Advertisement

ಕನ್ನಡಕ್ಕೆ ಅಧ್ಯಕ್ಷರ ಕಾಣಿಕೆ

12:23 AM Nov 25, 2021 | Team Udayavani |

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ಗೆ ಮೈಸೂರು ಸಂಸ್ಥಾನದ ಮಹಾರಾಜರು, ಸಾಹಿತಿ, ವಿದ್ವಾಂಸರು, ಕನ್ನಡಪರ ಹೋರಾಟಗಾರರು ಅಧ್ಯಕ್ಷರಾಗಿ ತಮ್ಮ ಕೊಡುಗೆ ನೀಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 106 ವರ್ಷಗಳ ಇತಿಹಾಸ ಹೊಂದಿರುವ ಕಸಾಪದ ಅಧ್ಯಕ್ಷರಾಗಿ ಮೈಸೂರು ರಾಜವಂಶಸ್ಥರಾದ ನರಸಿಂಹರಾಜ ಒಡೆಯರ್‌, ಜಯಚಾಮರಾಜೇಂದ್ರ ಒಡೆಯರ್‌ ಸೇರಿ ಈವರೆಗೆ 25 ಕನ್ನಡ ಸೇನಾನಿಗಳು ಕಾರ್ಯನಿರ್ವಹಿಸಿದ್ದಾರೆ. ಪರಿಷತ್ತಿನ ಅಧ್ಯಕ್ಷರಾಗಿದ್ದವರು ಒಂದಲ್ಲ ಒಂದು ಬಗೆಯಲ್ಲಿ ಕನ್ನಡದ ಕಾಯಕ ಮಾಡಿದ್ದಾರೆ. ಈಗ 26ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ| ಮಹೇಶ್‌ ಜೋಶಿ 26ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಕ್ಷರ ಕೊಡುಗೆಗಳತ್ತ ಒಂದು ಮೆಲುಕು.

Advertisement

ಎಚ್‌.ವಿ.ನಂಜುಂಡಯ್ಯ
ಮೈಸೂರು ವಿವಿಯ ಪ್ರಥಮ ಉಪಕುಲಪತಿಗಳಾಗಿ ನೇಮಕ ಗೊಂಡಿದ್ದ ಎಚ್‌.ವಿ.ನಂಜುಂಡಯ್ಯ ಕಸಾಪ ಮೊದಲ ಅಧ್ಯಕ್ಷರಾಗುವ ಮೂಲಕ ಚರಿತ್ರೆ ಪುಟ ಸೇರಿದ್ದಾರೆ. 1915ರಲ್ಲಿ ಕಸಾಪ ಸ್ಥಾಪನೆಯಾದಾಗ ರಾಜಾಮಂತ್ರಣದ ಮೇರೆಗೆ ಇವರು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದರು. 1915ರಿಂದ ಮೂರು ಸಮ್ಮೇಳನಗಳಿಗೆ ಅಧ್ಯಕ್ಷರಾಗುವ ಮೂಲಕ ಹೊಸ ಯಶೋಗಾಥೆಯನ್ನು ಪರಿಷತ್ತಿನಲ್ಲಿ ಬರೆದಿದ್ದಾರೆ.

ಎಂ. ಕಾಂತರಾಜ ಅರಸು
ಕಸಾಪ 2ನೇ ಅಧ್ಯಕ್ಷರಾಗಿ ಎಂ.ಕಾಂತರಾಜ ಅರಸು ನೇಮಕ ವಾಗಿದ್ದರು. ಇವರ ಅವಧಿಯಲ್ಲಿ ಕರ್ಪೂರ ಶ್ರೀನಿವಾಸ ರಾವ್‌ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಕಾಲದಲ್ಲಿ ಪರಿಷತ್ತಿಗೆ ಸ್ವಂತ ನೆಲೆ ಸಿಕ್ಕಿದ್ದು ಜತೆಗೆ ಹಳೆಗನ್ನಡ ಗ್ರಂಥ ಸಂಪಾದನೆ, 6ನೇ ಕನ್ನಡ ಸಮ್ಮೇಳನದಿಂದ 18ನೇ ಸಮ್ಮೇಳನದ ವರೆಗೆ 13 ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ಅವಧಿಯಲ್ಲಿ ನಡೆದಿವೆ. ಪಂಪನ ವಿಕ್ರಮಾರ್ಜುನ ವಿಜಯವನ್ನು ತಾಳೆಗರಿಗಳ ಆಧಾರದಲ್ಲಿ ಸಂಶೋಧಿಸಿ ಪ್ರಕಟಿಸಲಾಯಿತು.

ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್‌
ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್‌ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಡಿ.ವಿ.ಗುಂಡಪ್ಪ ಅವರು ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಈ ವೇಳೆ ಪರಿಷತ್ತಿಗೆ ಭವ್ಯವಾದ ಶ್ರೀ ಕೃಷ್ಣರಾಜಪರಿಷನ್ಮಂದಿರ ಕಟ್ಟಡ ನೆಲೆಯಾಗಿ ದೊರಕಿತು.

ಜಯಚಾಮರಾಜೇಂದ್ರ ಒಡೆಯರ್‌
ಜಯಚಾಮರಾಜೇಂದ್ರ ಒಡೆಯರ್‌ ಅವಧಿಯಲ್ಲಿ ಬಿ.ಎಂ.ಶ್ರೀಕಂಠಯ್ಯ ಉಪಾಧ್ಯಕ್ಷರಾಗಿದ್ದರು. ಪರಿಷತ್ತಿನ ಪ್ರಕಟನೆಗಾಗಿ ಅಚ್ಚುಕೂಟ ಸ್ಥಾಪನೆ, ಪರಿಷತ್ತಿನಲ್ಲಿ ಮಹಿಳಾ ಶಾಖೆ ಪ್ರಾರಂಭವಾಯಿತು. ಕನ್ನಡ ಸಾಹಿತ್ಯ ಪರೀಕ್ಷೆಗಳಾದ ಕನ್ನಡ ಕಾವ್ಯ, ಕನ್ನಡ ಜಾಣ ಪರೀಕ್ಷೆಗಳನ್ನು ಪರಿಷತ್ತಿನ ವತಿಯಿಂದ ಆರಂಭಿಸಲಾಯಿತು.

Advertisement

ರಾಜಾ ಲಕಮ ಗೌಡ ಸರ್ದೇಸಾಯಿ
ರಾಜಾ ಲಕಮ ಗೌಡ ಸರ್ದೇಸಾಯಿ ತಮ್ಮ ಸ್ವಂತ ವೆಚ್ಚದಲ್ಲೇ ಪರಿಷತ್ತನ್ನು ಕಟ್ಟಲು ರಾಜ್ಯವ್ಯಾಪಿ ಪ್ರವಾಸ ಮಾಡಿದರು. ಗಮಕ ತರಬೇತಿಗಾಗಿ ಪರಿಷತ್ತು ಪ್ರೌಢ ತರಗತಿಗಳನ್ನು ಆರಂಭಿಸಿತು. ಈ ಅವಧಿಯಲ್ಲಿ ಬೇರೆ ಬೇರೆ ಭಾಗಗಳಿಂದ ಆರಿಸಿದ 6 ಜನ ಗಮಕ ಅಧ್ಯಾಪಕರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಯಿತು.

ಜಸ್ಟೀಸ್‌ ಲೋಕೂರ ನಾರಾಯಣ ರಾವ್‌
ಇವರ ಆಡಳಿತಾವಧಿಯ ವೇಳೆ ಮಾಸ್ತಿ ಉಪಾಧ್ಯಕ್ಷರಾಗಿದ್ದರು. ಕಾಸರಗೋಡು ಸಮ್ಮೇಳನದಲ್ಲಿ ತಿರುಮಲೆ ತಾತಾಚಾರ್ಯ ಅಧ್ಯಕ್ಷರಾದಾಗ ಅವರಿಗೆ ಪರಿಷತ್ತಿನ ಅಧಿಕಾರ ವಹಿಸಿಕೊಟ್ಟರು.

