Advertisement

ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

07:22 PM Sep 21, 2021 | Team Udayavani |

ಬೆಂಗಳೂರು:  ಕಾನೂನಿನಲ್ಲಿ ಕನ್ನಡವನ್ನು ತಂದಿದ್ದರಿಂದ ನ್ಯಾಯಾಲಯಗಳಲ್ಲಿ ಇಂದು ಕನ್ನಡ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಹೊರತಂದಿರುವ ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಕಾನೂನು ನಿಘಂಟು ಕೆಲಸ ಯಶಸ್ವಿಯಾಗಿದೆ. 2003ರಲ್ಲಿ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ ನಂತರ ಅವು ಜನ ಸಾಮಾನ್ಯರಿಗೆ‌ ತಲುಪಿದವು. ಕಾನೂನುಗಳ ಅರ್ಥ ವ್ಯಾಪಕವಾಗಿ ಪ್ರಚಾರವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಲಯ ಅದನ್ನು ಗುರುತಿಸಿ  ಮನ್ನಣೆಯನ್ನು ನೀಡಿದೆ. ಅದನ್ನು ಮುಂದುವರೆಸಿ ಇಂದು  ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಹೊರತಂದು   ಉತ್ತಮ ಕೆಲಸ ಮಾಡಿದೆ ಎಂದರು.

ರಾಷ್ಟ್ರೀಯ  ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾನೂನುಗಳನ್ನು ನಮ್ಮ ಜನರಿಗೆ ಸರಳವಾಗಿ ತಿಳಿಸುವ ಉದ್ದೇಶದಿಂದ ಈ ಮಹತ್ಕಾರ್ಯ ಸಾಧ್ಯವಾಗಿದೆ. ಇದಕ್ಕಾಗಿ ಶ್ರಮಪಟ್ಟಿರುವ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಪ್ರೋತ್ಸಾಹ, ಬೆಂಬಲದಿಂದ ಇವೆಲ್ಲವನ್ನು ಮಾಡಲು ಸಾಧ್ಯವಾಗಿದೆ ಎಂದ ಅವರು, ಈ ಪ್ರಕ್ರಿಯೆ ಮುಂದುವರೆಯಬೇಕು. ಇನ್ನಷ್ಟು ಕನ್ನಡದ ಪದಗಳು ಕಾನೂನಿನಲ್ಲಿ ಬಳಕೆ ಆಗಬೇಕು ಹಾಗೂ ಕಾನೂನಿನಲ್ಲಿ ಬಳಕೆಯಾಗುವ ಪದಗಳು ಕನ್ನಡದಲ್ಲಿ ಬಳಕೆಯಾಗಬೇಕು ಎಂದರು.

Advertisement

ನ್ಯಾಯ, ನೀತಿ ಧರ್ಮ ಸದಾ ಒಟ್ಟಿಗೆ ಸಾಗುತ್ತದೆ:

ಇದೇ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥಾಪಕ ಆಚಾರ್ಯ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 125  ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಹೊರತಂದಿರುವ ನಾಣ್ಯವನ್ನು ಸಮರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ನ್ಯಾಯ, ನೀತಿ, ಧರ್ಮ ಸದಾ ಒಟ್ಟಿಗೆ ಸಾಗುತ್ತದೆ. ಎಲ್ಲಿ ನ್ಯಾಯ ಇರುತ್ತದೆಯೋ ಅಲ್ಲಿ ನೀತಿ ಇರಬೇಕು. ಇವೆರಡೂ ಇದ್ದಲ್ಲಿ ಧರ್ಮ ಇರಲೇಬೇಕು. ಇಂದು ಒಂದೆಡೆ ಕಾನೂನಿನ ಪದಕೋಶ ಬಿಡುಗಡೆಯಾಗಿದ್ದು, ಮತ್ತೊಂದೆಡೆ ಪ್ರಭುಪಾದರನ್ನು ನೆನಪು ಮಾಡಿಕೊಂಡಿದ್ದೇವೆ. ಅವರು ಹಾಕಿಕೊಟ್ಟ ಕೃಷ್ಣನ ಪಥದಲ್ಲಿ ನಡೆಯಬೇಕು. ಭಗವದ್ಗೀತೆ ಮೂಲಕ ಬದುಕಿಗೆ ಕೃಷ್ಣ ಮಾರ್ಗದರ್ಶನ ನೀಡಿದಂತೆ ಅತ್ಯಂತ ಸರಳವಾಗಿ ಉತ್ಸಾಹದ ಮುಖಾಂತರ ಜಗತ್ತಿನ ಭಕ್ತರಲ್ಲಿ ತುಂಬಿದರು. ನ್ಯಾಯ,ನೀತಿ  ಕೃಷ್ಣನ ಧರ್ಮ. ಈ ಮೂರೂ ಅತ್ಯಂತ ಶ್ರೇಷ್ಠ ವಿಧಾನಸೌಧದಲ್ಲಿ ನಡೆದಿರುವುದು ಯೋಗಾಯೋಗ. ನ್ಯಾಯಾ, ನೀತಿ, ಧರ್ಮ ಪಾಲನೆಯೇ ಈ ಶಕ್ತಿಸೌಧದ ಮುಖ್ಯ ಕರ್ತವ್ಯವಾಗಿದೆ ಎಂದರು.

ಇಸ್ಕಾನ್ ದಕ್ಷಿಣ ಶಾಖಾಧ್ಯಕ್ಷ ಶ್ರೀ ವರದಕೃಷ್ಣದಾಸ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next