Advertisement

ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಗೆ ರಾಜ್ಯ ಸಚಿವ ಸ್ಥಾನ

07:57 PM Aug 03, 2022 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ಒಲಿದುಬಂದಿದೆ. ಇದರೊಂದಿಗೆ ಈ ಸ್ಥಾನಮಾನ ಪಡೆಯುತ್ತಿರುವ ಮೊದಲ ಅಧ್ಯಕ್ಷರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Advertisement

ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಗೆ ಸಮನಾದ ಸ್ಥಾನಮಾನ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಆದೇಶ ಹೊರಡಿಸಿದೆ. ಅದರಂತೆ ಇನ್ಮುಂದೆ ರಾಜ್ಯ ಸಚಿವರಿಗೆ ಸಿಗುವ ಎಲ್ಲ ಸೌಲಭ್ಯಗಳು ಪರಿಷತ್ತಿನ ಅಧ್ಯಕ್ಷರಿಗೂ ದೊರೆಯಲಿವೆ. ವಿಶ್ವದಾದ್ಯಂತ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸಲು ಮಹೇಶ್‌ ಜೋಶಿ ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಆಶಯಕ್ಕೆ ಈ ಸ್ಥಾನಮಾನವು ಮತ್ತಷ್ಟು ಪೂರಕವಾಗಲಿವೆ ಎಂದು ವಿಶ್ಲೇಷಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಇತಿಹಾಸ ಹೊಂದಿದೆ. ಇದುವರೆಗೆ ಯಾವುದೇ ಅಧ್ಯಕ್ಷರಿಗೆ ರಾಜ್ಯಸಚಿವ ದರ್ಜೆ ಸ್ಥಾನಮಾನ ದೊರೆತಿರಲಿಲ್ಲ. ಹಿಂದಿನ ಅಧ್ಯಕ್ಷರು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಮಹೇಶ್‌ ಜೋಶಿ ಅವರಿಗೆ ಅದು ಒಲಿದುಬಂದಿದೆ. ರಾಜ್ಯ ಸಚಿವ ದರ್ಜೆಗೆ ಸಮನಾದ ಸ್ಥಾನಮಾನದ ಬೆನ್ನಲ್ಲೇ ಅದೇ ಮಾದರಿಯ ವೇತನ, ಕ್ವಾಟ್ರìಸ್‌ ಇತರ ಭತ್ಯೆಗಳು, ಸರ್ಕಾರಿ ನಾಮಫ‌ಲಕದ ಕಾರು ಇತ್ಯಾದಿ ಸೌಲಭ್ಯಗಳು ಸಹ ದೊರೆಯಲಿವೆ.

ಸರ್ಕಾರ ರಾಜ್ಯ ಸಚಿವರ ದರ್ಜೆ ಸ್ಥಾನಮಾನದ ಗೌರವ ನೀಡಿರುವುದು ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ. ದೇಶ-ವಿದೇಶಗಳಲ್ಲಿ ಪರಿಷತ್ತಿನ ಘಟಕಗಳ ಸ್ಥಾಪನೆ ಜತೆಗೆ ಕನ್ನಡ ಶಾಲೆಗಳ ಪುನಶ್ಚೇತನ ಕಾರ್ಯಕ್ಕೆ ಕ್ರಿಯಾಶೀಲವಾಗಿ ಡಾ. ಮಹೇಶ ಜೋಶಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ಕೆ ಮತ್ತಷ್ಟು ಪ್ರೇರಣೆ ಸಿಕ್ಕಂತಾಗಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next