ತಿರುಮಲೆ ತಾತಾಚಾರ್ಯ ಶರ್ಮ
ಕನ್ನಡ ಭೀಷ್ಮ ಎಂದು ಕರೆಯಿಸಿಕೊಂಡಿದ್ದ ತಿರುಮಲೆ ತಾತಾಚಾರ್ಯ ಶರ್ಮ ಪರಿಷತ್ತಿನ 7ನೇ ಅಧ್ಯಕ್ಷರಾಗಿದ್ದರು. ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ಎಲ್‌.ಎಸ್‌.ಶೇಷಗಿರಿರಾಯರು ತಿ.ತಾ.ಶರ್ಮ ಅವರ ಪರ ಎಲ್ಲ ಕಾರ್ಯಗಳನ್ನು ನಿರ್ವಹಿಸಿದರು. ತಿತಾಶರ್ಮರು ಗಡಿನಾಡು ಪ್ರವಾಸದಲ್ಲಿ ನಿರತರಾಗಿದ್ದರು. ಶರ್ಮ ಅವರ ಕಾಲದಲ್ಲಿ ಪರಿಷತ್ತಿಗೆ ದೂರವಾಣಿ ವ್ಯವಸ್ಥೆ ಕಲ್ಪಿಸಲಾಯಿತು.

ಉತ್ತಂಗಿ ಚನ್ನಪ್ಪ
ಅಭಿನವ ಸರ್ವಜ್ಞ ಎಂದೇ ಖ್ಯಾತರಾಗಿದ್ದ ರೆವರೆಂಡ್‌ ಉತ್ತಂಗಿ ಚೆನ್ನಪ್ಪ ಪರಿಷತ್ತಿನ 8ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕಾಲದಲ್ಲಿ ಪರಿಷತ್ತಿನ ನುಡಿ ಮಾಸ ಪತ್ರಿಕೆ ಆರಂಭವಾಯಿತು.

ಎಂ.ಆರ್‌.ಶ್ರೀನಿವಾಸ ಮೂರ್ತಿ
ಕನ್ನಡ ರತ್ನತ್ರಯರಲ್ಲಿ ಒಬ್ಬರಾಗಿದ್ದ ಎಂ.ಆರ್‌.ಶ್ರೀನಿವಾಸ ಮೂರ್ತಿ ಪರಿಷತ್ತಿನ 9ನೇ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಕನ್ನಡ ನಿಘಂಟು ರಚನೆಗೆ ಸರಕಾರದಿಂದ 1 ಲಕ್ಷ ರೂ.ನೆರವು ದೊರಕಿತ್ತು. ವಯಸ್ಕರ ಶಿಕ್ಷಣಕ್ಕೆ ಪರಿಷತ್ತು ಸಹಕಾರ ನೀಡಿತ್ತು.

ಮಾಸ್ತಿ ವೆಂಕಟೇಶ ಅಯ್ಯಂಗಾರ್‌
ಮಾಸ್ತಿ ಪರಿಷತ್ತಿನ 10ನೇ ಅಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು ಮೈಸೂರು ಸರಕಾರದಿಂದ ನಿವೃತ್ತರಾದ ಅನಂತರ 1943ರಲ್ಲಿ ಪರಿಷತ್ತಿನ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪರಿಷತ್ತಿನ ಸದಸ್ಯರ ಸಂಖ್ಯೆ ಮೊದಲ ಬಾರಿ 1,500ಕ್ಕೆ ಏರಿಕೆ ಆಯಿತು. ಜತೆಗೆ ಗಣ್ಯರಿಂದ ದತ್ತಿ ಹಣವನ್ನು ಹೆಚ್ಚಿಸಿದರು.

