Advertisement

ಕಂಚಿನಡ್ಕಪದವು ತ್ಯಾಜ್ಯ ಘಟಕವೇ ದೊಡ್ಡ ಸವಾಲ

10:44 AM Sep 19, 2022 | Team Udayavani |

ಬಂಟ್ವಾಳ: ಸದಾ ವಿವಾದದಲ್ಲೇ ಇರುವ ಕಂಚಿನಡ್ಕಪದವು ತ್ಯಾಜ್ಯ ಘಟಕವನ್ನು ಒಳಗೊಂಡಿರುವ ಸಜೀಪನಡು ಗ್ರಾಮದ ಒಂದು ಬದಿ ಯಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದರೆ ಮತ್ತೂಂದು ಬದಿ ಗುಡ್ಡಗಾಡು ಪ್ರದೇಶ. ಗ್ರಾಮವು ಈ ಹಿಂದೆ ಬಂಟ್ವಾಳ ತಾಲೂಕಿನಲ್ಲಿದ್ದರೂ, ವಿಭಜನೆ ಸಂದರ್ಭ ಉಳ್ಳಾಲಕ್ಕೆ ಸೇರಿದೆ.

Advertisement

ಗ್ರಾಮದ ಇತಿಹಾಸವನ್ನು ನೋಡಿದರೆ ಸಜೀಪಮಾಗಣೆ ವ್ಯಾಪ್ತಿಯ 4 ಗ್ರಾಮಗಳಲ್ಲಿ ಇದು ಕೂಡ ಒಂದಾಗಿದೆ. ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಸಜೀಪನಡು ಗ್ರಾಮದ ಕೆಲವೊಂದು ಸಮಸ್ಯೆಗಳಿಗೆ ಇನ್ನೂ ಕೂಡ ಪರಿಹಾರ ಕಂಡಿಕೊಳ್ಳಲು ಸಾಧ್ಯವಾಗಿಲ್ಲ.

2011ರ ಜನಗಣತಿಯ ಪ್ರಕಾರ ಸಜೀಪನಡು ಗ್ರಾಮದ ಜನ ಸಂಖ್ಯೆ 5847 ಇದ್ದು, ಗ್ರಾಮವು 379 ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ. ಧಾರ್ಮಿಕವಾಗಿ ನೋಡಿದರೆ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ನಾಲ್ಕೈತ್ತಾಯ ದೈವಸ್ಥಾನ, ಸಜೀಪ ಜಂಕ್ಷನ್‌ನಲ್ಲಿ ಮಸೀದಿಯೊಂದಿದ್ದು, ಅದರ ಅಧೀನದಲ್ಲಿ ಸುಮಾರು 11 ಮಸೀದಿಗಳಿವೆ. ಆರೋಗ್ಯ ವಿಚಾರಕ್ಕೆ ಸಂಬಂಧಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದಲ್ಲೇ ಇದೆ.

ಆಕರ್ಷಕ ರುದ್ರಭೂಮಿ

ಕಂಚಿನಡ್ಕಪದವು ಹಿಂದೂ ರುಧ್ರ ಭೂಮಿವು ಇಡೀ ಜಿಲ್ಲೆಯಲ್ಲೇ ಮಾದರಿ ಎನಿಸಿಕೊಂಡಿದ್ದು, ಇಲ್ಲಿ 12 ಅಡಿ ಎತ್ತರದ ಶಿವನ ವಿಗ್ರಹ, 9 ಅಡಿ ಎತ್ತರದ ಸತ್ಯ ಹರಿಶ್ಚಂದ್ರನ ವಿಗ್ರಹ ಹಾಗೂ 43 ಅಡಿ ಎತ್ತರದ ತ್ರಿಶೂಲ ವಿಶೇಷ ಎನಿಸಿಕೊಂಡಿದೆ. ಇಲ್ಲಿ ಶಿವರಾತ್ರಿಯ ದಿನ ರಾತ್ರಿ ಭಜನೆ ನಡೆಯುತ್ತದೆ.

Advertisement

ಅಧಿವೇಶನದಲ್ಲೂ ಚರ್ಚೆ

ಗ್ರಾಮದ ಕಂಚಿನಡ್ಕಪದವುನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಘಟಕವು ಪದೇ ಪದೇ ವಿವಾದಕ್ಕೆ ಕಾರಣವಾಗಿ ಸುದ್ದಿಯಾಗುತ್ತಿದೆ. ಈ ವಿಚಾರದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲೂ ಸಭೆ ನಡೆದಿದ್ದು, ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಕಳೆದ ಒಂದೆರಡು ತಿಂಗಳ ಹಿಂದೆ ಶಾಸಕ ಯು.ಟಿ.ಖಾದರ್‌ ಅವರು ಘಟಕಕ್ಕೆ ಭೇಟಿ ನೀಡಿ ಬೀಗ ಹಾಕಿದ ಘಟನೆಯೂ ನಡೆದು ಬಳಿಕ ಎಚ್ಚರಿಕೆ ನೀಡಿ ಸಮರ್ಪಕ ಕಸ ವಿಲೇವಾರಿಗೆ ಆದೇಶ ನೀಡಿದ್ದರು.

