Advertisement

ಕನ್ನಡ ಪುಸ್ತಕ, ದಿನ ಪತ್ರಿಕೆ ಸಮಾಜ ನಿರ್ಮಿಸಿ

03:53 PM Mar 05, 2023 | Team Udayavani |

ಚಿಕ್ಕಬಳ್ಳಾಪುರ: ಕನ್ನಡ ಪುಸ್ತಕ, ದಿನ ಪತ್ರಿಕೆಗಳನ್ನು ಓದುವ ಸಮಾಜ ನಿರ್ಮಾಣ ಮಾಡಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ನಾಡೋಜ ಎಸ್‌ ಷಡಕ್ಷರಿ ಹೇಳಿದರು.

Advertisement

9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜಿಲ್ಲೆಯ ಭೂತಕಾಲದ ಬಗ್ಗೆ ಗೌರವ ಅಭಿಮಾನಗಳಿವೆ. ವರ್ತಮಾನದ ಬಗ್ಗೆ ಹೆಮ್ಮೆ ಇದೆ. ಭವಿಷ್ಯದ ಬಗ್ಗೆ ಆಶಾಭಾವನೆ ಇದೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ಉನ್ನತ ಸಾಧನೆ ಮಾಡಿರುವ ಜಿಲ್ಲೆ ನಮ್ಮದು. ಇಂತಹ ಜಿಲ್ಲೆಯಲ್ಲಿ ಕನ್ನಡವನ್ನು ಬಿತ್ತುವ, ವಿಸ್ತರಿಸುವ ಕಾರ್ಯಗಳು ಆಗಬೇಕು ಎಂದು ತಿಳಿಸಿದರು.

ನಮ್ಮೆಲ್ಲರ ಮೆಚ್ಚಿನ ನಂದಿಬೆಟ್ಟ ಜಗದ್ವಿಖ್ಯಾತವಾದದ್ದು, ನಂದಿಬೆಟ್ಟವೇ ಅಲ್ಲದೆ, ಮತ್ತಿತರ ಪ್ರೇಕ್ಷಣೀಯ ಸ್ಥಳಗಳೂ ಹತ್ತಾರು ಇವೆ. ಚಿಂತಾಮಣಿ ಮತ್ತು ಕೈವಾರಗಳ ಮಧ್ಯೆಯೂ ಬೆಟ್ಟಗಳ ಸಾಲು ಇವೆ. ಗೌರಿಬಿದನೂರಿನ ಬಳಿ ಇರುವ ವಿದುರಾಶ್ವತ್ಥವೂ ಒಂದು ವಿಶೇಷ ಸ್ಥಳ. ಅಲ್ಲಿರುವ ಅಶ್ವತ್ಥ ವೃಕ್ಷವು ಮಹಾಭಾರತದ ವಿದುರನೇ ನೆಟ್ಟ ಅಶ್ವತ್ಥ ವೃಕ್ಷವೆಂದು ನಂಬಲಾಗಿದೆ ಎಂದು ಹೇಳಿದರು.

