Advertisement

Name board: ಭಾಷಾಂತರ ಎಡವಟ್ಟು; ಕನ್ನಡಕ್ಕೆ ಆಪತ್ತು

12:49 PM Nov 13, 2023 | Team Udayavani |

ಬೆಂಗಳೂರು: ರಾಜಧಾನಿಯ ಹಲವು ಕಡೆಗಳಲ್ಲಿ ಅಳವಡಿಸಲಾಗಿರುವ ನಾಮಫ‌ಲಕಗಳಲ್ಲಿ ಮೂಲ ಕನ್ನಡ ಪದಗಳೇ ಮಾಯವಾಗಿದ್ದು “ಗೂಗಲ್‌ ಭಾಷಾಂತರ ಕನ್ನಡ’ ಇಡೀ ಭಾಷೆಯ ಸೊಗಡನ್ನೇ ಹಾಳು ಮಾಡುತ್ತಿದೆ.ಅದರಲ್ಲೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಸಂಚಾರ ಪೊಲೀಸರು ಹಲವೆಡೆಗಳಲ್ಲಿ ಅಳವಡಿಸಿರುವ ನಾಮಫ‌ಲಕಗಳಲ್ಲಿ ಕನ್ನಡ ಅಕ್ಷರ ಮಾಲೆಯ ಕಗ್ಗೊಲೆಯಾಗಿದೆ.

Advertisement

ಸಿಲಿಕಾನ್‌ ಸಿಟಿಯ ಬಸ್‌ ನಿಲ್ದಾಣಗಳಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ಬೋರ್ಡ್ ಗಳಲ್ಲಿ ಹಾಗೂ ವಿವಿಧ ಕಾಮಗಾರಿಗಳ ಬಗ್ಗೆ ವಿವರ ನೀಡುವ ನಾಮಫ‌ಲಕಗಳಲ್ಲಿ ಗೂಗಲ್‌ ಭಾಷಾಂತರ ಕನ್ನಡ ಅಕ್ಷರಗಳ ಲೋಪ ಕನ್ನಡಪರ ಹೋರಾಟಗಾರರ ಸಿಟ್ಟಿಗೆ ಕಾರಣವಾಗಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೀಪದ ಬಾಳೇಕುಂದ್ರಿ ಸರ್ಕಲ್‌ನಲ್ಲಿ ಅಳವಡಿಸಿರುವ ಗೂಗಲ್‌ ಭಾಷಾಂತರ ಕನ್ನಡ ಬೋರ್ಡ್‌ ಇದಕ್ಕೆ ಒಂದು ತಾಜಾ ಉದಾಹರಣೆ ಆಗಿದೆ. ಅಲ್ಲಿ “ಬಾಳೇಕುಂದ್ರಿ ಸರ್ಕಲ್‌’ ಬದಲಾಗಿ ಆಂಗ್ಲ ಭಾಷೆಯಲ್ಲಿ “ಬಾಲಕುಂದ್ರಿ ಸರ್ಕಲ್‌ ‘ಎಂದು ಇದ್ದು, ಕನ್ನಡದಲ್ಲೂ ಅದನ್ನೇ ಬರೆಯಲಾಗಿದೆ. ಇಂತಹ ದೋಷಗಳಿಂದ ಕನ್ನಡಕ್ಕೆ ಅಪಮಾನದ ಜತೆಗೆ ಸಾಧಕರನ್ನೂ ಅವಮಾನಿಸಿದಂತಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ್‌ ಬೇಸರ ವ್ಯಕ್ತಪಡಿಸುತ್ತಾರೆ.

ನಗರದ ಹಲವೆಡೆಗಳಲ್ಲಿ ಪಾಲಿಕೆ ಅಳವಡಿಸಿ ರುವ ಬೋರ್ಡ್‌ಗಳು ಬಹುತೇಕ “ಗೂಗಲ್‌ ಭಾಷಾಂತರ ಕನ್ನಡ’ ಆಗಿರುವ ಹಿನ್ನೆಲೆಯಲ್ಲಿ ಬಹ ಳಷ್ಟು ವ್ಯಾಕರಣ, ಪದ ದೋಷಗಳಿವೆ. ಕರ್ನಾಟಕ ಎಂದು ಹೆಸರಿಟ್ಟ 50ರ ಸಂಭ್ರಮದಲ್ಲಿ ನಾವಿದ್ದೇವೆ. “ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಸರ್ಕಾರ ಸಂಭ್ರಮಿತ್ತಿದೆ. ಆದರೆ, ಸರ್ಕಾರಿ ಸಂಸ್ಥೆಗಳೇ ಕನ್ನಡ ಭಾಷೆಗೆ ಅಪಮಾನ ಮಾಡುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಾರೆ.

ಪಾಲಿಕೆಯ ಎಂಟೂ ವಲಯಗಳ ಕೆಲವು ವಾರ್ಡ್ ಗಳಲ್ಲಿ ಅಳವಡಿಸಲಾಗಿರುವ ಮಹನೀ ಯರ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಬಿಬಿಎಂಪಿಯ “ಗೂಗಲ್‌ ಮಿಶ್ರಣ’ ಕನ್ನಡ ನಾಮಫ‌ಲಕಗಳಿಗೆ ಕಡಿವಾಣ ಬೀಳಬೇಕು ಎಂದು ಕನ್ನಡಪರ ಹೋರಾಟಗಾರ ವ.ಚ.ಚನ್ನೇಗೌಡ ಒತ್ತಾಯಿಸುತ್ತಾರೆ.

