Advertisement

ಕಂಬಳ: ರಾಷ್ಟ್ರಪತಿ ಅಂಗಳದತ್ತ: ತಿದ್ದುಪಡಿ ಮಸೂದೆಗೆ ಕೊನೆಗೂ ಒಪ್ಪಿಗೆ

03:45 AM Jun 15, 2017 | Team Udayavani |

ಮಂಗಳೂರು: “ಕಂಬಳ’ ವನ್ನು ಯಥಾ ಪ್ರಕಾರ ಮುಂದು ವರಿಸುವ ರಾಜ್ಯ ಸರಕಾರದ “ಕಂಬಳ ತಿದ್ದುಪಡಿ ಮಸೂದೆ’ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆ ಮತ್ತು ಗೊಂದಲ ನಿವಾರಣೆಯಾಗಿದ್ದು, ಈ ಮಸೂದೆಯ ಕಡತ ಗೃಹ ಸಚಿವಾಲಯ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಂಬಳ ಮಸೂದೆ ರಾಷ್ಟ್ರಪತಿ ಅವರ ಅಂಕಿತದೊಂದಿಗೆ ಕಾನೂನು ಆಗಿ ಜಾರಿಯಾಗಲಿದೆ.

Advertisement

ದಿಲ್ಲಿಯಲ್ಲಿ ಬುಧವಾರ ಸಾಂಖೀÂಕ ಖಾತೆ ಸಚಿವ ಡಿ.ವಿ.  ಸದಾನಂದ ಗೌಡ ಅವರ ನೇತೃತ್ವದಲ್ಲಿ ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ ಹಾಗೂ ಕಂಬಳ ಸಮಿತಿಯ ಅಶೋಕ್‌ ಕುಮಾರ್‌ ರೈ ಅವರು ಕಂಬಳ ಮಸೂದೆಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ನಡೆಸಿದ ಪ್ರಯತ್ನ ಯಶಸ್ವಿ ಯಾಗಿದೆ. ಮಹತ್ವದ ಬೆಳವಣಿಗೆ ಅಂದರೆ, ರಾಜ್ಯ ಸರಕಾರವು ಸಚಿವ ಸಂಪುಟದ ಒಪ್ಪಿಗೆ ಪಡೆದು ಕೆಲವು ಪರಿಷ್ಕರಣೆಯೊಂದಿಗೆ 2ನೇ ಸಲ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ “ಕಂಬಳ ತಿದ್ದುಪಡಿ ಮಸೂದೆ’ಗೆ ಬುಧವಾರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಸಹಿ ಹಾಕಿದ್ದು, ಆ ಮೂಲಕ ಕಾನೂನು ಇಲಾಖೆಯಿಂದ ಹಲವು ತಿಂಗಳಿನಿಂದ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ. ಇದರೊಂದಿಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು, ರಾಜ್ಯಪಾಲರ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದ ಈ “ಕಂಬಳ ತಿದ್ದುಪಡಿ ಮಸೂದೆ’ಗೆ ಈಗ ಅರಣ್ಯ ಮತ್ತು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆ ಸಿಕ್ಕಿದೆ.

ಈ ಹಿಂದೆ ಕೇವಲ ಅರಣ್ಯ ಹಾಗೂ ಸಂಸ್ಕೃತಿ ಸಚಿವಾಲಯದಿಂದಷ್ಟೇ ಒಪ್ಪಿಗೆ ಲಭಿಸಿತ್ತು. ಆದರೆ, ವಿಧೇಯಕದಲ್ಲಿನ ಕೆಲವು ಪದ ಬಳಕೆಗೆ ಕಾನೂನು ಸಚಿವಾಲಯ ಆಕ್ಷೇಪವೆತ್ತಿದ್ದ ಕಾರಣ ಕಡತವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳುಹಿಸಲಾಗಿತ್ತು. 

