Advertisement
ಕನ್ನಡ ಶಾಲೆಗಳನ್ನು ಉಳಿಸಿ ಎಂಬ (ತೀರಾ ಹಳೆಯ) ಬೇಡಿಕೆ, ಕೇಳಿಕೆ, ಒತ್ತಾಯಗಳೆಲ್ಲವು ಅರಣ್ಯರೋದನವಾಗುತ್ತಿವೆ. ಸರಕಾರ ಶಾಲೆಗಳನ್ನು ಉಳಿಸುವ, ಬೆಳೆಸುವ ಭರದಲ್ಲಿ ಖಾಸಗಿ ಅನುದಾನಿತ ಕನ್ನಡ ಶಾಲೆಗಳನ್ನು ನಿರುತ್ತೇಜನಗೊಳಿಸುತ್ತಾ ಪರೋಕ್ಷವಾಗಿ ಆಂಗ್ಲ ಮಾಧ್ಯಮದ ಬೆಂಗಾವಲಿಗೆ ನಿಂತಂತಿದೆ. ಸರಕಾರಕ್ಕೆ ಶೈಕ್ಷಣಿಕ ಬದಲಾವಣೆ ಯಾವ ರೀತಿಯದ್ದಾಗಿರಬೇಕೆಂಬ ಸ್ಪಷ್ಟತೆ ಯಿದ್ದಂತಿಲ್ಲ. ಗುಣಾತ್ಮಕ ಶಿಕ್ಷಣ ನೀಡುತ್ತೇವೆ, ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುತ್ತೇವೆಂಬ ಭರಪೂರ ಹೇಳಿಕೆಗಳು ಹರಿ ಯುತ್ತಲೇ ಇದೆ. ಅದಕ್ಕಾಗಿಯೇ ಸರಕಾರದ ಗುಣಮಟ್ಟದ ಶಿಕ್ಷಣವಾಹಿನಿಯಲ್ಲಿ ಬಿಳಿ ರಕ್ತ ಹರಿಯಲಾರಂಭಿಸಿದೆ. ಅದೇ ಕಾರಣದಿಂದಲೋ ಏನೋ ಸರಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಮತು ¤ಗುಣಾತ್ಮಕ ಶಿಕ್ಷಣಕ್ಕಾಗಿ ಆಂಗ್ಲ ಮಾಧ್ಯಮ ವಿಭಾಗಗಳನ್ನು ಶುರುಮಾಡುವುದು, ಆಂಗ್ಲ ಮಾಧ್ಯಮ ಶಾಲೆಗಳನ್ನೇ ತೆರೆಯು ವುದು ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳಾಗುತ್ತಿದೆ. ಕೆ.ಜಿ.ಯಿಂದ ಪಿ.ಜಿ.ಯವರೆಗೆ ಏಕಮೇವ ಉದ್ದೇಶವೂ ಅದೇ ಆಗಿದೆ. ಸರಕಾರ ಕನ್ನಡ ಶಾಲೆಗಳನ್ನು ಏನು ಮಾಡಲು ಹೊರಟಿದೆ ಎಂದೇ ಅರ್ಥ ವಾಗುತ್ತಿಲ್ಲ. ಒಂದೆಡೆ ಕನ್ನಡ ನಾಡು ನುಡಿ ಸಂಸ್ಕೃತಿ ಉಳಿಸಿ ಎಂಬ ಮೊರೆ. ಮತ್ತೂಂದೆಡೆ ಬಲಿಷ್ಠ ಕರ್ನಾಟಕ ಸಮೃದ್ಧ ಕರ್ನಾಟಕಕ್ಕಾಗಿ ಕರೆ. ಆಡಳಿತದಲ್ಲಿ ಕನ್ನಡ, ಸುತ್ತೋಲೆಯಲ್ಲಿ ಕನ್ನಡ, ಬೋರ್ಡ್ ಬರಹಗಳಲ್ಲಿ ಕನ್ನಡ, ಶಿಕ್ಷಣದಲ್ಲಿ ಕನ್ನಡ…ಹೀಗೆ ಎಲ್ಲೆಡೆ ಕನ್ನಡ ಜಾರಿ ಎನ್ನುವ ಘೋಷಣೆ. ಅಂತೂ ಕನ್ನಡ ಜಾರಿ … ಜಾರಿ… ಜಾರಿ ಹೋಗುತ್ತಿದೆ (ಡುಂಡಿರಾಜ್ರವರ ಚುಟುಕೊಂದರ ಆಯ್ದ ಭಾಗದಿಂದ). ಯಾರು ಏನೇ ಹೇಳಲಿ ಮಾತೃಭಾಷಾ ಶಿಕ್ಷಣ ಮಾಧ್ಯಮವೇ ಶ್ರೇಷ್ಠ (ಸ್ವಾತಂತ್ರ್ಯಾನಂತರ ನಿನ್ನೆ ಮೊನ್ನೆಯವರೆಗೂ ಇದ್ದದ್ದು ಅದೇ ಶೈಕ್ಷಣಿಕ ವ್ಯವಸ್ಥೆ). ಹಾಗೆಂದು ಇತರ ಭಾಷಾ ಕಲಿಕೆ ಕನಿಷ್ಠವೆಂದು ಯಾರೂ ಎಲ್ಲೂ ಹೇಳಿಲ್ಲ. ವಿಷಯ ವಿರುವುದು ಭಾಷೆಯನ್ನು ಎಷ್ಟು ಚೆನ್ನಾಗಿ ಕಲಿಸಲಾಗುತ್ತಿದೆ ಯೆಂಬುದು ಮಾತ್ರ. ಅನಿವಾರ್ಯವೋ ಎಂಬಂತೆ ನಾವೇ ಆಂಗ್ಲ ಮಾಧ್ಯಮದ ಕಕ್ಷೆಗೆ ಬಂದು ನಿಂತು ಬಿಟ್ಟಿದ್ದೇವೆ. ಅದಕ್ಕೆ ಸುತ್ತುವರಿದು ಉನ್ನತ ಶಿಕ್ಷಣಕ್ಕೆ, ಉದ್ಯೋಗ ಗಳಿಕೆಗೆ, ಸ್ಪರ್ಧಾತ್ಮಕ ಜಗತ್ತಿನ ಸವಾಲು ಎದುರಿಸಲು ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಸಾಧ್ಯವೆಂಬ ತೀರ್ಮಾನಕ್ಕೆ ಬಂದಾಗಿದೆ. ಅದನ್ನನುಸರಿಸಿ ಎಲ್ಲಾ ಸ್ತರದ, ಎಲ್ಲಾ ವಿಷಯದ ಪಠ್ಯಗಳಿಗೆ ಕನ್ನಡ ಭಾಷೆಯೆಂದರೆ ಅಸ್ಪೃಶ್ಯವಾಗಿದೆ. ನಿಜಕ್ಕೂ ಉದ್ಯೋಗಕ್ಕೆ ಬೇಕಾದದ್ದು ಏನು? ಭಾಷೆಯೊ, ಕೌಶಲವೊ? ಭಾಷಾ ಸಾಮರ್ಥ್ಯ ಎಷ್ಟು ಬೇಕು? ಖರೀದಿಗೆ ಬೇಕಾದ ಭಾಷಾ ಸಂವಹನ ಸಾಮರ್ಥ್ಯಕ್ಕಾಗಿ ಎಲ್ಲವನ್ನೂ ಭಾಷಾ ಮಾಧ್ಯಮದ ಮೂಲಕ ಅಧ್ಯಯನ ಮಾಡುವುದರ ಮೂಲಕ ಎಂತಹ ಮಾನವ ಸಂಪನ್ಮೂಲ ರೂಪುಗೊಳ್ಳಲು ಸಾಧ್ಯ? ಕನಿಷ್ಠ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಯನ್ನು ಮಾನವ ಸಂಪನ್ಮೂಲವಾಗಿ ಬೆಳೆಸಬೇಕು, ಉತ್ತಮ ನಾಗರಿಕನಾಗಿ ರೂಪು ಗೊಳ್ಳುವಂತೆ ಶೈಕ್ಷಣಿಕ ವ್ಯವಸ್ಥೆ ಇರಬೇಕು. ಆದರೆ ಆಗುತ್ತಿರುವು ದೇನು? ಯಾವ ಶೈಕ್ಷಣಿಕ ಮನೋವಿಜ್ಞಾನಿಯೂ, ಶಿಕ್ಷಣ ಚಿಂತಕನೂ ಒಂದು ಭಾಷೆಯನ್ನು ಕಲಿಯಲು ಆಯಾ ನೆಲದ ಭಾಷೆಯನ್ನು ತಿರಸ್ಕರಿಸಿ ಅನ್ಯ ಭಾಷಾ ಮಾಧ್ಯಮದಲ್ಲಿ ಕಲಿತರೆ ಮಾತ್ರ ಸಾಧ್ಯ ಎಂದು ಹೇಳಿಲ್ಲ. ಯಾವ ಭಾಷೆಯಾದರೂ ಆದೀತು ಚೆನ್ನಾಗಿ ಕಲಿಯಬೇಕು ಎಂದಿದ್ದಾರೆ. ಆದರೆ ಇಂದಿನ ಸಮಸ್ಯೆಯೇನೆಂದರೆ ಎಲ್ಲ ಶಾಲೆಗಳಲ್ಲಿ ಚೆನ್ನಾಗಿ ಕನ್ನಡ ಕಲಿಸುವ ಮತ್ತು ಪರಿಣಾಮಕಾರಿಯಾಗಿ ಆಂಗ್ಲ ಭಾಷೆ ಬೋಧಿಸುವ ವ್ಯವಸ್ಥೆ ಇಲ್ಲದಿರುವುದು.
