Advertisement

ಕಲ್ಯಾಣ್‌ ಕರ್ನಾಟಕ ಸಂಘ: ಕರ್ನಾಟಕ ರಾಜ್ಯೋತ್ಸವ

04:30 PM Nov 08, 2017 | |

ಕಲ್ಯಾಣ್‌: ನಮ್ಮ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇಡೀ ವಿಶ್ವದ ಗಮನ ಸೆಳೆದಿದ್ದು, ಇದರ ಬಗ್ಗೆ ಆಸಕ್ತಿ ಹಾಗೂ ಅಭಿಮಾನವನ್ನು ಮಕ್ಕಳಲ್ಲಿ ಮೂಡಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಬಾಕೂìರಿನ ಕಚ್ಚಾರು ಶ್ರೀ ನಾಗೇಶ್ವರ ಮಂದಿರದ ಅಧ್ಯಕ್ಷ, ಕೊಡುಗೈದಾನಿ ಕಡಂದಲೆ ಸುರೇಶ್‌ ಭಂಡಾರಿ ಅವರು ನುಡಿದರು.

Advertisement

ನ. 5 ರಂದು ಕಲ್ಯಾಣ್‌ ಪೂರ್ವದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ನಡೆದ ಕಲ್ಯಾಣ್‌ ಕರ್ನಾಟಕ ಸಂಘದ 15 ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ರಕ್ತ ಸಂಬಂಧಿಗಳಿಗಿಂತ ಭಾವನಾತ್ಮಕ ಸಂಬಂಧಗಳನ್ನೇ ನಂಬಿರುವ ಕನ್ನಡಿಗರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ವಿಶ್ವದೆಲ್ಲೆಡೆ ಪಸರಿಸಿ ಸಂಘ-ಸಂಸ್ಥೆಗಳ ಮುಖಾಂತರ ನಮ್ಮ ಶ್ರೀಮಂತ ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯದ ಸಮಾರಾಧನೆ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪರಮಾತ್ಮನ ಅಮೂಲ್ಯ ಕೊಡುಗೆ ಈ ನಮ್ಮ ಮಾನವ ಜನ್ಮ. ಈ ಜನ್ಮವನ್ನು ದಾನ, ಧರ್ಮ ಹಾಗೂ ಕರ್ಮಾಧಿಗಳಿಂದ ಸಾರ್ಥಕಗೊಳಿಸಬೇಕು. ಜೀವನದಲ್ಲಿ ನಾವು ಮಾಡಿದ ಉತ್ತಮ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿದೆ. ಹೊರನಾಡಿನಲ್ಲಿ ಕನ್ನಡದ ತೇರನ್ನು ಎಳೆಯುತ್ತಿರುವ ಕಲ್ಯಾಣ್‌ ಕರ್ನಾಟಕ ಸಂಘತದ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಶಿಕ್ಷಣ ಪ್ರೇಮಿ, ಜ್ಞಾನದಾಸೋಹಿ, ಮಹಾದಾನಿ ಡಾ| ಸುರೇಂದ್ರ ವಿ. ಶೆಟ್ಟಿ ಅವರು ಸಂಘದ ಎಲ್ಲಾ ಸದಸ್ಯರು ಒಂದಾಗಿ ಕನ್ನಡಮ್ಮನ ಸೇವೆಗೆ ಕಂಕಣಬದ್ಧರಾಗಿ ಕಲ್ಯಾಣ್‌ ಕರ್ನಾಟಕ ಸಂಘದ ಅಭಿವೃದ್ದಿಗೆ ಶ್ರಮಿಸೋಣ ಎಂದು ಕರೆನೀಡಿದರು. ಕಲ್ಯಾಣ್‌ ಕರ್ನಾಟಕ ಸಂಘದ ಸಂಸ್ಥಾಪಕಾಧ್ಯಕ್ಷ ನಂದಾ ಶೆಟ್ಟಿ ಅವರು ಮಾತನಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರ ಸೇವೆಯನ್ನು ಸ್ಮರಿಸಿ, ಮುಂಬರುವ ದಿನಗಳಲ್ಲಿ ಸದಸ್ಯರ ಸಹಕಾರದಿಂದ ಸಂಘವನ್ನು ಪ್ರಗತಿಯ ಪಥದಲ್ಲಿ ಒಯ್ಯೋಣ ಎಂದು ನುಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದರ್ಶನಾ ಸೋನ್ಕರ್‌ ಅವರು ಮಾತನಾಡಿ, ಸಂಘದ ಅಭಿವೃದ್ಧಿಗೆ ಕೊಡುಗೈದಾನಿಗಳ ಕೊಡುಗೆ ಅಪಾರವಾಗಿದ್ದು, ಸಂಘದ ಸದಸ್ಯರ ಸಹಕಾರದಿಂದ ಕಲ್ಯಾಣ್‌ ಕರ್ನಾಟಕ ಸಂಘವನ್ನು ಮುನ್ನಡೆಸೋಣ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಪರಿಸರದ ಕನ್ನಡಿಗರಾದ ರಮೇಶ್‌ ಭಂಡಾರಿ ಮತ್ತು ಉಷಾ ಭಂಡಾರಿ, ಸದಾಶಿವ ಸುವರ್ಣ ಮತ್ತು ಹೇಮಮಾಲಿನಿ ದಂಪತಿಗಳನ್ನು ಹಾಗೂ ಯುವರಾಜ ಪೂಜಾರಿ ಅವರ ಪರವಾಗಿ ಪತ್ನಿ ಸುಮನಾ ಪೂಜಾರಿ, ಸಿದ್ಧಾಂತ್‌ ರಮೇಶ್‌ ಶೆಟ್ಟಿ, ಖುಷಿ ದಯಾಶಂಕರ್‌ ಶೆಟ್ಟಿ, ಹಿರಿಯ ಸದಸ್ಯ ಉಳ್ಳಾಲ ದೇವದಾಸ ಮಲ್ಯ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.