ಎ.ಎನ್‌. ಮೂರ್ತಿರಾವ್‌
ಎ.ಎನ್‌.ಮೂರ್ತಿರಾವ್‌ ಕಸಾಪ 11ನೇ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳಲ್ಲಿ ಪರಿಷತ್‌ ಭಾಗಿ ಮಾಡಿಕೊಂಡು ಅದರ ಗ್ರಂಥ ಪ್ರಕಟನೆ ಕಾರ್ಯವನ್ನು ಪರಿಷತ್‌ಗೆ ವಹಿಸಿಕೊಂಡಿತು.

ಡಾ| ಬಿ.ಶಿವಮೂರ್ತಿ ಶಾಸ್ತ್ರಿ
ಕರ್ನಾಟಕ ಏಕೀಕರಣಕ್ಕೆ ದುಡಿದಿರುವ ಬಿ. ಶಿವಮೂರ್ತಿ ನಿಘಂಟು ರಚನ ಕಾರ್ಯಕ್ಕಾಗಿ ಸರಕಾರದಿಂದ 15 ಲಕ್ಷ ರೂ. ಪರಿಷತ್‌ಗೆ ದೊರಕಿಸಿದರು. ಪ್ರಪ್ರಥಮವಾಗಿ ಭಾಷಣ ಕಲಾತರಗತಿ ಗಳನ್ನು ಆರಂಭಿಸಿದ ಹಿರಿಮೆ ಇವರದ್ದಾಗಿದೆ. ಇವರ ಅಧಿಕಾರ ಅವಧಿಯಲ್ಲಿ 6 ಸಮ್ಮೇಳನ ನಡೆದಿವೆ.

ಪ್ರೊ.ಜಿ.ವೆಂಕಟಸುಬ್ಬಯ್ಯ
ಶತಾಯುಷಿ ನಿಘಂಟು ತಜ್ಞ ಜಿ.ವೆಂಕಟ ಸುಬ್ಬಯ್ಯ ಅವರು ಪರಿಷತ್ತಿನ 13ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪರಿಷತ್ತು ಆರ್ಥಿಕ ತೊಂದರೆಯಲ್ಲಿದ್ದಾಗ ಹೊಣೆ ಹೊತ್ತುಕೊಂಡ ಇವರು ಸರಕಾರದಿಂದ ದೊರೆಯುತ್ತಿದ್ದ ವಾರ್ಷಿಕ ಅನುದಾನವನ್ನು 25000 ರೂ.ಕ್ಕೆ ಹೆಚ್ಚಿಸಿದ್ದು ಇವರ ಹೆಗ್ಗಳಿಕೆ.

ಜಿ.ನಾರಾಯಣ
ನಾಲ್ಕು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಇವರ ಅವಧಿಯಲ್ಲಿ ನಡೆಯಿತು. 1974ರಲ್ಲಿ ಜಿ.ಪಿ.ರಾಜರತ್ನಂ ಅವರ ಅಧ್ಯಕ್ಷತೆಯಲ್ಲಿ 50ನೇ ಸಮ್ಮೇಳನ ನಡೆದಿದ್ದು ಪರಿಷತ್ತಿನ ಇತಿಹಾಸದಲ್ಲಿ ದಾಖಲೆ. ಹಳ್ಳಿಗಳಿಗೆ ಪದವೀಧರರನ್ನು ಕಳುಹಿಸಿ “ಕರ್ನಾಟಕ ಜನಪದ ಕಲೆಗಳು’ ಎಂಬ ಗ್ರಂಥ ಪ್ರಕಟವಾಯಿತು. ವಿದ್ಯಾರ್ಥಿಗಳಿಗಾಗಿ ರತ್ನಕೋಶ ಮುದ್ರ ಣವಾಯಿತು.