ನಿವೇಶನದ ಸಮಸ್ಯೆ

ಗ್ರಾಮದಲ್ಲಿ ನಿವೇಶನರಹಿತರು ಹಲವಾರು ಮಂದಿ ಇದ್ದಾರೆ. ಆದರೆ ಅವರಿಗೆ ನಿವೇಶನ ಹಂಚಲು ಗ್ರಾಮ ದಲ್ಲಿ ಸರಕಾರಿ ಭೂಮಿಯೇ ಇಲ್ಲ ಎಂಬ ಆರೋಪವಿದೆ. ಇದ್ದ ಸರಕಾರಿ ಭೂಮಿಯಲ್ಲಿ 9 ಎಕ್ರೆ ಪ್ರದೇಶ ವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲಾಗಿದ್ದು, 3 ಎಕ್ರೆ ಪ್ರದೇಶ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀಡಲಾಗಿದೆ. ನಿವೇಶನಕ್ಕಾಗಿ 400ಕ್ಕೂ ಅಧಿಕ ಅರ್ಜಿಗಳು ಗ್ರಾ.ಪಂ.ಗೆ ಸಲ್ಲಿಕೆಯಾಗಿದೆ.

1970ರ ಅವಧಿಯಲ್ಲಿ ನೆರೆ ಬಂದ ಸಂದರ್ಭ ಸ್ಥಳೀಯ ನಿರಾಶ್ರಿತರಿಗೆ ಗ್ರಾಮದ ಕುಂಟಾಲ್‌ಗ‌ುಡ್ಡೆ ಪ್ರದೇಶದಲ್ಲಿ ನಿವೇಶನ ನೀಡಿದ್ದು, ಪ್ರಸ್ತುತ ಅಲ್ಲಿ 28 ಕುಟುಂಬಗಳು ವಾಸಿಸುತ್ತಿವೆ. ಆದರೆ ಇಂದಿಗೂ ನಿರಾಶ್ರಿತರ ಕಾಲನಿಗೆ ರಸ್ತೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಮದ ಕೋಣೆಮಾರು ಎಂಬ ಪ್ರದೇಶದಲ್ಲಿ ಗುಡ್ಡ ಕುಸಿಯುವ ಸಮಸ್ಯೆ ಇದ್ದು, ಬೈಲಗುತ್ತು ಪ್ರದೇಶದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಕೃತಕ ನೆರೆಯ ಉಂಟಾಗುವ ಸಮಸ್ಯೆಯೂ ಗ್ರಾಮದಲ್ಲಿದೆ.

ಪಿಯುಸಿಯ ಬೇಡಿಕೆ ಇದೆ

ಗ್ರಾಮದಲ್ಲಿ 2 ಸರಕಾರಿ ಹಿ.ಪ್ರಾ.ಶಾಲೆಗಳು, 1 ಕಿ.ಪ್ರಾ.ಶಾಲೆ ಹಾಗೂ 1 ಪ್ರೌಢಶಾಲೆ ಇದ್ದು, ಸಜೀಪನಡು ಸರಕಾರಿ ಹಿ.ಪ್ರಾ.ಶಾಲೆಯು ಶತಮಾನದ ಹೊಸ್ತಿನಲ್ಲಿದ್ದು, 2023ಕ್ಕೆ ನೂರು ವರ್ಷ ಪೂರ್ತಿಯಾಗುತ್ತದೆ. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಉತ್ತಮವಾಗಿದ್ದು, ಪ್ರಸ್ತುತ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಯಾವುದೇ ಕಾಲೇಜು ಇಲ್ಲವಾಗಿದ್ದು, ಹೀಗಾಗಿ ಪ.ಪೂ.ಕಾಲೇಜು ಬೇಕು ಎಂಬ ಬೇಡಿಕೆ ಇದೆ.

ಗ್ರಾಮದಲ್ಲಿ ಇದ್ದ ಸರಕಾರಿ ಭೂಮಿಯನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀಡಿದ ಪರಿಣಾಮ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗಾಗಿ ಸರಿಯಾದ ಸರಕಾರಿ ಭೂಮಿ ಇಲ್ಲ. ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು ಗ್ರಾಮದ ಆಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗಿದ್ದು ಇದನ್ನು ಮೆಟ್ಟಿ ನಿಲ್ಲಬೇಕಾದುದು ಮೊದಲ ಆದ್ಯತೆಯಾಗಿದೆ.

ನಿವೇಶನ ಹಂಚಿಕೆಗೆ ಭೂಮಿ ಇಲ್ಲ: ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ಸರಕಾರಿ ಭೂಮಿಯೇ ಇಲ್ಲವಾಗಿದೆ. ಈಗಾಗಲೇ 400ಕ್ಕೂ ಅಧಿಕ ನಿರಾಶ್ರಿತರಿಂದ ಅರ್ಜಿ ಸಲ್ಲಿಕೆಯಾಗಿದೆ. ಕಂಚಿನಡ್ಕಪದವು ತ್ಯಾಜ್ಯ ಘಟಕ ಇಡೀ ಗ್ರಾಮಕ್ಕೆ ದೊಡ್ಡ ಸಮಸ್ಯೆಯಾಗಿದೆ. –ಫೌಝಿಯಾ ಬಾನು, ಅಧ್ಯಕ್ಷರು, ಸಜೀಪನಡು ಗ್ರಾ.ಪಂ

ಆ್ಯಂಬುಲೆನ್ಸ್‌ ವ್ಯವಸ್ಥೆ: ನಮ್ಮ ಗ್ರಾಮದ ರುದ್ರಭೂಮಿಗೆ ಉತ್ತಮ ಹೆಸರಿದೆ. ಪ್ರಸ್ತುತ ಅದಕ್ಕೆ ದಾನಿಗಳ ಸಹಕಾರದಿಂದ ಆ್ಯಂಬುಲೆನ್ಸ್‌ ವ್ಯವಸ್ಥೆವನ್ನು ಮಾಡುತ್ತಿದ್ದೇವೆ. -ಯಶವಂತ ದೇರಾಜೆ, ರುದ್ರಭೂಮಿ ಅಭಿವೃದ್ಧಿಯ ರೂವಾರಿ  

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next