Advertisement

ಕರಾವಳಿಗರ ನಂಬಿಕೆ, ದೈವಾರಾಧನೆ ಎಲ್ಲವೂ ಅದ್ಭುತ: ಕಾಂತಾರ ನಟಿ ಸಪ್ತಮಿ ಗೌಡ

01:00 AM Nov 17, 2022 | Team Udayavani |

ಮಂಗಳೂರು: ಕಾಂತಾರದ “ಲೀಲಾ’ಳಲ್ಲಿ ಇನ್ನೂ ಲೀನವಾಗಿಯೇ ಇದ್ದೇನೆ; ಲೀಲಾ ರೀತಿಯ ಪಾತ್ರ ಮುಂದೆ ಸಿಗಲಿದೆಯೋ ಗೊತ್ತಿಲ್ಲ. ಆದರೆ  ಒಂದಂತೂ ಸತ್ಯ. ಕರಾವಳಿ ಭಾಗದ ನಂಬಿಕೆ, ಆಚರಣೆ, ದೈವಾರಾಧನೆಯೇ ಒಂದು ಅದ್ಭುತ ಲೋಕ. ಕಾಂತಾರದಲ್ಲಿ ಇವೆಲ್ಲದರ ದರ್ಶನ ನನಗಾಗಿದೆ!

Advertisement

ಕಾಂತಾರದಲ್ಲಿ ಲೀಲಾಳಾಗಿ ಸಿನಿ ಪ್ರಿಯರ ಮನದಲ್ಲಿ ಅಚ್ಚಳಿಯದೆ ನೆಲೆಯೂರಿದ “ಸಿಂಗಾರ ಸಿರಿ’ ಸಪ್ತಮಿ ಗೌಡ ಅವರ ಅಭಿಪ್ರಾಯವಿದು. ಮಂಗಳವಾರ ನಗರಕ್ಕೆ ಆಗಮಿಸಿದ ಸಂದರ್ಭ “ಉದಯವಾಣಿ’ ಜತೆಗೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.

ಕಾಂತಾರ ಸಿನೆಮಾಕ್ಕೂ ಮುನ್ನ ನನಗೆ ಕರಾವಳಿಯ ದೈವಾರಾಧನೆಯ ಕುರಿತು ಗೊತ್ತಿರಲಿಲ್ಲ. ರಿಷಬ್‌ ಶೆಟ್ಟಿ ಅವರನ್ನು ಮೊದಲು ಭೇಟಿ ಮಾಡಿದಾಗ ಅವರು ಯೂಟ್ಯೂಬ್‌ನಲ್ಲಿ ದೈವಾರಾಧನೆಯ ಕೆಲವು ವೀಡಿಯೋ ತೋರಿಸಿದರು. ಅದಾಗಲೇ ನನಗೆ ಇದರ ವೈವಿಧ್ಯತೆ ಕುರಿತು ತಿಳಿದದ್ದು. ಬಳಿಕ ಚಿತ್ರೀಕರಣ ಸಮಯದಲ್ಲಿ ಕರಾವಳಿಯ ದೈವಾರಾಧನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಪ್ರಯತ್ನಿಸಿದೆ. ಕರಾವಳಿ ಭಾಗದ ನಂಬಿಕೆ, ಆಚರಣೆ, ದೈವಾರಾಧನೆಯಲ್ಲಿ ಇಲ್ಲಿನ ಮಣ್ಣಿನ ಸತ್ವ ಅಡಗಿದೆ. ಇವೆಲ್ಲವೂ ಅದ್ಭುತ ಲೋಕ ಎನ್ನುತ್ತಾರೆ ಅವರು.

