Advertisement

ಭಾಷೆ ಶ್ರೀಮಂತಕ್ಕೆ ಶರಣಬಸವೇಶ್ವರ ಸಂಸ್ಥಾನ ಕೊಡುಗೆ ಅಪಾರ

03:59 PM Nov 02, 2020 | Suhan S |

ಕಲಬುರಗಿ: ಕನ್ನಡ ಮತ್ತು ಮಹಿಳಾ ಸಬಲೀಕರಣಕ್ಕೆ ಅದರಲ್ಲೂ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ ಕಾರ್ಯ ಅನುಪಮ ಮತ್ತು ಅವಿಸ್ಮರಣೀಯವಾದದ್ದು ಎಂದು ಸಂಸ್ಥಾನದ 8ನೇ ಪೀಠಾ ಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಹಾದಾಸೋಹಿ ಪೂಜ್ಯ ಡಾ| ಶರಣಬಸವಪ್ಪಅಪ್ಪ ಅಭಿಪ್ರಾಯ ಪಟ್ಟರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಗಂಣದಲ್ಲಿ ರವಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ 9ನೇ ಪೀಠಾ ಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾರವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದಿ, ಮರಾಠಿ, ಉರ್ದು ಭಾಷೆಗಳ ಪ್ರಭಾವದ ಮಧ್ಯೆ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಭಾಲ್ಕಿಯ ಪಟ್ಟದೇವರು, ರಮಾನಂದ ತೀರ್ಥ ಸ್ವಾಮಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿ  ಪತಿಗಳಾಗಿದ್ದ ಪೂಜ್ಯ ಲಿಂ| ದೊಡ್ಡಪ್ಪಅಪ್ಪಾರವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿವರಣೆ ನೀಡಿದರು.

ನಿಜಾಮರ ಆಳ್ವಿಕೆಯಲ್ಲಿ 1934ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕನ್ನಡ ಮಾಧ್ಯಮ ಶಾಲೆ ಆರಂಭಿಸುವುದರ ಮೂಲಕ ಅಂದೇ ಕನ್ನಡದ ಕಹಳೆ ಊದಿದವರು ಪೂಜ್ಯದೊಡ್ಡಪ್ಪ ಅಪ್ಪಾರವರು. ಅವರು ಆರಂಭಿಸಿದ್ದ ಈ ಶೈಕ್ಷಣಿಕ ಕ್ಷೇತ್ರಕ್ಕೆ ನಾವೆಲ್ಲರೂ ತನು-ಮನ-ಧನದಿಂದ ದುಡಿಯಬೇಕು ಎಂದು ಡಾ| ಅಪ್ಪ ಕರೆ ನೀಡಿದರು.

ಶ್ರೀಶೈಲಂ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು 12ನೇ ಶತಮಾನದ ಬಸವಾದಿ ಶರಣರು. ಅದೇ ರೀತಿ ಈ ಭಾಗದಲ್ಲಿ ಪೂಜ್ಯ ದೊಡ್ಡಪ್ಪಅಪ್ಪಾರವರು ಮತ್ತು ಪೂಜ್ಯ ಡಾ|  ರಣಬಸವಪ್ಪ ಅಪ್ಪಾರವರು ಕನ್ನಡ ಭಾಷೆ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ವಿಶಿಷ್ಟವಾದ ಪಾತ್ರ ನಿರ್ವಹಿಸಿದ್ದಾರೆ. ಈ ಭಾಗದಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಿ ಹಲವು ವಿಶ್ವವಿದ್ಯಾಲಯಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕಾಗಿದೆ ಎಂದರು.

ವಿವಿ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಮಾತನಾಡಿ, 2017ರ ವರ್ಷ ಸಂಸ್ಥಾನದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವ ವರ್ಷವಾಗಿದೆ. ಆ ವರ್ಷವೇ ನಮ್ಮ ಶರಣ ಬಸವ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಹಾಗೂ ನಮ್ಮ ಸಂಸ್ಥಾನದ 9ನೇ ಪೀಠಾ ಧಿಪತಿ ಪೂಜ್ಯ ಚಿ. ದೊಡ್ಡಪ್ಪಅಪ್ಪಾರವರು ಜನ್ಮ ಪಡೆದಿರುವದು ವಿಶೇಷವಾಗಿದೆ ಎಂದರು.

Advertisement

ವಿವಿ ಸಮ ಕುಲಪತಿ ಡಾ| ವಿ.ಡಿ. ಮೈತ್ರಿ ಅಧ್ಯಕ್ಷೀಯ ಭಾಷಣ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಎಂ.ಎಸ್‌. ಪಾಟೀಲ ರಾಜ್ಯೋತ್ಸವದ ಬಗ್ಗೆ ಹಾಗೂ ಡಾ| ಸಾರೀಕಾದೇವಿ ಕಾಳಗಿ ಪೂಜ್ಯ ಚಿ. ದೊಡ್ಡಪ್ಪಅಪ್ಪಾರವರ ಜನ್ಮದಿನ ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಿದರು. ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ವಿವಿ ಡೀನ್‌ ಬಸವರಾಜ ಮಠಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ : ದಿವ್ಯಾಂಗ ದೀಪ್ತಿ ಕವನ ಸಂಕಲನದಿಂದ ಗುಲ್ಬರ್ಗ ವಿವಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ| ಶಿವರಾಜ ಶಾಸ್ತ್ರೀ ಹೇರೂರ, ಕೀತ್ತೂರರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ವಿವಿ ಡೀನ್‌ ಡಾ| ಲಕ್ಷ್ಮೀ ಪಾಟೀಲ, ಮಾಕಾ ಹಾಗೂ ಶರಣಬಸವ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಸರಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಸುನೀಲ ಬನಶೆಟ್ಟಿ ಇವರಿಗೆ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next