Advertisement

ಇಂದಿನಿಂದ ಅನುಷ್ಕಾ ಆರ್ಭಟ

09:07 AM May 11, 2019 | Team Udayavani |

“ಅನುಷ್ಕಾ’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ (ಮೇ 10) ತೆರೆಕಾಣುತ್ತಿದೆ. ಈ ಹಿಂದೆ “ಡೇಂಜರ್‌ ಝೋನ್‌’ ಹಾಗೂ “ನಿಶ್ಯಬ್ಧ-2′ ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅಮೃತಾ ನಾಯಕಿಯಾದರೆ, ರೂಪೇಶ್‌ ನಾಯಕ.

Advertisement

ನಿರ್ದೇಶಕ ದೇವರಾಜ್‌ ಕುಮಾರ್‌ ಹೇಳುವಂತೆ ಚಿತ್ರದ ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆಯಂತೆ. ಅಂತಿಮವಾಗಿ ಮೂರು ಟ್ರ್ಯಾಕ್‌ಗಳಿಗೂ ಲಿಂಕ್‌ ಸಿಗಲಿದೆ. ತನ್ನ ಸಾಮ್ರಾಜ್ಯ, ಅಲ್ಲಿನ ಜನರನ್ನು ರಕ್ಷಿಸುವ ರಾಣಿಯ ಕಥೆ, ಮಧುಚಂದ್ರಕ್ಕೆ ಬಂದ ನವದಂಪತಿ ಹಾಗೂ ಸಮಾಜದಲ್ಲಿ ನಡೆದಂತಹ ನೈಜ ಘಟನೆ… ಹೀಗೆ ಮೂರು ಟ್ರ್ಯಾಕ್‌ಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಂತೆ. ಮೂರು ಟ್ರ್ಯಾಕ್‌ಗಳಲ್ಲೂ ಅಮೃತಾ ನಟಿಸುತ್ತಿದ್ದು, ಇದು ನಾಯಕಿ ಪ್ರಧಾನ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮಾರು ಮೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆಯಂತೆ.

ದೇವರಾಜ್‌ ಕುಮಾರ್‌ ಅವರ ಈ ಹಿಂದಿನ ಎರಡು ಸಿನಿಮಾಗಳಲ್ಲಿ ನಾಯಕರಾಗಿದ್ದ ರೂಪೇಶ್‌ ಶೆಟ್ಟಿಗೆ ಈ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಹಾಡೊಂದಕ್ಕಾಗಿ ವಿದೇಶಕ್ಕೂ ಚಿತ್ರತಂಡ ಹೋಗಿದೆ. ಈ ಖುಷಿ ರೂಪೇಶ್‌ ಮುಖದಲ್ಲಿ ಎದ್ದು ಕಾಣುತ್ತಿತ್ತು. “ನನ್ನ ಕೆರಿಯರ್‌ನಲ್ಲಿ ಇದು ಹೊಸ ಬಗೆಯ ಚಿತ್ರ. ದೇವರಾಜ್‌ ಈ ಹಿಂದಿನ ಎರಡು ಸಿನಿಮಾದಲ್ಲಿ ವಿಭಿನ್ನ ಪಾತ್ರ ನೀಡಿದ್ದರು.

ಈಗ ಮೂರನೇ ಸಿನಿಮಾದಲ್ಲೂ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ರೂಪೇಶ್‌. ನಾಯಕಿ ಅಮೃತಾ ಚಿತ್ರ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಗೈರಾಗಿದ್ದರು. ಉಳಿದಂತೆ ಚಿತ್ರದಲ್ಲಿ “ಕಡ್ಡಿಪುಡಿ’ ಕಾಂತರಾಜು ಹಾಗೂ ಬಲರಾಜು ವಾಡಿ ನಟಿಸಿದ್ದಾರೆ. ಚಿತ್ರವನ್ನು ಎಸ್‌.ಕೆ.ಗಂಗಾಧರ್‌ ನಿರ್ಮಿಸಿದ್ದು, ವೀನಸ್‌ ಮೂರ್ತಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next