ಶಹಾಬಾದ: ಭಂಕೂರ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ತಾಪುರ ಹಾಗೂ ಸರಕಾರಿ ಪ್ರೌಢಶಾಲೆ ಭಂಕೂರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಅಂತರ್ ಕನ್ನಡ ಪ್ರೌಢಶಾಲೆ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಶಹಾಬಾದ ನಗರ,ಹೊನಗುಂಟಾ, ಭಂಕೂರ, ಮುಗುಳನಾಗಾವ, ಮಾಲಗತ್ತಿ, ಪೇಠಸಿರೂರ ಸೇರಿದಂತೆ ಅನುದಾನಿತ, ಅನುದಾನರಹಿತ ಹಾಗೂ ಸರಕಾರಿ ಪ್ರೌಢಶಾಲೆ ಮಕ್ಕಳು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದರು. ಸುಮಾರು 249 ವಿದ್ಯಾರ್ಥಿಗಳಿಂದ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 50 ಪ್ರಶ್ನೆಗಳ ಲಿಖೀತ ಪರೀಕ್ಷೆ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಶಾಲೆ ಶಿಕ್ಷಕರಿಗೆ ಉತ್ತರ ನೀಡಿ ಮೌಲ್ಯಮಾಪನ ಮಾಡಿಸಲಾಯಿತು. ಲಿಖೀತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಚೀಟಿ ಎತ್ತುವ ಮೂಲಕ ವಿದ್ಯಾರ್ಥಿಗಳ ಒಂದೊಂದು ಗುಂಪಾಗಿ ಮಾಡಲಾಯಿತು. ಒಟ್ಟು ನಾಲ್ಕು ಗುಂಪು ಮಾಡಿ ನಿಷ್ಪಕ್ಷಪಾತವಾಗಿ ಎಲ್ಲ ಶಿಕ್ಷಕರ ಮುಂದೆ ಪ್ರಶ್ನೆ ಕೇಳಲಾಯಿತು.
ಅಲ್ಲದೇ ಆಯ್ಕೆಯಾಗದ ವಿದ್ಯಾರ್ಥಿಗಳ ಒಂದು ಗುಂಪು ಮಾಡಿ ಅವರಿಗೂ ಪ್ರಶ್ನೆ ಕೇಳಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಬಹುಮಾನ ವಿತರಣೆ ಮಾಡಲಾಯಿತು. ಗಂಗಾ ತಂಡದ ವಿದ್ಯಾರ್ಥಿಗಳಾದ ಚಂದನಾ ಅಶೋಕ (ಬಸವ ಸಮಿತಿ ಪ್ರೌಢಶಾಲೆ ಭಂಕೂರ), ಪ್ರೇಮ ಸೂರ್ಯಕಾಂತ (ಸರಕಾರಿ ಪ್ರೌಢಶಾಲೆ ಭಂಕೂರ), ವಿಶಾಲ ಮನೋಹರ (ಕೂ.ಸಂ.ಪ್ರೌ.ಶಾಲೆ ಶಹಾಬಾದ) ಪ್ರಥಮ, ಭೀಮಾ ತಂಡದ ವಿದ್ಯಾರ್ಥಿಗಳಾದ ಪೃಥ್ವಿರಾಜ ಜೈಸಾಗರ (ಬಸವ ಸಮಿತಿ ಪ್ರೌಢಶಾಲೆ ಭಂಕೂರ), ವಿದ್ಯಾಶ್ರೀ ರಾಜಶೇಖರ (ಸರಕಾರಿ ಪ್ರೌಢಶಾಲೆ ಪೇಠಸಿರೂರ), ಮಹಾದೇವಿ ಮಲ್ಲಿಕಾರ್ಜುನ (ಸರಕಾರಿ ಪ್ರೌಢಶಾಲೆ ಮಾಲಗತ್ತಿ) ದ್ವಿತೀಯ ಸ್ಥಾನ ಪಡೆದುಕೊಂಡರು.
ರಸಪ್ರಶ್ನೆ ಕಾರ್ಯಕ್ರಮದ ಆಯೋಜಕ ದತ್ತಪ್ಪ ಕೋಟನೂರ, ದಾನಿಗಳಾದ ಹೊನಗುಂಟಾ ಪ್ರೌಢಶಾಲೆ ದೈಹಿಕ ಶಿಕ್ಷಕ ಎಚ್.ವೈ. ರಡ್ಡೇರ, ಶಿಕ್ಷಕರಾದ ಈರಣ್ಣ ಕೆಂಭಾವಿ, ವಿಷ್ಣುತೀರ್ಥ ಆಲೂರ, ಶಾಂತಮಲ್ಲ ಶಿವಭೋ, ಎಂ.ಡಿ. ಜಕಾತೆ, ಸೀತಮ್ಮ ಎನ್., ಆನಂದ ಕುಲಕರ್ಣಿ, ಶಿವಲಿಂಗಪ್ಪ,
ದತ್ತಾತ್ರೇಯ ಕುಲಕರ್ಣಿ, ಗಿರಿಮಲ್ಲಪ್ಪ ವಳಸಂಗ, ಸುಧೀರ ಕುಲಕರ್ಣಿ, ರಮೇಶ ಜೋಗದನಕರ್ ಹಾಜರಿದ್ದರು.