ಶೀಘ್ರ ರಾಷ್ಟ್ರಪತಿ ಅಂಕಿತ ಸಾಧ್ಯತೆ
ಕೇಂದ್ರ ಸರಕಾರಕ್ಕೆ 2ನೇ ಬಾರಿ ಕಳುಹಿಸಿದ್ದ “ಕಂಬಳ ತಿದ್ದುಪಡಿ ವಿಧೇಯಕ’ ನಾನಾ ಕಾರಣಗಳಿಂದಾಗಿ ಒಪ್ಪಿಗೆ ಪಡೆಯದೆ ಕಾನೂನು ಸಚಿವಾಲಯದಲ್ಲೇ ಬಾಕಿಯಾಗಿತ್ತು. ಶೀಘ್ರದಲ್ಲೇ ರಾಷ್ಟ್ರ#ಪತಿ ಚುನಾವಣೆ ಇರುವ ಕಾರಣ, “ಕಂಬಳ ತಿದ್ದುಪಡಿ ವಿಧೇಯಕ’ಕ್ಕೆ ಆದಷ್ಟು ಬೇಗ ರಾಷ್ಟ್ರಪತಿಗೆ ಕಳುಹಿಸಲು ಅನುಕೂಲ ಮಾಡುವ ಉದ್ದೇಶದಿಂದ ನಾವು ನಮ್ಮ ಸ್ವಂತ ಖರ್ಚಿನಲ್ಲಿ ಬುಧವಾರ ಹೊಸದಿಲ್ಲಿಗೆ ಬಂದಿದ್ದೆವು. ನಮಗೆ ಇಲ್ಲಿ ಕೇಂದ್ರ ಸಚಿವ ಸದಾನಂದಗೌಡರು ಸಾಥ್‌ ಕೊಟ್ಟಿದ್ದು, ಅವರ ಮುತುವರ್ಜಿಯಿಂದಾಗಿ ಒಂದೇ ದಿನದಲ್ಲಿ ಕಂಬಳ ವಿಧೇಯಕಕ್ಕೆ ಕಾನೂನು ಸಚಿವಾಲಯದ ಒಪ್ಪಿಗೆ ಸಿಕ್ಕಿದೆ. ಸದಾನಂದಗೌಡರು ಖುದ್ದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರನ್ನು ಭೇಟಿ ಮಾಡಿ ಕಡತವನ್ನು ಮತ್ತೆ ಗೃಹ ಇಲಾಖೆಗೆ ಕಳುಹಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗೃಹ ಇಲಾಖೆ ಮೇಲೂ ನಮ್ಮ ಭಾಗದ ಜನಪ್ರತಿನಿಧಿಗಳು ಒತ್ತಡ ಹೇರಿದರೆ ಕೆಲವೇ ದಿನಗಳಲ್ಲಿ “ಕಂಬಳ ತಿದ್ದುಪಡಿ ವಿಧೇಯಕ’ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗುವ ಸಾಧ್ಯತೆಯಿದೆ’ ಎನ್ನುತ್ತಾರೆ ಕಂಬಳ ಅಕಾಡೆಮಿಯ ಸಂಚಾಲಕ ಕೆ. ಗುಣಪಾಲ ಕಡಂಬ.

ಕಂಬಳ ವಿಧೇಯಕದ ಹಿನ್ನೆಲೆ 
ಪ್ರಾಣಿ ಹಿಂಸೆಯ ನೆಪವೊಡ್ಡಿ ಕಂಬಳ ಸಹಿತ ಇದೇ ರೀತಿಯ ಕ್ರೀಡೆಗಳನ್ನು ರದ್ದುಪಡಿಸುವಂತೆ ಪ್ರಾಣಿದಯಾ ಸಂಘದವರು 2014ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಅನಂತರ ನ್ಯಾಯಾಲಯವು ಈ ರೀತಿಯ ಆಚರಣೆಗಳಿಗೆ ತಡೆಯಾಜ್ಞೆ ನೀಡಿತ್ತು. ಮುಂದೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಉಳಿಸಲು ಬೃಹತ್‌ ಆಂದೋಲನ ನಡೆದು ಸರಕಾರ ಒಪ್ಪಿಗೆ ಪಡೆ ಯುವಲ್ಲಿ ಯಶಸ್ವಿಯಾಗಿತ್ತು. ಅನಂತರ 2016ರಲ್ಲಿ ಕಂಬಳದ ಪರ ಜನರ ಹೋರಾಟ ಜೋರಾದಾಗ ರಾಜ್ಯ ಸರಕಾರವೇ ಅದಕ್ಕೆ ಪೂರಕವಾಗಿ ಕಾನೂನು ರೂಪಿಸಲು ಮುಂದಾಯಿತು. ಅದರಂತೆ “ಪ್ರಾಣಿ ಹಿಂಸೆ‌ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017′ ಅನ್ನು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಫೆ.7ರಂದು ರಾಜ್ಯಪಾಲರ ಒಪ್ಪಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ಫೆ.23ರಂದು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. ಅಲ್ಲಿಂದ ಈ ವಿಧೇಯಕ ಗೃಹ ಸಚಿವಾಲಯಕ್ಕೆ ಬಂದಿದ್ದು, ಅನಂತರ ಅದನ್ನು ಪರಿಸರ, ಸಂಸ್ಕೃತಿ ಹಾಗೂ ಕಾನೂನು ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಅದರಂತೆ ಪರಿಸರ ಮತ್ತು ಸಂಸ್ಕೃತಿ ಇಲಾಖೆ ತನ್ನ ಒಪ್ಪಿಗೆ ಸೂಚಿಸಿತ್ತು. ಆದರೆ, ಪ್ರಾಣಿ ಹಿಂಸೆ ವಿಚಾರವಾಗಿ ವಿಧೇಯಕದಲ್ಲಿ ಬಳಸಿದ ಪದವೊಂದು ಸೂಕ್ತವಲ್ಲದ ಕಾರಣ ಕಾನೂನು ಸಚಿವಾಲಯ ವಿಧೇಯಕಕ್ಕೆ ತನ್ನ ಒಪ್ಪಿಗೆ ನೀಡಿರಲಿಲ್ಲ. 