ಹಂಪ ನಾಗರಾಜಯ್ಯ
ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಪರಿಷತ್ತಿನ 15ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ 7 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಪರಿಷತ್ತಿನಲ್ಲಿ ಸಂಶೋಧನಾ ವಿಭಾಗ ಆರಂಭ, ಸಾಧಕರಿಗೆ ಪರಿಷತ್ತಿನ ಗೌರವ ಸದಸ್ಯತ್ವ ನೀಡಿಕೆ, ವಜ್ರಮಹೋತ್ಸವ ಭವನ ನಿರ್ಮಾಣ, ಕವಿಗಳ ಹುಟ್ಟೂರಿನಲ್ಲೆ ವಿಚಾರ ಸಂಕಿರಣ, ಅಖೀಲ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಮ್ಮೇಳನ, ಕನ್ನಡ ಶೀಘ್ರಲಿಪಿ ಬೆರಳಚ್ಚುಗಾರರ ಸಮ್ಮೇಳನಗಳು ಈ ಅವಧಿಯಲ್ಲಿ ನಡೆದಿವೆ.

ಎಚ್‌.ಬಿ.ಜ್ವಾಲಯ್ಯ
ಹಾಸನ ಮೂಲದ ನಾಟಕಕಾರ ಎಚ್‌. ಬಿ.ಜ್ವಾಲಯ್ಯ ಪರಿಷತ್ತಿನ 16ನೇ ಅಧ್ಯಕ್ಷರಾಗಿದ್ದರು. ಗಮಕ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ. ಖಾಸಗಿ ಪ್ರಕಾಶಕರ ಮತ್ತು ಲೇಖಕರ ಪರಿಷತ್ತಿನ ಮಾರಾಟ ವಿಭಾಗದಲ್ಲಿ ಇರಿಸಿ ಒಂದೇ ಸೂರಿನಡಿ ಮಾರಾಟ ವ್ಯವಸ್ಥೆ ಕಲ್ಪಿಸಿದರು.

ಜಿ.ಎಸ್‌. ಸಿದ್ದಲಿಂಗಯ್ಯ
ಶಿಕ್ಷಣ ತಜ್ಞರೂ, ಕವಿಗಳೂ ಆಗಿದ್ದ ಜಿ.ಎಸ್‌.ಸಿದ್ದಲಿಂಗಯ್ಯ ಪರಿಷತ್‌ನ 17ನೇ ಅಧ್ಯಕ್ಷರಾಗಿದ್ದರು. ಧ್ವಜದ ಅಗತ್ಯತೆ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ನೇಮಕ ಮತ್ತು ಧ್ವಜ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಲಾಯಿತು. ಬಂಡಾಯ ಸಾಹಿತ್ಯ ಚಳವಳಿಯ ಬರಹಗಾರರು ಪರಿಷತ್ತಿನಿಂದ ದೂರವಿದ್ದರು, ಅವರನ್ನು ಕರೆಯಿಸಿ ಮಾತನಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಗೊ.ರು.ಚನ್ನಬಸಪ್ಪ
18ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಗೊ.ರು.ಚನ್ನಬಸಪ್ಪ ಅವರು, ಪರಿಷತ್ತು ತನ್ನ ಕಾಲ ಮೇಲೆ ನಿಲ್ಲಬೇಕೆಂಬ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿ ಅಮೃತ ನಿಧಿ ಯೋಜನೆ ಸ್ಥಾಪಿಸಿದರು. ಪರಿಷತ್ತಿನ ಆರ್ಥಿಕ ಸ್ವಾವಲಂಬನೆಗಾಗಿ “ಒಬ್ಬ ಕನ್ನಡಿಗ-ಒಂದು ರೂಪಾಯಿ “ಘೋಷಣೆ ಮೊಳಗಿಸಿದರು. ಇದಕ್ಕಾಗಿಯೇ ಅಮೃತ ನಿಧಿ ಚೀಟಿಗಳನ್ನು ಮಾರಾಟ ಮಾಡಿದರು. 25 ಲಕ್ಷ ರೂ.ಅಮೃತ ನಿಧಿಯಿಂದ ಸಂಗ್ರಹ ವಾಯಿತು. ಮೂಲ ಹಣವನ್ನು ಬಳಸದೆ ಬಡ್ಡಿಯನ್ನು ಮಾತ್ರ ಕಾರ್ಯಕ್ರಮಗಳಿಗೆ ಬಳಸಲು ನಿಯಮ ರೂಪಿಸಲಾಯಿತು.