ಇಬ್ಬರು ಭಾರತರತ್ನರು: ಒಂದೇ ಜಿಲ್ಲೆಯಲ್ಲಿ ಇಬ್ಬರು ಭಾರತ ರತ್ನ ಪದವಿ ಪುರಸ್ಕೃತರನ್ನು ಹೊಂದಿರುವ ಜಿಲ್ಲೆ, ದೇಶದಲ್ಲಿ ಬಹುಶಃ ಇದೊಂದೇ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸರ್‌ ಎಂ.ವಿಶ್ವೇಶ್ವರಯ್ಯ ಮತ್ತು ಡಾ.ಚಿಂತಾಮಣಿ ನಾರಾಯಇರಾವ್‌ ಇವರಿಬ್ಬರೂ ನಮ್ಮ ಜಿಲ್ಲೆಯ ಧೃವತಾರೆಗಳು ಎಂದು ವಿವರಸಿದಿರು. ಆಸ್ಥಾನ ವಿದ್ವಾನ್‌ ಎಂದು ಹೆಸರಾಗಿದ್ದ ಎಂ.ಜಿ.ನಂಜುಂಡಾರಾಧ್ಯರು, ಓ.ಎನ್‌. ಲಿಂಗಣ್ಣಯ್ಯನವರು, ಡಾ.ಎಲ್‌.ಬಸರಾಜು ಅವರು, ಪ್ರೊ.ಎನ್‌.ಬಸವಾರಾಧ್ಯರು, ಈ ವೇದಿಕೆಯನ್ನು ಅಲಂಕರಿಸಿರುವ ಹಂಪಾ ನಾಗರಾಜಯ್ಯನವರು, ಡಾ.ಪ್ರದಾನ್‌ ಗುರುದತ್ತಾರವರು, ಕೈ.ಪು. ಲಕ್ಷ್ಮೀನರಸಿಂಹಶಾಸ್ತ್ರಿಗಳು, ಬಿ.ಜಿ.ಸತ್ಯಮೂರ್ತಿ, ಡಿ.ಪಾಳ್ಯದ ವಿ.ಗೋಪಾಲಕೃಷ್ಣ, ವಿ.ಜ್ಞಾನಾನಂದ, ಮಂಚೇನಹಳ್ಳಿಯ ಅನಂತ ಪದ್ಮನಾಭರಾವ್‌, ಕೆ.ನಾರಾಯಣಸ್ವಾಮಿ, ಪ್ರೊ.ವಿ.ಗಂಗಾಧರಮೂರ್ತಿ, ಸಂತೆ ಕಲ್ಲಹಳ್ಳಿಯ ಡಾ.ಆರ್‌.ಶೇಷಶಾಸ್ತ್ರಿ, ಚಿಂತಾಮಣಿಯ ಸತ್ಯಂ ಮುಂತಾದವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡ ಚಲನಚಿತ್ರ ಕ್ಷೇತ್ರದಲ್ಲೂ ನಟರಾಗಿ, ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ ಸಾಧನೆ ಮಾಡಿದವರಲ್ಲಿ ನಮ್ಮ ಜಿಲ್ಲೆಯವರು ಅನೇಕರಿದ್ದಾರೆ. ಖ್ಯಾತ ನಟ ಜೆ.ಕೆ.ಶ್ರೀನಿವಾಸ್‌ಮೂರ್ತಿ ಅವರಲ್ಲೊಬ್ಬರು. ಟಿ.ಎನ್‌.ಸೀತಾರಾಮ್‌ ಅವರು ಗೌರಿಬಿದನೂರಿನವರು. ಖ್ಯಾತ ಹಾಸ್ಯ ನಟ ಮುಖ್ಯಮಂತ್ರಿ ಚಂದ್ರು ನಮ್ಮವರು, ಚಿಕ್ಕಬಳ್ಳಾಪುರದ ಡಿ.ರಾಜೇಂದ್ರಬಾಬು ಅವರು 60ಕ್ಕೂ ಹೆಚ್ಚು ನಿರ್ದೇಶಿಸಿದ್ದಾರೆ ಎಂದು ವಿವರಿಸಿದರು.