ಕನ್ನಡಕ್ಕೆ ಸೀಮಿತವೆನಿಸಿದ್ದ ಸಿನೆಮಾ ಪ್ಯಾನ್‌ ಇಂಡಿಯಾ ಆದ ಬಗ್ಗೆ ಏನನ್ನಿಸುತ್ತದೆ?
ಜನರು ಕೊಟ್ಟಿರುವ ಪ್ರೀತಿಯಿಂದಾಗಿ ಕಾಂತಾರ ಇಂದು ದೇಶ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಪ್ರಚಾರಕ್ಕೆ ಅಧಿಕ ದಿನ ಸಿಗದಿದ್ದರೂ ಜನರ ಮೆಚ್ಚುಗೆಯ ಮೂಲಕವೇ ಗೆದ್ದಿದೆ. ನಿರೀಕ್ಷೆಗೂ ಮೀರಿದ ಗೆಲುವು ಇದು. ಕನ್ನಡ ಸಿನೆಮಾ ಮಾಡಲು ಹೊರಟು ಬಳಿಕ ಅದು ತನ್ನಷ್ಟಕ್ಕೆ ಪ್ಯಾನ್‌ ಇಂಡಿಯಾ ಆಗಿರುವುದೇ ಅಚ್ಚರಿ. ಬೇರೆ ಬೇರೆ ರಾಜ್ಯದಲ್ಲಿಯೂ ಕನ್ನಡ ಸಿನೆಮಾವನ್ನು ಅವರ ಸಿನೆಮಾ ಎಂಬ ರೀತಿಯಲ್ಲೇ ಪ್ರೀತಿಸುತ್ತಿದ್ದಾರೆ, ಪ್ರಶಂಸಿಸುತ್ತಿದ್ದಾರೆ.

ಕಾಂತಾರ ಕರಾವಳಿ ಭಾಗದ ಕಥೆಯ ಸಿನೆಮಾ. ಕರಾವಳಿ ಬಗ್ಗೆ ತಮ್ಮ ಅಭಿಪ್ರಾಯ?
ಕರಾವಳಿ ಜನರು ಮಾತನಾಡುವ ರೀತಿ ಹಾಗೂ ಗೌರವಿಸುವ ರೀತಿ ತುಂಬಾ ಇಷ್ಟವಾಗುತ್ತದೆ. ನಾನು ಬೆಂಗಳೂರಲ್ಲಿ ಇದ್ದವಳು. ಇಲ್ಲಿಗೆ ಸಿನೆಮಾಕ್ಕಾಗಿ ಬಂದವಳು; ಆದರೆ ಈಗ ಈ ಭಾಗದವಳಾಗಿದ್ದೇನೆ. ಕರಾವಳಿ ಭಾಗದ ನಂಬಿಕೆ, ಆಚರಣೆ ಎಲ್ಲವೂ ಖುಷಿ ಕೊಡುತ್ತವೆ. ನೀವು ಮೂಲತಃ ಮಂಗಳೂರಿನವರಾ? ಅಂತ ಹಲವರು ಕೇಳಿದ್ದಾರೆ. ಮಂಗಳೂರಿನವರೂ ನನ್ನನ್ನು ಮಂಗಳೂರು ಹುಡುಗಿ ರೀತಿಯಲ್ಲಿ ನೋಡಿದ್ದಾರೆ. ನಾನು ಬೆಂಗಳೂರಿನವಳು ಆಗಿದ್ದರೂ ಈಗ ಮಂಗಳೂರ ಹುಡುಗಿ.

Advertisement

ಕಾಂತಾರದ ಕರಾವಳಿ ಕಲಾವಿದರ ಬಗ್ಗೆ ಏನನ್ನುತ್ತೀರಿ?
ಸಿನೆಮಾದಲ್ಲಿ ಕರಾವಳಿ ಭಾಗದವರು ಅಧಿಕ ಮಂದಿ ಇದ್ದರೂ ಅವರ ಮಧ್ಯೆ ನನ್ನನ್ನು ಒಬ್ಬಳನ್ನಾಗಿ ಸ್ವೀಕರಿಸಿದ್ದರು. ಖುಷಿಯಿಂದ ಪ್ರೀತಿಯಿಂದ ಕಂಡರು. ಕರಾವಳಿಯ ಸಂಸ್ಕೃತಿ, ಆಚರಣೆ, ದೇವಸ್ಥಾನ ಎಲ್ಲದರ ಬಗ್ಗೆಯೂ ಅವರು ನನಗೆ ಮಾರ್ಗದರ್ಶನ ನೀಡಿದ್ದರು.