ಗಣ್ಯರು ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಂಘದ ಅಧ್ಯಕ್ಷ ಗೋಪಾಲ್‌ ಹೆಗ್ಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಿದ್ದಿ-ಸಾಧನೆಗಳನ್ನು ವಿವರಿಸಿ, ಸಂಘದ ಅಭಿವೃದ್ದಿಗೆ ಸಹಕರಿಸಿದ ಮಹಾನೀಯರನ್ನು ಸ್ಮರಿಸಿದರು.

Advertisement

ಕೆ. ಎನ್‌. ಸತೀಶ್‌ ತಂಡದವರು ಪ್ರಾರ್ಥನೆಗೈದು, ನಾಡಗೀತೆಯನ್ನು ಹಾಡಿದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಘದ ಗೌರವ ಕಾರ್ಯದರ್ಶಿ ನ್ಯಾಯವಾದಿ ನೂತನಾ ಹೆಗ್ಡೆ ಅವರು ವಾರ್ಷಿಕ ವರದಿ ವಾಚಿಸಿದರು. ಗೋಪಾಲ್‌ ಹೆಗ್ಡೆ, ಕೆ. ಎನ್‌. ಸತೀಶ್‌, ಸವಿತಾ ಕುಲಕರ್ಣಿ ಅತಿಥಿಗಳನ್ನು ಹಾಗೂ ಸಮ್ಮಾನಿತರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ದರ್ಶನಾ ಸೋನ್ಕರ್‌ ನಿರೂಪಿಸಿದರು, ಸಭಾ ಕಾರ್ಯಕ್ರಮವನ್ನು ಸವಿತಾ ಕುಲಕರ್ಣಿ ಅವರು ನಿರ್ವಹಿಸಿದರು. ನೂತನಾ ಹೆಗ್ಡೆ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು. ಅಹಲ್ಯಾ ಶೆಟ್ಟಿ ವಂದಿಸಿದರು.

ಆಶಾ ನಾಯಕ್‌, ಉಮಾ ನಾಯಕ್‌, ಜಯಂತಿ ಹೆಗ್ಡೆ, ವಿಭಾ ದೇಶ್‌ಮುಖ್‌, ಸುಹಾಸ್‌ ಕುಲಕರ್ಣಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘದ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ವೇದಿಕೆಯಲ್ಲಿ ಗಣ್ಯರೊಂದಿಗೆ ಡಾ| ಸುರೇಂದ್ರ ಶೆಟ್ಟಿ, ಭಾಸ್ಕರ ಶೆಟ್ಟಿ, ಅಹಲ್ಯಾ ಶೆಟ್ಟಿ, ನಂದಾ ಶೆಟ್ಟಿ, ಜಗನ್ನಾಥ ಶೆಟ್ಟಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಕನ್ನಡಾಭಿಮಾನಿಗಳು, ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.

ಕನ್ನಡದ ಕೈಂಕರ್ಯವನ್ನು ತನ್ನ ಮೂಲಮಂತ್ರವನ್ನಾಗಿಸಿ ಹೊರನಾಡಿನಲ್ಲಿ ಕನ್ನಡದ ಕಂಪನ್ನೂ ಬೀರುತ್ತಿರುವ ಅನೇಕ ಸಂಘ-ಸಂಸ್ಥೆಗಳಲ್ಲಿ ಕಲ್ಯಾಣ್‌ ಕರ್ನಾಟಕ ಸಂಘವೂ ಒಂದಾಗಿದೆ. ಕೇವಲ ಹದಿನೈದು ವರ್ಷಗಳಲ್ಲಿ ಸಂಘದ ಸಾಧನೆ ಬೆರಗುಗೊಳಿಸಿದೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿ ದಿ| ದೇವರಾಜ ಅರಸರು ಅಡಿಪಾಯ ಹಾಕಿದ ಈ ನಮ್ಮ ಕರ್ನಾಟಕ ರಾಜ್ಯೋತ್ಸವ ಸಾಹಿತಿ, ಕಲಾವಿದರು, ಕನ್ನಡಾಭಿಮಾನಿಗಳು ಇದರ ಘನತೆಯನ್ನು ಹೆಚ್ಚಿಸಿದರು. ಹೊರನಾಡ ಕನ್ನಡಿಗರಿಗೆ ವರ್ಷದ 365 ದಿನವೂ ರಾಜ್ಯೋತ್ಸವವೇ ಆಗಿದೆ. ಒಂದಲ್ಲ ಒಂದು ರೀತಿಯ ಕನ್ನಡಪರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಯುವ ಪೀಳಿಗೆಯಲ್ಲಿ ನಾವು ಭಾಷಾಭಿಮಾನ ಮೂಡಿಸುವ ಕಾರ್ಯ ಮಾಡಬೇಕು. ಕಲ್ಯಾಣ್‌ ಕರ್ನಾಟಕ ಸಂಘದ ಪ್ರತಿಯೊಂದು ಕನ್ನಡಪರ ಕಾರ್ಯಗಳಿಗೆ ಡೊಂಬಿವಲಿ ಕರ್ನಾಟಕ ಸಂಘದ ಸಹಕಾರ ಸದಾಯಿದೆ 
– ಇಂದ್ರಾಳಿ ದಿವಾಕರ ಶೆಟ್ಟಿ , ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ

ಕಲ್ಯಾಣ್‌ ಕರ್ನಾಟಕ ಸಂಘವು ಕಳೆದ 15 ವರ್ಷಗಳಿಂದ ನಾಡು-ನುಡಿಯ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಸಂಘದ ಮಾಜಿ ಅಧ್ಯಕ್ಷರುಗಳು, ದಾನಿಗಳ, ಕನ್ನಡಾಭಿಮಾನಿಗಳ ಪ್ರೋತ್ಸಾಹ, ಸಹಕಾರದಿಂದ ಸಂಸ್ಥೆಯು ಈ ಮಟ್ಟಿಗೆ ಬೆಳೆದು ನಿಂತಿದೆ ಎನ್ನಲು ಅಭಿಮಾನವಾಗುತ್ತಿದೆ. ಸಂಸ್ಥೆಯು ಕೇವಲ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ, ಸದಸ್ಯ ಬಾಂಧವರ ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸುವಲ್ಲಿಯೂ ಯಶಸ್ವಿಯಾಗಿದೆ. ನಾಡಿನ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳು ಮುಂದಿನ ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಘವು ಮುಂದಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಸಂಘದ ಮುಂದಿನ ಯೋಜನೆ-ಯೋಚನೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ 
– ಗೋಪಾಲ್‌ ಎಸ್‌. ಹೆಗ್ಡೆ, ಅಧ್ಯಕ್ಷರು, ಕಲ್ಯಾಣ್‌ ಕರ್ನಾಟಕ ಸಂಘ

ಚಿತ್ರ-ವರದಿ: ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next