ಡಾ| ಸಾ.ಶಿ.ಮರುಳಯ್ಯ
ಕರ್ತವ್ಯ ನಿರ್ವಹಣೆಗೆ ಪರಿಷತ್ತಿಗೆ ತನ್ನದೆ ಆದ ಕಾರು ಇರಬೇಕೆಂಬ ಕಾರಣದಿಂದಾಗಿ ಸಾ.ಶಿ. ಮರುಳಯ್ಯ ಅವರು ಅಧ್ಯಕ್ಷರ ಓಡಾಟ ಕ್ಕೆಂದು 1995ರಲ್ಲಿ ಅಂಬಾಸಿಡರ್‌ ಡೀಸೆಲ್‌ ಎಂಜಿನ್‌ ವಾಹನವನ್ನು ಖರೀದಿಸಿದರು. ಪರಿಷತ್ತಿನ ಧ್ವಜ ಲಾಂಛನದ ಬಗ್ಗೆ ಬಿಎಂಶ್ರೀ ಚಿಂತಿಸಿದಂತೆ ಮರುಳಯ್ಯನವರು ಕಸಾ ಪದ ಪ್ರಾತಿನಿಧಿಕ ಸಂಕೇತದಂತೆ ಕರ್ನಾಟಕ ಮಾತೆಯ ವರ್ಣತೈಲ ಚಿತ್ರವನ್ನು ಬರೆಸಿದರು. ಪುಸ್ತಕಗಳನ್ನು ಪ್ರಕಟಿಸಲು ದತ್ತಿ ಇಡುವಂತೆ ಮಾಡಿದ್ದು ಕೂಡ ಇವರ ಕಾಲದಲ್ಲೆ. ರುದ್ರಾಕ್ಷಿ ಮಠದ ಸ್ವಾಮಿಗಳು ಪುಸ್ತಕ ನಿಧಿಯನ್ನು ಮೊದಲಿಗೆ ಇಟ್ಟರು. ವರನಟ ಡಾ| ರಾಜ್‌ಕುಮಾರ್‌ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗ ಅದರ 1 ಲಕ್ಷ ರೂ. ಮೊತ್ತವನ್ನು ಕಲಾ ಪ್ರಕಾರದ ಗ್ರಂಥ ಪ್ರಕಟನೆಗಾಗಿ ಪರಿಷತ್ತಿಗೆ ನೀಡಿದ್ದರು.

ಎನ್‌.ಬಸವಾರಾಧ್ಯ
ನಿಘಂಟು ತಜ್ಞ ಎನ್‌.ಬಸವಾರಾಧ್ಯ ಪರಿಷತ್ತಿನ 20ನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರಿಷತ್ತಿಗೆ ಆದಾಯ ಬರಲಿ ಎಂಬ ಉದ್ದೇಶದಿಂದ ಪರಿಷತ್ತಿನ ವಜ್ರ ಮಹೋತ್ಸವ ಕಟ್ಟಡದ ನೆಲ ಮಹಡಿಯ ಸ್ವಲ್ಪ ಭಾಗವನ್ನು ಬ್ಯಾಂಕ್‌ ಒಂದಕ್ಕೆ ಬಾಡಿಗೆ ನೀಡಿ ಪರಿಷತ್ತಿಗೆ ವರಮಾನ ಬರುವಂತೆ ಮಾಡಿದರು. ವಸ್ತು ಸಂಗ್ರಹಾಲಯದಲ್ಲಿದ್ದ ಕೃಷ್ಣರಾಜ ಒಡೆಯರ್‌ ಪ್ರತಿಮೆಯನ್ನು ಗ್ರಾನೈಟ್‌ ಕಂಬದ ಪೀಠದ ಮೇಲೆ ಕಚೇರಿ ಬಾಗಿಲ ಬಳಿ ಸ್ಥಾಪನೆ ಮಾಡಿದರು.