Related Articles
Advertisement
ತರಗತಿಗೊಬ್ಬ ಶಿಕ್ಷಕರನ್ನು ನೀಡಲಿ, ಒಂದನೇ ತರಗತಿಯಿಂದ ಪರಿಣಾಮಕಾರಿಯಾಗಿ ಆಂಗ್ಲ ಭಾಷಾ ಕಲಿಕೆಗೆ ವ್ಯವಸ್ಥೆ ಮಾಡಲಿ. ಸರಕಾರವೇ ಸೃಷ್ಟಿಸಿದ ಸರಕಾರಿ ಶಾಲೆ ಮತ್ತು ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳೆಂಬ ತಾರತಮ್ಯ ನೀತಿಯನ್ನು ಹೋಗಲಾಡಿಸಿ “ಕನ್ನಡ ಶಾಲೆ’ಗಳೆಂಬ ಸಮಾನ ಧೋರಣೆಯಲ್ಲಿ ವ್ಯವಹರಿಸಲಿ. ಎಲ್ಲಾ ವಿಧದ ಶಾಲೆಗಳನ್ನು ಏಕ ರೂಪದ ಶೈಕ್ಷಣಿಕ ವ್ಯವಸ್ಥೆಯೊಳಗೆ ತಂದು ಒಂದೇ ರೀತಿಯ ಭಾಷಾ ಮಾಧ್ಯಮದ ಕಲಿಕಾ ವ್ಯವಸ್ಥೆ ಜಾರಿಗೆ ತರಲಿ. ಶಿಕ್ಷಕರನ್ನು ತರಗತಿಗೆ ಹೋಗಲು ಬಿಡಲಿ. ಇಲ್ಲವಾದರೆ ಮುಂದೊಂದು ದಿನ ಕನ್ನಡ ಶಾಲೆಗಳ ಅವಸಾನ ಮಾತ್ರವಲ್ಲ ಭಾಷೆಯ, ಮಾಧ್ಯಮದ ನೆಲೆಯಲ್ಲಿ ವರ್ಗ ಭೇದಗಳು (ಜಾತಿ, ಧರ್ಮ, ವರ್ಗ ಪಂಗಡ ಹೇಗೂ ಇದೆ) ಬೆಳೆದು ಸಾಮಾಜಿಕ, ಕೌಟುಂಬಿಕ ಆತಂಕಗಳು ಬೆಳೆದಾವು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎರಡು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆಯೆಂಬ ವರದಿಯಿದೆ. ಇನ್ನೊಂದೆಡೆಯಲ್ಲಿ ಇನ್ನೂರ ಅರುವತ್ತೂಂದು ಸರಕಾರಿ ಶಾಲೆಗಳಲ್ಲಿ ಮಕ್ಕಳೇ ದಾಖಲಾಗಿಲ್ಲ. ಶಿಕ್ಷಕರಿಗೆ ಕೆಲಸವಿಲ್ಲ ಎಂಬ ವರದಿ. ಇದಕ್ಕೆಲ್ಲ ಮುಖ್ಯ ಶಿಕ್ಷಕರು, ಶಿಕ್ಷಕರು ಹೊಣೆ ಎಂಬಂತೆ ವರ್ತಿಸುವ ಅಧಿಕಾರಿಗಳು. ಮಕ್ಕಳು ಶಾಲೆಗೆ ಸೇರುತ್ತಿಲ್ಲ ವಾದರೆ ಶಿಕ್ಷಕರ ಹೊಣೆಯನ್ನು ಒಪ್ಪೋಣ. ಆದರೆ ಒಟ್ಟು ವ್ಯವಸ್ಥೆ, ದೋಷಗಳು, ಶಿಕ್ಷಕರ ನೇಮಕಾತಿ, ಕಲಿಕಾ ಖಾತ್ರಿ ಇವೆಲ್ಲ ಎಲ್ಲಿ ಹೋದವು? ಸುದೀರ್ಘ ಇತಿಹಾಸವುಳ್ಳ ಶಾಲೆ, ಸಾವಿರಾರು ಜನರನ್ನು ಸುಶಿಕ್ಷಿತರನ್ನಾಗಿ ಮಾಡಿದ ಶಾಲೆ, ಎಷ್ಟೊ ಮಂದಿ ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದ ಶಾಲೆ ಮುಚ್ಚುವ ಸ್ಥಿತಿಗೆ ಬಂದಿದೆಯೆಂಬ ವರದಿ ವಿಷಾದವೋ, ಹೆಮ್ಮೆಯೋ …? ಆ ಸುದ್ದಿ ಯಾರನ್ನೂ ತಲ್ಲಣಗೊಳಿಸಲಿಲ್ಲವೇಕೆ? “ಅದೆಲ್ಲ ಮಾಮೂಲಿ ಮಕ್ಕಳಿಲ್ಲದಿದ್ದರೆ ಮತ್ತೇನು ಮಾಡುವುದು’ ಎಂಬುದು ನಮ್ಮ ನಿರ್ಲಿಪ್ತತೆಯೊ? ನಿರ್ಜೀವ ಸ್ಥಿತಿಯೋ? ಮುಚ್ಚಲು ಬಿಡಬಾರದು, ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಆಗಬೇಕು, ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂಬುದು ಹೇಳಿಕೆಗಷ್ಟೆ ಕನ್ನಡ ಪರ ಧೋರಣೆ ಸೀಮಿತವಾಯಿತೇ? ಅಂತೂ ಸರಕಾರದ ಶೈಕ್ಷಣಿಕ ಅಭಿವೃದ್ಧಿ ನೀತಿಗಳಿಂದಾಗಿ ಕನ್ನಡ ಶಾಲೆಗಳು ಮುಚ್ಚಲಾರಂಭಿಸಿವೆ (ಪ್ರಾಥಮಿಕ ಮಾತ್ರವಲ್ಲ, ಪ್ರೌಢ ಶಾಲೆಗಳು ಕೂಡಾ). ಇಂತಹ ಪರದೇಸೀ ಪರಿಸ್ಥಿತಿ ನಮ್ಮ ನಾಡು-ನುಡಿ-ಸಂಸ್ಕೃತಿಗೆ ಬಂದದ್ದು ದುರಂತದ ಲಕ್ಷಣ. ಶಿಕ್ಷಣ ಹೆಚ್ಚಿದಂತೆಲ್ಲ, ವ್ಯಾಪಕವಾದಂತೆಲ್ಲಾ “ಹಳ್ಳಿಗಳೆಲ್ಲ ವೃದ್ಧಾಶ್ರಮ ಗಳಂತಾಗಿಬಿಟ್ಟಿವೆ’ ಎಂಬ ಮಾತು ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಜೊತೆಗೆ ಕನ್ನಡ ಶಾಲೆಗಳೆಲ್ಲ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವನ್ನು ಕಾಣುತ್ತಾ ಮುಚ್ಚುವ ಭೀತಿ ಗೊಳಗಾಗಿದೆ. ಒಂದಂತೂ ಸತ್ಯ; ಯಾವ ವೃದ್ಧರೂ ಇನ್ನು ಆತಂಕಕ್ಕೊಳಗಾಗಬೇಕಾದ್ದಿಲ್ಲ. ಏಕೆಂದರೆ ಮುಚ್ಚುವ ಕನ್ನಡ ಶಾಲೆಗಳು ಮತ್ತೆ ನಿಮಗೆ ಭದ್ರವಾದ, ಬೆಚ್ಚಗಿನ ಆಶ್ರಯ ತಾಣಗಳಾಗಲಿವೆ. ಹಾಗಾಗಿ ಕನ್ನಡ ಶಾಲೆಗಳು ಮಾರಾಟಕ್ಕಿವೆ. ಕೇವಲ ಶಾಲೆಗಳು ಮಾತ್ರವಲ್ಲ ಶಾಲೆಯ ಎಲ್ಲ ಸರಕು, ಸಂಪತ್ತುಗಳೂ. ಅಂತಿಮವಾಗಿ ಕನ್ನಡ ನಾಡು ಕೂಡಾ.
ರಾಮಕೃಷ್ಣ ಭಟ್ ಚೊಕ್ಕಾಡಿ