Advertisement

ಷಂಶೀಪುರವನ್ನು ದಕ್ಷಿಣದ ಕೇದಾರನಾಥ ಮಾಡಲಾಗುವುದು: ಕಣ್ವಕುಪ್ಪಿ ಗವಿಮಠದ ಶ್ರೀ

05:28 PM Jan 23, 2023 | Team Udayavani |

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ)ಯನ್ನು ದಕ್ಷಿಣ ಭಾರತದ ಶ್ರೀ ಕೇದಾರನಾಥ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಷಂಶೀಪುರ(ಶಿವನಳ್ಳಿ)ಯಲ್ಲಿ ಕೇದಾರನಾಥ ಮಂದಿರದ ಮಾದರಿಯಲ್ಲೇ ಶ್ರೀ ಕೇದಾರನಾಥ ಸ್ವಾಮಿ ಮಂದಿರ ಒಳಗೊಂಡಂತೆ ಶಿಲಾಮಂಟಪ ಇತರೆ ಕೇಂದ್ರಗಳ ನಿರ್ಮಾಣ ಮಾಡಲಾಗುವುದು ಎಂದರು.

ದಾವಣಗೆರೆಯ ನಾಗಪ್ಪ ಎಂಬ ಭಕ್ತರೊಬ್ಬರು ನೀಡಿರುವ ಎರಡು ಎಕರೆ ಜಾಗದಲ್ಲಿ ಪ್ರಾರಂಭಿಕ ಹಂತದಲ್ಲಿ ಶ್ರೀ ಹಿಮಗಿರಿ ಭವನವನ್ನು ಜ. ೨೬ ರಂದು ಉದ್ಘಾಟನೆ ಮಾಡಲಾಗುವುದು. ಕೇದಾರಶ್ರೀಗಳು ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ವಾಸ್ತವ್ಯ, ಭಕ್ತರಿಗೆ ದರ್ಶನದ ಅವಕಾಶಕ್ಕಾಗಿ ಶ್ರೀ ಹಿಮಗಿರಿ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಉತ್ತರ ಭಾರತದಲ್ಲಿ ಕೇದಾರನಾಥದಂತೆ ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ)ದಕ್ಷಿಣ ಭಾರತದ ಕೇದಾರ ವನ್ನಾಗಿ ಮಾಡಲಾಗುವುದು. ಶ್ರೀ ಹಿಮಗಿರಿ ಭವನದ ನಂತರ ಮುಂದಿನ ದಿನಗಳಲ್ಲಿ ಪ್ರಸಾದ ನಿಲಯ, ವಸತಿ ಸಮುಚ್ಛಯ, ಭಕ್ತ ನಿವಾಸದ ನಂತರ ಶ್ರೀ ಕೇದಾರನಾಥ ಮಂದಿರ ನಿರ್ಮಾಣ ಮಾಡಲಾಗುವುದು. ಕೇದಾರ ನಾಥ ಮಾದರಿಯಲ್ಲೇ ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ)ದಲ್ಲೂ ಕೇದಾರನಾಥ ಮಂದಿರ ನಿರ್ಮಾಣದ ಸಂಬಂಧ ಕೇದಾರನಾಥದ ಇಂಜಿನಿಯರ್, ಗಣ್ಯರು, ಇತರರೊಡನೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಉತ್ತರ ಭಾರತದಲ್ಲಿರುವ ಶ್ರೀ ಕೇದಾರನಾಥಸ್ವಾಮಿಯ ದರ್ಶನಕ್ಕೆ ವರ್ಷದಲ್ಲಿ ಆರು ತಿಂಗಳು ಮಾತ್ರವೇ ಅವಕಾಶ ಇರುತ್ತದೆ. ಇನ್ನು ಆರು ತಿಂಗಳು ಮಂಜು, ಹಿಮ ಕೂಡಿರುವುದರಿಂದ ಕೇದಾರನಾಥಕ್ಕೆ ಹೋಗುವು ದಾಗಲಿ, ಸ್ವಾಮಿಯ ದರ್ಶನ ಪಡೆಯುವುದಕ್ಕೆ ಆಗುವುದಿಲ್ಲ. ಹಾಗಾಗಿಯೇ ದಕ್ಷಿಣ ಭಾರತದಲ್ಲೂ ಕೇದಾರ ನಾಥ ಮಾದರಿಯ ಮಂದಿರದ ನಿರ್ಮಾಣಕ್ಕೆ ಭಕ್ತ ವಲಯದಿಂದ ಸಾಕಷ್ಟು ಅಪೇಕ್ಷೆ ಇತ್ತು. ಅಂತಿಮವಾಗಿ ಕೇದಾರಶ್ರೀಗಳು ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ) ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ) ದಕ್ಷಿಣ ಭಾರತದ ಕೇದಾರನಾಥವಾಗಲಿದೆ ಎಂದು ತಿಳಿಸಿದರು.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಕೇದಾರನಾಥನ ಪರಮ ಭಕ್ತರಾಗಿದ್ದಾರೆ. ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ) ಯಲ್ಲಿ ದಕ್ಷಿಣ ಭಾರತದ ಶ್ರೀ ಕೇದಾರನಾಥ ಮಂದಿರದ ನಿರ್ಮಾಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಈವರೆಗೆ ಚರ್ಚೆ ನಡೆಸಿಲ್ಲ. ಉತ್ತರಾಖಂಡ್‌ನ ಮುಖ್ಯಮಂತ್ರಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹರಿಹರ ತಾಲೂಕಿನ ಷಂಶೀಪುರ(ಶಿವನಳ್ಳಿ)ಯಲ್ಲಿ ದಕ್ಷಿಣ ಭಾರತದ ಶ್ರೀ ಕೇದಾರನಾಥ ಮಂದಿರ ನಿರ್ಮಾಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೂ ಚರ್ಚೆ ನಡೆಸ ಲಾಗುವುದು ಎಂದು ಕಣ್ವಕುಪ್ಪಿ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next