Advertisement

ಹಳೆಯ ತಲೆಮಾರಿನ ಪ್ರಮುಖ ಗಾಯಕರಾಗಿದ್ದ, ಗುಡಿಬಂಡೆ ರಾಮಾಚಾರ್‌ ಅವರು ಜನಪ್ರಿಯ ಹಾಡುಗಾರರಾಗಿದ್ದರು. ಬಾಗೇಪಲ್ಲಿ ಬಳಿಯ ಗೂಳೂರು ಮಠದ ಅಧ್ಯಕ್ಷರಾಗಿದ್ದ ಡಾ.ಜ.ಚ.ನಿ.ಅವರು ವಚನಕಾರರೂ, ಪ್ರವಚನಕಾರರಾಗಿ ಸಾಮಾಜಿಕ ಸೇವಾ ಕ್ರಾಂತಿ ಮಾಡಿದ್ದಾರೆ ಎಂದು ವಿವರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯು ಜಾನಪದ ಕ್ಷೇತ್ರದಲ್ಲೂ ಚಾಪುಮೂಡಿಸಿದೆ. ಕೋಲಾಟ, ತಮಟೆ ವಾದನ, ಹುಲಿ ವೇಷ, ಕರಗ, ದೊಂಬರಾಟ, ಗಂಗೆದ್ದುಲಾಟ,(ಕೋಲೆ ಬಸವ), ಬುಡುಬುಡುಕೆ, ತೊಗಲು ಬೊಂಬೆಯಾಟ, ಹರಿಕಥೆ, ಬುರ್ರ ಕತೆ ಮುಂತಾದವು ಇಲ್ಲಿ ಪ್ರಚಲಿತವಾಗಿರುವುದನ್ನು ನಾವಿಲ್ಲಿ ಕಾಣಬಹುದು. ಇತ್ತೀಚಿಗೆ ತಮಟೆ ವಾದನಕ್ಕೆ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಗರಿಮೆಯಾಗಿದೆ ಎಂದರು.

ಕೈವಾರ ತಾತಯ್ಯ ಎಂದೇ ಹೆಸರಾದ ಶ್ರಿನಾರಾಯಣ ಗುರುಗಳು ‘ಕಾಲಜ್ಞಾನ’ವನ್ನು ರಚಿಸಿರುತ್ತಾರೆ. ಜೈನ ಸಾಹಿತಿ ಕುಮದೇಂದು, “ಸಿರಿಭೂವಲಯ’ ಎಂಬ ಕೃತಿಯನ್ನು ರಚಿಸಿದ ಈತ ನಂದಿ ಬಳಿಯ ಯಲುವನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರದ ಕೃಷ್ಣ ಎಂಬ ಕವಿಯು “ಭಾಗವತದ ದಶಮ ಸ್ಕಂಧವನ್ನು ಆಧರಿಸಿ ಕೃಷ್ಣ ಕರ್ಣಾಮƒತ ಎಂಬ ಕೃತಿಯನ್ನು ಬರೆದಿದ್ದಾರೆ. ಬಾಡಾಲ ಸುಬ್ರಹ್ಮಣ್ಯಾ ಎಂಬುವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿದ್ದವರು. ಇವರು ‘ತಾರಾ ಶಶಾಂಕ’ ಎಂಬ ನಾಟಕವನ್ನು ಬರೆದಿದ್ದಾರೆ. ಇವರ ಜನ್ಮಸ್ಥಳವೂ ಚಿಕ್ಕಬಳ್ಳಾಪುರವೇ. ಗೌರಿಬಿದನೂರು ಬಳಿಯ ಇಡುಗೂರು ಗ್ರಾಮದ ರುದ್ರಕವಿ ಎಂಬುವರು ಕನ್ನಡದಲ್ಲಿ ‘ಶಿವನಾಟಕ’, ‘ಮಾರ್ಕಂಡೇಯ ವಿಜಯ’ ಎಂಬುದನ್ನು ಬರೆದಿರುತ್ತಾರೆ ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.

“ಕೋಲಾರದ ಗಾಂಧಿ’ ಎಂದೇ ಜನಜನಿತರಾಗಿದ್ದ ವೈಜ್ಞಾನಿಕ ಮನೋಭಾವದ ಶಿಕ್ಷಣ ತಜ್ಞ ಡಾ.ಎಚ್‌ .ನರಸಿಂಹಯ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದವರು. ಈಗ ಜಿಲ್ಲೆಯಲ್ಲಿ ಅನೇಕ ಎಂಜಿನಿಯರಿಂಗ್‌, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣ ನೀಡುವ ಕಾಲೇಜುಗಳು ತಲೆ ಎತ್ತಿ ನಿಂತಿವೆ. ಈಗ ಚಿಕ್ಕಬಳ್ಳಾಪುರದಲ್ಲಿಯೇ ದೊಡ್ಡ ವೈದ್ಯಕೀಯ ಕಾಲೇಜು ಆಗುತ್ತಿರುವುದು ಸಂತಸದ ವಿಷಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next