ಮಂಗಳೂರು ಕನ್ನಡ ಕಲಿಯುವುದು ಕಷ್ಟವಾಯಿತಾ ?
ಮಂಗಳೂರು ಭಾಗದ ಕನ್ನಡ ಕೊಂಚ ವಿಭಿನ್ನವಾದ ಕಾರಣ ಅಭ್ಯಾಸ ಮಾಡಬೇಕಿತ್ತು. ಇದಕ್ಕಾಗಿ ಕೆರಾಡಿಯಲ್ಲಿ ಶಿಬಿರವಿತ್ತು. ಸನಿಲ್‌ ಗುರು ಅವರು ಇಲ್ಲಿನ ಕನ್ನಡದ ಬಗ್ಗೆ ತಿಳಿಸಿದ್ದರು. ಹೋದಲ್ಲಿ-ಬಂದಲ್ಲಿ ಮಂಗಳೂರು ಕನ್ನಡ ಬಗ್ಗೆಯೇ ಕೇಳುತ್ತಿದ್ದೆ. ಹೀಗಾಗಿ ಇಲ್ಲಿನ ಕನ್ನಡ ಹೆಚ್ಚು ಹತ್ತಿರವಾಗಲು ಸಾಧ್ಯವಾಯಿತು.

ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದಾಗ ಆದ ಮರೆಯಲಾಗದ ನೆನಪು ಯಾವುದಿದೆ?
ರಿಷಬ್‌ ಶೆಟ್ಟಿ ಮತ್ತು ನಾನು ಮುಂಬಯಿಯಲ್ಲಿ ಮಾಧ್ಯಮವೊಂದರ ಸಂದರ್ಶನಕ್ಕೆ ಕುಳಿತಿದ್ದೆವು. ಆಗ ನಿರೂಪಕರು ಬಂದು ರಿಷಬ್‌ ಅವರನ್ನು ಏಳುವಂತೆ ಕೋರಿದರು. ರಿಷಬ್‌ ಅವರನ್ನು ಆಲಂಗಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಸಂದರ್ಶಕ ರಿಷಬ್‌ ಅವರ ಕಾಲಿಗೆ ಬಿದ್ದು, “ಹೇಳಲು ಆಗದಷ್ಟು ಭಾವನೆ ತುಂಬಿ ಬಂದಿದೆ’ ಎಂದರು. ನಿಜಕ್ಕೂ ಇದೊಂದು ಮರೆಯಲಾಗದ ಅನುಭವ. ಸಿನೆಮಾ ಈ ಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಸೋಜಿಗ.

ಸಿಂಗಾರ ಸಿರಿಯೇ… ನನ್ನ ಪುಣ್ಯ!
“ಸಿಂಗಾರ ಸಿರಿಯೇ’ ಹಾಡು ಎಲ್ಲೆಡೆ ಸದ್ದು ಮಾಡಿರುವುದು ತುಂಬ ಖುಷಿ ಇದೆ. ರಿಷಬ್‌ ಅವರು ಇದಕ್ಕೆ ಮುಖ್ಯ ಸೂತ್ರಧಾರ. ಪ್ರಮೋದ್‌ ಮರವಂತೆ ಅವರ ಸಾಹಿತ್ಯ, ವಿಜಯ್‌ಪ್ರಕಾಶ್‌ ಹಾಗೂ ಅನನ್ಯ ಭಟ್‌ ಅವರ ಸ್ವರ ಆ ಹಾಡಿಗೆ ಹೆಚ್ಚು ಶಕ್ತಿ ತುಂಬಿದೆ. ನಾವು ಪರದೆಯ ಮುಂದೆ ಇದ್ದೇವೆಯೇ ಹೊರತು ಅವರ ವಿಶೇಷ ಶ್ರಮದಿಂದ ಹಾಡು ಹೆಚ್ಚು ಆಪ್ತವಾಗಿದೆ. ನನ್ನ ವೃತ್ತಿಜೀವನದ ಪ್ರಾರಂಭದಲ್ಲಿಯೇ ಸೂಪರ್‌ಹಿಟ್‌ ಹಾಡು ಸಿಕ್ಕಿರುವುದು ನನ್ನ ಪುಣ್ಯ. ನಿಜ ಹೇಳಬೇಕೆಂದರೆ, ಸಿಂಗಾರ ಸಿರಿ ನನ್ನ ಪಾಲಿಗೂ ಗರಿ ಮೂಡಿಸಿದೆ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next