ಕಲಬುರಗಿ: ರಾಜ್ಯದ ಕುತೂಹಲ ಕೆರಳಿರುವ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆಗೆ ಇಲ್ಲಿನ ಹೈಕೋರ್ಟ್ ಪೀಠ ರೆಡ್ ಸಿಗ್ನಲ್ ನೀಡಿರುವ ಆದೇಶ ಪ್ರಶ್ನಿಸಿ ಐವರು ಎಂಎಲ್ಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಫೆ. 24ರಂದು ಇಲ್ಲಿನ ಕರ್ನಾಟಕ ಹೈಕೋರ್ಟ್ ಪೀಠದ ವಿಭಾಗೀಯ ಪೀಠದ ಮುಂದೆ ಬರಲಿದೆ.
ಕಳೆದ ಫೆ. 4ರಂದು ಇಲ್ಲಿನ ಕರ್ನಾಟಕ ಹೈಕೋರ್ಟ್ ನ ಏಕ ಸದಸ್ಯತ್ವದ ಪೀಠವು ಮೇಯರ್- ಉಪಮೇಯರ್ ಚುನಾವಣೆ ಹಳೇ ಮೀಸಲಾತಿಯಂತೆ ಹಾಗೂ ಹೊಸದಾಗಿ ಎಂಎಲ್ಸಿ ಹೆಸರು ಸೇರಿಸದೇ ಇರುವ ಹಿಂದಿನ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದ್ದನ್ನು ಪ್ರಶ್ನಿಸಿ ವಿಧಾನ ಪರಿಷತ್ ಸದಸ್ಯರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಫೆ.22ರಂದು ನಡೆದಿದ್ದು, ಮುಂದಿನ ವಿಚಾರಣೆ ಫೆ. 24 ರಂದು ನಿಗದಿಯಾಗಿದೆ.
ಬದಲಾವಣೆಗೊಳಿಸಲಾಗಿದ್ದ ಮೇಯರ್- ಉಪಮೇಯರ್ ಸ್ಥಾನದ ಮೀಸಲಾತಿಗೂ ಸಹ ಹೈಕೋರ್ಟ್ ಪೀಠ ಆಕ್ಷೇಪಿಸಿ ಈ ಮೊದಲು ನವ್ಹೆಂಬರ್ 20ರಂದು ನಿಗದಿಯಾಗಿದ್ದ ಚುನಾವಣಾ ಅಧಿಸೂಚನೆಯಂತೆ ನಡೆಸುವಂತೆ ನೀಡಲಾಗಿದ್ದ ಹೈಕೋರ್ಟ್ ಆದೇಶ ವಿರುದ್ದ ರಾಜ್ಯ ಸರ್ಕಾರವೂ ಪ್ರತ್ಯೇಕ ಅರ್ಜಿಯ ಮೂಲಕ ಮೇಲ್ಮನವಿ ಸಹ ಸಲ್ಲಿಸಿದ್ದು, ಇದರ ವಿಚಾರಣೆಯು ಫೆ. 24ರಂದು ನಡೆಯಲಿದೆ.
ವಿಭಾಗೀಯ ಪೀಠದ ನ್ಯಾಯಮೂರ್ತಿ ಗಳಾದ ನ್ಯಾ. ಎಸ್. ಆರ್. ಕೃಷ್ಣಕುಮಾರ ಹಾಗೂ ನ್ಯಾ.ಹೇಮಲೇಖಾ ಅವರ ಮುಂದೆ ಈ ಎರಡೂ ಅರ್ಜಿಗಳ ವಿಚಾರಣೆ ನಡೆಯಲಿದೆ.
ಐವರು ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರಘುನಾಥ ಮಲ್ಕಾಪುರ, ಭಾರತಿ ಶೆಟ್ಟಿ, ತುಳಸಿ ಮುನಿರಾಜ ಹಾಗೂ ಲೇಹರಸಿಂಗ್ ಅವರ ಹೆಸರನ್ನು ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಇಲ್ಲಿನ ಕರ್ನಾಟಕ ಹೈಕೋರ್ಟ್ ಪೀಠದ ಏಕ ಸದಸ್ಯ ತ್ವದ ಪೀಠವು ಅಕ್ಷೇಪಿಸಿ ಕಳೆದ ಫೆ. 4 ರಂದು ರೆಡ್ ಸಿಗ್ನಲ್ ನೀಡಿ ಆದೇಶ ನೀಡಿದ್ದನ್ಬು ಇಲ್ಲಿ ಅವಲೋಕಿಸಬಹುದಾಗಿದೆ.
ಮೇಯರ್ ಉಪ ಮೇಯರ್ ಚುನಾವಣೆ ತಿಂಗಳೊಳಗೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದ್ದು, ಇನ್ನೂ ಒಂದುವರೆ ವಾರ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಫೆ. 24ರ ವಿಚಾರಣೆಯತ್ತ ಎಲ್ಲರ ನೋಟ ಬೀರಿದೆ.