Advertisement

Sandalwood; ಕಾಗೆಯ ಮೇಲೊಂದು ಸಿನಿಮಾ ‘ರಾವೆನ್’

03:24 PM Sep 15, 2023 | Team Udayavani |

ಕನ್ನಡ ಚಿತ್ರರಂಗದಲ್ಲಿ ಆನೆ, ಕೋತಿ, ನಾಯಿ… ಹೀಗೆ ಅನೇಕ ಪ್ರಾಣಿಗಳ ಮೇಲೆ ಹಲವಾರು ಸಿನಿಮಾಗಳು ಬಂದಿರುವುದು ನಿಮಗೆ ಗೊತ್ತಿರಬಹುದು. ಕೆಲ ವರ್ಷಗಳ ಹಿಂದೆ ನಟ ಕಿಚ್ಚ ಸುದೀಪ್‌ ಅಭಿನಯದಲ್ಲಿ ನೊಣದ ಮೇಲೆ ಕೂಡ ಕಥೆಯನ್ನು ಹೊಂದಿದ್ದ “ಈಗ’ ಎಂಬ ಸಿನಿಮಾ ಬಂದಿತ್ತು. ಈಗ ಎಂಬ ಅಂಥದ್ದೇ ಒಂದು ಸಿನಿಮಾ ಕಾಗೆಯ ಮೇಲೂ ಬರುತ್ತಿದೆ!

Advertisement

ಕಾಗೆಯ ಮೇಲೊಂದು ಸಿನಿಮಾನಾ? ಕಾಗೆಯ ಮೇಲೆ ಸಿನಿಮಾ ಮಾಡುವುದೇನಿದೆ? ಎಂದು ನೀವು ಕೇಳಬಹುದು. ಹೌದು, ನಿಮಗೆ ಅಚ್ಚರಿ ಏನಿಸಿದರೂ ಇದು ಸತ್ಯ. ಕಾಗೆಯ ಮೇಲೆಯೇ ಕಥೆಯನ್ನು ಮಾಡಿರುವ ಸಿನಿಮಾವೊಂದು ಸೆಟ್ಟೇರಿದೆ. ಅದರ ಹೆಸರು “ರಾವೆನ್‌’

ಚಿತ್ರತಂಡ ಹೇಳುವಂತೆ, ಈ ಸಿನಿಮಾದಲ್ಲಿ ಕಾಗೆಯೇ ನಿಜವಾದ ಹೀರೋ! ಕಾಗೆಯ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ಅತ್ಯಾಧುನಿಕ ಗ್ರಾಫಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಕಾಗೆಯನ್ನು “ರಾವೆನ್‌’ ಸಿನಿಮಾದಲ್ಲಿ ತೆರೆಮೇಲೆ ಮರುಸೃಷ್ಟಿ ಮಾಡಿ, ಪಾತ್ರವಾಗಿ ಬಳಸಿಕೊಳ್ಳಲಾಗುತ್ತಿದೆ.

ಉಳಿದಂತೆ ದಿಲೀಪ್‌ ಪೈ, ಸ್ವಪ್ನ ಶೆಟ್ಟಿಗಾರ್‌, ಶ್ರೇಯ್‌ ಆರಾಧ್ಯ, ಕುಂಕುಮ, ಸುಚೇಂದ್ರ ಪ್ರಸಾದ್‌, ಲೀಲಾ ಮೋಹನ್‌ ಮೊದಲಾದವರು “ರಾವೆನ್‌’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಬೀಕ್‌ ಮೊಗವೀರ್‌ ಮತ್ತು ವಿಶ್ವನಾಥ್‌ ಜಿ. ಪಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ವೇದ್‌ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ನಡೆದ “ರಾವೆನ್‌’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು. “ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಕಾಗೆಯನ್ನು ಕಥೆಯ ಪ್ರಧಾನ ಪಾತ್ರವಾಗಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಮನುಷ್ಯ, ಕರ್ಮ, ಸಂಬಂಧ, ಯೋಚನೆಗಳ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ.

Advertisement

ಕಾಗೆಯ ಬಗ್ಗೆ ನಮಗಿರುವ ಕಲ್ಪನೆಯನ್ನು ಈ ಸಿನಿಮಾ ಬದಲಾಯಿಸುತ್ತದೆ. ಕಾಗೆಯ ಪ್ರಬೇಧ ಒಂದಕ್ಕೆ “ರಾವೆನ್‌’ ಎಂದು ಕರೆಯುತ್ತಾರೆ. ಹಾಗಾಗಿ ಈ ಸಿನಿಮಾಕ್ಕೆ ಅದನ್ನೇ ಟೈಟಲ್‌ ಆಗಿ ಇಟ್ಟುಕೊಂಡಿದ್ದೇವೆ. ಸಸ್ಪೆನ್ಸ್‌-ಥ್ರಿಲ್ಲರ್‌ ಮತ್ತು ಹಾರರ್‌ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ’ ಎಂಬುದು ಕಥಾಹಂದರದ ಬಗ್ಗೆ ಚಿತ್ರತಂಡ ನೀಡಿರುವ ವಿವರಣೆ.

“ಸದ್ಯ ಸಿನಿಮಾದ ಶೂಟಿಂಗ್‌ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂತಹಂತವಾಗಿ ನೀಡಲಿದ್ದೇವೆ’ ಎಂಬುದು ಚಿತ್ರತಂಡದ ಮಾತು. “ಕಂಠೀರವ ಸ್ಟುಡಿಯೋ’ದಲ್ಲಿ ನಡೆದ “ರಾವೆನ್‌’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಜಯಬಸವಾನಂದ ಸ್ವಾಮಿಜೀ, ಮಾಜಿ ಸಚಿವ ಕೆ. ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌, ಹಿರಿಯ ನಿರ್ದೇಶಕ ಎಂ. ಡಿ. ಶ್ರೀಧರ್‌ ಸೇರಿದಂತೆ ಚಿತ್ರರಂಗ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ಮುಹೂರ್ತ ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ “ರಾವೆನ್‌’ ಸಿನಿಮಾವನ್ನು ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next