Advertisement

ಬದ್ಧತೆ ರಹಿತ ಪ್ರಭುತ್ವದಿಂದ ಕನ್ನಡ ಮೂಲೆಗುಂಪು: ಡಾ|ಇಂದಿರಾ ಹೆಗ್ಡೆ

12:27 AM Jan 30, 2020 | mahesh |

ಮಹಾನಗರ: ಪಾಠಶಾಲೆ ಎಂಬ ಜ್ಞಾನ ದೇಗುಲಗಳು ಪ್ರಸ್ತುತ “ಸ್ಕೂಲ್‌’ ಹೆಸರಿನಲ್ಲಿ ಉದ್ಯಮವಾಗಿ ನಡೆಸಲ್ಪಡುತ್ತಿವೆ. ಬದ್ಧತೆ ಇಲ್ಲದ ಪ್ರಭುತ್ವವು ಕರ್ನಾಟಕದ ನೆಲದಲ್ಲಿಯೇ ಕನ್ನಡವನ್ನು ಮೂಲೆಗುಂಪು ಮಾಡುತ್ತಿದೆ ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಡಾ| ಇಂದಿರಾ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

Advertisement

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಬೆಂದೂರ್‌ ಸಂತ ಆ್ಯಗ್ನೆಸ್‌ ಕಾಲೇಜು ಸಭಾಂಗಣದ ಕಡೆಂಗೋಡ್ಲು ಶಂಕರ ಭಟ್ಟ ವೇದಿಕೆಯಲ್ಲಿ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಬುಧವಾರ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

ಶಾಲೆಗಳು ಮಕ್ಕಳ ಜ್ಞಾನ ಬೆಳಗುವ ದೇಗುಲಗಳು. ಆದರೆ ಬದ್ಧತೆ ಇಲ್ಲದ ಕೆಲವು ರಾಜಕಾರಣಿಗಳು, ಕೆಲವು ಖಾಸಗಿ ವ್ಯಕ್ತಿಗಳ ಜತೆ ಸೇರಿ “ಸ್ಕೂಲ್‌’ ಎಂಬ ವ್ಯಾಪಾರ ಕೇಂದ್ರವನ್ನು ಆರಂಭಿಸಿ ಪೈಪೋಟಿಯ ಉದ್ಯಮವಾಗಿ ಬೆಳೆಸುತ್ತಿದ್ದಾರೆ. ರಾಜ್ಯದ ಪ್ರಥಮ ಭಾಷೆ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿಯೇ ಬೋಧಿಸುವ ಔದಾರ್ಯವೂ ಈಗಿಲ್ಲ. ಕೇಂದ್ರದ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಅಳವಡಿಸಿ ಕನ್ನಡವನ್ನು ಅಸ್ಪೃಶ್ಯ ಭಾಷೆಯಂತೆ ಬಿಂಬಿಸಿ ಶಾಲೆಯ ಹೊರಗುಳಿಯುವಂತೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಇಂಗ್ಲಿಷ್‌ ಪ್ರತಿಷ್ಠೆಯ ಮಾನದಂಡ
ಕನ್ನಡವೆಂದರೆ ಕುಣಿದಾಡುತ್ತಿದ್ದ ಮನಸ್ಸುಗಳು ಇಂದಿಲ್ಲ. ನಮ್ಮ ಶಾಲೆಯಲ್ಲಿ ಕನ್ನಡ ಕಲಿಸುವುದಿಲ್ಲ ಎಂಬುದೇ ಶಾಲೆ ನಡೆಸುವವರ ಹೆಗ್ಗಳಿಕೆಯಾಗುತ್ತಿದೆ. ಇಂಗ್ಲಿಷ್‌ ಮಾಧ್ಯಮವೇ ಮಕ್ಕಳು, ಹೆತ್ತವರ ಪ್ರತಿಷ್ಠೆಯ ಮಾನದಂಡವಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕನ್ನಡದ ಅಸ್ಮಿತೆಯನ್ನು ಸಾರುವ ಮನಸ್ಸುಗಳು ಅರಳಬೇಕಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಶಿಕ್ಷಣ ಪ್ರೇಮ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಆಶಿಸಿದರು.

ಜೀವವಿರೋಧಿಯಾಗದಿರೋಣ
ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡವು ಬುದ್ಧಿವಂತರ ಜಿಲ್ಲೆಯಾಗಿಯೇ ಉಳಿಯಬೇಕು. ಕೋಮು ದಳ್ಳುರಿಯ ವಾಸನೆ ಇಲ್ಲಿ ಇರಬಾರದು. ಮನುಷ್ಯ ಜೀವಪರ ಆಗಬೇಕೇ ಹೊರತು ಜೀವ ವಿರೋಧಿಯಾಗಬಾರದು ಎಂದು ಡಾ| ಇಂದಿರಾ ಹೆಗ್ಡೆ ಅಭಿಪ್ರಾಯಿಸಿದರು. ಸಾಹಿತ್ಯಿಕವಾಗಿ ಮಂಗಳೂರು ವಿಶಿಷ್ಟ ಪ್ರದೇಶ. ಸಾಹಿತ್ಯ ಪ್ರಪಂಚಕ್ಕೆ ಇಲ್ಲಿನ ಕೊಡುಗೆಗಳು ಅದ್ವಿತೀಯ. ಶತಮಾನಗಳ ಹಿಂದೆಯೇ ಕನ್ನಡ ಸಾಹಿತ್ಯದ ಚರ್ಚೆ ಈ ನೆಲದಲ್ಲಾಗಿದ್ದು, ಸಾಹಿತ್ಯ ಕ್ಷೇತ್ರದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಆಶಯ ಭಾಷಣ ಮಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಿದರು. ಸಂತ ಆ್ಯಗ್ನೆಸ್‌ ಕಾಲೇಜು ಪ್ರಾಂಶುಪಾಲೆ ಸಿ| ಡಾ| ಜೆಸ್ವೀನಾ ಮುಖ್ಯ ಅತಿಥಿಯಾಗಿದ್ದರು. ಕಸಾಪ ಖಜಾಂಚಿ ಪೂರ್ಣಿಮಾ ರಾವ್‌ ಪೇಜಾವರ ಉಪಸ್ಥಿತರಿದ್ದರು. ಕರುನಾಡ ಕಣ್ಮಣಿಗಳ ಭಾವಚಿತ್ರವನ್ನು ಈ ವೇಳೆ ಅನಾವರಣಗೊಳಿಸಲಾಯಿತು. ಕಸಾಪ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ದೇವಕಿ ಅಚ್ಯುತ ಅಧ್ಯಕ್ಷರ ಪರಿಚಯ ಮಾಡಿದರು. ಕಾರ್ಯದರ್ಶಿ ಡಾ| ಪದ್ಮನಾಭ ಭಟ್‌ ಎಕ್ಕಾರು ವಂದಿಸಿದರು. ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ| ಸಂಪೂರ್ಣಾನಂದ ಬಳ್ಕೂರು, ಪಿನಾಕಿನಿ ಪಿ. ಶೆಟ್ಟಿ ನಿರೂಪಿಸಿದರು.

ಕನ್ನಡ ಭುವನೇಶ್ವರಿ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೂ ಮುನ್ನ ಮಲ್ಲಿಕಟ್ಟೆ ನಗರ ಗ್ರಂಥಾಲಯದಿಂದ ಸಂತ ಆ್ಯಗ್ನೆಸ್‌ ಕಾಲೇಜುವರೆಗೆ ಕನ್ನಡ ಭುವನೇಶ್ವರಿಯ ದಿಬ್ಬಣ ನಡೆಯಿತು. ಕಾರ್ಪೊರೇಟರ್‌ ಮನೋಹರ್‌ ಶೆಟ್ಟಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಂತ ಆ್ಯಗ್ನೆಸ್‌ ಕಾಲೇಜಿನ ಕುಲಸಚಿವ ಪ್ರೊ| ಚಾರ್ಲ್ಸ್‌ ಸಿ. ಪಾಯಿಸ್‌ ಚಾಲನೆ ನೀಡಿದರು. ಡಾ| ಉದಯಕುಮಾರ್‌ ಬಿ. ಕಾರ್ಯಕ್ರಮ ನಿರೂಪಿಸಿದರು.

ದಿಬ್ಬಣದಲ್ಲಿ ಚೆಂಡೆ, ಕಾಲೇಜು ಬ್ಯಾಂಡ್‌, ಎನ್‌ಸಿಸಿ ಕೆಡೆಟ್‌ಗಳು, ರೇಂಜರ್ ವಿದ್ಯಾರ್ಥಿಗಳು, ಎನ್ನೆಸ್ಸೆಸ್‌ ಸ್ವಯಂ ಸೇವಕರು ಮತ್ತು ಕನ್ನಡ ಸಂಘಗಳ ಸದಸ್ಯರು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಿದರು.
ರಾಷ್ಟ್ರ ಧ್ವಜಾರೋಹಣವನ್ನು ಡಾ| ಸಿ| ಜೆಸ್ವಿನಾ, ಪರಿಷತ್‌ನ ಧ್ವಜಾರೋಹಣವನ್ನು ಎಸ್‌. ಪ್ರದೀಪಕುಮಾರ ಕಲ್ಕೂರ, ಕನ್ನಡ ಧ್ವಜಾರೋಹಣವನ್ನು ನವೀನ್‌ ಡಿ’ಸೋಜಾ ನೆರವೇರಿಸಿದರು. ಪ್ರೊ| ಚಂದ್ರಮೋಹನ್‌ ಮರಾಠೆ ನಿರ್ವಹಿಸಿ, ಚೇತನ್‌ ಕದ್ರಿ ನಿರೂಪಿಸಿದರು.

ವಾಸ್ತವವಾದ- ಆದರ್ಶವಾದ ಅಗತ್ಯ
ಸಮ್ಮೇಳನ ಉದ್ಘಾಟಿಸಿದ ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ| ಅಭಯ್‌ಕುಮಾರ್‌ ಮಾತನಾಡಿ, ಸಮಕಾಲೀನ ಸಮಾಜಕ್ಕೆ ಮುಖಾಮುಖೀಯಾದಾಗ ಮಾತ್ರ ಸಾಹಿತ್ಯ ಬೆಳೆಯುತ್ತದೆ. ಸಾಹಿತ್ಯದಲ್ಲಿ ವಾಸ್ತವವಾದದ ಜತೆಗೆ ಆದರ್ಶವಾದವೂ ಅಗತ್ಯ. ಜಗತ್ತಿನ ಸಾಹಿತ್ಯದೊಂದಿಗೆ ಕನ್ನಡ ಸಾಹಿತ್ಯವೂ ವಾಸ್ತವವಾದ ಮತ್ತು ಆದರ್ಶವಾದಗಳ ಸಂಘರ್ಷಗಳೊಂದಿಗೆ ಬೆಳೆದು ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next