಲ್ಲೆಯ ಮುಂಡರಗಿ, ಲಕ್ಕುಂಡಿಯ ಜನರು ಕೂಡ ಫೋನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಕಪ್ಪತಗುಡ್ಡದಲ್ಲಿ 4 ಕಿ.ಮೀ. ಉದ್ದದ ಮಾರ್ಗದ 2 ಚಾರಣದ ಪಥಗಳಿದ್ದು, ಚಾರಣದಲ್ಲಿ ಗುಡ್ಡ ಹತ್ತುವುದು, ಇಳಿಯುವುದು, ಉತ್ತರ ವಾತಾವರಣದ ಅನುಭವ ಪಡೆಯುವುದು, ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಅದೃಷ್ಟವಿದ್ದರೆ ವನ್ಯಜೀವಿಗಳನ್ನು ವೀಕ್ಷಿಸಬಹುದಾಗಿದೆ.

ಅರಣ್ಯ ಇಲಾಖೆಯು ಕಪ್ಪತಗುಡ್ಡದ ಕಡಕೋಳ ಹಾಗೂ ಡೋಣಿ ಬಳಿ ಎರಡು ಮಾರ್ಗಗಳಿಂದ ಟ್ರೆಕ್ಕಿಂಗ್ ಪಥವನ್ನು ಸಂಯೋಜಿಸಲಾಗಿದ್ದು, ಕಡಕೋಳ ಕಡಕೋಳ ವೀವ್ ಪಾಯಿಂಟ್, ಕಡಕೋಳ ಕಪ್ಪತ ಮಲ್ಲೇಶ್ವರ ದೇವಸ್ಥಾನ ಗಾಳಿಗುಂಡಿ ವೀವ್ ಪಾಯಿಂಟ್ ಮಾರ್ಗವಾಗಿ ಕೊನೆಯದಾಗಿ ಕಡಕೋಳ ದೈವೀವನದಲ್ಲಿ ಮುಕ್ತಾಯಗೊಳ್ಳಲಿದೆ.

ಕಪ್ಪತಗುಡ್ಡ ವನ್ಯಜೀವಿಧಾಮವು ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 24,415 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 65 ಕಿ.ಮೀ. ಉದ್ದಕ್ಕೆ ಚಾಚಿಕೊಂಡಿದೆ. ಚಾರಣ ಮಾರ್ಗದಲ್ಲಿ ಕಡಕೋಳ ವೀವ್ ಪಾಯಿಂಟ್ ಹಾಗೂ ಗಾಳಿಗುಂಡಿ ವೀವ್ ಪಾಯಿಂಟ್‌ನಲ್ಲಿ ಕಪ್ಪತಗುಡ್ಡದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Advertisement

ಚಾರಣಿಗರಿಗೆ ಅರಣ್ಯ ಇಲಾಖೆ ಸಲಹೆ: ಟ್ರೆಕ್ಕಿಂಗ್‌ಗೆ ಆಗಮಿಸುವ ಚಾರಣಿಗರು ಶೂಸ್ ಜೊತೆಗೆ ಗುಡ್ಡ ಪ್ರದೇಶಗಳನ್ನು ಹತ್ತಲು ಬೇಕಾದ ಅಗತ್ಯದ ಬಟ್ಟೆಗಳನ್ನು ಹಾಕಿಕೊಂಡು ಬರಬೇಕು. ಚಾರಣದ ಮಾರ್ಗದಲ್ಲಿ ವನ್ಯಜೀವಿಗಳಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.

ಟ್ರೆಕ್ಕಿಂಗ್ ಮಾರ್ಗ
ಕಡಕೋಳ ಕಡಕೋಳ ವೀವ್ ಪಾಯಿಂಟ್ ಕಡಕೋಳ ದೈವೀವನಕಡಕೋಳ ಕಪ್ಪತ ಮಲ್ಲೇಶ್ವರ ದೇವಸ್ಥಾನ ಗಾಳಿಗುಂಡಿ ವೀವ್ ಪಾಯಿಂಟ್ ಕಡಕೋಳ ದೈವೀವನ
ಚಾರಣದ ಉದ್ದ: 4 ಕಿ.ಮೀ. ಚಾರಣದ ಸಮಯ: ಅಂದಾಜು 3 ಗಂಟೆ
ನೊಂದಣಿ: 150 ರೂ.
ಆರಂಭ: ಸಮಯ ಬೆಳಿಗ್ಗೆ 6ಕ್ಕೆ
ಉಪಹಾರ: ಕಡಕೋಳ ದೈವೀವನ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡದಲ್ಲಿ ಟ್ರೆಕ್ಕಿಂಗ್ ಆರಂಭಿಸುತ್ತಿದ್ದಂತೆ ಚಾರಣಿಗರಿಂದ ಉತ್ತಮ ಬೆಂಬಲ ದೊರೆಯುತ್ತಿದೆ. ರಾಜ್ಯದೆಲ್ಲೆಡೆಯಿಂದ ಚಾರಣಕ್ಕೆ ಆಗಮಿಸಲು ಕರೆಗಳು ಬರುತ್ತಿವೆ. ಮೊದಲ ಬಾರಿ ಚಾರಣ ಆರಂಭವಾಗುತ್ತಿರುವುದರಿಂದ ಹಂತ ಹಂತವಾಗಿ ಚಾರಣದ ಮಾರ್ಗಗಳನ್ನು ಹೆಚ್ಚಿಸುತ್ತ ಚಾರಣಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ರಾಜ್ಯದ ಜನತೆಗೆ ಕಪ್ಪತಗುಡ್ಡದ ಮಹತ್ವವನ್ನು ಸಾರುವ ಕೆಲಸ ಮಾಡಲಾಗುತ್ತದೆ ಎಂದು ಮುಂಡರಗಿ ಆರ್‌ಎಫ್‌ಒ ವೀರೇಂದ್ರ ಅವರು ಉದಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡರು.

ಕಪ್ಪತಗುಡ್ಡದಲ್ಲಿ ಮೊಟ್ಟ ಮೊದಲ ಬಾರಿ ಟ್ರೆಕ್ಕಿಂಗ್ ಆರಂಭಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈಗಾಗಲೇ 40 ಅಧಿಕ ಚಾರಣಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಚಾರಣಿಗರಿಂದ ಉತ್ತಮ ಪ್ರತ್ರಿಕಿಯೆ ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಶನಿವಾರ ಮತ್ತು ರವಿವಾರ ಚಾರಣ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.
-ವೀರೇಂದ್ರ ಎಂ, ಆರ್‌ಎಫ್‌ಒ, ಮುಂಡರಗಿ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next