Advertisement

ಈ ವಿಧೇಯಕವನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಕೇಂದ್ರವು ಎ.23ಕ್ಕೆ ರಾಜ್ಯಕ್ಕೆ ವಾಪಸು ಕಳುಹಿ ಸಿತ್ತು. ಮುಂದೆ ರಾಜ್ಯವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲ ಮಾರ್ಪಾಡುಗಳೊಂದಿಗೆ ಮೇ 8ರಂದು ಮತ್ತೆ ಗೃಹ ಸಚಿವಾಲಯಕ್ಕೆ ರವಾನಿಸಿತ್ತು. ಆದರೆ ಈ ವಿಧೇಯಕಕ್ಕೆ ಇತ್ತೀಚೆಗಷ್ಟೇ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ ಸಹಿ ಮಾಡಿದ್ದರು. ಅವರು ಕ್ಯಾಬಿನೆಟ್‌ ದರ್ಜೆ ಸಚಿವರಲ್ಲದ ಕಾರಣ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಕೂಡ ಸಹಿ ಮಾಡಬೇಕಿತ್ತು. ಈ ಎಲ್ಲ ಕಾರಣಗಳಿಂದ ಇಷ್ಟು ದಿನ ಬಾಕಿಯಾಗಿತ್ತು. 

ಮತ್ತೆ ಸದನದ ಒಪ್ಪಿಗೆ ಬೇಡ
“ಕಂಬಳ ಮಸೂದೆ ಈಗಾಗಲೇ ಉಭಯ ಸದನಗಳ ಒಪ್ಪಿಗೆ ಪಡೆದಿರುವ ಕಾರಣ ಮತ್ತೆ ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸುವ ಅಗತ್ಯವಿಲ್ಲ. ಗೃಹ ಸಚಿವಾಲಯದಿಂದ ನೇರವಾಗಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿ ಕೊಡ ಲಾಗುವುದು ಎಂದು ಎರಡೂ ಸಚಿವಾಲಯಗಳು ಸ್ಪಷ್ಟಪಡಿಸಿವೆ. ಹೀಗಾಗಿ ಕಂಬಳ ಮಸೂದೆಯನ್ನು ಕಾನೂನಾಗಿ ಜಾರಿಗೊಳಿಸುವುದಕ್ಕೆ ಇನ್ನು ಕೇಂದ್ರ ಅಥವಾ ರಾಜ್ಯ ಸರಕಾರದ ಮಟ್ಟದಲ್ಲಿ ಯಾವುದೇ ಅಡೆತಡೆಗಳಿಲ್ಲ. ಇನ್ನು ಗೃಹ ಸಚಿವಾಲಯದ ಒಪ್ಪಿಗೆ ಪಡೆದು ಅದನ್ನು ರಾಷ್ಟ್ರಪತಿಗೆ ಕಳುಹಿಸಿ ಕೊಡುವಲ್ಲಿ  ನಮ್ಮ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಬೇಕು’ ಎಂದು ಕೆ. ಗುಣಪಾಲ ಕಡಂಬ “ಉದಯವಾಣಿ’ಗೆ ತಿಳಿಸಿದ್ದಾರೆ.

– ಸುರೇಶ್‌ ಪುದುವೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next