ಹರಿಕೃಷ್ಣ ಪುನರೂರು
ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿಯೇ ಧರ್ಮದರ್ಶಿಗಳು ಎಂಬ ಬಿರುದು ಪಡೆದಿರುವ ಹರಿಕೃಷ್ಣ ಪುನರೂರು ಕಸಾಪದ 21ನೇ ಅಧ್ಯಕ್ಷರು. ಪರಿಷತ್ತಿನ ವಾಹನ ಬಳಸದೇ ಸ್ವಂತ ವಾಹನವನ್ನೇ ಬಳಸುತ್ತಿ ದ್ದರು. ಜಿಲ್ಲಾಧ್ಯಕ್ಷರು ಪರಿಷತ್ತಿನ ಕೇಂದ್ರ ಕಚೇರಿಗೆ ಬಂದು ಹೋಗುವ ಸಲುವಾಗಿಯೇ ಪರಿಷತ್ತಿನ ಅಧ್ಯಕ್ಷರಿಗೆ ಉಚಿತ ಬಸ್‌ಪಾಸ್‌ ಸಿಗುವಂತೆ ಮಾಡಿದರು. ಪರಿಷತ್ತಿನಲ್ಲಿ ಪಂಪ ಸಭಾಂಗಣ ನಿರ್ಮಿಸಿ ಕಡಿಮೆ ಬಾಡಿಗೆಗೆ ನೀಡಿದರು.

ಚಂದ್ರಶೇಖರ ಪಾಟೀಲ (ಚಂಪಾ)
ಕವಿ, ನಾಟಕಕಾರ, ವಿಮರ್ಶಕ ಮತ್ತು ಹೋರಾಟಗಾರ ಚಂದ್ರಶೇಖರ ಪಾಟೀಲ ಪರಿಷತ್ತಿನ 22ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸರಕಾರ ತಮಿಳು ಭಾಷೆಯನ್ನು “ಶಾಸ್ತ್ರೀಯ ಭಾಷೆ’ ಎಂದು ಘೋಷಿಸಿತು. ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ಚಂಪಾ ತಮಿಳು ಭಾಷೆ ಯಷ್ಟೇ ಪ್ರಾಚೀನವಾಗಿರುವ ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನ ಸಿಗಬೇಕೆಂಬ ನಿಟ್ಟಿನಲ್ಲಿ ಹೋರಾಟದ ಅಖಾಡಕ್ಕಿಳಿ ದರು. ಪ್ರತೀ ಶನಿ ವಾರ ಪ್ರಕಾಶಕರು ಮತ್ತು ಮಾರಾಟಗಾರರನ್ನು ಪರಿಷತ್ತಿನ ಅಂಗಳಕ್ಕೆ ಆಹ್ವಾನಿಸಿ “ಶನಿವಾರ ಸಂತೆ’ ಕಾರ್ಯಕ್ರಮ ಆರಂಭಿಸಿದ್ದರು.