Advertisement

ಸರ್ಕಾರ ಎಚ್ಚರ ವಹಿಸಬೇಕು: ಸರ್ಕಾರ “ಗೂಗಲ್‌ ಭಾಷಾಂತರ’ ಕನ್ನಡದ ಮೇಲೆ ಎಚ್ಚರಿಕೆ ವಹಿಸಬೇಕು. ನಮ್ಮಲ್ಲಿ ಮ್ಯಾನ್ಯುವೆಲ್‌ಗ‌ಳಿಗೆ ಯಾವುದೇ ರೀತಿಯ ಕೊರತೆಯಿಲ್ಲ. ಅವುಗಳನ್ನು ಬಳಕೆಯತ್ತ ಆಲೋಚನೆ ಮಾಡಬೇಕು. ಹಿರಿಯ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಕನ್ನಡ ಅರ್ಥವಾಗದೇ ಇದ್ದಾಗ ಗೂಗಲ್‌ ಭಾಷಾಂತರ ಕನ್ನಡದ ಮೊರೆ ಹೋಗುತ್ತಾರೆ. ಗೂಗಲ್‌ ಭಾಷಾಂತರ ನಮ್ಮ ಕನ್ನಡ ಅಕ್ಷರ ಮಾಲೆಯ ಸಿರಿತನಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮತ್ತು ಹಿರಿಯ ಸಾಹಿತಿ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ದೂರುತ್ತಾರೆ.

ಭಾಷೆ ವಿಚಾರದಲ್ಲಿ ಬರೀ ಆದೇಶಗಳಿಂದ ಏನೇನೂ ಆಗದು. ಅದಕ್ಕೆ ಶಾಸನಬದ್ಧವಾದಂತಹ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು. ಶಾಸನ ಬದ್ಧ ಕಾಯ್ದೆ ಆದಾಗ ಯಾವುದೇ ಕೋರ್ಟ್‌ ಕೂಡ ತಿರಸ್ಕಾರ ಮಾಡುವುದಿಲ್ಲ. ಸುಮ್ಮನೆ ಆದೇಶದ ರೀತಿಯಲ್ಲಿ ಕೆಲಸ ಮಾಡಿದರೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಭಾಷೆ ಮತ್ತು ಪ್ರಾದೇಶಿಕ ವಿಚಾರದಲ್ಲಿ ನಾವು ನೆರೆಯ ತಮಿಳುನಾಡಿನವರನ್ನು ನೋಡಿ ಕಲಿಯಬೇಕಾಗಿದೆ ಎನ್ನುತ್ತಾರೆ.

ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ:  ನಾವೀಗ ಕರ್ನಾಟಕ-50 ಸಂಭ್ರಮದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಕನ್ನಡದ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಪಾಲಿಕೆ ವಾರ್ಡ್‌ ಮಟ್ಟದ ನಾಮಫ‌ಲಕಗಳು, ಬಸ್‌ ನಿಲ್ದಾಣದ ಬೋರ್ಡ್‌ಗಳು ಸೇರಿ ಹಲವುಕಡೆಗಳಲ್ಲಿ ಗೂಗಲ್‌ ಭಾಷಾಂತರ ಮೂಲ ಕನ್ನಡ ಭಾಷೆಗೆ ಧಕ್ಕೆ ತಂದಿದೆ. ಇದನ್ನು ಕಸಾಪ ತೀವ್ರವಾಗಿ ಖಂಡಿಸುತ್ತದೆ ಎಂದು ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಹೇಳಿದರು. ಕೆಲವು ಹೆದ್ದಾರಿಗಳಲ್ಲಿ ಅಳವಡಿಸಿರುವ ಬೋರ್ಡ್‌ ಗಳಲ್ಲಿ ಅಕ್ಷರ ದೋಷಗಳಿವೆ. ಅವುಗಳನ್ನು ಸರಿಪಡಿಸುವ ಕಾರ್ಯಕ್ಕೆ ಸಂಬಂಧ ಪಟ್ಟ ಇಲಾಖೆಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಗೂಗಲ್‌ ಭಾಷಾಂತರ ಬಳಸಿ ತಪ್ಪಾಗಿ ಕನ್ನಡ ಬರೆಯಬಾರದು. ಸರಿಯಾದ ಪದವನ್ನು ವಿದ್ವಾಂಸರಿಂದ, ಇಲ್ಲವೇ ಶಬ್ದಕೋಶ ಬಳಸಬೇಕು. ತಪ್ಪು ಬರೆಯುವುದು ಕನ್ನಡದ ಕೊಲೆ ಮಾಡಿದಂತೆ. ಜತೆಗೆ ಭಾಷೆಗೆ ಅಪಮಾನ ಮಾಡಿದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಾಮಫ‌ಲಕಗಳಲ್ಲಿ ಕನ್ನಡವನ್ನು ಸರಿಯಾಗಿ ಬರೆಯಬೇಕು.-ಡಾ.ದೊಡ್ಡರಂಗೇಗೌಡ, ಹಿರಿಯ ಸಾಹಿತಿ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next