ನಲ್ಲೂರು ಪ್ರಸಾದ್‌
ಕನ್ನಡ ಅಧ್ಯಾಪಕರೂ ಕವಿಗಳೂ ಹಾಗೂ ಜಾನಪದ ವಿದ್ವಾಂಸರೂ ಆಗಿರುವ ಆರ್‌.ಕೆ.ನಲ್ಲೂರು ಪ್ರಸಾದ್‌ ಕಸಾ ಪದ 23ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸರಕಾರದಿಂದ ಅನುದಾನ ತಂದರೂ ಕೂಡ ಪರಿಷತ್ತು ಆರ್ಥಿಕವಾಗಿ ತನ್ನ ಕಾಲಮೇಲೆ ನಿಲ್ಲಬೇಕೆಂದುಕೊಂಡು ಕನ್ನಡ ನಿಧಿ ಸ್ಥಾಪಿಸಿ 3 ತಿಂಗಳ ಅವಧಿಯಲ್ಲಿ 10 ಲಕ್ಷ ರೂ. ಸಂಗ್ರ ಹಿ ಸಿ ದರು. 2008-09ರಲ್ಲಿ ನಾಲ್ಕು ವಿಭಾಗಗಳಿಗೆ 3 ಲಕ್ಷ ರೂ. 75ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಕೋಟಿ ರೂ. 2009-10ರಲ್ಲಿ ಸಂಶೋಧನಾ ಕೇಂದ್ರ ಯೋಜನೆಗೆ 1ಕೋಟಿ ರೂ. ಕನ್ನಡ-ಕನ್ನಡ ನಿಘಂಟು ಪ್ರಕಟಣೆಗೆ 1 ಕೋಟಿ ರೂ., ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 48 ಲಕ್ಷ ರೂ. ಹೀಗೆ 3 ವರ್ಷಗಳ ಅವಧಿಯಲ್ಲಿ ಬಹಳಷ್ಟು ಹಣವನ್ನು ಸರಕಾರದಿಂದ ಪರಿಷತ್ತಿಗೆ ತಂದುಕೊಡುವಲ್ಲಿ ಯಶಸ್ವಿಯಾದರು.

ಪುಂಡಲೀಕ ಹಾಲಂಬಿ
ಕನ್ನಡ ಪರ ಹೋರಾಟಗಾರ ಮತ್ತು ಉತ್ತಮ ಸಂಘಟಕರಾಗಿದ್ದ ಪುಂಡಲೀಕ ಹಾಲಂಬಿ ಕಸಾ ಪದ 24ನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರಿಷತ್ತಿನಲ್ಲಿ ಶತಮಾನೋತ್ಸವ ಭವನದ ಶಂಕುಸ್ಥಾಪನೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ಪ್ರಕಟನೆ. ಪರಿಷತ್ತಿಗೆ ಲಿಫ್ಟ್ ಅಳವಡಿಕೆ, ಪರಿಷತ್ತಿನ 100 ಗ್ರಂಥಗಳ ಪುನರ್‌ ಮುದ್ರಣ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳ ಪ್ರಕಟನೆ, ಅಚ್ಚುಕೂಟದ ಸುಧಾರಣೆ, ಜ್ಞಾನಪೀಠ ಪುರಸ್ಕೃತರ ಕುರಿತ ವಿಚಾರ ಸಂಕಿರಣ.

ಮನು ಬಳಿಗಾರ್‌
ಸರಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮನು ಬಳಿಗಾರ್‌ ನಿವೃತ್ತಿಯ ಅನಂತರ ಕಸಾಪದ 25ನೇ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಪರಿಷತ್ತಿನ ಬೈಲಾಗೆ ತಿದ್ದುಪಡಿ ಮಾಡಿ 3 ವರ್ಷದ ಅಧಿಕಾರ ಅವಧಿಯಲ್ಲಿ 5 ವರ್ಷಕ್ಕೆ ವಿಸ್ತರಿಸಿ ದರು. ರಾಜ್ಯದ 19 ಕಡೆಗಳಲ್ಲಿ ಕನ್ನಡ ಭವನ ನಿರ್ಮಾಣ, ದಲಿತ, ಮಹಿಳಾ ಮತ್ತು ಹಳೆ ಗನ್ನಡ ಸಾಹಿತ್ಯ ಸಮ್ಮೇಳನ ಈ ಅವಧಿಯಲ್ಲಿ ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next